ಬೆಳಗಾವಿ: ನಿಮ್ಮ ಭವಿಷ್ಯವನ್ನು ಯಾರೂ ನಿರ್ಧರಿಸಬಾರದು, ವಿಷೇಶವಾಗಿ ಮಹಿಳೆಯರ ಭವಿಷ್ಯವನ್ನು ತಂದೆ, ಸೋದರರು ಮತ್ತು ಬೇರೆಯವರು ನಿರ್ಧರಿಸಬಾರದು. ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಿ ಎಂದು ಸತೀಶ್ ಶುಗರ್ಸ್ ನಿರ್ದೇಶಕಿ ಪ್ರಿಯಾಂಕ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬಾಲಕಿಯರಿಗಾಗಿ ಸೈನಿಕ ಮತ್ತು ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಅಪಾರವಾದುದನ್ನು ಸಾಧಿಸುವ ಶಕ್ತಿ ಹೊಂದಿದ್ದಾರೆ. ನಾವು ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು ಎಂದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ 10 ದಿನಗಳ ಕಾಲ ಊಟ, ವಸತಿ ಸಹಿತ ಸೈನಿಕ ಮತ್ತು ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿಗೆ ಆಗಮಿಸಿರುವ ಎಲ್ಲರಿಗೂ ಅಭಿನಂದನೆಗಳು. ನಿಮಗೆ ಸೇವೆ ಮಾಡುವ ಅವಕಾಶ ನಮಗೆಲ್ಲ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದ ಉಸ್ತುವಾರಿ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಉಚಿತ ತರಬೇತಿಯ ಸದುಪಯೋಗವನ್ನು ನೀವೆಲ್ಲ ಪಡೆದುಕೊಳ್ಳಬೇಕು. ಇಲ್ಲಿ ದೈಹಿಕ, ಮಾನಸಿಕ ಮತ್ತು ಪಠ್ಯವಿಷಯದ ತರಗತಿಗಳನ್ನು ನಡೆಸಲಾಗುತ್ತದೆ. ಶಿಸ್ತು ಮತ್ತು ಸಮಯ ಪಾಲನೆಗೆ ಒತ್ತು ಕೊಟ್ಟು ವಿಷಯಗಳನ್ನು ಆಸಕ್ತಿಯಿಂದ ಕಲಿಯಿರಿ ಎಂದರು.
ಸಾಮಾಜಿಕ ಸಮಾನತೆಯನ್ನು ಸಾಧಿಸಲು ಇದುವರೆಗೆ ಅಧಿಕಾರ ನಡೆಸಿರುವ ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಆದರೆ ತಳಸಮುದಾಯದ, ಶೋಷಿತರ ಉದ್ಧಾರಕ್ಕಾಗಿ ಸತೀಶ್ ಜಾರಕಿಹೊಳಿಯವರು ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಸರ್ಕಾರಗಳು ಕೂಡ ಮಾಡಲು ಸಾಧ್ಯವಾಗದಿರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಒಂದು ಮನೆಯಲ್ಲಿ ಒಬ್ಬರು ಸರ್ಕಾರಿ ನೌಕರಿ ಹಿಡಿದರೆ ಆ ಮನೆಯ ಮತ್ತು ಆ ಕುಟುಂಬದ ಸದಸ್ಯರ ಭವಿಷ್ಯ ಸುಧಾರಣೆಯಾಗುತ್ತದೆ. ಇಂತಹ ತರಬೇತಿಗಳನ್ನು ಆಯೋಜಿಸುವ ಮೂಲಕ ಮಹತ್ವದ ಕೆಲಸವನ್ನು ಸತೀಶ್ ಜಾರಕಿಹೊಳಿ ಫೌಂಡೇಷನ್ ಮಾಡುತ್ತಿದೆ. ಇಂತಹ ತರಬೇತಿ ಯಶಸ್ವಿಯಾಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಸಂವಿಧಾನ ಮತ್ತು ಸಾಮಾನ್ಯ ಜ್ಞಾನ ವಿಷಯದ ಬೋಧಕ ಸಂತೋಷ್ ಮೆಳವಂಕಿ, ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಸೇವೆಯ ಸದುಪಯೋಗವನ್ನು ನೀವೆಲ್ಲ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕು ಒಂದು ನಿಮಿಷವನ್ನು ಕೂಡ ವ್ಯರ್ಥಮಾಡದೆ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಮಾನಸಿಕ ಸಾಮರ್ಥ್ಯ, ಗಣಿತ ವಿಷಯದ ಬೋಧಕ ಹನುಮಂತ್ ನಂದಿ, ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ತಳಸಮುದಾಯದವರ ಅಭಿವೃದ್ಧಿಗಾಗಿ ನಿರಂತರವಾಗಿ ಸೈನಿಕ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಆಕಾಂಕ್ಷಿತರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಇಂತಹ ಕೆಲಸ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉಷಾ ನಾಯಕ್, ತೋಳಿ ಭರಮಣ್ಣ ಮತ್ತು ಇತರರು ಭಾಗವಹಿಸಿದ್ದರು. ಸೈನಿಕರು ಮತ್ತು ಪೊಲೀಸ್ ಕಾನ್ಸ್ಟೇಬಲ್ ಆಕಾಂಕ್ಷಿಗಳಿಗೆ ಪರೀಕ್ಷಾ ತರಬೇತಿಗೆ ಅಗತ್ಯವಾದ ಪುಸ್ತಕಗಳನ್ನು ಇದೇ ವೇಳೆ ಶಿಬಿರಾರ್ಥಿಗಳಿಗೆ ವಿತರಿಸಲಾಯಿತು. ಬೆಳಗಾವಿ, ಧಾರವಾಡ, ವಿಜಯನಗರ, ಬಳ್ಳಾರಿ, ದಾವಣಗೆರೆ ಮೊದಲಾದ ಜಿಲ್ಲೆಗಳಿಂದ 72 ವಿದ್ಯಾರ್ಥಿನಿಯರು ತರಬೇತಿಯಲ್ಲಿ ಭಾಗವಹಿಸಿದ್ದಾರೆ.