October 1, 2023 7:19 am

ಪರರ ವಿಚಾರ, ಧರ್ಮಗಳನ್ನು ಸಹಿಸುವುದೇ ನಾವು ಗಳಿಸಬಹುದಾದ ಆಸ್ತಿ

“ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರ ಧರ್ಮಮುಮಂ” ಇದು ಒಂಬತ್ತನೇ ಶತಮಾನದ ನಮ್ಮ ಕನ್ನಡದ ಜೈನ ಕವಿ ಶ್ರೀವಿಜಯ ತನ್ನ ‘ಕವಿರಾಜಮಾರ್ಗ’ ಕೃತಿಯಲ್ಲಿ ನುಡಿದ ಮಾತು. ‘ಕವಿರಾಜಮಾರ್ಗ’ ಕನ್ನಡದ ಆಚಾರ್ಯ ಕೃತಿ. ಕನ್ನಡಿಗರಿಗೆ ಸಾರ್ವಕಾಲಿಕವಾದ ಸ್ವಾಭಿಮಾನ ಹಾಗೂ ಸಹಿಷ್ಣುತೆಯ ಪಾಠವನ್ನು ಹೇಳಿದ, ವಿವೇಕವನ್ನು ಬೋಧಿಸಿದ ಮೇರು ಗ್ರಂಥ.

‘ಕಸವರ’ ಎಂದರೆ ಚಿನ್ನ ಅಥವಾ ಹೊನ್ನು ಅಥವಾ ಸಂಪತ್ತು ಸಂಪದ. ಮನಷ್ಯರಿಗೆ ಹೇಳಿದ ಈ ವಿವೇಕದ ಅರ್ಥವೇನೆಂದರೆ, ಮನುಷ್ಯರಾದವರಿಗೆ ನಿಜವಾದ ಚಿನ್ನ ಯಾವುದೆಂದರೆ ನಮ್ಮ ಮನೆಯ ಸಂದೂಕಗಳಲ್ಲಿ ಭದ್ರವಾಗಿ ಮುಚ್ಚಿಟ್ಟ ಅಥವಾ ನಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಲು ಧರಿಸಿದ ಚಿನ್ನ ಬೆಳ್ಳಿ ಮೊದಲಾದವುಗಳಿಂದ ತಯಾರಿಸಿದ ಆಭರಣಗಳಲ್ಲ ಅಥವಾ ಯಾವುದೇ ಬೆಲೆಬಾಳುವ ದ್ರವ್ಯಗಳಲ್ಲ.

ನಿಜವಾದ ‘ಚಿನ್ನ’ ಯಾವುದೆಂದರೆ, ಪರ ಧರ್ಮವನ್ನೂ ಪರರ ವಿಚಾರಗಳನ್ನು ಸೈರಣೆಯಿಂದ ಅಥವಾ ಸಹಿಷ್ಣುತಾಭಾವದಿಂದ ನೋಡುವುದೇ ಆಗಿದೆ. ಹಾಗೆ ನೋಡದಿದ್ದರೆ ‘ಕಸವರ ಕಸಕ್ಕೆ ಸಮಾನ’. ಇದು ಎಂದೆಂದೂ ನಮ್ಮನ್ನು ಎಚ್ಚರದಲ್ಲಿಡುವ ಮಾತು‌.

ನಾವೀಗ ಪರಮತ ದ್ವೇಷ ಪರವಿಚಾರ ತಿರಸ್ಕಾರ ಪರರ ಜೀವನಕ್ರಮ ಪರರ ಭಾಷೆ ಪರರ ಉಡುಗೆ ತೊಡುಗೆ ಸಂತೋಷ ಬದುಕು ಜೀವ ಯಾವುದನ್ನೂ ಗೌರವಿಸುತ್ತಿಲ್ಲ ಸಹಿಸುತ್ತಲೂ ಇಲ್ಲ. ನಿಜವಾಗಲೂ ನಾವು ಕಸವರದಂತೆ ಬದುಕದೇ ಕಸದಂತೆ ಬದುಕುತ್ತಿದ್ದೇವೆ. ನಮ್ಮ ಜೀವನ ನಮ್ಮ ಚಿಂತನೆ ದೇವರು ದೇಗುಲ ಚರ್ಚು ಮಸೀದಿ ಪಾಕಿಸ್ತಾನ ಇಸ್ಲಾಮ್ ಹಿಂದುತ್ವ ಮಿಷನರಿ ಇವುಗಳಾಚೆಗೆ ಯೋಚಿಸುತ್ತಲೇ ಇಲ್ಲ. ಅಲ್ಲಾನ ಭಕ್ತರೂ ರಾಮನ ಭಕ್ತರೂ ಜೀಸಸನ ಭಕ್ತರೂ ಈಶನ ಭಕ್ತರೂ ಎಲ್ಲರೂ ಸೇರಿ ಮಾನವತೆಯ ಗೋರಿ ಕಟ್ಟುತ್ತಿದ್ದೇವೆ ಅಷ್ಟೆ.

