ಮೀಸಲಾತಿಗೆ ಸಂಬಂಧಿಸಿದ ವರದಿಗಳು

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದ ವರ್ಗಗಳ ಸಂಘಟನೆಯಾದ ಪ್ರಜಾಮಿತ್ರ ಮಂಡಲಿಯು ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಬ್ರಾಹ್ಮಣೇತರರಿಗೆ ಮೀಸಲಾತಿ ನೀಡುವಂತೆ ಮಹಾರಾಜರಲ್ಲಿ ಒತ್ತಾಯ ಮಾಡತೊಡಗಿತ್ತು. ಈ ಒತ್ತಾಯವನ್ನು ಒಪ್ಪಿಕೊಂಡು ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು 1918ರಲ್ಲಿ ಜಸ್ಟೀಸ್ ಸರ್ ಲೆಸ್ಲಿ ಮಿಲ್ಲರ್‌ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ನೀಡುವುದಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಶಿಫಾರಸುಗಳನ್ನು ಸೂಚಿಸಲು ತಿಳಿಸಿದರು. ಅದರಂತೆ ಮಿಲ್ಲರ್ ಆಯೋಗ 1919ರಲ್ಲಿ ತನ್ನ ವರದಿಯನ್ನು ನೀಡಿತು. ಈ ವರದಿಯಲ್ಲಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅರ್ಧದಷ್ಟು ಮತ್ತು ಕೆಳದರ್ಜೆಯ ಹುದ್ದೆಗಳಲ್ಲಿ ಮೂರನೆಯ ಎರಡರಷ್ಟು ಬ್ರಾಹ್ಮಣೇತರರಿಗೆ ಮೀಸಲಿಡಬೇಕೆಂದರು. ದಮನಿತ ವರ್ಗದವರಲ್ಲಿ ಅರ್ಹತೆಯಿರುವ ಅಭ್ಯರ್ಥಿಗಳಿದ್ದರೆ ಅವರಿಗೆ ಆದ್ಯತೆ ನೀಡಬೇಕೆಂದರು. ಪ್ರಾಥಮಿಕ ಶಿಕ್ಷಣದ ವಿಸ್ತರಣೆ, ಶಿಕ್ಷಣದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ಬಳಕೆ, ವಿದ್ಯಾರ್ಥಿ ವೇತನ, ಹಾಸ್ಟೆಲುಗಳ ನಿರ್ಮಾಣ, ಉನ್ನತ ಶಿಕ್ಷಣದಲ್ಲಿ ಸೀಟುಗಳ ಹಂಚಿಕೆ ಇತ್ಯಾದಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಶಿಫಾರಸ್ಸು ಮಾಡಿದರು. ಈ ವರದಿಯ ಬಗ್ಗೆ ಅನೇಕರ ವಿರೋಧವಿದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು 1921ರಲ್ಲಿ ಮಿಲ್ಲರ್ ವರದಿಯನ್ನು ಜಾರಿಗೆ ತಂದರು.

ಭಾರತ ಗಣರಾಜ್ಯವಾದ ನಂತರ ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಹಲವಾರು ವರದಿಗಳನ್ನು ಕಾಣಬಹುದು. 1963ರಲ್ಲಿ ನಾಗನಗೌಡ ವರದಿ, 1975ರಲ್ಲಿ ಎಲ್.ಜಿ. ಹಾವನೂರ್ ವರದಿ, 1986ರಲ್ಲಿ ವೆಂಕಟಸ್ವಾಮಿ ವರದಿ ಮತ್ತು 1990ರಲ್ಲಿ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರ ವರದಿ. ಈ ವರದಿಗಳ ಬಗ್ಗೆ ಪರವಿರೋಧ ಚರ್ಚೆಗಳು, ಸಂವಾದಗಳು ಮತ್ತು ಚಳುವಳಿಗಳು ನಡೆದು ರಾಜ್ಯ ಸರ್ಕಾರ ಹಲವು ಮಾರ್ಪಾಡುಗಳೊಂದಿಗೆ ಕೆಲವು ಶಿಫಾರಸುಗಳನ್ನು ಜಾರಿಗೆ ತಂದಿದೆ.

