ಬೆಂಗಳೂರು: ಕೊರೊನಾ ಸೋಂಕು ತಗುಲಿ ಗುಣಮುಖರಾಗಿ ಮನೆಗೆ ತೆರಳಿದ ನಂತರ ಸುಸ್ತು, ತಲೆನೋವು, ವಾಸನೆ ನಷ್ಟ, ರುಚಿ ಇಲ್ಲವಾಗುವುದು, ಒಣಕೆಮ್ಮು, ತಲೆಸುತ್ತು, ಉಸಿರಾಟದಲ್ಲಿ ಸಮಸ್ಯೆಗಳು, ಮೈಕೈನೋವು, ಮಾನಸಿಕವಾಗಿ ಕುಗ್ಗುವಿಕೆ ಹುಷಾರದ ನಂತರ ಕೂಡ ವಾರ, ತಿಂಗಳ ನಂತರ ಕೂಡ ಬರಬಹುದು. ಇವೆಲ್ಲ ಎಲ್ಲರಿಗೂ ಬರುವುದಿಲ್ಲ ಎಂದು ಅರವಳಿಕೆ ತಜ್ಞ ಡಾ. ಮುರಳಿಧರ್ ಡಿ ಪಟೇಲ್ ಹೇಳಿದರು.
ವೆಬಿನಾರ್ ನಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಶ್ವಾಸಕೋಶ ತಜ್ಞ ಡಾ. ಸಂದೀಪ್, ಕೋವಿಡ್ ವೈರಲ್ ಸೋಂಕು ವ್ಯಕ್ತಿಗೆ ತೊಂದರೆ ಕೊಟ್ಟು ಹೊರಟು ಹೋಗುತ್ತದೆ. ವ್ಯಕ್ತಿಗೆ ಗಾಯ ಮಾಡಿ ಹೊರಟುಹೋಗುತ್ತದೆ. ಅನಂತರ ವ್ಯಕ್ತಿ ಸಹಜ ಸ್ಥಿತಿಗೆ ಬರುತ್ತಾನೆ. ಗಾಯದ ಪ್ರಮಾಣವೇ ಸೋಂಕಿನಿಂದ ಗುಣಮುಖರಾಗಬೇಕಾದ ಸಮಯವನ್ನು ನಿರ್ಧರಿಸುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳು” ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಡಾ. ಸಂದೀಪ್, ಆಕ್ಸಿಜನ್ ಬೇಕಾದ ರೋಗಿಗಳು, ಆಕ್ಸಿಜನ್ ಬಳಸದ ರೋಗಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗುತ್ತದೆ. ನಾನು ಒಂದೂವರೆ ವರ್ಷಗಳಿಂದ 3,500 ರೋಗಿಗಳಿಗೆ ಚಿಕಿತ್ಸೆ ನಿಡಿದ್ದೇನೆ. ಯಾವುದೇ ವ್ಯಕ್ತಿಗೆ ಕೋವಿಡ್ ಬಂದರೂ ಸಂಪೂರ್ಣ ಗುಣಮುರಾಗುತ್ತಾರೆ. ಕೊರೊನಾ ವೈರಸ್ ಮಾಡಿದ್ದ ಸಮಸ್ಯೆಯ ಆಧಾರದ ಮೇಲೆ ಗುಣಮುಖರಾಗಲು ಸಮಯ ಹಿಡಿಯುತ್ತದೆ ಎಂದರು.
ಕೊರೊನಾ ಬಂದರೆ ಎಲ್ಲರೂ ಸಂಪೂರ್ಣ ಗುಣಮುಖರಾಗುತ್ತಾರೆ. ಎಲ್ಲರೂ ಪಾಸಿಟಿವ್ ಆಗಿ ಇರಬೇಕಾಗುತ್ತದೆ. ಮೊದಲು ನಾನು ಹುಷಾರಾಗುತ್ತೇನೆ ಎಂದು ನಂಬಬೇಕು. ಕಳೆದ ವಾರ, ಈ ವಾರಕ್ಕೆ ಹೋಲಿಸಿದರೆ ಹುಷಾರಾದ ಸ್ಥಿತಿ ಗೊತ್ತಾಗುತ್ತದೆ. ಪಾಸಿಟಿವ್ ಆಗಿದ್ದರೆ ಮುಂದಿನ ವಾರಗಳಲ್ಲಿ ಬೇಗ ಹುಷಾರಾಗುತ್ತಾರೆ. ಪಾಸಿಟಿವ್ ಆಗಿ ಎಲ್ಲರೂ ಇರಬೇಕು ಎಂದು ಅವರು ಕರೆ ನೀಡಿದರು.
