ಮಕ್ಕಳು ಮತ್ತು ಗರ್ಭಿಣಿಯರನ್ನು ಕೋವಿಡ್ ಮೂರನೇ ಅಲೆಯಿಂದ ಕಾಪಾಡುವುದು ಹೇಗೆ?
ಬೆಂಗಳೂರು: ಅಸ್ತಮಾ, ಸಕ್ಕರೆ ಕಾಯಿಲೆ, ಎಚ್.ಐ.ವಿ ಇರುವವರಲ್ಲಿ ರೋಗ ಹರಡುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯಕರ ಮಗುವಿಗಾಗಿ ಗರ್ಭಿಣಿಯರ ಮಾನಸಿಕ ಸ್ವಾಸ್ಥ್ಯ ಕಾಪಾಡುವುದು ಅತ್ಯವಶ್ಯ ಎಂದು ಬಿಜಾಪುರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಗೀತಾ ಚೌಹಾಣ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಆರೋಗ್ಯ ಬಂಧುತ್ವ ಅಭಿಯಾನ ವೆಬಿನಾರ್ ಅಡಿಯಲ್ಲಿ ಆಯೋಜಿಸಲಾಗಿದ್ದ ಮಕ್ಕಳು ಮತ್ತು ಗರ್ಭಿಣಿಯರನ್ನು ಕೋವಿಡ್ ಮೂರನೇ ಅಲೆಯಿಂದ ಕಾಪಾಡುವುದು ಹೇಗೆ? ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಕುಟುಂಬ, ವೈದ್ಯರು, ಸಮಾಜ ಎಲ್ಲರ ಬೆಂಬಲವೂ ಬೇಕಾಗುತ್ತದೆ. ಹಾಗೆಯೇ ಅವರ ಬಳಿ ಬರುವ ಇತರರು ಸಾಮಾಜಿಕ ಅಂತರ ಕಾಯುವುದು ಅತ್ಯವಶ್ಯ. ಆಸ್ಪತ್ರೆ ಭೇಟಿಯ ಮುಂಚೆ ತಿಳಿಸಿ ನೇರವಾಗಿ ಹೋಗಿ ಬರಬೇಕು ಎಂದು ತಿಳಿಸಿದರು.
ಕೋವಿಡ್ ಕಾರಣಕ್ಕೆ ಗರ್ಭಿಣಿಯರಿಗೆ ಆಸ್ಪತ್ರೆ ಅಲೆದಾಟ ತಪ್ಪಿಸಲು ತಪಾಸಣೆಯ ದಿನಗಳನ್ನು ಕಡಿಮೆ ಮಾಡಬೇಕು. ಉದಾಹರಣೆಗೆ,
1. ಮೊದಲ ಭೇಟಿ (12 ವಾರಗಳ ಮೊದಲು)
2. ಎರಡನೇ ಭೇಟಿ (14ರಿಂದ 26 ವಾರಗಳು)
3. ಮೂರನೆಯ ಭೇಟಿ (28 ರಿಂದ 34 ವಾರಗಳು)
4. ನಾಲ್ಕನೆಯ ಭೇಟಿ (36 ವಾರಗಳ ಮೊದಲು)
ಕೋವಿಡ್ ಲಕ್ಷಣಗಳು:
1. ಒಣ ಕೆಮ್ಮು
2. ಜ್ವರ
3. ಗಂಟಲು ನೋವು
4. ಉಸಿರಾಟದ ತೊಂದರೆ
ಗರ್ಭಿಣಿಯರಿಗೆ ಸಲಹೆಗಳು:
1. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ.
2. ಗರ್ಭಿಣಿಯರಲ್ಲಿ ವ್ಯಾಕ್ಸಿನ್ ಸದ್ಯಕ್ಕೆ ಬೇಡ.
3. ಋತುಚಕ್ರದ ಸಮಯದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬಹುದು.
4. ಕೋವಿಡ್ ಪೀಡಿತ ಗರ್ಭಿಣಿಯರಿಗೆ ಸಿಜೇರಿಯನ್ ಹೆರಿಗೆ ಸೂಕ್ತ.
5. ಹಾಲು ಕುಡಿಸುವುದರಿಂದ ಮಗುವಿಗೆ ಕೋವಿಡ್ ಬರುವುದಿಲ್ಲ.
