ಭಾತದಲ್ಲಿ ಅನೇಕ ಜಾತಿಗಳಿವೆ. ಇಲ್ಲಿ ಮೇಲ್ದಾತಿಗಳು ಮೇಲ್ವರ್ಗಗಳು, ಕೆಳ ಜಾತಿಗಳು ಕೆಳವರ್ಗಗಳು. ಶತಮಾನಗಳ ಕಾಲ ಕೆಳಜಾತಿಯ ಜನರಿಗೆ ಶಿಕ್ಷಣ, ಆಸ್ತಿಯಲ್ಲಿ ಹಕ್ಕು, ಆಡಳಿತದಲ್ಲಿ ಭಾಗವಹಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಇತ್ಯಾದಿಗಳನ್ನು ನಿರಾಕರಿಸಿ ಶೋಷಿಸಿ ಗುಲಾಮರಂತೆ ನಡೆಸಿಕೊಂಡು ಬರಲಾಯಿತು. ಈ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರಬೇಕೆಂಬುದು ನಮ್ಮ ಸ್ವಾತಂತ್ರ್ಯ ಹೋರಾಟದ ಬಯಕೆಯಾಗಿತ್ತು. ದೇಶವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಎಲ್ಲಾ ಜಾತಿಯ, ಸಾಮರ್ಥ್ಯದ ಜನ ಭಾಗಿಯಾಗಿರಬೇಕು ಎನ್ನುವುದು ಆಶಯವಾಗಿತ್ತು. ಹಾಗಾಗಿ ಮೀಸಲಾತಿಯೆಂಬ ನೀತಿ ನಮ್ಮ ಸ್ವಾತಂತ್ರ್ಯ ಚಳುವಳಿಯ ಗುರಿಯಾಯಿತು.
ಸ್ವಾತಂತ್ರ್ಯ ಹೋರಾಟದ ಗುರಿಗಳ ಸಾಧನೆಗೆ ಒಂದು ಸಂವಿಧಾನದ ಅವಶ್ಯಕತೆ ಅನಿವಾರ್ಯವಾಯಿತು. ನಮ್ಮ ಸಂವಿಧಾನದಲ್ಲಿ ಪ.ಜಾ, ಪ.ಪಂ ಮತ್ತು ಹಿಂದುಳಿದ ವರ್ಗಗಳಿಗೆ ರಾಜಕೀಯ, ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ.
ಚಾರಿತ್ರಿಕವಾಗಿ ಅವಕಾಶ ವಂಚಿತ ಸಮುದಾಯಗಳಿಗೆ ಮೀಸಲಾತಿಯು ಒಂದು ಮಾನವ ಹಕ್ಕು, ಸಮಾನತೆಯ ಸಾಧನೆ, ಸರ್ಕಾರದ ಆಡಳಿತದಲ್ಲಿ ಒಂದು ಪ್ರಾತಿನಿಧ್ಯ ಮತ್ತು ಎಲ್ಲ ರೀತಿಯ ಪಕ್ಷಪಾತ ಹಾಗೂ ಬಹಿಷ್ಕಾರದ ವಿರುದ್ಧ ಒಂದು ಮಹತ್ತರ ಸಾಧನೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಲ್ಲಿ ಭಾವೈಕ್ಯ ಮೂಡಿಸಲು ದೃಢಸಂಕಲ್ಪ ಮಾಡಲಾಗಿದೆ. ಅಸಮಾನತೆಯಿಂದ ಭಾತೃತ್ವಕ್ಕೆ ಧಕ್ಕೆಯಾಗುತ್ತದೆ. ಭಾತೃತ್ವವಿಲ್ಲದಾಗ ದೇಶದ ಜನರ ಒಗ್ಗಟ್ಟನ್ನು ಸಾಧಿಸಲು ಸಾಧ್ಯವಿಲ್ಲ. ಸಮಾನ ಅವಕಾಶಗಳು ದೊರೆಯುವುದು ಖಚಿತವಾಗಿದ್ದರೆ ಸಂವಿಧಾನದ ಗುರಿ ಭಾತೃತ್ವವನ್ನು ಸಾಧಿಸಲು ಸಾಧ್ಯ.
ಪ್ರತಿಯೊಬ್ಬ ವ್ಯಕ್ತಿ ಆತ್ಮಗೌರವದಿಂದ ಬದುಕುವಂತಹ ಅವಕಾಶವನ್ನು ದೊರಕಿಸಿಕೊಡುವುದು ನಮ್ಮ ಸಂವಿಧಾನದ ಆಶಯ, ಸ್ಥಾನಮಾನ ಹಾಗು ಅವಕಾಶಗಳಲ್ಲಿ ಸಮಾನತೆ ಇಲ್ಲದಿದ್ದರೆ ಆತ್ಮಗೌರವವಿರಲು ಸಾಧ್ಯವಿಲ್ಲ. ಸಮಾಜದ ಒಂದು ಗಣನೀಯ ವರ್ಗದ ಜನರಿಗೆ ಅಭಿವೃದ್ಧಿ ಹೊಂದುವ, ಆಡಳಿತ ನಡೆಸುವ ಹಾಗೂ ಸಮಾಜಕ್ಕೆ ತಮ್ಮ ಉತ್ತಮವಾದ ಕೊಡುಗೆಯನ್ನು ನೀಡುವ ಸಮಾನ ಅವಕಾಶಗಳನ್ನು ಕೊಡದೇ ಇದ್ದಾಗ ಪ್ರಜಾಸತ್ತಾತ್ಮಕ ತಳಹದಿಯ ಅಂಶಗಳೇ ಕಾಣೆಯಾಗಿ ಬಿಡುತ್ತವೆ.
ಜಾತಿ, ಜನಾಂಗ, ಧರ್ಮ ಹಾಗೂ ಲಿಂಗ ಅಸಮಾನತೆಗಳನ್ನು ತೊರೆದು ಎಲ್ಲರೂ ಸಮಾನವಾಗಿ ರಾಜ್ಯದ ಆಡಳಿತದಲ್ಲಿ ಭಾಗಿಯಾದಾಗ ಮತ್ತು ಎಲ್ಲ ರೀತಿಯ ತಾರತಮ್ಯಗಳನ್ನು ನಿವಾರಿಸಿದಾಗ ಸಂವಿಧಾನದ ಮೂಲತತ್ವಗಳಾದ ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯ.
ಮೀಸಲಾತಿ ಎಂಬುದು ಬಡತನ ನಿರ್ಮೂಲನ ಕಾರ್ಯಕ್ರಮವೂ ಅಲ್ಲ ಅಥವಾ ಜಾತಿಗಳ ವಿನಾಶದ ಕಾರ್ಯಕ್ರಮವೂ ಅಲ್ಲ. ಪ್ರಾತಿನಿಧ್ಯ ವಂಚಿತರಿಗೆ ಪ್ರಾತಿನಿಧ್ಯವನ್ನು ನೀಡುವುದೇ ಮೀಸಲಾತಿ, ಇದೊಂದು ಭಿಕ್ಷೆಯಲ್ಲ ಬದಲಿಗೆ, ಅದೊಂದು ಮಾನವ ಹಕ್ಕು ಮತ್ತು ಸಂವಿಧಾನದ ಹಕ್ಕು.