ಯಾವುದೇ ವ್ಯಕ್ತಿಗೆ ಕೋವಿಡ್ ಗಿಂತ ಬೇರೆ ಮೇಜರ್ ತೊಂದರೆ ಇದ್ದರೆ ಮಾತ್ರ ಸಮಸ್ಯೆಯಾಗುತ್ತದೆ. ಕೊರೊನಾ ಗುಣ ಲಕ್ಷಣಗಳು ಕಡಿಮೆಯಾದರೆ ಆ ವ್ಯಕ್ತಿಗೆ ತೊಂದೆರಯಾಗುವ ಅವಕಾಶಗಳು ಕಡಿಮೆ. ಅವರು ಏನೋ ಅಂದ್ರು, ಟಿವಿಯಲ್ಲೇನೋ ಬಂತು, ವಾಟ್ಸಪ್ ನಲ್ಲಿ ಏನೋ ಬಂತು ಎಂದು ನಂಬಬೇಡಿ. ಒಂದೂವರೆ ವರ್ಷದ ಅವಧಿಯಲ್ಲಿ ಅನೇಕರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. ಸಮಸ್ಯೆಯಾದವರ ಪ್ರಮಾಣ ತುಂಬಾ ಕಡಿಮೆ ಎಂದರು.
- ಕೆಮ್ಮು
ಕೊರೊನಾ ನಂತರದ ಸಮಸ್ಯೆಗಳನ್ನು ಕುರಿತು ವಿವರಿಸಿದ ಅವರು, ಕೋವಿಡ್ ಮುಖ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ್ದು. ಇದರಿಂದ ಕೆಮ್ಮು ಉಳಿಯುತ್ತದೆ. ಜ್ವರ ಇತ್ಯಾದಿ ಗುಣ ಲಕ್ಷಣ ಇರುವುದಿಲ್ಲ. ಕೆಮ್ಮು ಶ್ವಾಸಕೋಶದಲ್ಲಿ ಯಾವುದೇ ಸಮಸ್ಯೆಯಾದರೆ ಕೆಮ್ಮಿನ ಮೂಲಕ ಪ್ರತಿಕ್ರಿಯಿಸುತ್ತದೆ. 2 ವಾರಗಳ ನಂತರ ಕೂಡ ಕೆಮ್ಮಿದ್ದರೆ ವೈದ್ಯರನ್ನು ಸಂಪರ್ಕಿಸಿ. ಶ್ವಾಸಕೋಶದ ಹಾನಿ ಗುಣಮುಖವಾಗುವ ಸಮಯದಲ್ಲಿ ಕೆಮ್ಮು ಬರುವುದು ಸಾಮಾನ್ಯ. ಇದು ಗಾಯ ಮಾಯುವ ಮುನ್ನ ಕಡಿತ ಬರುವಂತೆ ಅಷ್ಟೇ. ಕೊರೊನಾ ಹೋದ ನಂತರ ರಿಕವರ್ ಆಗುವ ಸಮಯದಲ್ಲಿ ಕೆಮ್ಮು ಬರುತ್ತದೆ. ಕೆಮ್ಮು ಕೂಡ ಶ್ವಾಸಕೋಶದ ಡ್ಯಾಮೇಜ್ ನಿಂದ ಮಾಯುವ ಕುರಿತ ಸಂದೇಶ ಎಂದೇ ಪರಿಗಣಿಸಬೇಕು. ಕೆಮ್ಮು ಕೊರೊನಾದಿಂದ ಮುಕ್ತವಾಗುತ್ತಿರುವ ಲಕ್ಷಣ ಎಂದರು.
