ಸ್ವಾಮಿ ವಿವೇಕಾನಂದರ ನೈಜ ವಿಚಾರಗಳಿಗೆ ಕಿವಿಯಾಗಿ

Dr. Pradeep Malgudi

ಕನ್ನಡ ಸ್ನಾತಕೋತ್ತರ ಪದವೀಧರರಾದ ಡಾ. ಪ್ರದೀಪ್ ಮಾಲ್ಗುಡಿಯವರು ಬೆಂಗಳೂರಿನಲ್ಲಿ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಎಂ.ಫಿಲ್, ಪಿಎಚ್.ಡಿ., ಪದವಿಗಳನ್ನು ಕನ್ನಡ ವಿವಿಯಿಂದ ಪಡೆದಿದ್ದಾರೆ. ಅನಂತರ ಮೈಸೂರಿನ ಕನ್ನಡ ಜನಮನ, ರಾಜ್ಯಧರ್ಮ ಪತ್ರಿಕೆಗಳ ಸಂಪಾದಕೀಯ ಪುಟ ನಿರ್ವಹಣೆ, ಸುದ್ದಿ ಟಿವಿಯಲ್ಲಿ ಇನ್ ಪುಟ್ ಮುಖ್ಯಸ್ಥ, ಡೆಮಾಕ್ರಟಿಕ್ ಟಿವಿಯಲ್ಲಿ ಕಾರ್ಯನಿರ್ವಾಹಕ ಸಂಪಾದಕ ಮತ್ತು ಜನಸಂಸ್ಕೃತಿ ಮಾಸಿಕ ಹಾಗೂ ಮಾಲ್ಗುಡಿ ಎಕ್ಸ್ ಪ್ರೆಸ್ ವೆಬ್ ತಾಣದ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸ್ವಾಮಿ ವಿವೇಕಾನಂದರ ನೈಜ ವಿಚಾರಗಳಿಗೆ ಕಿವಿಯಾಗಿ

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಪದ್ಧತಿ ಕುರಿತು ಸ್ವಾಮಿ ವಿವೇಕಾನಂದರಿಗೆ ಅಪಾರವಾದ ಕ್ರೋಧವಿತ್ತು. ಆದರೆ, ಇದೇ ಜಾತೀಯತೆಯ ಪರವಾಗಿ ಸಂಘ ಪರಿವಾರ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಮಿಸುತ್ತಿದೆ. ದೇಶದಲ್ಲಿ ಸಮಾನತೆ ಜಾರಿಗೆ ತರಲು ಸಂವಿಧಾನದತ್ತವಾಗಿ ಸಿಕ್ಕಿರುವ ಮೀಸಲಾತಿಯ ವಿರುದ್ಧ ಸಂಘಪರಿವಾರ ದುಡಿಯುತ್ತಿದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಮೀಸಲಾತಿ ವಿರುದ್ಧದ ಅಸಹನೆಯನ್ನು ಬೆಳೆಸಿದೆ.

ಸ್ವಾಮಿ ವಿವೇಕಾನಂದರಿಗೆ ದೇವರು, ಧರ್ಮ, ಆಚರಣೆಗಳಲ್ಲಿ ಸಂಘ ಪರಿವಾರದವರಿಗೆ ಇರುವುದಕ್ಕಿಂತ ಸಂಪೂರ್ಣ ತದ್ವಿರುದ್ಧವಾಗಿರುವ ಮತ್ತು ಭಿನ್ನ ಒಳನೋಟಗಳಿದ್ದವು. ಮೂಢ ನಂಬಿಕೆ ಕುರಿತು ಅವರ ಅಭಿಪ್ರಾಯಗಳು ಹೀಗಿವೆ: ‘‘ಎಲ್ಲ ರಹಸ್ಯಗಳನ್ನು ನಿರಾಕರಿಸಿ. ರಹಸ್ಯಾಚರಣೆ ಮತ್ತು ಮೂಢನಂಬಿಕೆ ಯಾವಾಗಲೂ ದುರ್ಬಲತೆಯ ಚಿಹ್ನೆ; ಅವನತಿ ಮತ್ತು ಮೃತ್ಯು ಚಿಹ್ನೆ. ಜೋಪಾನವಾಗಿರಿ. ಧೀರರಾಗಿ, ನಿಮ್ಮ ಕಾಲ ಮೇಲೆ ನಿಲ್ಲಿ. ಎಷ್ಟೋ ಮಹದಾಲೋಚನೆಗಳಿವೆ, ಅದ್ಭುತ ಭಾವನೆಗಳಿವೆ. ನಮಗೆ ಈಗ ಪ್ರಪಂಚ ತಿಳಿದಿರುವ ಮಟ್ಟಿಗೆ ಅದನ್ನು ಅತೀಂದ್ರೀಯ ವೆನ್ನಬಹುದು. ಆದರೆ ಇದರಲ್ಲಿ ಯಾವುದೊಂದೂ ರಹಸ್ಯವಿಲ್ಲ. ಧಾರ್ಮಿಕ ಸತ್ಯ ರಹಸ್ಯವೆಂದಾಗಲೀ ಅಥವಾ ಹಿಮಾಲಯದ ಮೇಲೆ ಇರುವ ಕೆಲವು ಗುಪ್ತ ಸಂಸ್ಥೆಗಳಿಗೆ ಈ ಸತ್ಯ ಮೀಸಲು ಎಂದಾಗಲೀ ನಮ್ಮ ಧರ್ಮದಲ್ಲಿ ಎಂದೂ ಬೋಧಿಸಿಲ್ಲ. ನಾನು ಹಿಮಾಲಯದಲ್ಲಿದ್ದೆ, ನಾನು ಸನ್ಯಾಸಿ. ಕಳೆದ ಹದಿನಾಲ್ಕು ವರ್ಷಗಳಿಂದಲೂ ಸಂಚರಿಸುತ್ತಿರುವೆನು. ಈ ರಹಸ್ಯ ಎಲ್ಲಿಯೂ ಇಲ್ಲ. ಈ ಮೂಢನಂಬಿಕೆಗಳನ್ನು ಹಿಂಬಾಲಿಸಬೇಡಿ. ಅದಕ್ಕಿಂತ ನೀವು ಶುದ್ಧ ನಾಸ್ತಿಕರಾಗುವುದು ನಿಮಗೆ ಮತ್ತು ದೇಶಕ್ಕೆ ಒಳ್ಳೆಯದು. ನಾಸ್ತಿಕತೆಯಲ್ಲಾದರೂ ಸ್ವಲ್ಪಶಕ್ತಿ ಇದೆ. ಆದರೆ ಮೂಢನಂಬಿಕೆಯಲ್ಲಿರುವುದು ಅವನತಿ ಮತ್ತು ಮರಣ ಮಾತ್ರ. ಬಲಾಢ್ಯರು ಇಂತಹ ಮೂಢನಂಬಿಕೆ ಮೇಲೆ ಕಾಲ ಕಳೆಯುವುದು, ಕೆಲಸಕ್ಕೆ ಬಾರದ ಕುಲಗೆಟ್ಟ ಆಚಾರಗಳನ್ನೆಲ್ಲ ವಿವರಿಸುವುದಕ್ಕೆ ಉಪಕಥೆಗಳನ್ನು ಕಲ್ಪಿಸುವುದು ಮಾನವಕೋಟಿಗೆ ನಾಚಿಕೆಗೇಡು” ಎನ್ನುತ್ತಾರೆ. (ವಿವೇಕಾನಂದರ ಕೃತಿ ಶ್ರೇಣಿ, ಐದನೇ ಸಂಪುಟ ಪುಟ ಸಂಖ್ಯೆ 173-175. ಶ್ರೀ ರಾಮಕೃಷ್ಣಾಶ್ರಮ, ಮೈಸೂರು.)

