March 25, 2023 4:00 pm

ಪರರ ವಿಚಾರ, ಧರ್ಮಗಳನ್ನು ಸಹಿಸುವುದೇ ನಾವು ಗಳಿಸಬಹುದಾದ ಆಸ್ತಿ

“ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರ ಧರ್ಮಮುಮಂ” ಇದು ಒಂಬತ್ತನೇ ಶತಮಾನದ ನಮ್ಮ ಕನ್ನಡದ ಜೈನ ಕವಿ ಶ್ರೀವಿಜಯ ತನ್ನ ‘ಕವಿರಾಜಮಾರ್ಗ’ ಕೃತಿಯಲ್ಲಿ ನುಡಿದ ಮಾತು. ‘ಕವಿರಾಜಮಾರ್ಗ’ ಕನ್ನಡದ ಆಚಾರ್ಯ ಕೃತಿ. ಕನ್ನಡಿಗರಿಗೆ ಸಾರ್ವಕಾಲಿಕವಾದ ಸ್ವಾಭಿಮಾನ ಹಾಗೂ ಸಹಿಷ್ಣುತೆಯ ಪಾಠವನ್ನು ಹೇಳಿದ, ವಿವೇಕವನ್ನು ಬೋಧಿಸಿದ ಮೇರು ಗ್ರಂಥ.

‘ಕಸವರ’ ಎಂದರೆ ಚಿನ್ನ ಅಥವಾ ಹೊನ್ನು ಅಥವಾ ಸಂಪತ್ತು ಸಂಪದ. ಮನಷ್ಯರಿಗೆ ಹೇಳಿದ ಈ ವಿವೇಕದ ಅರ್ಥವೇನೆಂದರೆ, ಮನುಷ್ಯರಾದವರಿಗೆ ನಿಜವಾದ ಚಿನ್ನ ಯಾವುದೆಂದರೆ ನಮ್ಮ ಮನೆಯ ಸಂದೂಕಗಳಲ್ಲಿ ಭದ್ರವಾಗಿ ಮುಚ್ಚಿಟ್ಟ ಅಥವಾ ನಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಧರಿಸಿದ ಚಿನ್ನ ಬೆಳ್ಳಿ ಮೊದಲಾದವುಗಳಿಂದ ತಯಾರಿಸಿದ ಆಭರಣಗಳಲ್ಲ ಅಥವಾ ಯಾವುದೇ ಬೆಲೆಬಾಳುವ ದ್ರವ್ಯಗಳಲ್ಲ.

ನಿಜವಾದ ‘ಚಿನ್ನ’ ಯಾವುದೆಂದರೆ, ಪರ ಧರ್ಮವನ್ನೂ ಪರರ ವಿಚಾರಗಳನ್ನು ಸೈರಣೆಯಿಂದ ಅಥವಾ ಸಹಿಷ್ಣುತಾಭಾವದಿಂದ ನೋಡುವುದೇ ಆಗಿದೆ. ಹಾಗೆ ನೋಡದಿದ್ದರೆ ‘ಕಸವರ ಕಸಕ್ಕೆ ಸಮಾನ’. ಇದು ಎಂದೆಂದೂ ನಮ್ಮನ್ನು ಎಚ್ಚರದಲ್ಲಿಡುವ ಮಾತು‌.

ನಾವೀಗ ಪರಮತ ದ್ವೇಷ ಪರವಿಚಾರ ತಿರಸ್ಕಾರ ಪರರ ಜೀವನಕ್ರಮ ಪರರ ಭಾಷೆ ಪರರ ಉಡುಗೆ ತೊಡುಗೆ ಸಂತೋಷ ಬದುಕು ಜೀವ ಯಾವುದನ್ನೂ ಗೌರವಿಸುತ್ತಿಲ್ಲ ಸಹಿಸುತ್ತಲೂ ಇಲ್ಲ. ನಿಜವಾಗಲೂ ನಾವು ಕಸವರದಂತೆ ಬದುಕದೇ ಕಸದಂತೆ ಬದುಕುತ್ತಿದ್ದೇವೆ. ನಮ್ಮ ಜೀವನ ನಮ್ಮ ಚಿಂತನೆ ದೇವರು ದೇಗುಲ ಚರ್ಚು ಮಸೀದಿ ಪಾಕಿಸ್ತಾನ ಇಸ್ಲಾಮ್ ಹಿಂದುತ್ವ ಮಿಷನರಿ ಇವುಗಳಾಚೆಗೆ ಯೋಚಿಸುತ್ತಲೇ ಇಲ್ಲ. ಅಲ್ಲಾನ ಭಕ್ತರೂ ರಾಮನ ಭಕ್ತರೂ ಜೀಸಸನ ಭಕ್ತರೂ ಈಶನ ಭಕ್ತರೂ ಎಲ್ಲರೂ ಸೇರಿ ಮಾನವತೆಯ ಗೋರಿ ಕಟ್ಟುತ್ತಿದ್ದೇವೆ ಅಷ್ಟೆ.