ಕೆಮ್ಮು ತೀವ್ರವಾದರೆ, ಯಾವುದಾದರೂ ತಜ್ಞ ವೈದ್ಯರನ್ನು ಸಂಪರ್ಕಿಸಿ. ಅದರಲ್ಲಿ ಇನ್ಹೇಲರ್ ಬಳಕೆ ಮಾಡಿದರೆ, ಕೆಮ್ಮು ಹೋಗುತ್ತದೆ. ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಇದ್ದರೂ ಕೆಮ್ಮು ಮುಂದುವರೆದಿದ್ದರೆ ತ ಜ್ಞ ವೈದ್ಯರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದರು.
- ಗಂಟಲು ನೋವು
ನನಗೂ ಕೊರೊನಾ ಬಂದಿತ್ತು. ನನಗೂ ಗಂಟಲು ನೋವು ಬಂದಿತ್ತು. ಗಂಟಲು ನೋವು ಹೆಚ್ಚಾಗಿತ್ತು. ಇದರಿಂದ ಪ್ರಾಣಾಪಾಯ ಆಗುವುದಿಲ್ಲ. ಮನೆ ಮದ್ದುಗಳ ಮೂಲಕವೇ ಗಂಟಲು ನೋವನ್ನು ನಿವಾರಿಸಬಹುದು ಎಂದರು.
- ತಲೆ ನೋವು
ಮೂರನೇ ಲಕ್ಷಣ ತಲೆನೋವು. ಸೈನಸ್ ನಲ್ಲಿ ಕಫ ಕಟ್ಟಿದಾಗ ತಲೆನೋವು ಬರುತ್ತದೆ. ಕುಳಿತು ಎದ್ದಾಗ ತಲೆ ನೋಯುತ್ತದೆ. ತಜ್ಞ ವೈದ್ಯರನ್ನು ಸಂಪರ್ಕಿಸಿ, ಅವರು ಡ್ರಾಪ್ ಕೊಟ್ಟು ನಿಮ್ಮ ಉಉಸಿರಾಟದ ಸಮಸ್ಯೆಯಿಂದ ಬಿಡುಗಡೆ ಹೊಂದಬಹುದು ಎಂದರು.
ಸಾಮಾನ್ಯವಾಗಿ ಯಾವುದೇ ರೋಗಗಳ ನಂತರ ಸುಸ್ತು ಇರುತ್ತದೆ. ನಮ್ಮ ದೇಹದಲ್ಲಿ ಆಗಿರುವ ಬದಲಾವಣೆಗಳಿಂದ ಇದು ಸಾಮಾನ್ಯ. ಕಾಲಕ್ರಮೇಣ ಗುಣವಾಗುತ್ತದೆ. 10-15 ದಿನಗಳ ಕಾಲ ನನಗೆ ಕೂಡ ಸುಸ್ತು ಇತ್ತು. ಕಾಲಕ್ರಮೇಣ ಸುಸ್ತು ಕೂಡ ಕಡಿಮೆಯಾಗುತ್ತದೆ ಎಂದರು.
- ವಾಸನೆ ನಷ್ಟ
ವಾಸನೆ ಗ್ರಹಿಕೆ ಶಕ್ತಿಯನ್ನು ಕಳೆದುಕೊಳ್ಳುವ ಲಕ್ಷಣ ಕೊರೊನಾಗೆ ಸೀಮಿತ. ಇದು 1-2 ವಾರದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ರೋಗಲಕ್ಷಣ ಕಡಿತವಾದಂತೆ ವಾಸನೆ ಅರಿವಿಗೆ ಬರತೊಡಗುತ್ತದೆ. ಕೊರೊನಾ ನಂತರ ಈ ಸಮಸ್ಯೆ ಪರಿಹಾರವಾಗುತ್ತದೆ. ಯಾವುದೇ ಮಟ್ಟದ ಗಾಯವನ್ನು ಗುಣವಾಗಿಸುವ ಶಕ್ತಿ ದೇಹಕ್ಕಿರುತ್ತದೆ. ಆದ್ದರಿಂದ ವಾಸನೆ ಇಲ್ಲದಿರುವುದು ಸಮಸ್ಯೆಯಲ್ಲ. ಅದು ಕ್ರಮೇಣ ಬರುತ್ತದೆ. ರುಚಿ ಕಡಿಮೆ, ಉಪ್ಪು ಹೆಚ್ಚು ಎನಿಸುವುದು ಕಂಡುಬರುತ್ತದೆ. ಇವೆಲ್ಲವೂ ಪರಿಹಾರವಾಗುತ್ತವೆ ಎಂದರು.
ಯಾವುದೇ ರೋಗದ ವಿರುದ್ಧ ಹೋರಾಡಲು ಶೇ. 50ರಷ್ಟು ಮನೋಬಲ, ಶೇ. 25ರಷ್ಟು ಔಷಧಿ ಅಗತ್ಯವಿದೆ. ಕೊರೊನಾ ಕ್ಯಾನ್ಸರ್ ಅಲ್ಲ. ಇದು ಕೂಡ ಒಂದು ಸರಳ ಇಂಫೆಕ್ಷನ್. ನಾವು ಪರಿಸರದಲ್ಲಿ ಪರಸ್ಪರ ಅವಲಂಬಿತರಾಗಿದ್ದೇವೆ. ಸಣ್ಣಪುಟ್ಟ ಸಮಸ್ಯೆಗಳ ಕುರಿತು ನಾವು ಭಯಭೀತರಾಗಬಾರದು. ಡಿಸ್ಚಾರ್ಜ್ ಆದ 15 ದಿನಗಳ ನಂತರ ತಜ್ಞ ವೈದ್ಯರನ್ನು ಕಾಣಿ, ಅವರು ನಿಮಗೆ ಮುಂದಿನ ಸಲಹೆಗಳನ್ನು ನೀಡುತ್ತಾರೆ ಎಂದರು.
- ಆತಂಕ
ಆತಂಕ ಕೂಡ ಕೊರೊನಾ ನಂತರ ಸಾಮಾನ್ಯ. ಉಸಿರು ಹಿಡಿದಂತಾಗುವುದು, ಸುಸ್ತು, ಇಂತಹ ಸಮಯದಲ್ಲಿ ಏನೋ ಆಯಿತು ಎನಿಸುತ್ತದೆ. ನೂರರಲ್ಲಿ 70ರಷ್ಟು ಜನರಿಗೆ ಆತಂಕ ಕಂಡುಬರುತ್ತಿದೆ. ಅವರಿಗೆ ನಾವು ಧೈರ್ಯ ಹೇಳುತ್ತೇವೆ. ನನಗೂ ಆತಂಕವಾಗಿತ್ತು. ಕಾಲಕ್ರಮೇಣ ಹೊರಬಂದೆ. 100ರಲ್ಲಿ 90ರಷ್ಟು ಜನರಿಗೆ ಸಮಸ್ಯೆಯಾಗದು. ಭಯ, ಆತಂಕದಿಂದ ಹೊರಬನ್ನಿ. ಮೊದಲ 2 ವಾರಗಳಲ್ಲೇ ಹೆಚ್ಚಿನ ಡ್ಯಾಮೇಜ್ ಆಗಿರುತ್ತದೆ. 2 ವಾರದ ನಂತರ ಡಿಸ್ಚಾರ್ಜ್ ಆದವರಿಗೆ, ಆಕ್ಸಿಜನ್ ಅಗತ್ಯ ಕಂಡುಬಂದಿಲ್ಲವೆಂದರೆ ಸಮಸ್ಯೆಯಿಲ್ಲ ಎಂದರು.