6. ಗರ್ಭಿಣಿ ಕೋವಿಡ್ ಪೀಡಿತಳಿದ್ದರೆ ಮಗುವಿಗೆ ಕೋವಿಡ್ ಬರುವುದಿಲ್ಲ.
ಮೊದಲಾದ ಸಲಹೆಗಳನ್ನು ಅವರು ನೀಡಿದರು.
ವೆಬಿನಾರ್ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಬೆಂಗಳೂರಿನ ಚಿಕ್ಕ ಮಕ್ಕಳ ತಜ್ಞ ಡಾ. ಹರೀಶ, ಮೊದಲನೇ ಅಲೆ ಮತ್ತು ಎರಡನೇ ಅಲೆಯಲ್ಲಿಯೂ ಮಕ್ಕಳು ತೊಂದರೆಗೀಡಾಗಿದ್ದಾರೆ. ಲಕ್ಷಣ ರಹಿತ ಕೋವಿಡ್ ಮಕ್ಕಳಲ್ಲಿ ಹೆಚ್ಚು. ಹಾಗಾಗಿ ಜಾಗರೂಕತೆ ಅತ್ಯಗತ್ಯ. ಮಕ್ಕಳಿಗೆ ಕೋವಿಡ್ ಹೆಚ್ಚು ಬಾಧಿಸದಿದ್ದರೂ ಅವರೊಡನೆ ದೊಡ್ಡವರ ಸಂಪರ್ಕ ಕಡಿಮೆ ಮಾಡುವುದು ಒಳಿತು ಎಂದರು.
ಪೌಷ್ಟಿಕಾಂಶ ಆಹಾರ ಸೇವನೆ, ಬಿಸಿಲಿಗೆ ಮೈಯೊಡ್ಡವುದು, ಒಳಗಡೆಯೇ ಆಟವಾಡುವುದರಿಂದ ಮಕ್ಕಳನ್ನು ಕೋವಿಡ್ ನಿಂದ ದೂರವಿಡಬಹುದು. ಕುಟುಂಬದವರೆಲ್ಲರೂ ಕೊರೋನಾ ಪೀಡಿತರಾಗಿದ್ದಾಗ ಮಕ್ಕಳಿಗೆ ಲಕ್ಷಣಗಳಿದ್ದರೆ ಮಾತ್ರ ಸಿಟಿ ಸ್ಕ್ಯಾನ್ ಮಾಡಿಸಿ, ಲಕ್ಷಣಗಳಿಲ್ಲದಿದ್ದರೆ ಮಾಡಿಸಬೇಡಿ ಎಂದರು.
ಕೋವಿಡ್ ಪಾಸಿಟಿವ್ ಬರುವ ಮಕ್ಕಳಲ್ಲಿ ಸಕ್ಕರೆ ಕಾಯಿಲೆ ಕಂಡುಬರುತ್ತಿದೆ. ಕೋವಿಡ್ ಇಂದ ಗುಣವಾದವರು ತಿಂಗಳುಗಟ್ಟಲೇ ಕಾಳಜಿ ವಹಿಸುವುದು ಅತ್ಯವಶ್ಯ. ಮಕ್ಕಳಲ್ಲಿ ಕಪ್ಪು ಫಂಗಸ್ ಪ್ರಭಾವ ಕಡಿಮೆ. ಅದರ ಬಗ್ಗೆ ಚಿಂತೆ ಅನಗತ್ಯ. ವ್ಯಾಕ್ಸಿನ್ ಮಕ್ಕಳಿಗೆ ಇನ್ನೂ ಟ್ರಯಲ್ ಅಲ್ಲಿದ್ದು ಕೊಡಬೇಕು ಎಂಬ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದರು.