ತದನಂತರ ಇದೇ ರೀತಿ ನ್ಯಾ. ಕುದೂರ್ ನಾರಾಯಣ ರೈ, ಪ್ರೊ. ರವಿವರ್ಮ ಕುಮಾರ್, ಶ್ರೀ ಎಸ್. ಮುನಿರಾಜು, ಶ್ರೀ ಎಸ್. ಸಿದ್ದಗಂಗಯ್ಯ, ಡಾ. ಸಿ.ಎಸ್. ದ್ವಾರಕಾನಾಥ್ ಮತ್ತು ಶ್ರೀ ಎನ್. ಶಂಕರಪ್ಪ ಆಯೋಗಗಳು ನೀಡಿರುವ ವರದಿಗಳ ಬಗ್ಗೆ ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಮತ್ತು ಈ ವರದಿಗಳನ್ನು ಬಹಿರಂಗಪಡಿಸಲಿಲ್ಲ.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವುದರ ಬಗ್ಗೆ ನ್ಯಾ. ಎ.ಜೆ.ಸದಾಶಿವರವರು 2012ರಲ್ಲಿ ವರದಿ ನೀಡಿದರು. 9 ವರ್ಷಗಳ ನಂತರವೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿರುವ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ನ್ಯಾ. ಹೆಚ್.ಎನ್. ನಾಗಮೋಹನ ದಾಸ್‌ರವರು 2020ರಲ್ಲಿ ನೀಡಿರುವ ವರದಿಯ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಶ್ರೀ ಕಾಂತರಾಜ್‌ರವರು ತಯಾರಿಸಿದ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲೇ ಇಲ್ಲ.

ಸರ್ಕಾರ ವಿವಿಧ ವಿಷಯಗಳಿಗೆ ಸಂಬಂಧಿಸಿ ಆಯೋಗಗಳನ್ನು ಅಥವಾ ಸಮಿತಿಗಳನ್ನು ನೇಮಿಸಿ ವರದಿಗಳನ್ನು ಪಡೆಯುತ್ತದೆ. ಈ ವರದಿಗಳನ್ನು ಒಪ್ಪುವ ಹಾಗೂ ತಿರಸ್ಕರಿಸುವ ಅಥವಾ ಭಾಗಶಃ ಒಪ್ಪಿ ಭಾಗಶಃ ತಿರಸ್ಕರಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ. ಕಾರಣಗಳನ್ನು ನೀಡಿ ತಿರಸ್ಕರಿಸಬೇಕಾಗುತ್ತದೆ. ಸರಕಾರದ ಅಂಗೀಕಾರವನ್ನು ಅಥವಾ ತಿರಸ್ಕಾರವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಹಕ್ಕನ್ನು ಪ್ರಜೆಗಳು ಹೊಂದಿದ್ದಾರೆ. ಕೋಟಿಗಟ್ಟಲೆ ಅಥವಾ ಲಕ್ಷಗಟ್ಟಲೇ ರೂಪಾಯಿಗಳನ್ನು ಖರ್ಚುಮಾಡಿ ಪಡೆದಿರುವ ವರದಿಗಳ ಬಗ್ಗೆ ಕೂಡಲೇ ತೀರ್ಮಾನ ಮಾಡಬೇಕಾದ್ದು ಸರ್ಕಾರಗಳ ಕರ್ತವ್ಯ. ಈ ವರದಿಗಳಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗಿದೆ. ಯಾವುದೇ ಕಾರಣಕ್ಕೂ ಸರ್ಕಾರವು ತನ್ನ ಮುಂದಿರುವ ವರದಿಗಳ ಬಗ್ಗೆ ನಿದ್ದೆ ಮಾಡಬಾರದು.

ಮೀಸಲಾತಿ ಬೇಡಿಕೆ, ಗಲಭೆ, ಹತ್ಯೆ, ದುರಂತ ಇತ್ಯಾದಿಗಳು ನಡೆದಾಗಲೆಲ್ಲ ವ್ಯಕ್ತವಾಗುವ ಜನಾಕ್ರೋಶವನ್ನು ತಣಿಸುವ ಉಪಾಯವಾಗಿ ಸರ್ಕಾರಗಳು ತನಿಖಾ ಆಯೋಗಗಳನ್ನು ಮತ್ತು ಸಮಿತಿಗಳನ್ನು ರಚಿಸುತ್ತವೆ. ನೀಡಿದ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕಾದ ಸರ್ಕಾರಗಳು ಅವುಗಳನ್ನು ಸರ್ಕಾರಿ ತಿಜೋರಿಯಲ್ಲಿ ಮುಚ್ಚಿಟ್ಟು ಬೀಗ ಜಡಿದಿವೆ. ಮುಂದೊಂದು ದಿವಸ ಆಯೋಗಗಳು ನೀಡಿದ ವರದಿಗಳ ಗತಿ ಏನಾಗಿದೆ ಎಂದು ತಿಳಿದುಕೊಳ್ಳಲೆಂದು ಮತ್ತೊಂದು ಆಯೋಗ ರಚಿಸಬೇಕಾಗುತ್ತದೇನೋ?

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