ಬೆಂಗಳೂರು: ಕೋವಿಡ್ ನಂತರ ಅತಿ ಜಾಸ್ತಿ ರೋಗ ನಿರೋಧಕ ಶಕ್ತಿ ಕಳೆದುಕೊಂಡ, ಸಕ್ಕರೆ ಖಾಯಿಲೆ ಮತ್ತು ಸ್ಟಿರಾಯಿಡ್ ಅತಿ ಹೆಚ್ಚು ಬಳಸಿದವರಲ್ಲಿ ಫಂಗಸ್ ಬರುವ ಸಾಧ್ಯತೆ ಹೆಚ್ಚು ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ಕಣ್ಣಿನ ತಜ್ಞೆ ಡಾ. ಸುಜಾತಾ ರಾಢೋಡ್ ಹೇಳಿದರು..
ಫಂಗಸ್ ಹರಡುವ ಸಾಧ್ಯತೆಗಳನ್ನು ವಿವಿರಿಸಿದ ಅವರು, 1. ಮೂಗಿನ ಮೂಲಕ
2. ಕಣ್ಣಿನ ಮೂಲಕ 3. ಗಾಯಗಳ ಮೂಲಕ ಹರಡುತ್ತವೆ ಎಂದರು.
ಫಂಗಸ್ ನ ಲಕ್ಷಣಗಳನ್ನು ವಿವರಿಸಿದ ಅವರು, 1. ಬಾಯಲ್ಲಿ ಕಪ್ಪು ಚುಕ್ಕೆಗಳು 2. ಮೂಗಿಗೆ ಕೆಟ್ಟ ವಾಸನೆ 3. ಮೂಗಿನ ರಕ್ತ ಸ್ರಾವ 4. ಕಣ್ಣು ಊದಿಕೊಳ್ಳುತ್ತವೆ. 5. ದೃಷ್ಟಿ ದೋಷ ಇತ್ಯಾದಿ ಲಕ್ಷಣಗಳನ್ನು ವಿವರಿಸಿದರು.
ಬ್ಲಾಕ್ ಫಂಗಸ್ ಪತ್ತೆ ಮಾಡಲು 1. ರಕ್ತ ಪರೀಕ್ಷೆ 2. ಕ್ಷ ಕಿರಣ 3. ಎಮ್ ಆರ್ ಐ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಲಾಗುವುದು ಎಂದರು. ಬ್ಲಾಕ್ ಫಂಗಸ್ ಗೆ ಪರಿಹಾರೋಪಾಯಗಳೆಂದರೆ, 1. ಸರ್ಜರಿ 2. TRAMB ಎಂದು ಅವರು ಹೇಳಿದರು.
ಅನಂತರ ಮಾತಾಡಿದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ವೈದ್ಯ, ಕಿವಿ, ಮೂಗು, ಗಂಟಲು, ಅರ್ಬುದ ರೋಗ ತಜ್ಞ ಡಾ. ಪುರುಷೋತ್ತಮ, ಪ್ರಾಥಮಿಕ ಹಂತದಲ್ಲಿಯೇ ಬ್ಲಾಕ್ ಫಂಗಸ್ ನಿಯಂತ್ರಣ ಅತ್ಯವಶ್ಯ. ಮುಖ ಮತ್ತು ಕಣ್ಣು ನೋವು, ಮುಖ ಊದಿಕೊಳ್ಳುವುದು, ದವಡೆ ಸಡಿಲ ಆಗುವುದು, ರೋಗಿಗೆ ವಾಸನೆ ಬರುವುದು ಇವೆಲ್ಲ ಲಕ್ಷಣಗಳು. ಇದಕ್ಕೆ ಸರಕಾರ ಸೂಚಿಸಿದ ಕೆಲ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಇದೆ. ಮುಂಜಾಗ್ರತೆ ಅತ್ಯಗತ್ಯವಾಗಿದೆ ಎಂದರು.
ಇಬ್ಬರೂ ವೈದ್ಯರು ಬ್ಲಾಕ್ ಫಂಗಸ್ ಮತ್ತು ವೈಟ್ ಫಂಗಸ್ ಕುರಿತು ಅತ್ಯಂತ ಸರಳವಾಗಿ ಕನ್ನಡದಲ್ಲಿಯೇ ವಿವರಿಸಿದರು. ಫಂಗಸ್ ಗಳ ಕುರಿತ ಅನೇಕ ಸಂದೇಹಗಳನ್ನು ಪ್ರಶ್ನೋತ್ತರದ ವೇಳೆಯಲ್ಲಿ ಕೂಡ ಪರಿಹರಿಸಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಸಾಹಿತಿ, ಸಂಶೋಧಕ, ವಿಮರ್ಶಕ ಡಾ. ಪುರುಷೋತ್ತಮ ಬಿಳಿಮಲೆ, “500ಕ್ಕೂ ಹೆಚ್ಚು ಕೊರೊನಾ ಸಮಯದಲ್ಲಿ ವೈದ್ಯರನ್ನು ಕಳೆದುಕೊಂಡಿದ್ದೇವೆ. ಲಕ್ಷಾಂತರ ರೋಗಿಗಳ ಸೇವೆಯಲ್ಲಿ ವೈದ್ಯರು ತೊಡಗಿಸಿಕೊಂಡಿದ್ದಾರೆ ಅವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಬೇಕು ಎಂದರು.
ಕೆಲ ವೈದ್ಯರು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಸಿದ್ದಾರೆ ಎಂದ ಅವರು, ತಮ್ಮ ಬದುಕಿನ ಹಲವು ಅನುಭವಗಳ ಆಧಾರದ ಮೇಲೆ ನಮ್ಮ ಆರೋಗ್ಯದ ಕಾಳಜಿ ಎಷ್ಟು ಮುಖ್ಯ ಎಂದು ತಿಳಿಸಿದರು.
ಕೊರೋನಾ ಹೇಗೆ ಬಂಧುತ್ವದ ಮಧ್ಯ ಬಿಕ್ಕಟ್ಟನ್ನು ಸೃಷ್ಟಿಸಿತು ಎಂದು ತಮ್ಮದೇ ಉದಾಹರಣೆಯ ಮೂಲಕ ವಿವರಿಸಿದರು. ಸ್ವತಃ ಶುಗರ್ ಕಂಪ್ಲೆಂಟ್, ಅಧಿಕ ರಕ್ತದ ಒತ್ತಡ, ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಕೊಂಡರೂ ತಮಗೆ ಕೊರೊನಾ ಬಾರದೇ ಇರುವುದಕ್ಕೆ ಕೊರೊನಾದಿಂದ ದೂರ ಇರಲು ಮಾರ್ಗಸೂಚಿಗಳನ್ನು ತಾವು ಕಡ್ಡಾಯವಾಗಿ ಪಾಲಿಸಿದ್ದೇ ಕಾರಣ ಎಂದರು.
ಸರಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕಾದ ಒತ್ತು ಮತ್ತು ಆದ್ಯತೆಗಳನ್ನು ಉದಾಹರಿಸಿದ ಅವರು, ದೆಹಲಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಅದೇ ಮಾದರಿಯನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಗಲಿದ ನಾಡಿನ ಹಿರಿಯ ಕವಿ ಸಿದ್ದಲಿಂಗಯ್ಯ ಅವರ ಹಾಡುಗಳನ್ನು ಚಾಮರಾಜನಗರದ ರಾಮಯ್ಯ ಹಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಮಾನವ ಬಂಧುತ್ವ ವೇದಿಕೆಯ ದಿನೇಶ ಕೊಟ್ಯಾನ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಪ್ರಶ್ನೆಗಳು:
1. ಬಾಯಲ್ಲಿ ಹುಣ್ಣು ಫಂಗಸ್ ಲಕ್ಷಣವೇ?
ಉತ್ತರ: ಹಾಗೇನೂ ಇಲ್ಲ. ಕೋವಿಡ್ ಗುಣಮುಖರಾದವರು ನಿರ್ಲಕ್ಷಿಸದಿರಿ.
2. ಫಂಗಸ್ ಈಗ ಏಕೆ ಜಾಸ್ತಿಯಾಗಿದೆ?
ಉತ್ತರ: ಕೋವಿಡ್ ಎರಡು ಅಲೆಗಳ ಪರಿಣಾಮದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಸರಿಯಾಗಿ ಚಿಕಿತ್ಸೆ ದೊರೆಯದೇ, ನಿಗಾ ಇಡಲು ಸಾಧ್ಯವಾಗದೇ ಫಂಗಸ್ ಜಾಸ್ತಿಯಾಗಿದೆ.
3. ಆಂಬ್ಯುಲೆನ್ಸ ಆಕ್ಸಿಜನ್ ಬಳಕೆಯಿಂದ ಫಂಗಸ್ ಹರಡಬಹಯದೇ?
ಉತ್ತರ: ಇಲ್ಲ
4. ಕೋವ್ಯಾಕ್ಸಿನ್, ಕೋವಿಶೀಲ್ಡ್ ಪರಿಣಾಮ ಭಿನ್ನವೇ?
ಉತ್ತರ: ಎರಡರ ಗುರಿ ಒಂದೇ.