ಕೊಲ್ಲುವುದರಿಂದ ಅತ್ಯಾಚಾರ ಮಾಡುವುದರಿಂದ ರಕ್ತ ಮೆತ್ತಿಕೊಂಡು ಜೈ ಶ್ರೀರಾಮ್, ಅಲ್ಲಾ ಹೊ ಅಕ್ಬರ್ ಎನ್ನುವುದರಿಂದ ಜನರ ಬದುಕಿನ ಮೇಲೆ ದಾಳಿ ಮಾಡುವುದರಿಂದ ಭಯ ಹುಟ್ಟಿಸಿ ಅಶಾಂತಿ ಸೃಷ್ಟಿಸಿ ದ್ವೇಷವನ್ನೇ ಧರ್ಮ ಎಂದು ಭ್ರಮಿಸಿಕೊಂಡು ಧರ್ಮ ರಕ್ಷಣೆ ಮಾಡುತ್ತೇವೆನ್ನುವವರು ಅಂತಿಮವಾಗಿ ಮನುಷ್ಯತ್ವದ ಕಗ್ಗೊಲೆ ನಡೆಸುತ್ತಾರಷ್ಟೆ‌. ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳ ನಿಲ್ಲದ ರಕ್ತಪಿಪಾಸು ಗುಣದ ಮೂರ್ತ ರೂಪಗಳಾಗಿ ಹಿಂಸೆಯನ್ನು ಸಂಭ್ರಮಿಸುವ ಪ್ರೇತಗಳಾಗಿ ಕುಣಿಯುತ್ತೇವಷ್ಟೇ‌‌. ಇದರಿಂದ ರಾಮ ಶಿವ ಅಲ್ಲಾಹು ಎಲ್ಲರೂ ನಲುಗುತ್ತಾರೆ. ನಾವು ಆರಾಧಿಸುವ ದೈವ ನಂಬುವ ಧರ್ಮ ಆಚರಣೆಗಳೆಲ್ಲದರ ಅಂತಸ್ಸತ್ವ ಪ್ರೇಮವಾಗಿರದಿದ್ದರೆ ಅಂತಹ ಧರ್ಮವನ್ನು ಸುಡಬೇಕು. ಹಾಗೆ ನೋಡಿದರೆ ಮನುಷ್ಯ ಬದುಕುವುದಕ್ಕೆ ಧರ್ಮದ ಅವಶ್ಯಕತೆಯೇ ಇಲ್ಲ. ಯಾವ ಧರ್ಮಕ್ಕೂ ಸೇರದ ನಾನು ನಾವಾಗಿ ಮನುಷ್ಯರಾಗಿ ಬದುಕಿದರಷ್ಟೇ ಸಾಕು. ಮನುಷ್ಯರನ್ನು ಜೀವಕೋಟಿಯನ್ನು ದಯಾದೃಷ್ಟಿಯಿಂದ ಸಲಹುವ ಉದ್ಧರಿಸುವ ಪ್ರೇಮ ಎಲ್ಲ ಧರ್ಮಗಳನ್ನು ಮೀರಿದ ಜೀವಸತ್ವ.

ಸುಪ್ರಸಿದ್ದ ಉರ್ದೂ ಕವಿ ಮಿರ್ಜಾ ಗಾಲಿಬ್,

ದೇವನೊಬ್ಬನಿದ್ದಾನೆ, ಅದು ನಮ್ಮ ವಿಶ್ವಾಸ

ನಾವು ಎಲ್ಲ ಮತಾಚರಣೆಗಳನ್ನೂ ಪರಿತ್ಯಜಿಸುತ್ತೇವೆ

ಮತಗಳೆಲ್ಲ ಅಳಿದಾಗಲೇ

ಆ ವಿಶ್ವಾಸ ಪರಿಶುದ್ಧವಾಗುತ್ತದೆ.

