ವಿಶ್ವದಲ್ಲಿ ಅಸಮಾನತೆ

ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ನಾಗಮೋಹನ್ ದಾಸ್ ಅವರು ಸಂವಿಧಾನ ಓದು, ಸಂವಿಧಾನ ಮತ್ತು ವಚನಗಳು, ಮಾನವ ಹಕ್ಕುಗಳು ಮತ್ತು ಮೀಸಲಾತಿ ಭ್ರಮೆ ಮತ್ತು ವಾಸ್ತವ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಆಶಯಗಳನ್ನು ಕನ್ನಡಿಗರಿಗೆ ಸರಳವಾಗಿ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ರಕ್ಷಣೆಯ ವಿಷಯದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಉಪನ್ಯಾಸಗಳನ್ನು ನೀಡಿರುವ ಇವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ.

ಜಗತ್ತಿನ ದೇಶಗಳಲ್ಲಿ ಒಂದಲ್ಲ ಜಯ ರೀತಿಯ ವರ್ಣ, ಧರ್ಮ, ಜಾತಿ, ಜನಾಂಗೀಯ, ಲಿಂಗ ಮತ್ತು ವರ್ಗಭೇದಗಳು ಇನ್ನೂ ಜೀವಂತವಾಗಿವೆ. ಈ ತಾರತಮ್ಯವನ್ನು ಪ್ರಮುಖವಾಗಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾಣಬಹುದು. ಇದರ ಪರಿಣಾಮವಾಗಿ ಜಗತ್ತಿನ ಬಹುಪಾಲು ಜನರನ್ನು ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ, ನಿರುದ್ಯೋಗ, ವಸತಿಹೀನತೆ ಇತ್ಯಾದಿಗಳು ಕಾಡುತ್ತಿವೆ. ಈ ಪರಿಸ್ಥಿತಿಯು ಹಿಂಸೆ, ದರೋಡೆ, ಕ್ರೌರ್ಯ, ಅಭದ್ರತೆ, ಶೋಷಣೆಗಳಿಗೆ ಎಡೆ ಮಾಡಿಕೊಟ್ಟಿದೆ.

ಎರಡನೇ ಮಹಾಯುದ್ಧದಲ್ಲಿ ಕೋಟಿಗಟ್ಟಲೆ ಜನರು ಸಾವನ್ನಪ್ಪಿದರು ಮತ್ತು ಗಾಯಗೊಂಡರು. ಹಿಂದೆ ಎಂದೂ ಕಾಣದಂತಹ ವಿಪತ್ತು, ವಿನಾಶ, ಭೀಕರ ನರಹತ್ಯೆ, ಆರ್ಥಿಕ ದುಂದುವೆಚ್ಚ, ಅವ್ಯವಸ್ಥೆ ಮತ್ತು ಅರಾಜಕತೆ ಇಡೀ ಜಗತ್ತನ್ನೇ ಮುಳುಗಿಸಿದವು. ಈ ಯುದ್ಧದಿಂದ ಬಂದೊದಗಿದ ರೋಗ ರುಜಿನಾದಿಗಳಿಂದ ಮತ್ತು ಆಹಾರದ ಅಭಾವದಿಂದ ಅನೇಕ ಜನರು ಸಾವನ್ನಪ್ಪಿದರು. ಬಾಂಬುಗಳನ್ನು ಸಿಡಿಸಿ ನಗರಗಳನ್ನು ಧ್ವಂಸ ಮಾಡಲಾಯಿತು. ಹಳ್ಳಿಗಳಿಗೆ ಮತ್ತು ಕಾಡುಗಳಿಗೆ ಬೆಂಕಿ ಹಚ್ಚಲಾಯಿತು. ಕೈಗಾರಿಕೆಗಳನ್ನು, ಅಣೆಕಟ್ಟುಗಳನ್ನು, ರಸ್ತೆಗಳನ್ನು, ಮೂಲಸೌಕರ್ಯಗಳನ್ನು ನಾಶಮಾಡಲಾಯಿತು. ಜನಾಂಗೀಯ ದ್ವೇಷದಿಂದ ನಡೆದ ದೊಡ್ಡ ಪ್ರಮಾಣದ ನರಹತ್ಯೆ, ಹಿಂಸೆ, ಕ್ರೌರ್ಯದಿಂದ ಜಗತ್ತಿನ ಜನರು ತತ್ತರಿಸಿ ಹೋದರು. ಹೀಗೆ ಎರಡನೇ ಮಹಾಯುದ್ಧವು ಮಾನವ ಇತಿಹಾಸದ ಘೋರ ಘಟನೆಯಾಗಿ ಪರಿಣಮಿಸಿತು. ಇದರಿಂದ ಉಂಟಾದ ದುಷ್ಪರಿಣಾಮಗಳು ಜಗತ್ತಿನ ಜನರನ್ನು ದಂಗುಬಡಿಸಿ ಮತ್ತೊಂದು ಯುದ್ಧ ನಡೆದರೆ ಇಡೀ ಜಗತ್ತೇ ನಾಶ ಎಂಬ ಕಟು ಸತ್ಯದ ಅರಿವು ಜನರಲ್ಲಿ ಮೂಡಿತು. ಮುಂದುವರೆದು 1945ರಲ್ಲಿ ವಿಶ್ವಸಂಸ್ಥೆಯ ಸ್ಥಾಪನೆಯಾಯಿತು.