ಕೊಲ್ಲುವುದರಿಂದ ಅತ್ಯಾಚಾರ ಮಾಡುವುದರಿಂದ ರಕ್ತ ಮೆತ್ತಿಕೊಂಡು ಜೈ ಶ್ರೀರಾಮ್, ಅಲ್ಲಾ ಹೊ ಅಕ್ಬರ್ ಎನ್ನುವುದರಿಂದ ಜನರ ಬದುಕಿನ ಮೇಲೆ ದಾಳಿ ಮಾಡುವುದರಿಂದ ಭಯ ಹುಟ್ಟಿಸಿ ಅಶಾಂತಿ ಸೃಷ್ಟಿಸಿ ದ್ವೇಷವನ್ನೇ ಧರ್ಮ ಎಂದು ಭ್ರಮಿಸಿಕೊಂಡು ಧರ್ಮ ರಕ್ಷಣೆ ಮಾಡುತ್ತೇವೆನ್ನುವವರು ಅಂತಿಮವಾಗಿ ಮನುಷ್ಯತ್ವದ ಕಗ್ಗೊಲೆ ನಡೆಸುತ್ತಾರಷ್ಟೆ‌. ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳ ನಿಲ್ಲದ ರಕ್ತಪಿಪಾಸು ಗುಣದ ಮೂರ್ತ ರೂಪಗಳಾಗಿ ಹಿಂಸೆಯನ್ನು ಸಂಭ್ರಮಿಸುವ ಪ್ರೇತಗಳಾಗಿ ಕುಣಿಯುತ್ತೇವಷ್ಟೇ‌‌. ಇದರಿಂದ ರಾಮ ಶಿವ ಅಲ್ಲಾಹು ಎಲ್ಲರೂ ನಲುಗುತ್ತಾರೆ. ನಾವು ಆರಾಧಿಸುವ ದೈವ ನಂಬುವ ಧರ್ಮ ಆಚರಣೆಗಳೆಲ್ಲದರ ಅಂತಸ್ಸತ್ವ ಪ್ರೇಮವಾಗಿರದಿದ್ದರೆ ಅಂತಹ ಧರ್ಮವನ್ನು ಸುಡಬೇಕು. ಹಾಗೆ ನೋಡಿದರೆ ಮನುಷ್ಯ ಬದುಕುವುದಕ್ಕೆ ಧರ್ಮದ ಅವಶ್ಯಕತೆಯೇ ಇಲ್ಲ. ಯಾವ ಧರ್ಮಕ್ಕೂ ಸೇರದ ನಾನು ನಾವಾಗಿ ಮನುಷ್ಯರಾಗಿ ಬದುಕಿದರಷ್ಟೇ ಸಾಕು. ಮನುಷ್ಯರನ್ನು ಜೀವಕೋಟಿಯನ್ನು ದಯಾದೃಷ್ಟಿಯಿಂದ ಸಲಹುವ ಉದ್ಧರಿಸುವ ಪ್ರೇಮ ಎಲ್ಲ ಧರ್ಮಗಳನ್ನು ಮೀರಿದ ಜೀವಸತ್ವ.

ಸುಪ್ರಸಿದ್ದ ಉರ್ದೂ ಕವಿ ಮಿರ್ಜಾ ಗಾಲಿಬ್,

ದೇವನೊಬ್ಬನಿದ್ದಾನೆ, ಅದು ನಮ್ಮ ವಿಶ್ವಾಸ

ನಾವು ಎಲ್ಲ ಮತಾಚರಣೆಗಳನ್ನೂ ಪರಿತ್ಯಜಿಸುತ್ತೇವೆ

ಮತಗಳೆಲ್ಲ ಅಳಿದಾಗಲೇ

ಆ ವಿಶ್ವಾಸ ಪರಿಶುದ್ಧವಾಗುತ್ತದೆ.