- ನಿದ್ರಾಹೀನತೆ
ಬಹಳ ಜನರಿಗೆ ನಿದ್ರಾಹೀನತೆ ಕಾಡುತ್ತದೆ. ಆಸ್ಪತ್ರೆಯಲ್ಲಿ ಇದ್ದುಬರುವುದು ಕಷ್ಟಕರ ಕೆಲಸ. ಅಕ್ಕಪಕ್ಕದಲ್ಲಿ ಏನೇನೋ ಘಟನೆಗಳು ನಡೆಯುತ್ತವೆ. ಅವು ಮನಸಿನಾಳದಲ್ಲಿ ಕುಳಿತಿರುತ್ತವೆ. ಅಂತಹ ವ್ಯಕ್ತಿಗಳಲ್ಲಿ ನಿದ್ರಾಹೀನತೆ ಕಂಡುಬರುತ್ತದೆ. ನಿದ್ರೆ ವ್ಯಕ್ತಿ ಸಮಚಿತ್ತನಾಗಿರಬೇಕಾದರೆ ತುಂಬಾ ಅಗತ್ಯ. ನಿದ್ರೆ ಬಾರದಿದ್ದರೆ ತಜ್ಞರನ್ನು ಸಂಪರ್ಕಿಸಿ. ನಿಮಗೆ ನಿದ್ದೆ ಬಂದರೆ ಇನ್ನುಳಿದ ಎಲ್ಲ ಸಣ್ಣಪುಟ್ಟ ಸಮಸ್ಯೆಗಳಿಂದ ಹೊರಬರಬಹುದು ಎಂದರು.
ಗಾಯ ಗುಣವಾಗುವ ಹಂತದಲ್ಲಿ ಇವೆಲ್ಲವೂ ಬಂದುಹೋಗುವ ಲಕ್ಷಣಗಳು. ಇವೆಲ್ಲ ಲಕ್ಷಣಗಳಿಂದ ಹೊರಬರಬಹುದು. ವೈದ್ಯಕೀಯದಲ್ಲಿ 1+1 = 2 ಆಗುವುದಿಲ್ಲ. ನೂರರಲ್ಲಿ 98 ಜನ ನಾರ್ಮಲ್ ಇರುತ್ತಾರೆ. ಇಬ್ಬರಿಗೆ ಬೇರೆ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಬ್ಲಾಕ್ ಫಂಗಸ್. ರಾಜ್ಯದಲ್ಲಿ 12 ಲಕ್ಷ ಜನಕ್ಕೆ ಕೊರೊನಾ ಬಂದಿದೆ. ಬ್ಲಾಕ್ ಫಂಗಸ್ ಬಂದವರ ಸಂಕ್ಯೆ 3 ಸಾವಿರ. ಅಂದರೆ ಶೇ. 1. ಇದಕ್ಕೆ ಭಯ ಪಡೆಬೇಕಾದ ಅವಶ್ಯಕತೆ ಇಲ್ಲ ಎಂದು ಧೈರ್ಯ ಹೇಳಿದರು.
ಬ್ಲಾಕ್ ಫಂಗಸ್ ಮೊದಲಿನಿಂದಲೂ ಇತ್ತು. ಈಗ ಪ್ರಮಾಣ ಹೆಚ್ಚಾಗಿದೆ. ಸ್ಟಿರಾಯಿಡ್ ನೇರವಾಗಿ ಬ್ಲಾಕ್ ಫಂಗಸ್ ಗೆ ಕಾರಣ ಎನ್ನುವುದನ್ನು ನಾನು ಒಪ್ಪುವುದಿಲ್ಲ. ವೈರಸ್ ಮಾಡಿರುವ ಯಾವುದೋ ಡ್ಯಾಮೇಜ್ ಇದಕ್ಕೆ ಕಾರಣ. ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಅಪೌಷ್ಠಿಕತೆ, ಬಹಳ ಕಾಲದಿಂದ ಶುಗರ್ ಇದ್ದೂ ನಿಗಾವಹಿಸದಂತವರಿಗೆ ಬ್ಲಾಕ್ ಫಂಗಸ್ ಸಮಸ್ಯೆ ಬರುತ್ತದೆ ಎಂದರು.