ವಿಶ್ವಸಂಸ್ಥೆಯ ಉದ್ದೇಶಗಳಲ್ಲಿ ಮಾನವ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ಅವುಗಳನ್ನು ವಿಶ್ವದಾದ್ಯಂತ ವಿಸ್ತರಿಸುವುದು ಮುಖ್ಯವಾಗಿದೆ. ಈ ಗುರಿಸಾಧನೆಗಾಗಿ ವಿಶ್ವಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಿತು.  

ವಿಶ್ವ ಸಂಸ್ಥೆಯ ಬಹುಪಾಲು ಸದಸ್ಯ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿವೆ ಮತ್ತು ಒಂದಷ್ಟು ಸಾಧನೆಯಾಗಿದೆ. ಜಗತ್ತಿನಾದ್ಯಂತ ಯಾವುದಾದರೂ ಸಿದ್ಧಾಂತ ಜನರ ಮನ್ನಣೆಯನ್ನು ಗಳಿಸಿದ್ದರೆ ಅದು ಮಾನವ ಹಕ್ಕುಗಳ ಸಿದ್ಧಾಂತ. ಅದು ವಸಾಹತುಶಾಹಿ ಪದ್ಧತಿಯನ್ನು ಮತ್ತು ವರ್ಣ ದ್ವೇಷವನ್ನು ರದ್ದುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಜಾ ಪ್ರಭುತ್ವದ ಪ್ರತಿ ಹೆಜ್ಜೆಯ ಗೆಲುವು ಮಾನವ ಹಕ್ಕುಗಳ ಘೋಷಣೆಯ ಕಾರಣದಿಂದಾಗಿದೆ. ಮಹಿಳೆಯರು, ಮಕ್ಕಳು, ವಿಕಲ ಚೇತನರು, ಜೀತದಾಳುಗಳು ಮೊದಲಾದವರ ಕನಿಷ್ಠ ಹಕ್ಕುಗಳ ರಕ್ಷಣೆಯಲ್ಲಿ ಮಹಾಪಾತ್ರ ವಹಿಸಿದೆ. ಚಿತ್ರಹಿಂಸೆ, ಕೌರ್ಯ, ಜನಾಂಗೀಯ ದ್ವೇಷ, ಯುದ್ಧ ಇತ್ಯಾದಿಗಳನ್ನು ಹಿಮ್ಮೆಟ್ಟಿಸುವಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ. ಇವೆಲ್ಲ ಸಾಧನೆಗಳನ್ನು ‘ಸಾಮಾಜಿಕ ನ್ಯಾಯದ’ ಸಾಧನೆ ಎನ್ನಬಹುದು.