ಎನ್ನುತ್ತಾನೆ. ಆತ ಮುಂದುವರೆದು ಮತ್ತೊಂದು ಶಾಯರಿಯಲ್ಲಿ,

ದೇವರ ಕರುಣೆ ಹೇಗೆ ಸರ್ವವ್ಯಾಪಿಯಾಗಿದೆ!

ಯಾವ ಧರ್ಮಕ್ಕೂ ಅಂಟಿಕೊಳ್ಳದ,

ಯಾವ ಪಾಪಗಳನ್ನೂ ಮಾಡದ ನಾನು

ಕ್ಷಮಿಸಲ್ಪಟ್ಟಿದ್ದೇನೆ.

ಎನ್ನುತ್ತಾನೆ. ಅವನ ಪ್ರಕಾರ ದೇವನೊಬ್ಬನಿದ್ದಾನೆ ನಿಜ. ನನಗೆ ಆ ದೇವನೆನ್ನುವ ಅಗೋಚರ ಶಕ್ತಿ ಪ್ರೇಮವಲ್ಲದೆ ಕಾರುಣ್ಯವಲ್ಲದೆ ಸಮದೃಷ್ಟಿಯಲ್ಲದೆ ಬೇರಾವುದೂ ಅಲ್ಲ.

ಗಾಲಿಬ್ ಧಾರ್ಮಿಕ ಮೂಢರೇ ಧೂರ್ತರೇ ತುಂಬಿದ್ದ ಸಮಾಜದಲ್ಲಿ ನಿಂತು ಹೇಳಿದ ಮಾತಿದು. ಸ್ಥಾಪಿತ ಧರ್ಮ ವ್ಯವಸ್ಥೆಯನ್ನೇ ನಿರಾಕರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಾನು ಗಾಲಿಬ್ ಆಗಿ ತನ್ನಿಷ್ಟದಂತೆ ಬದುಕಲು ಬಯಸಿದ ಗಾಲಿಬನನ್ನು ಮುಸಲ್ಮಾನ ಎನ್ನಲಾಗದು. ನಾವು ಈ ಸ್ಥಾವರಗಳನ್ನು ಒಡೆಯುತ್ತಾ ಮುಂದೆ ಸಾಗಬೇಕು. ಇದನ್ನೇ ಅಲ್ಲವೇ ನಮ್ಮ ರಸಋಷಿ ಕುವೆಂಪು ಅವರು ‘ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ’ ಬದುಕು ಎಂದು ಮನುಜರಿಗೆ ಕರೆಕೊಟ್ಟದ್ದು? ಅವರು ಪ್ರತಿಪಾದಿಸಿದ ‘ಮನುಜ ಮತ’ ಮನುಷ್ಯನ ಉದ್ಧಾರದ ವೈಜ್ಞಾನಿಕ ಮಾರ್ಗವೇ ಆಗಿದೆ. ಸರ್ವಜ್ಞ ಕವಿ ‘ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕು’ ಎಂದುಬಿಡುತ್ತಾನೆ. ಇಲ್ಲೆಲ್ಲ ಅನುರಣಿಸುವ ಧ್ವನಿ ಯಾವುದು ಎಂದರೆ, ಅದೇ ಪ್ರೇಮಯುತವೂ ಸಹನೀಯವೂ ದಯಾಮಯವೂ ಹಾಗೂ ವೈಜ್ಞಾನಿಕವೂ ಆದ ವಾಸ್ತವೀ ಪ್ರಜ್ಞೆ.

ಈ ಪ್ರೇಮದ ತನಿಹಾಲು ಉಣ್ಣದೇ ಜಾತಿ ಮತಗಳ ಅಂಧಶ್ರದ್ಧೆ ಆ ಹೆಸರಿನಲ್ಲಿ ಸುಳ್ಳು ಪೊಳ್ಳು ದ್ವೇಷ ಅಸೂಯಾ ವಿಚಾರಗಳ ವಿಷ ಉಣ್ಣುತ್ತಿರುವ ನಾವು ಭೂಮಿಯ ಮೇಲೆ ಕ್ಷುದ್ರಶಕ್ತಿಗಳಾಗಿ ಬದುಕುತ್ತಿದ್ದೇವೆ. ನಮ್ಮದು ಸುಖವನ್ನೂ ಸಂತೋಷವನ್ನೂ ನಂಬಿಕೆಗಳನ್ನೂ ಗೌರವವನ್ನೂ ಕಳೆದುಕೊಂಡ ಭಂಡ ಬದುಕಾಗಬಾರದು.