ಕೊರೊನಾದಿಂದ ಜನ ಉಳಿದಿರುವುದೇ ಸ್ಟಿರಾಯಿಡ್ ನಿಂದ. ಸ್ಟಿರಾಯಿಡ್ ಅನ್ನು 1 ವಾರದ ವರೆಗೆ ಕೊಡಲಾಗುತ್ತದೆ. ಕೊರೊನಾ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಕೋವಿಡ್ ಬಂದ 1 ತಿಂಗಳ ಮೇಲೆ 1 ವಾರದ ಒಳಗೆ ಬರುತ್ತದೆ. ಕಣ್ಣಿನ ಕೆಳಗೆ ಬಹಳ ನೋವು ಕಾಣಿಸಿಕೊಳ್ಳುತ್ತದೆ. ಅರ್ಧ ತಲೆನೋವು, ಸೆಳೆತ, ವಿಪರೀತ ಎಳೆತ, ವಿಪರೀತ ತಲೆನೋವು ಬಂದರೆ ಅದು ಬ್ಲಾಕ್ ಫಂಗಸ್ ಲಕ್ಷಣ ಇರಬಹುದು. ಮುಖ ದಪ್ಪವಾಗುವುದು, ಕಣ್ಣು ಹೊರ ಬರುವುದು ಲಕ್ಷಣ. ಡಯಾಬಿಟೀಸ್ ಹೆಚ್ಚಿನ ಸಮಸ್ಯೆ ಇರುವವರು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಜನ ಮತ್ತು ಸರ್ಕಾರ ಅನುಪಯುಕ್ತ ಪರೀಕ್ಷೆಗಳ ಮೇಲೆ ಕೋಟ್ಯಂತರ ಹಣ ವ್ಯಯಿಸಿದೆ. ವಿನಾಕಾರಣ ಪರೀಕ್ಷೆ ಮಾಡಿಸಕೊಳ್ಳುವುದರಿಂದ ಯಾವುದೇ ಪರಿಣಾಮ ಇಲ್ಲ ಎಂದರು.
- ರಕ್ತಹೆಪ್ಪುಗಟ್ಟುವಿಕೆ
ಕೋವಿಡ್ ನ ಇನ್ನೊಂದು ಲಕ್ಷಣವೆಂದರೆ ರಕ್ತಹೆಪ್ಪುಗಟ್ಟುವಿಕೆ. ರಕ್ತ ಹೆಪ್ಪುಗಟ್ಟುವಿಕೆ ಕೊರೊನಾ ನಂತರ ಕಾಣಬಹುದು. ಕಾಲಿನ ರಕ್ತನಾಳಗಳಲ್ಲಿ ಹೆಪ್ಪುಗಟ್ಟಬಹುದು. ಇದು ಮುಂದುವರೆದು ಎದೆಯಲ್ಲಿ ರಕ್ತ ಹೆಪ್ಪುಗಟ್ಟಬಹುದು. ಇದು ಕೇವಲ ಶೇ. 1ರಷ್ಟು ಜನರಲ್ಲಿ ಮಾತ್ರ. ಕೊರೊನಾ ನಂತರ ಮೊದಲೇ ರಕ್ತ ತೆಳು ಮಾಡುವ ಔಷಧಿ ಕೊಡಲಾಗುತ್ತದೆ. ಇದರಿಂದ ರಕ್ತಹೆಪ್ಪುಗಟ್ಟುವಿಕೆ ಕಡಿಮೆಯಾಗುತ್ತದೆ. ಹೆಪ್ಪುಗಟ್ಟುವಿಕೆ ತೀವ್ರವಾದರೆ ಹೃದಾಯಾಘಾತವಾಗುತ್ತದೆ. ಆದರೆ, ಇದು ಎಲ್ಲರಿಗೂ ಅಲ್ಲ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಫಕೀರ್ ಹುಲಿಕೊಟ್ಟಲ್ ಬಹುಜನ ನಾಯಕ ಜೈ ಭೀಮ ಅಮರಗೊಳಿಸುವೆನು ನಿನ್ನ ನಾಮ ಮತ್ತು ಭಾರತವೆಂದರೆ ತ್ರಿವರ್ಣ ಧ್ವಜವು ಹಾಡುಗಳನ್ನು ಹಾಡಿದರು. ಸಂಶೋಧಕ ಸುರೇಶ್ ಶಿಕಾರಿಪುರ ವೆಬಿನಾರ್ ಅನ್ನು ನಿರ್ವಹಿಸಿದರು.