ಎಲ್ಲ ರೀತಿಯ ಅಸಮಾನತೆಯನ್ನು ಕೊನೆಗಾಣಿಸಲು ವಿಶ್ವಸಂಸ್ಥೆ 2007ರಲ್ಲಿ ಒಂದು ನಿರ್ಣಯವನ್ನು ಮಾಡಿ ಸದಸ್ಯ ರಾಷ್ಟ್ರಗಳು ಪ್ರತಿವರ್ಷ ಫೆಬ್ರವರಿ 20ರಂದು `ವಿಶ್ವ ಸಾಮಾಜಿಕ ನ್ಯಾಯ ದಿನ’ವನ್ನಾಗಿ ಆಚರಿಸಲು ಕರೆಯನ್ನು ನೀಡಿತು. ಇದು 2009ರಿಂದ ಜಾರಿಗೆ ಬಂತು. ಇಂದು ಜಗತ್ತಿನಾದ್ಯಂತ “ವಿಶ್ವ ಸಾಮಾಜಿಕ ನ್ಯಾಯ ದಿನ”ವನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಎಲ್ಲರೂ ಸಮಾನರಾಗಿ ಗೌರವದಿಂದ ಬಾಳುವಂತೆ ಮಾಡಬೇಕೆಂಬುದು ಈ ದಿನದ ಆಚರಣೆಯ ಉದ್ದೇಶ.

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಮತ್ತು ಹಲವು ಅನುಚ್ಛೇದಗಳಲ್ಲಿ ವಿಶ್ವಸಂಸ್ಥೆ ಘೋಷಣೆ ಮಾಡಿರುವ ಮಾನವಹಕ್ಕುಗಳನ್ನು ಕಾಣಬಹುದು. ಕಳೆದ 12 ವರ್ಷಗಳ ಗಣರಾಜ್ಯ ಭಾರತದಲ್ಲಿ ಮಾನವ ಹಕ್ಕುಗಳು ಸ್ವಲ್ಪಮಟ್ಟಿಗೆ ಜಾರಿಯಾಗಿವೆ. ಇದರ ಪರಿಣಾಮವಾಗಿ ದೇಶದ ಮಹಿಳೆಯರ, ಮಕ್ಕಳ, ವೃದ್ಧರ, ವಿಕಲಚೇತನರ, ದಲಿತರ, ಅಲ್ಪಸಂಖ್ಯಾತರ, ಕಾರ್ಮಿಕರ ಜೀವನಮಟ್ಟದಲ್ಲಿ ಸ್ವಲ್ಪ ಸುಧಾರಣೆಗಳನ್ನು ಕಾಣಬಹುದು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕಟ್ಟಿದ್ದೇವೆ ಮತ್ತು ಸುಧಾರಣೆಗಳನ್ನು ತಂದಿದ್ದೇವೆ. ಸಮಾಜದ ಬಹುಪಾಲು ಚಟುವಟಿಕೆಯನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸಿದ್ದೇವೆ.

ಇಷ್ಟೆಲ್ಲ ಸಾಧನೆಯ ಮಧ್ಯೆ ಇನ್ನೂ ಸಮಸ್ಯೆಗಳು ಮುಂದುವರಿಯುತ್ತಿವೆ. ಹೊಸ ಸಮಸ್ಯೆಗಳು ಸೇರಿಕೊಂಡಿವೆ ಮತ್ತು ಸವಾಲುಗಳೂ ಇವೆ. ಜಾತಿ ಅಸಮಾನತೆ ಮುಂದುವರೆದಿದೆ. ಮಹಿಳೆಯರ, ಮಕ್ಕಳ, ದಲಿತರ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ನೀವು ಏನು ಮಾಡಬೇಕು. ದುಷ್ಟರ ಗೆಲುವಿಗೆ ಸಜ್ಜನರ ಮೌನವೇ ಕಾರಣವೆಂಬ ನಾಣ್ಣುಡಿಯನ್ನು ನಾವೆಲ್ಲ ನೆನಪಿನಲ್ಲಿಡಬೇಕು. ನಮ್ಮ ಬಾಯಿಗೆ ಹಾಕಿರುವ ಬೀಗವನ್ನು ಮುರಿದು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