ಪದೇಪದೇ ಸ್ವಾಮಿ ವಿವೇಕಾನಂದರನ್ನು ಕೊಂಡಾಡುವ ಸಂಘಪರಿವಾರದವರು ಜ್ಯೋತಿಷ್ಯ, ಭವಿಷ್ಯದ ಕುರಿತು ಆಳವಾದ ಮೂಢನಂಬಿಕೆಯನ್ನು ಹೊಂದಿದ್ದಾರೆ. ಅಲ್ಲದೆ, ಬಹುತೇಕ ಪುರೋಹಿತಶಾಹಿಗಳೇ ತುಂಬಿರುವ ಪಕ್ಷವಾದುದರಿಂದ ಅವರಿಗೆ ಮೂಢನಂಬಿಕೆಯ ಲಾಭ ಯಾರಿಗೆ ಎಂಬುದು ಕೂಡ ಸ್ಪಷ್ಟವಾಗಿದೆ. ರಾಹುಕಾಲ, ಗ್ರಹಣ, ಜಾತಕ ದೋಷ, ಮಂಗಳ, ಕುಜ, ಕೇತು, ರಾಹು ಇತ್ಯಾದಿಗಳ ಕಾಟದ ಹೆಸರಿನಲ್ಲಿ ಸುಲಿಗೆಯ ಯಾಗ ನಡೆಸುತ್ತಿರುವುದು ಇದೇ ಪುರೋಹಿತಶಾಹಿಗಳು.

ಮೂಢನಂಬಿಕೆಯ ಕುರಿತು ಮುಂದುವರಿದು ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ. ‘‘ನೀವು ಇಂತಹ ಮೂರ್ಖರಾಗುವುದಕ್ಕಿಂತ ಶುದ್ಧ ನಾಸ್ತಿಕರಾಗುವುದು ಮೇಲು. ನಾಸ್ತಿಕ ಜೀವಂತವಾಗಿರುವನು. ಅವನಿಂದ ಏನಾದರೂ ಉಪಯೋಗ ಪಡೆಯಬಹುದು. ಮೂಢನಂಬಿಕೆ ಪ್ರವೇಶಿಸಿದರೆ ತಲೆ ಕೆಡುವುದು, ಹುಚ್ಚನಾಗುವನು. ಅವನತಿ ಪ್ರಾರಂಭವಾಗುವುದು. ಇವೆರಡರಿಂದಲೂ ಪಾರಾದ ನಿರ್ಭೀತ ಸಾಹಸಿಗಳು ನಮಗೆ ಬೇಕಾಗಿರುವುದು. ನಮಗೆ ಇಂದು ಬೇಕಾಗಿರುವುದು ರಕ್ತದಲ್ಲಿ ಪುಷ್ಟಿ, ನರಗಳಲ್ಲಿ ಶಕ್ತಿ, ಕಬ್ಬಿಣದಂಥ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಕೆಲಸಕ್ಕೆ ಬಾರದ ಜೊಳ್ಳು ಭಾವನೆಗಳಲ್ಲ, ಇವುಗಳನ್ನು ನಿರಾಕರಿಸಿ” ಎಂದು ಅವರು ಕರೆ ಕೊಡುತ್ತಾರೆ. (ವಿವೇಕಾನಂದರ ಕೃತಿ ಶ್ರೇಣಿ, ಐದನೇ ಸಂಪುಟ, ಪುಟ ಸಂಖ್ಯೆ 173-175. ಶ್ರೀ ರಾಮಕೃಷ್ಣಾಶ್ರಮ, ಮೈಸೂರು. )

ಈ ಮೂಲಕ ಮೂಢನಂಬಿಕೆಯ ಮಿತಿಗಳನ್ನು ಕಟುಮಾತುಗಳಲ್ಲಿ ಖಂಡಿಸಿದ್ದಾರೆ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂಘಪರಿವಾರದ ತರಬೇತಿ ಪಡೆದಿರುವ ಸಚಿವರು ಜ್ಯೋತಿಷ್ಯ ವಿಷಯದಲ್ಲಿ ವಿಶ್ವವಿದ್ಯಾಲಯ ತೆರೆಯಬೇಕು ಎನ್ನುತ್ತಾರೆ. ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅರಿತ ಯಾರೂ ಇಂಥ ಮೂರ್ಖತನದ ಮಾತುಗಳನ್ನು ಆಡಲಾರರು. ಆದರೆ, ಆಡುತ್ತಿದ್ದಾರೆ ಮತ್ತು ಅದನ್ನು ಜನ ನಂಬುವಂಥ ವಾತಾವರಣವನ್ನೂ ಅವರು ಸೃಷ್ಟಿಸಿರುವುದು ದುರಂತ.

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಪದ್ಧತಿ ಕುರಿತು ಸ್ವಾಮಿ ವಿವೇಕಾನಂದರಿಗೆ ಅಪಾರವಾದ ಕ್ರೋಧವಿತ್ತು. ಆದರೆ, ಇದೇ ಜಾತೀಯತೆಯ ಪರವಾಗಿ ಸಂಘಪರಿವಾರ ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಮಿಸುತ್ತಿದೆ. ದೇಶದಲ್ಲಿ ಸಮಾನತೆ ಜಾರಿಗೆ ತರಲು ಸಂವಿಧಾನದತ್ತವಾಗಿ ಸಿಕ್ಕಿರುವ ಮೀಸಲಾತಿಯ ವಿರುದ್ಧ ಸಂಘಪರಿವಾರ ದುಡಿಯುತ್ತಿದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಮೀಸಲಾತಿ ವಿರುದ್ಧದ ಅಸಹನೆಯನ್ನು ಬೆಳೆಸಿದೆ.

ಸ್ವಾಮಿ ವಿವೇಕಾನಂದರ ‘ಏಳಿ ಏದ್ದೇಳಿ’ಭಾಷಣಕ್ಕೆ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಭಾರತಕ್ಕೆ ಹೊಸ ಆಯಾಮ, ಮಹತ್ವವನ್ನು ನೀಡಿತು ಎಂದರು. ಆದರೆ, ಜ್ಯೋತಿಷ್ಯ ವಿಶ್ವವಿದ್ಯಾನಿಲಯ ಸ್ಥಾಪನೆ ಮೊದಲಾದ ಸನಾತನ ನಿಲುವುಗಳ ಕುರಿತು ಅವರು ದಿವ್ಯ ಮೌನವಹಿಸುತ್ತಾರೆ.

“ಸೆಪ್ಟಂಬರ್ 11, 1893ರಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಸ್ವಾಮಿ ವಿವೇಕಾನಂದರ ಭಾಷಣ. ‘ಅಮೆರಿಕದ ಸಹೋದರ, ಸಹೋದರಿಯರೇ’ಎಂದು ಭಾಷಣ ಆರಂಭಿಸಿದ ಅವರು ಪಾಶ್ಚಿಮಾತ್ಯರು ಕೂಡ ಭಾರತಕ್ಕೆ ತಲೆದೂಗುವಂತೆ ಮಾಡಿದ್ದರು” ಎಂದು ಪ್ರಧಾನಿ ಹಾಡಿ ಹೊಗಳಿದರು. ಅಲ್ಲದೆ, ವಿಶ್ವಕ್ಕೆ ಮಾದರಿಯಾದ ಕೆಲಸವನ್ನು ವಿವೇಕಾನಂದರು ಮಾಡಿದರು ಎಂದು ಜ್ಞಾಪಿಸಿಕೊಂಡರು. ಆದರೆ, ಅವರ ಆಶಯಗಳನ್ನು ಮಾತ್ರ ಸಂಘಪರಿವಾರ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಅಂದು ಸ್ವಾಮಿ ವಿವೇಕಾನಂದರು ಹೇಳಿದ ಪ್ರಮುಖ ವಿಷಯವನ್ನೇ ಸಂಘ ಪರಿವಾರ ಗಾಳಿಗೆ ತೂರಿದೆ. ಅಲ್ಲದೇ, ಅವರ ಆಲೋಚನೆಗಳಿಗೆ ಸಂಪೂರ್ಣ ವಾಗಿ ವ್ಯತಿರಿಕ್ತ ನಿಲುವು ತಾಳಿದೆ. ಅಂದು ಅವರು ಹೇಳಿದ ಕೆಲವು ಮಾತುಗಳು ಹೀಗಿವೆ: ‘‘ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವಧರ್ಮ ಸಹಿಷ್ಣುತೆಯನ್ನು ಒಪ್ಪುತ್ತೇವೆ. ಅಷ್ಟೇ ಅಲ್ಲದೇ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ಹೊರಹಾಕುವಿಕೆ ಎಂಬ ಪದವನ್ನು ಅನುವಾದಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.’’

“ಜಗತ್ತಿನ ಎಲ್ಲ ಧರ್ಮಗಳ, ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನು ಎಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯ ನುಚ್ಚುನೂರಾದಾಗ ದಕ್ಷಿಣ ಭಾರತಕ್ಕೆ ವಲಸೆ ಬಂದ ಇಸ್ರೇಲಿಯರ ಒಂದು ಗುಂಪಿಗೆ ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಳ್ಳಲಾಗಿದೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಜರಾತುಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬದು ಹೆಮ್ಮೆ ನನ್ನದು:” ಎಂದಿದ್ದರು.

ಅಷ್ಟೇ ಅಲ್ಲ, ‘‘ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕಾರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವೆ. ಅಷ್ಟೇ ಅಲ್ಲದೇ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ.’’ ವಿಶ್ವದ ಎಲ್ಲ ಧರ್ಮಗಳಿಗೂ ಭಾರತ ನೆಲೆ ಒದಗಿಸಿದೆ ಎಂದಿದ್ದರು.

ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ಸಮಸ್ಯೆಯಾದ ಜಾತಿ ಆಚರಣೆ ಕುರಿತು ಸ್ವಾಮಿ ವಿವೇಕಾನಂದರ ಮಾತುಗಳನ್ನು ಕೇಳಿ: ‘‘ಹಿಂದೂಗಳೆಲ್ಲರೂ ಅಣ್ಣತಮ್ಮಂದಿರು ಎನ್ನುತ್ತಲೇ ಮುಟ್ಟಬೇಡ ಮುಟ್ಟಬೇಡ ಎಂದು ಹೇಳಿಹೇಳಿ ನಾವೇ ಅವರನ್ನು ಕೀಳು ಮಾಡಿ ಕೂರಿಸಿದ್ದೇವೆ. ಇದೇ ದೇಶದ ಹೀನತೆ, ಭೀರುತೆ, ಮೂರ್ಖತೆ, ಕಾಪುರುಷತೆ, ಇವುಗಳ ಪರಾಕಾಷ್ಠೆಯಲ್ಲಿ ಪರಿಣಮಿಸಿದೆ. ಇವರನ್ನು ಮೇಲಕ್ಕೆ ಎತ್ತಬೇಕು. ಅಭಯದ ಮಾತನ್ನು ಹೇಳಬೇಕು. ನೀವೂ ನಮ್ಮ ಹಾಗೆ ಮನುಷ್ಯರು. ನಿಮಗೂ ನಮ್ಮ ಹಾಗೆ ಎಲ್ಲ ಅಧಿಕಾರವೂ ಇದೆ ಎಂದು ಹೇಳಬೇಕು” ಎಂದು ಅವರು ಕರೆಕೊಟ್ಟಿದ್ದಾರೆ. (ವಿವೇಕಾನಂದರ ಕೃತಿ ಶ್ರೇಣಿ, ಹತ್ತನೇ ಸಂಪುಟ ಪುಟ ಸಂಖ್ಯೆ 117-118. ಶ್ರೀ ರಾಮಕೃಷ್ಣಾಶ್ರಮ, ಮೈಸೂರು.)

ಇನ್ನೊಂದು ಮಹತ್ವದ ಸಂಗತಿಯ ಕುರಿತು ಸ್ವಾಮಿ ವಿವೇಕಾನಂದರು ಬೆಳಕು ಚೆಲ್ಲಿದ್ದಾರೆ. ಅದು ಸದ್ಯಕ್ಕೆ ದೇಶವನ್ನು ಸುಡುತ್ತಿರುವ ಪ್ರಮುಖವಾದ ಗೋ ಭಯೋತ್ಪಾದನೆ ಸಮಸ್ಯೆ. ಗೋರಕ್ಷಣೆಯ ಸಭೆಯ ಪ್ರಚಾರಕನೊಂದಿಗೆ ವಿವೇಕಾನಂದರ ಚರ್ಚೆ ಹೀಗೆ ಸಾಗುತ್ತದೆ:

“ಸ್ವಾಮೀಜಿ: ತಮ್ಮ ಸಭೆಯ ಉದ್ದೇಶವೇನು?

ಪ್ರಚಾರಕ: ನಮ್ಮ ದೇಶದ ಗೋಮಾತೆಯನ್ನು ಕಟುಕರ ಕೈಯಿಂದ ತಪ್ಪಿಸಿ ಕಾಪಾಡುತ್ತಿದ್ದೇವೆ. ಅಲ್ಲಲ್ಲಿ ದೊಡ್ಡಿಗಳು ಸ್ಥಾಪಿಸಲ್ಪಟ್ಟಿವೆ. ಅವುಗಳಲ್ಲಿ ಖಾಯಿಲೆಯ ಕೈಲಾಗದ ಮತ್ತು ಕಟುಕರಿಂದ ಕೊಂಡುತಂದ ಗೋಮಾತೆಯನ್ನು ರಕ್ಷಿಸುತ್ತೇವೆ.

ಸ್ವಾಮೀಜಿ: ಇದು ಬಹಳ ಒಳ್ಳೆಯ ಕೆಲಸ, ತಮ್ಮ ಸಂಪಾದನೆಗೆ ಮಾರ್ಗ?

ಪ್ರಚಾರಕ: ದಯಾಪರರಾದ ತಮ್ಮಂಥವರು ಏನಾದರೂ ಕೊಡುತ್ತಾರೆಯಲ್ಲ, ಅದರಿಂದಲೇ ಸಭೆಯ ಈ ಕಾರ್ಯ ನಡೆಯುವುದು.

ಸ್ವಾಮೀಜಿ: ನಿಮ್ಮ ಹತ್ತಿರ ಮೂಲಧನ ಎಷ್ಟು ರೂಪಾಯಿ ಇದೆ?

ಪ್ರಚಾರಕ: ಮಾರವಾಡಿ ವರ್ತಕರು ಈ ಕಾರ್ಯಕ್ಕೆ ಒಳ್ಳೆಯ ಪೋಷಕರಾಗಿದ್ದಾರೆ. ಅವರು ಈ ಸತ್ಕಾರ್ಯಕ್ಕಾಗಿ ಬಹುದ್ರವ್ಯವನ್ನು ಕೊಟ್ಟಿದ್ದಾರೆ.

ಸ್ವಾಮೀಜಿ: ಮಧ್ಯ ಹಿಂದೂಸ್ಥಾನದಲ್ಲಿ ಭಯಂಕರವಾದ ಕ್ಷಾಮ ಬಂದಿದೆ. ಹೊಟ್ಟಿಗಿಲ್ಲದೆ ಒಂದು ಲಕ್ಷ ಜನ ಸತ್ತುಹೋದರೆಂದು ಭಾರತ ಸರಕಾರ ಪಟ್ಟಿ ಕೊಟ್ಟಿದೆ. ನಿಮ್ಮ ಸಭೆ ಈ ದುರ್ಭಿಕ್ಷ ಕಾಲದಲ್ಲಿ ಏನಾದರೂ ಸಹಾಯ ಮಾಡುವುದಕ್ಕೆ ಏರ್ಪಾಡು ಮಾಡಿದೆಯೇ?

ಪ್ರಚಾರಕ: ನಾವು ದುರ್ಭಿಕ್ಷ ಮೊದಲಾದುವುಗಳಲ್ಲಿ ಸಹಾಯ ಮಾಡುವುದಿಲ್ಲ. ಕೇವಲ ಗೋಮಾತೆಯ ರಕ್ಷಣೆಗೆ ಈ ಸಭೆ ಸ್ಥಾಪಿಸಲ್ಪಟ್ಟಿರುವುದು.

ಸ್ವಾಮೀಜಿ: ಅಣ್ಣತಮ್ಮಂದಿರಾದ ನಿಮ್ಮ ದೇಶದ ಜನ ಲಕ್ಷಗಟ್ಟಲೆ ಮೃತ್ಯುವಿನ ಬಾಯಲ್ಲಿ ಬೀಳುತ್ತಿರಲು, ಕೈಯಲ್ಲಾಗುತ್ತಿದ್ದರೂ ಇಂಥ ಭಯಂಕರವಾದ ದುಷ್ಕಾಲದಲ್ಲಿ ಅವರಿಗೆ ಅನ್ನ ಕೊಟ್ಟು ಸಹಾಯ ಮಾಡುವುದು ಯುಕ್ತವೆಂದು ನಿಮಗೆ ತೋರಲಿಲ್ಲವೇ?

ಪ್ರಚಾರಕ: ಇಲ್ಲ, ಜನರ ಕರ್ಮಫಲದಿಂದ, ಪಾಪದಿಂದ ಈ ಕ್ಷಾಮ ಬಂದಿದೆ. ಕರ್ಮಕ್ಕೆ ತಕ್ಕ ಫಲವಾಗಿದೆ.

ಸ್ವಾಮೀಜಿ: ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ, ಪಶು ಪಕ್ಷಿಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನ ಸಾಯುತ್ತಾರೆ ಎಂದು ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲಿಯೂ ಕೆಲಸ ಮಾಡುವುದೇ ನಿಷ್ಪ್ರಯೋಜಯಕವೆಂದು ಒಟ್ಟಿಗೆ ನಿಶ್ಚಯಿಸಬಹುದು. ತಮ್ಮ ಪಶುರಕ್ಷಣೆಯ ಕೆಲಸವೂ ಆಮೇಲೆ ನಡೆಯುವುದಿಲ್ಲ. ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು ಸಾಯುತ್ತವೆ, ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಆವಶ್ಯಕತೆಯಿಲ್ಲ ಎಂದು ಹೇಳಬಹುದು.

ಪ್ರಚಾರಕ: ತಾವು ಹೇಳುವುದು ಸರಿ, ಆದರೆ ಹಸು ನಮಗೆ ತಾಯಿ ಎಂದು ಶಾಸ್ತ್ರ ಹೇಳುತ್ತದೆ.

ಸ್ವಾಮೀಜಿ: ಹಸು ನಮಗೆ ತಾಯಿ ಎಂಬುದನ್ನು ನಾನು ವಿಲಕ್ಷಣವಾಗಿ ಅರ್ಥಮಾಡಿಕೊಂಡಿದ್ದೇನೆ- ಇಲ್ಲದಿದ್ದರೆ ಇಂಥ ಧನ್ಯರಾದ ಪುತ್ರರನ್ನು (ಪ್ರಚಾರಕನಂಥವರು) ಇನ್ನು ಯಾರು ಹೆತ್ತಾರು?” ಎಂದು ಗೋರಕ್ಷರನ್ನು ಜಾಡಿಸುತ್ತಾರೆ ಸ್ವಾಮಿ ವಿವೇಕಾನಂದ.

ಮೇಲಿನ ಸಂಭಾಷಣೆಯಲ್ಲಿ ಅವರು ಏಕಕಾಲಕ್ಕೆ ಮೂರು ವಿಷಯಗಳನ್ನು ನಿರ್ವಹಿಸುತ್ತಿದ್ದಾರೆ. ದೈಹಿಕ ಶ್ರಮವಿಲ್ಲದ ದುಡಿಮೆ, ಹಿಂದೂ ಧರ್ಮೀಯರು ಹೇಳುವ ಕರ್ಮ ಸಿದ್ಧಾಂತದ ಕಟು ವಿಮರ್ಶೆ ಮತ್ತು ಗೋರಕ್ಷಣೆ ವಿಷಯದಲ್ಲಿ ಸಂಘಪರಿವಾರಕ್ಕಿಂತ ತೀರಾ ವಿರುದ್ಧವಾದ ನಿಲುವನ್ನು ಸ್ವಾಮಿ ವಿವೇಕಾನಂದರು ಹೊಂದಿದ್ದಾರೆ. ಆದರೆ, ಅವರ ಹೆಸರು ಹೇಳುವವರು ಗೋವಿನ ಹೆಸರಿನಲ್ಲಿ ಭಯೋತ್ಪಾದನೆಯಲ್ಲಿ ನಿರತರಾಗಿರುವುದನ್ನು ಸಮರ್ಥಿಸುವುದು ಹೇಗೆ?

ಇನ್ನು ದೇವರಿಗೆ ಪ್ರತೀ ಸಂದರ್ಭದಲ್ಲೂ ಬೇಡುವುದನ್ನು ಕೂಡ ವಿವೇಕಾನಂದರು ಒಪ್ಪುವುದಿಲ್ಲ. ಅವರ ಪ್ರಕಾರ: ‘‘ದೇವರನ್ನು ಸ್ವಲ್ಪ ಗಾಳಿಕೊಡು, ಮಳೆ ಕೊಡು, ತೋಟದಲ್ಲಿ ಹಣ್ಣು ಬೆಳೆಯುವಂತೆ ಮಾಡು ಎಂದು ಮುಂತಾಗಿ ಪ್ರಾರ್ಥಿಸುವುದು ಅಸ್ವಾಭಾವಿಕ. ದೇವರಲ್ಲಿ ಇದನ್ನು ಪ್ರಾರ್ಥಿಸುವುದು ಮೌಢ್ಯ. ನನ್ನ ತಲೆನೋವು ಗುಣವಾಗಲಿ ಮುಂತಾದ ಕೋರಿಕೆಗಳನ್ನು ಪ್ರಾರ್ಥಿಸುವುದಕ್ಕೆ ಅರ್ಥವಿಲ್ಲ. ಭಗವಂತನನ್ನು ಇದಕ್ಕಾಗಿ ಬೇಡಕೂಡದು.

ನನಗೆ ತುಂಬಾ ಅಂಜಿಕೆ ಯಾವುದೆಂದರೆ ದೇವರ ಕೋಣೆ. ದೇವರ ಮನೆಯೇನೋ ಕೆಟ್ಟದ್ದಲ್ಲ. ಆದರೆ ಕೆಲವರು ಇದನ್ನೇ ಸರ್ವಸ್ವವೆಂದು ಎಣಿಸಿ ಹಳೆಯ ಮಾದರಿಯ ಹುಚ್ಚು ಕೆಲಸವನ್ನು ಪುನಃ ರೂಢಿಗೆ ತರುವುದಕ್ಕೆ ಯತ್ನಿಸುವರು. ಇದೇ ನನ್ನ ಅಂಜಿಕೆಗೆ ಕಾರಣ.

ಮನುಷ್ಯರ ಸಂಖ್ಯೆಗಿಂತ ಹೆಚ್ಚಾಗಿ ದೇವರುಗಳಿರುವರು. ಆದರೂ ಯಾವ ಸಹಾಯವೂ ಒದಗಲಿಲ್ಲ.

ಈ ಪ್ರಪಂಚದ ದೇವರುಗಳಲ್ಲಿ ನೀವು ಪ್ರಾರ್ಥಿಸುವಿರಿ. ನಿಮ್ಮ ದುಃಖ ಕೊನೆಗೊಂಡಿದೆಯೇ? ಇಂಡಿಯಾ ದೇಶದಲ್ಲಿ ಜನರು ಆರು ಕೋಟಿ ದೇವರಿಗೆ ಗೋಳಿಡುವರು. ಆದರೂ ನಾಯಿಗಳಂತೆ ಸಾಯುವರು. ಆ ದೇವತೆಗಳೆಲ್ಲ ಎಲ್ಲಿರುವರು?

ಯಾವ ಚರ್ಚೂ ಜನರನ್ನು ಉದ್ಧಾರ ಮಾಡಲಿಲ್ಲ. ಒಂದು ದೇವಸ್ಥಾನದಲ್ಲಿ ಹುಟ್ಟುವುದು ಒಳ್ಳೆಯದು. ಆದರೆ ಯಾರು ದೇವಸ್ಥಾನ ಅಥವಾ ಚರ್ಚಿನಲ್ಲೇ ಸಾಯುತ್ತಾರೋ ಅವರನ್ನು ದೇವರೇ ರಕ್ಷಿಸಬೇಕು. ಅದರಿಂದ ಪಾರಾಗಿ. ಒಳ್ಳೆಯ ಪ್ರಾರಂಭವೇನೋ ನಿಜ. ಆದರೆ ಅದನ್ನು ತ್ಯಜಿಸಿ, ಅದು ಬಾಲ್ಯಾವಸ್ಥೆ” ಎನ್ನುತ್ತಾರೆ. (ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ 9, ಪುಟ ಸಂಖ್ಯೆ 51/52, ಸಂಪುಟ-6, ಪುಟ 236, ಸಂಪುಟ-8, ಪುಟ 223, ಸಂಪುಟ-8, ಪುಟ 271, ಶ್ರೀ ರಾಮಕೃಷ್ಣಾಶ್ರಮ, ಮೈಸೂರು.) ಈ ಮೂಲಕ ದೇವರು ಇರುವುದು ಎಲ್ಲರ ಬೇಡಿಕೆಯ ಈಡೇರಿಕೆಗಾಗಿ ಅಲ್ಲ ಎನ್ನುತ್ತಾರೆ.

“ಉತ್ತಿಷ್ಟತ! ಜಾಗ್ರತ! ಈ ಸಣ್ಣಜೀವ ಹೋದರೇನಂತೆ ಎಲ್ಲರೂ ಸಾಯಲೇಬೇಕು. ಮಹರ್ಷಿಯಾಗಲಿ, ಪಾಪಿಯಾಗಲಿ, ಶ್ರೀಮಂತನಾಗಲಿ, ಯಾರ ದೇಹವೂ ಶಾಶ್ವತವಲ್ಲ. ಎದ್ದೇಳಿ! ಎಚ್ಚರಗೊಳ್ಳಿ! ಸಂಪೂರ್ಣ ಪ್ರಾಮಾಣಿಕರಾಗಿರಿ, ಈ ನಮ್ಮ ದೇಶದಲ್ಲಿ ಅಪ್ರಾಮಾಣಿಕತೆ ಭೀಕರವಾಗಿದೆ. ನಮಗೀಗ ಬೇಕಾಗಿರುವುದು ಶೀಲ, ಕಾರುಣ್ಯ, ಮೈತ್ರಿ, ಮತ್ತು ದೃಢಚಿತ್ತ” ಎನ್ನುತ್ತಾರೆ ಸ್ವಾಮಿ ವಿವೇಕಾನಂದ.

ಪುರೋಹಿತಶಾಹಿಗಳ ಕುರಿತು ಸ್ವಾಮಿ ವಿವೇಕಾನಂದರ ಕಟು ನುಡಿಗಳನ್ನು ಕೇಳಿದ ಯಾರೂ ದೇಶದಲ್ಲಿ ಮೌಢ್ಯ, ಹಿಂದೂ ಧರ್ಮದ ಸುಧಾರಣೆ ಕುರಿತು ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ಆದರೆ, ಜಾಣ ಮೌನವನ್ನು ಪ್ರದರ್ಶಿಸುವ ಸಂಘಪರಿವಾರ ಮತ್ತು ಪುರೋಹಿತಶಾಹಿಗಳು ಉದ್ದೇಶಪೂರ್ವಕವಾಗಿ ಅವರ ಚಿಂತನೆಗಳನ್ನು ಜನರ ಮುಂದಿಡುವುದಿಲ್ಲ.

ಪುರೋಹಿತಶಾಹಿಗಳ ಕುರಿತ ಸ್ವಾಮಿ ವಿವೇಕಾನಂದರ ಖಚಿತ ನಿಲುವು ಹೀಗಿದೆ: ‘‘ಪುರೋಹಿತರು ಎಷ್ಟು ಕೂಗಾಡಿದರೇನು? ಜಾತಿ ಎಂಬುದು ಸಮಾಜದಲ್ಲಿ ಒಂದು ಆಂತರಿಕ ಭಾಗ. ಹಿಂದೆ ಅದು ವಿಕಾಸವಾಗುತ್ತಿತ್ತು; ಈಗ ಅದು ಘನೀಭೂತವಾಗಿರುವುದು. ಈ ಕಟ್ಟಿನ ಕೆಲಸ ಮುಗಿದು, ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ. ಜನರು ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಕಟ್ಟು ತಾನೇ ಮರೆಯಾಗುವುದು. ಅಮೆರಿಕ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ತಾನು ಮನುಷ್ಯನೆಂದು ಗೊತ್ತು. ಇಂಡಿಯಾ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ವ್ಯಕ್ತಿಯೂ ತಾನು ಸಮಾಜದ ಗುಲಾಮನೆಂದು ತಿಳಿದುಕೊಂಡಿರುವನು. ಬೆಳವಣಿಗೆಗೆ ಬೇಕಾಗಿರುವುದು ಮುಖ್ಯವಾಗಿ ಸ್ವಾತಂತ್ರ್ಯ. ಅದು ಮಾಯವಾದರೆ ಅವನತಿಯೇ ಫಲ”’ ಎಂದು ದೇಶದ ಜಾತಿ ಆಚರಣೆಯ ಮಿತಿಯನ್ನು ಒರೆಗೆ ಹಚ್ಚುತ್ತಾರೆ. (ವಿವೇಕಾನಂದರ ಕೃತಿ ಶ್ರೇಣಿ, ಆರನೇ ಸಂಪುಟ ಪುಟ ಸಂಖ್ಯೆ 101. ಶ್ರೀ ರಾಮಕೃಷ್ಣಾಶ್ರಮ, ಮೈಸೂರು.)

ಭಾಷಣದಲ್ಲಿ ಸ್ವಚ್ಛತೆಯ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ ವಂದೇ ಮಾತರಂ ಹೇಳಲು ನಮಗೆ ಅರ್ಹತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ಅವರು ಹೇಳುತ್ತಿರುವುದೇನು ಎಂದು ಅರಿಯದೆ ವಂದೇ ಮಾತರಂ ಘೋಷಣೆ ಕೂಗಿದರು. ಇಷ್ಟಕ್ಕೂ ಧರ್ಮದ ಕುರಿತು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ಕೇಳಿದರೆ, ಸಂಘಪರಿವಾರದವರಿಗೆ ಕೂಡ ವಂದೇ ಮಾತರಂ ಹೇಳುವ ನೈತಿಕ ಅಧಿಕಾರ ಇಲ್ಲ ಎಂಬುದು ಮನದಟ್ಟಾಗುತ್ತದೆ. ಸ್ವಾಮಿ ವಿವೇಕಾನಂದರ ಪ್ರಕಾರ: ‘‘ಯಾರಿಗೆ ಧರ್ಮವೆಂದರೆ ಯುಕ್ತಿಯ ಆಧಾರದ ಮೇಲೆ ಒಂದು ಒಪ್ಪಿಗೆ ಅಥವಾ ವಿರೋಧವನ್ನು ಸೂಚಿಸುವುದಾಗಿದೆಯೋ, ಯಾರಿಗೆ ತಮ್ಮ ಪುರೋಹಿತರು ಹೇಳುವ ಕೆಲವು ವಿಷಯಗಳನ್ನು ನಂಬುವುದಾಗಿದೆಯೋ, ಯಾರಿಗೆ ಧರ್ಮವೆಂದರೆ ತಮ್ಮ ಜನಾಂಗವೇ ನಂಬಿಕೊಂಡಿರುವ ಕೆಲವು ಭಾವನೆ ಮತ್ತು ಮೂಢನಂಬಿಕೆಗಳಿಗೆ ಸಂಪೂರ್ಣ ಒಪ್ಪಿಗೆಯನ್ನು ಕೊಡುವುದಾಗಿದೆಯೋ ಅವರು ಅಂತಹ ಭಾವನೆಗಳಿಂದ ಪಾರಾಗಬೇಕು. ಅವುಗಳನ್ನೆಲ್ಲ ಮೀರಿ ಹೋಗಬೇಕು. ಮಾನವಕೋಟಿಯನ್ನು ಬೆಳಕಿನೆಡೆಗೆ ಮುಂದುವರಿಯುತ್ತಿರುವ ಒಂದು ಬೃಹತ್ ಜೀವಿಗಳ ವ್ಯೆಹ ಎಂದು ಭಾವಿಸಬೇಕು”ಎಂದು ಅವರು ಕರೆ ನೀಡಿದ್ದಾರೆ. (ವಿವೇಕಾನಂದರ ಕೃತಿ ಶ್ರೇಣಿ, ಐದನೇ ಸಂಪುಟ ಪುಟ ಸಂಖ್ಯೆ 446, ಶ್ರೀ ರಾಮಕೃಷ್ಣಾಶ್ರಮ, ಮೈಸೂರು.)

ಇನ್ನು ಸಂಘ ಪರಿವಾರಕ್ಕೆ ಮತ್ತೊಂದು ಮಾತೆಯ ಸ್ಥಾನದಲ್ಲಿರುವ ಸಂಸ್ಕೃತದ ಕುರಿತು ಸ್ವಾಮಿ ವಿವೇಕಾನಂದರು ಹೇಳಿರುವುದೇನು? ಇಲ್ಲಿದೆ ನೋಡಿ ಅವರ ಅಭಿಪ್ರಾಯ: ‘‘ನಮ್ಮ ದೇಶದಲ್ಲಿ ಪೂರ್ವ ಕಾಲದಿಂದಲೂ, ವಿದ್ಯಾಭ್ಯಾಸವೆಲ್ಲ ಸಂಸ್ಕೃತದ ಮೂಲಕ ನಡೆದುಬಂದ ಕಾರಣ ಪಂಡಿತರಿಗೂ, ಜನಸಾಮಾನ್ಯರಿಗೂ ಒಂದು ದೊಡ್ಡ ಕಂದಕ ಉಂಟಾಗಿದೆ. ಬುದ್ಧನಿಂದ ಹಿಡಿದು ಚೈತನ್ಯ, ಶ್ರೀ ರಾಮಕೃಷ್ಣರವರೆಗೆ ಪ್ರಪಂಚದ ಉದ್ಧಾರಕ್ಕೆ ಬಂದ ಮಹಾಪುರುಷರೆಲ್ಲ ಜನಸಾಮಾನ್ಯರಿಗೆ ಅವರಾಡುವ ಭಾಷೆಯಲ್ಲೇ ಬೋಧಿಸಿದರು. ನಾವು ಬರಿಯ ಸಂಸ್ಕೃತ ಭಾಷೆಯ ನಿಧಾನವಾದ ಆಲಂಕಾರಿಕ ವೇಷವನ್ನು ಅನುಸರಿಸುವುದರಿಂದ ನಮ್ಮ ಭಾಷೆ ಕೃತಕವಾಗುತ್ತದೆ. ಸಂಸ್ಕೃತ ಭಾಷೆ ಸೋತು, ಅವಹೇಳನಕ್ಕೆ ಗುರಿಯಾದ ಹಿಂದೂಗಳ ಧಾರ್ಮಿಕ ಗ್ರಂಥ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳ ಎಲ್ಲೆಯೊಳಗೆ ಮಾತ್ರ ಜೀವಿಸಬೇಕಾಯಿತು. ಆದಕಾರಣ ಅಂದಿನಿಂದ ಅನಾದರಕ್ಕೆ ಗುರಿಯಾದ ಪುರೋಹಿತರ ಹತ್ತಿರ ಅನಿಶ್ಚಿತವಾಗಿ ಸಂಸ್ಕೃತ ಭಾಷೆ ಜೀವಿಸಬೇಕಾಯಿತು. ಪುರೋಹಿತನಾದರೋ ಕೊನೆಗೆ ಜೀವನೋಪಾಯಕ್ಕಾಗಿ ಅಷ್ಟೇನು ಪ್ರಾಮುಖ್ಯವಲ್ಲದ ಮದುವೆ ಮುಂತಾದುವನ್ನು ಮಾಡಿಸುವ ಕೆಲಸಕ್ಕೆ ಕೈ ಹಾಕಬೇಕಾಯಿತು. ಅದೂ ಕೂಡ ಮಹಮ್ಮದೀಯ ಆಳರಸರ ಕೃಪಾದೃಷ್ಟಿಯಿರುವ ಪರ್ಯಂತ ಮಾತ್ರ.ಸರಳ ಶೈಲಿಯೇ ರಹಸ್ಯ. ನನ್ನ ಆದರ್ಶ ಭಾಷೆಯೇ ನನ್ನ ಗುರುದೇವನ ಭಾಷೆ. ಅದು ಬಹಳ ಗ್ರಾಮ್ಯವಾದ, ಆದರೂ ಅತ್ಯಂತ ಭಾವಪ್ರದರ್ಶಕವಾದ ಭಾಷೆಯಾಗಿತ್ತು. ನಾವು ಯಾವ ಭಾವನೆಗಳನ್ನು ವ್ಯಕ್ತಗೊಳಿಸಬೇಕೆಂದು ಇರುವೆವೋ ಭಾಷೆ ಅದನ್ನು ಸೂಚಿಸುವಂತಿರಬೇಕು” ಎಂದಿದ್ದಾರೆ ಸ್ವಾಮಿ ವಿವೇಕಾನಂದ. (ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ 9, ಪುಟ ಸಂಖ್ಯೆ 424, ಸಂಪುಟ 2 ಪುಟ ಸಂಖ್ಯೆ 200, ಸಂಪುಟ 4 ಪುಟ ಸಂಖ್ಯೆ 114. ಶ್ರೀ ರಾಮಕೃಷ್ಣಾಶ್ರಮ, ಮೈಸೂರು.)

ಹಾಗಾದರೆ ಕೇಂದ್ರ ಸರಕಾರ ಹಿಂದಿ ಮತ್ತು ಸಂಸ್ಕೃತ ಹೇರುವ ಮೂಲಕ ಸ್ವಾಮಿ ವಿವೇಕಾನಂದರ ವಿಚಾರಗಳಿಗೆ ಅಪಚಾರ ಎಸಗುತ್ತಿಲ್ಲವೇ? ಕನ್ನಡದಂಥ ಭಾಷೆಗಳ ಮೇಲೆ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತಿರುವ ಕೇಂದ್ರ ಸರಕಾರಕ್ಕೆ ಸ್ವಾಮಿ ವಿವೇಕಾನಂದರ ಅಭಿಪ್ರಾಯಗಳು ಬೇಕಿಲ್ಲವೇ?

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]