ಎನ್ನುತ್ತಾನೆ. ಆತ ಮುಂದುವರೆದು ಮತ್ತೊಂದು ಶಾಯರಿಯಲ್ಲಿ,

ದೇವರ ಕರುಣೆ ಹೇಗೆ ಸರ್ವವ್ಯಾಪಿಯಾಗಿದೆ!

ಯಾವ ಧರ್ಮಕ್ಕೂ ಅಂಟಿಕೊಳ್ಳದ,

ಯಾವ ಪಾಪಗಳನ್ನೂ ಮಾಡದ ನಾನು

ಕ್ಷಮಿಸಲ್ಪಟ್ಟಿದ್ದೇನೆ.

ಎನ್ನುತ್ತಾನೆ. ಅವನ ಪ್ರಕಾರ ದೇವನೊಬ್ಬನಿದ್ದಾನೆ ನಿಜ. ನನಗೆ ಆ ದೇವನೆನ್ನುವ ಅಗೋಚರ ಶಕ್ತಿ ಪ್ರೇಮವಲ್ಲದೆ ಕಾರುಣ್ಯವಲ್ಲದೆ ಸಮದೃಷ್ಟಿಯಲ್ಲದೆ ಬೇರಾವುದೂ ಅಲ್ಲ.

ಗಾಲಿಬ್ ಧಾರ್ಮಿಕ ಮೂಢರೇ ಧೂರ್ತರೇ ತುಂಬಿದ್ದ ಸಮಾಜದಲ್ಲಿ ನಿಂತು ಹೇಳಿದ ಮಾತಿದು. ಸ್ಥಾಪಿತ ಧರ್ಮ ವ್ಯವಸ್ಥೆಯನ್ನೇ ನಿರಾಕರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಾನು ಗಾಲಿಬ್ ಆಗಿ ತನ್ನಿಷ್ಟದಂತೆ ಬದುಕಲು ಬಯಸಿದ ಗಾಲಿಬನನ್ನು ಮುಸಲ್ಮಾನ ಎನ್ನಲಾಗದು. ನಾವು ಈ ಸ್ಥಾವರಗಳನ್ನು ಒಡೆಯುತ್ತಾ ಮುಂದೆ ಸಾಗಬೇಕು. ಇದನ್ನೇ ಅಲ್ಲವೇ ನಮ್ಮ ರಸಋಷಿ ಕುವೆಂಪು ಅವರು ‘ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ’ ಬದುಕು ಎಂದು ಮನುಜರಿಗೆ ಕರೆಕೊಟ್ಟದ್ದು? ಅವರು ಪ್ರತಿಪಾದಿಸಿದ ‘ಮನುಜ ಮತ’ ಮನುಷ್ಯನ ಉದ್ಧಾರದ ವೈಜ್ಞಾನಿಕ ಮಾರ್ಗವೇ ಆಗಿದೆ. ಸರ್ವಜ್ಞ ಕವಿ ‘ಕೊಲುವ ಧರ್ಮವನೊಯ್ದು ಒಲೆಯೊಳಗೆ ಇಕ್ಕು’ ಎಂದುಬಿಡುತ್ತಾನೆ. ಇಲ್ಲೆಲ್ಲ ಅನುರಣಿಸುವ ಧ್ವನಿ ಯಾವುದು ಎಂದರೆ, ಅದೇ ಪ್ರೇಮಯುತವೂ ಸಹನೀಯವೂ ದಯಾಮಯವೂ ಹಾಗೂ ವೈಜ್ಞಾನಿಕವೂ ಆದ ವಾಸ್ತವೀ ಪ್ರಜ್ಞೆ.

ಈ ಪ್ರೇಮದ ತನಿಹಾಲು ಉಣ್ಣದೇ ಜಾತಿ ಮತಗಳ ಅಂಧಶ್ರದ್ಧೆ ಆ ಹೆಸರಿನಲ್ಲಿ ಸುಳ್ಳು ಪೊಳ್ಳು ದ್ವೇಷ ಅಸೂಯಾ ವಿಚಾರಗಳ ವಿಷ ಉಣ್ಣುತ್ತಿರುವ ನಾವು ಭೂಮಿಯ ಮೇಲೆ ಕ್ಷುದ್ರಶಕ್ತಿಗಳಾಗಿ ಬದುಕುತ್ತಿದ್ದೇವೆ. ನಮ್ಮದು ಸುಖವನ್ನೂ ಸಂತೋಷವನ್ನೂ ನಂಬಿಕೆಗಳನ್ನೂ ಗೌರವವನ್ನೂ ಕಳೆದುಕೊಂಡ ಭಂಡ ಬದುಕಾಗಬಾರದು.