ಚಾಮರಾಜನಗರದ ರಾಮಯ್ಯ ಜನಾರ್ಧನ ಕೆಸರಗದ್ದೆ ರಚಿಸಿದ ‘ಮನುಜ ಜಾತಿ ತಾನೊಂದೇ ವಲಂ’ಮತ್ತು ಕೊರೋನಾ ಜಾಗೃತಿ ಗೀತೆಯನ್ನು ಪ್ರಸ್ತುತಪಡಿಸಿದರು. ಮಾನವಬಂಧುತ್ವ ವೇದಿಕೆಯ ಡಾ. ವಿಠ್ಠಲ ಮತ್ತು ಡಾ. ಲೀಲಾ ಸಂಪಿಗೆ ಕಾರ್ಯಕ್ರಮವನ್ನು ನಿರ್ವಸಿದರು. ಡಾ. ಗಿರೀಶ್ ಮೂಡ್ ಮತ್ತು ವಿಷಯ ತಜ್ಞರು ವೆಬಿನಾರ್ ನಲ್ಲಿ ಭಾಗವಹಿಸಿದವರ ಸಂಶಯಗಳಿಗೆ ಪ್ರಶ್ನೋತ್ತರದಲ್ಲಿ ಪ್ರತಿಕ್ರಿಯಿಸಿದರು.
ಪ್ರಶ್ನೆಗಳು:
1. ವ್ಯಾಕ್ಸಿನ್ ಎರಡೂ ಡೋಸ್ ಮುಗಿದವರಲ್ಲಿ ಕೋವಿಡ್ ಬರುವುದಿಲ್ಲವೇ?
ಉತ್ತರ: ಲಕ್ಷಣ ರಹಿತ ಕಾಯಿಲೆ ಬರಬಹುದು, ಶೀಘ್ರ ಗುಣವಾಗಲು ವ್ಯಾಕ್ಸಿನ್ ನೆರವಾಗುತ್ತದೆ.
2. ಬಿಸಿ ಆವಿ ಸೇವನೆ ಕುರಿತು ಹೇಳಿ.
ಉತ್ತರ: ದಿನಕ್ಕೆ ಒಮ್ಮೆ ಅಥವಾ ಎರಡು ಸಲ ಸೂಕ್ತ.
3. ಕೋವಿಡ್ ಪಾಸಿಟಿವ್ ಬಂದ ಮೇಲೆ ಲಸಿಕೆ ತೆಗೆದುಕೊಳ್ಳಬಹುದಾ?
ಉತ್ತರ: 4 ರಿಂದ 6 ವಾರಗಳ ನಂತರ ತೆಗೆದುಕೊಳ್ಳಬೇಕು.
4. ಗರ್ಭಿಣಿಯರಿಗೆ ವ್ಯಾಕ್ಸಿನ್ ಕೊಡಬಹುದೇ?
ಉತ್ತರ: ಇನ್ನೂ ಸಂಶೋಧನೆಯ ಹಂತದಲ್ಲಿದ್ದು ಸದ್ಯಕ್ಕೆ ಕೊಡುವಂತಿಲ್ಲ.
ಕೋವಿಡ್ ಕುರಿತಾದ ಗೊಂದಲಗಳಿಗೆ ಪರಿಹಾರ ನೀಡುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ ‘ಆರೋಗ್ಯ ಬಂಧುತ್ವ ವೆಬಿನಾರ್’ಪರಿಕಲ್ಪನೆಯಡಿ 10 ದಿನಗಳ ಸರಣಿ ವೆಬಿನಾರ್ ಆಯೋಜಿಸಿದ್ದು. ನಾಲ್ಕನೆಯ ದಿನದ ಅಧಿವೇಶನ ಕೂಡ ಯಶಸ್ವಿಯಾಗಿ ನಡೆಯಿತು. ವೆಬಿನಾರ್ ನೇರಪ್ರಸಾರವನ್ನು ಮಾನವ ಬಂಧುತ್ವ ವೇದಿಕೆಯ ಫೇಸ್ ಬುಕ್ ನಲ್ಲಿ ಕೂಡ ನೋಡಬಹುದು. ಜೊತೆಗೆ, MBV Karnataka ಯೂಟ್ಯೂಬ್ ವಾಹಿನಿಯಲ್ಲಿ ಸೆಮಿನಾರ್ ವಿಡಿಯೋವನ್ನು ಅಪ್ಲೋಡ್ ಮಾಡಲಾಗುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕೂಡ ವೆಬಿನಾರ್ ನಲ್ಲಿ ವಿಷಯ ತಜ್ಞರು ಮಂಡಿಸಿದ ವಿಚಾರಗಳು ಮತ್ತು ಭಾಗವಹಿಸಿದವರ ಪ್ರಶ್ನೋತ್ತರಗಳು ಲಭ್ಯವಾಗಲಿವೆ.