ಎಂದು ನಮ್ಮ ಮನಸೊಳಗೆ ದ್ವೇಷಭಾವಕ್ಕೆ ಜಾಗ ಕೊಡುತ್ತೇವೋ ಅಂದೇ ನಾವು ಅಶಾಂತಿ ಮಡುವಲ್ಲಿ ಬೀಳುತ್ತೇವೆ. ಅಶಾಂತಿ ಮಡುವಲ್ಲಿ ದ್ವೇಷದ ಕೆಸರಲ್ಲಿ ಬಿದ್ದು ಹೊರಳಾಡುವವರ ಕಂಡರೆ ಕನಿಕರವೆನಿಸುತ್ತದೆ. ಮಾನವ ಕುಲವನ್ನು ಉದ್ಧರಿಸಬೇಕಾದುದು ಒಂದೇ. ಅದು ಸಹನಾ ಭಾವ ಪ್ರೇಮ. ಅಂತಹಾ ಸಹಿಕೆಯ ಬಹುದೊಡ್ಡ ತತ್ವಜ್ಞಾನವನ್ನು ಈ ನೆಲದ ಅನೇಕ ದಾರ್ಶನಿಕರು ಮಾನವತಾವಾದಿಗಳು ನಿರಂತರವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. ಅದು ಕವಿರಾಜಮಾರ್ಗಕಾರನಿಂದ ಮೊದಲ್ಗೊಂಡು ಪಂಪನಲ್ಲಿ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನಿಸಿ, ಬಸವನಲ್ಲಿ “ದಯವೇ ಧರ್ಮದ ಮೂಲವೆಂದು” ಅನುರಣಿಸಿ, ಕನಕನಲ್ಲಿ “ಕುಲ ಕುಲ ಕುಲವೆನ್ನದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ?” ಎಂದು ಮನುಷ್ಯನ ಕುಲ ಮೂಲದ ಸತ್ಯದರ್ಶನವಾಗಿ, ಹೀಗೆ ಅನೇಕ ದಾರ್ಶನಿಕ ತತ್ವಜ್ಞಾನಿಗಳ ಮೂಲಕ ನವ ಯುಗದ ದನಿಯಾಗಿ ಮೊಳಗುತ್ತಿದೆ.

ನಾವು ಒಂದು ಧರ್ಮನಿರಪೇಕ್ಷ ಸಮಾಜವನ್ನು ಕಟ್ಟಬೇಕಾಗಿದೆ. ಆ ಸಮಾಜದಲ್ಲಿ ಮಾತ್ರ ನಾವು ಪ್ರಗತಿಹೊಂದಲು ಸಾಧ್ಯ. ಮತ್ತದೆ ಧರ್ಮ ಜಾತಿ ಪಂಥಗಳ ಬಾಲಹಿಡಿದು ಹೊರಟರೆ ಖಂಡಿತಾ ಬಾಳು ಕಸವಾಗುತ್ತದೆ. ಸಮಾಜ ಆ ಕಸದ ತೊಟ್ಟಿಯಾಗುತ್ತದೆ. ನಾವು ಕೊಳೆತ ಕಸದ ತೊಟ್ಟಿಯಲ್ಲಿ ಹೊರಳಾಡುವ ಹುಳಗಳಾಗುತ್ತೇವೆ. ಸತ್ಯವೆಂದರೆ ಮನುಷ್ಯರನ್ನು ಹಾಗೆ ಆಗಿಸಲಾಗುತ್ತಿದೆ ಎಂದರೂ ಸರಿಯೆ. ಹೀಗೆ ಮನುಕುಲದ ವಿಕಾಸಕ್ಕೆ ಮಾರಕವಾದ ಕೆಲವು ಹಿತಾಸಕ್ತಿಗಳು ಮನುಷ್ಯನ ಧರ್ಮನಿರಪೇಕ್ಷ ಬದುಕಿಗೆ ಅಡ್ಡಿಗಾಲಾಗಿವೆ. ಈ ಅಡ್ಡಿಯನ್ನು ಮೀರದೆ ಬೇರೆ ದಾರಿಯಿಲ್ಲ‌.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