ಎಂದು ನಮ್ಮ ಮನಸೊಳಗೆ ದ್ವೇಷಭಾವಕ್ಕೆ ಜಾಗ ಕೊಡುತ್ತೇವೋ ಅಂದೇ ನಾವು ಅಶಾಂತಿ ಮಡುವಲ್ಲಿ ಬೀಳುತ್ತೇವೆ. ಅಶಾಂತಿ ಮಡುವಲ್ಲಿ ದ್ವೇಷದ ಕೆಸರಲ್ಲಿ ಬಿದ್ದು ಹೊರಳಾಡುವವರ ಕಂಡರೆ ಕನಿಕರವೆನಿಸುತ್ತದೆ. ಮಾನವ ಕುಲವನ್ನು ಉದ್ಧರಿಸಬೇಕಾದುದು ಒಂದೇ. ಅದು ಸಹನಾ ಭಾವ ಪ್ರೇಮ. ಅಂತಹಾ ಸಹಿಕೆಯ ಬಹುದೊಡ್ಡ ತತ್ವಜ್ಞಾನವನ್ನು ಈ ನೆಲದ ಅನೇಕ ದಾರ್ಶನಿಕರು ಮಾನವತಾವಾದಿಗಳು ನಿರಂತರವಾಗಿ ಕಟ್ಟಿಕೊಡುತ್ತಾ ಬಂದಿದ್ದಾರೆ. ಅದು ಕವಿರಾಜಮಾರ್ಗಕಾರನಿಂದ ಮೊದಲ್ಗೊಂಡು ಪಂಪನಲ್ಲಿ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನಿಸಿ, ಬಸವನಲ್ಲಿ “ದಯವೇ ಧರ್ಮದ ಮೂಲವೆಂದು” ಅನುರಣಿಸಿ, ಕನಕನಲ್ಲಿ “ಕುಲ ಕುಲ ಕುಲವೆನ್ನದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ?” ಎಂದು ಮನುಷ್ಯನ ಕುಲ ಮೂಲದ ಸತ್ಯದರ್ಶನವಾಗಿ, ಹೀಗೆ ಅನೇಕ ದಾರ್ಶನಿಕ ತತ್ವಜ್ಞಾನಿಗಳ ಮೂಲಕ ನವ ಯುಗದ ದನಿಯಾಗಿ ಮೊಳಗುತ್ತಿದೆ.

ನಾವು ಒಂದು ಧರ್ಮನಿರಪೇಕ್ಷ ಸಮಾಜವನ್ನು ಕಟ್ಟಬೇಕಾಗಿದೆ. ಆ ಸಮಾಜದಲ್ಲಿ ಮಾತ್ರ ನಾವು ಪ್ರಗತಿಹೊಂದಲು ಸಾಧ್ಯ. ಮತ್ತದೆ ಧರ್ಮ ಜಾತಿ ಪಂಥಗಳ ಬಾಲಹಿಡಿದು ಹೊರಟರೆ ಖಂಡಿತಾ ಬಾಳು ಕಸವಾಗುತ್ತದೆ. ಸಮಾಜ ಆ ಕಸದ ತೊಟ್ಟಿಯಾಗುತ್ತದೆ. ನಾವು ಕೊಳೆತ ಕಸದ ತೊಟ್ಟಿಯಲ್ಲಿ ಹೊರಳಾಡುವ ಹುಳಗಳಾಗುತ್ತೇವೆ. ಸತ್ಯವೆಂದರೆ ಮನುಷ್ಯರನ್ನು ಹಾಗೆ ಆಗಿಸಲಾಗುತ್ತಿದೆ ಎಂದರೂ ಸರಿಯೆ. ಹೀಗೆ ಮನುಕುಲದ ವಿಕಾಸಕ್ಕೆ ಮಾರಕವಾದ ಕೆಲವು ಹಿತಾಸಕ್ತಿಗಳು ಮನುಷ್ಯನ ಧರ್ಮನಿರಪೇಕ್ಷ ಬದುಕಿಗೆ ಅಡ್ಡಿಗಾಲಾಗಿವೆ. ಈ ಅಡ್ಡಿಯನ್ನು ಮೀರದೆ ಬೇರೆ ದಾರಿಯಿಲ್ಲ‌.

  • ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು