ಬೆಂಗಳೂರು: ಹಿಂದಿ ಬೋರ್ಡ್ ಗಳಿಗೆ ಮಸಿ ಬಳಿಯುವುದು, ಹಿಂದಿ ವಿರೋಧಿಸುವುದನ್ನು ಕಾಣುತ್ತೇವೆ. ಯಾಕಾಗಿ ನಾವು ಹಿಂದಿಯನ್ನು ವಿರೋಧಿಸುತ್ತೇವೆ ಎಂದು ತಿಳಿಯಬೇಕಾಗುತ್ತದೆ ಎಂದು ಬನವಾಸಿ ಬಳಗದ ಅಧ್ಯಕ್ಷ ಆನಂದ ಬನವಾಸಿ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ದಿನಾಂಕ 25.09.2021ರಂದು ಆಯೋಜಿಸಿದ್ದ ಬಂಧುತ್ವ ಬೆಳಕು ವೆಬಿನಾರ್ ಸರಣಿಯಲ್ಲಿ ಹಿಂದಿ ಹೇರಿಕೆಯ ಅಪಾಯಗಳು ವಿಷಯದ ಕುರಿತು ಮಾತಾಡಿದ ಅವರು, ಹಿಂದಿಯನ್ನು ನಾವು ಭಾಷೆಯಾಗಿ ಕಲಿಯುತ್ತಾ ಹೋಗುತ್ತೇವೆ. ಕನ್ನಡ, ಹಿಂದಿ, ಇಂಗ್ಲೀಷ್ ಮೂರೂ ಭಾಷೆಯ ಫಲಕಗಳನ್ನು ನಾವು ಎಲ್ಲೆಡೆ ಕಾಣುತ್ತೇವೆ. ಹಿಂದಿ ನಮ್ಮಲ್ಲಿ ಮೊದಲಿನಿಂದಲೂ ಒಪ್ಪಿತವಾಗಿಯೇ ಬಂದಿದೆ. ಯಾಕೆಂದು ನೋಡಿದಾಗ ಅದು ರಾಷ್ಟ್ರ ಭಾಷೆ ಎಂಬ ನಂಬಿಕೆಯಿದೆ. ಭಾರತಕ್ಕೆ ಸಾಂವಿಧಾನಾತ್ಮಕವಾಗಿ ಯಾವುದೇ ರಾಷ್ಟ್ರಭಾಷೆಯಿಲ್ಲ ಎಂದರು.
ಗುಜರಾತ್ ಹೈಕೋರ್ಟ್ ಪ್ರಕರಣವೊಂದರಲ್ಲಿ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದೆ. ಸಂಸತ್ತಿನ ಪ್ರಶ್ನೋತ್ತರದಲ್ಲಿ ಕೂಡ ಇದೆ ಅಭಿಪ್ರಾಯ ಸಿಕ್ಕಿದೆ. ನೆಹರೂ ಕಾಲಾವಧಿಯಲ್ಲಿಯೇ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿಸುವ ತಯಾರಿಗಳು ನಡೆದಿದ್ದವು. ಅದಕ್ಕೆ ತೀವ್ರ ಪ್ರತಿಭಟನೆ, ಸಾವು ನೋವುಗಳು ಸಂಭವಿಸುತ್ತವೆ. ಅದಾದ ಮೇಲೆ ಒತ್ತಾಯಪೂರ್ವಕ ಜಾರಿ ಮಾಡಲ್ಲ ಎಂದು ನಿರ್ಣಯಿಸಲಾಗುತ್ತದೆ ಎಂದರು.
ಇಂಗ್ಲೀಷ್, ಹಿಂದಿ ಆಡಳಿತ ಭಾಷೆ ಮಾಡಿಕೊಂಡ ಪರಿಣಾಮದ ಬಗ್ಗೆ ನಾವು ತಿಳಿದುಕೊಳ್ಳಬೇಕು. 343ನೇ ವಿಧಿ ಹಿಂದಿ ಮತ್ತು ಇಂಗ್ಲೀಷ್ ಗಳೆರಡು ಆಡಳಿತ ಭಾಷೆಗಳೆಂದು ತಿಳಿಸಿದೆ. ಇಂಗ್ಲೀಷನ್ನು ನಾವು ಹೊಡೆದೋಡಿಸಲು ಹಿಂದಿಯೇ ಆಗಬೇಕಿಲ್ಲ. ನಮ್ಮ ಮಾತೃ ಭಾಷೆಗಳಿಂದಲೂ ಸಾಧ್ಯ. ಹಿಂದಿ ಪ್ರಚಾರಕ್ಕೆ ಸಮಿತಿಗಳು, ವರದಿಗಳು ಆಗಿವೆ. ಭಾರತ ಸರಕಾರದ ಉದ್ದೇಶವೇ ಹಿಂದಿಯನ್ನು ಹೆಚ್ಚೆಚ್ಚು ಬಳಸಲು ಉತ್ತೇಜಿಸುವುದು ಎಂದರು.
ರೈಲ್ವೆನಲ್ಲಿ ಡಿ ದರ್ಜೆಯ ನೌಕರರಿಗೆ ನೇಮಕಾತಿ ಕರೆಯಲಾಗಿತ್ತು. 8ನೇ ಇಯತ್ತೆ ಪಾಸಾಗಿರಬೇಕು. ಹಿಂದಿ, ಇಂಗ್ಲೀಷ್ ಎರಡು ಭಾಷೆಯಲ್ಲಿ ಮಾತ್ರ ಬರೆಯಬೇಕೆಂದು ಹೇಳಲಾಗಿತ್ತು. ಹೀಗಾದರೆ ಮಾತೃಭಾಷೆಯಲ್ಲಿ ಪರೀಕ್ಷೆ ಎದುರಿಸಲು ಹೇಗೆ ಸಾಧ್ಯ? ಇದು ಬೇರೆ ಪರೀಕ್ಷೆಗಳಲ್ಲಿಯೂ ಪುನರಾವರ್ತಿತವಾಗಿದೆ. ಹಿಂದಿಯಿಂದ ಗ್ರಾಮೀಣ ಬ್ಯಾಂಕುಗಳಲ್ಲಿ ತೊಂದರೆಯಾಗುತ್ತಿದೆ. ಕರ್ನಾಟಕದಲ್ಲಿಯೇ ಓಡಾಡುವ ರೈಲುಗಳಲ್ಲೂ ಹಿಂದಿಯೇ ಹೆಚ್ಚಿರುತ್ತದೆ. ಬರೀ ಕನ್ನಡ ಬಲ್ಲವರಿಗೆ ಅಂತಹ ಸ್ಥಳಗಳಲ್ಲಿ ಅನಕ್ಷರಸ್ಥರಂತೆ ಎನಿಸುತ್ತೆ ಎಂದರು.
ಹಿಂದಿಯ ಪ್ರಶ್ನೆಗಳಿಗೆ ಹಿಂದಿಯಲ್ಲಿಯೇ ಉತ್ತರಿಸಬೇಕೆಂಬುದು ಯಾವ ನ್ಯಾಯ. ನಮ್ಮ ಮಾತೃ ಭಾಷೆಗೆ ನ್ಯಾಯ ಒದಗಿಸಬೇಕಾದುದು ನಮ್ಮ ಕರ್ತವ್ಯ. ತೆರಿಗೆ ನಾವೂ ಕಟ್ಟುತ್ತೇವೆ ಅಂದಮೇಲೆ ನಮ್ಮ ಭಾಷೆಗೆ ಮೊದಲ ಪ್ರಾಧಾನ್ಯತೆ ಸಿಗಬೇಕು. ದೇಶದಲ್ಲಿ ಸಂಪರ್ಕಿಸುವ ಭಾಷೆಯಾಗಿ ಹಿಂದಿ ಬೆಳೆಯಬಹುದು ಆದರೆ ಅದನ್ನು ಹೇರುವಂತಿಲ್ಲ ಎಂದರು.
ನಮ್ಮ ನುಡಿಯಲ್ಲಿ ನಮಗೆ ಎಲ್ಲ ಸೌಲಭ್ಯಗಳೂ ಸಿಗಬೇಕು. ಅದು ನಮ್ಮ ಹಕ್ಕು ಕೂಡ. ಹಿಂದಿ ಯಾವತ್ತೂ ಕನ್ನಡಕ್ಕೆ ಸಮ ಅಲ್ಲ. ಅದರ ಜೊತೆಗೆ ಕನ್ನಡ ಅನ್ನದ ಭಾಷೆಯಾಗಬೇಕಿದೆ. ಭಾರತ ಸರಕಾರ ತಾರತಮ್ಯ ಬಿಡಬೇಕಿದೆ. ತ್ರಿಭಾಷಾ ಸೂತ್ರದಿಂದ ನಮಗೆ ಏನೂ ಲಾಭವಿಲ್ಲ. ಹಿಂದಿ ಭಾಷಿಕರಿಗೆ ಅದರಿಂದ ಲಾಭವಿದೆಯಷ್ಟೇ. ಇದರಿಂದ ನಮ್ಮ ಭಾಷೆಯ ಅಳಿವು ನಿಶ್ಚಿತ. ಹಾಗಾಗಿ ನಾವು ನಮ್ಮ ನುಡಿಯನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ಅನ್ಯ ಭಾಷೆಗಳನ್ನು ನಮ್ಮ ಭಾಷೆಯ ಮೇಲೆ ಹೇರುವುದರಿಂದ ನಾವು ನಮ್ಮ ನುಡಿಯನ್ನು, ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ ಎಂದರು.
ವೆಬಿನಾರ್ ನಲ್ಲಿ ವಿಷಯ ತಜ್ಞರ ಅಭಿಪ್ರಾಯಗಳು
ಹಿಂದಿ ಹೇರಿಕೆಯ ಅಪಾಯಗಳು ಕೆಲವು ಕಾಣಿಸಿದರೆ ಇನ್ನು ಕೆಲವು ಕಾಣುವುದಿಲ್ಲ. ನಮ್ಮ ಮೆಟ್ರೋ ಗಮನಿಸಿದಾಗ ಅದರಲ್ಲಿ ಹಿಂದಿಗೆ ಹೆಚ್ಚು ಆದ್ಯತೆ ನೀಡಿದ್ದನ್ನು ನಾವು ಗಮನಿಸಬೇಕು. ಹಿಂದಿ ಹೇರಿಕೆಯಿಂದ ನಮ್ಮ ಕನ್ನಡಿಗರು ಇಂಗ್ಲೀಷ್ ಮೊರೆ ಹೋದರೆ, ಹಿಂದಿ ಭಾಷಿಕರು ಕೂಡ ಮಾತೃ ಭಾಷೆ ಬಿಟ್ಟು ಇಂಗ್ಲೀಷ್ ಗೆ ಬರುತ್ತಾರೆ. ಇದರಿಂದ ಎರಡೂ ಭಾಷೆಗಳು ಸಾಯುತ್ತವೆ. ಸಿಬಿಎಸ್ಸಿ ಮೂಲಕ ಇಂಗ್ಲೀಷ್ ಹೇರುವುದನ್ನು ಮಾಡಲಾಗುತ್ತದೆ. ಇಲ್ಲಿ ಹುಟ್ಟಿದ ಮಕ್ಕಳು ಇಲ್ಲಿಯೇ ಪರಕೀಯರಾಗಿ ಬಿಡುತ್ತಾರೆ. ಕೆಲವು ಕಡೆ ನಾವು ಕನ್ನಡದಲ್ಲಿ ಸಹಿ ಮಾಡಿದಾಗ ಅದಕ್ಕೆ ಸಾಕ್ಷಿಯಾಗಿ ಬೇರೆ ಒಬ್ಬರನ್ನು ಸಹಿ ಮಾಡಿಸುವ ವ್ಯವಸ್ಥೆ ಇದೆ.
ಇಲ್ಲಿ ಬರುವ ಉದ್ಯೋಗದಾತರು ಅವರ ಭಾಷೆ ಕಲಿಯದಿದ್ದವರಿಗೆ ಅವಕಾಶಗಳಲ್ಲಿ ಅಸಮಾನತೆ ತರುತ್ತಾರೆ. ವಲಸಿಗರಿಗೆ ಹೆಚ್ಚು ಮಣೆ ಹಾಕುತ್ತಾರೆ. ನಮ್ಮಲ್ಲಿ ಚಿಕ್ಕ ವಯಸ್ಸಿನಿಂದಲೇ ಹಿಂದಿ ಕಲಿಸುವ ವ್ಯವಸ್ಥೆ ಇದೆ. ಇದರಿಂದ ದೇಶ ಮುಖ್ಯ ಎಂದು ವಾದ ಮಾಡುವವರಿಗೆ ನಾಡು ಮುಖ್ಯ ನಾಡಿನಿಂದ ದೇಶ ಎಂದು ತಿಳಿಸಬೇಕಿದೆ. ಸಿನೆಮಾ ನಟರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಜಾಹೀರಾತುಗಳಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ. ರಾಜಕಾರಣಿಗಳು ಕೂಡ ರಾಷ್ಟ್ರ ಮಟ್ಟದಲ್ಲಿ ಬೆಳೆಯುವ, ಪ್ರಧಾನಿಯಾಗುವ ಕನಸು ಕಾಣುತ್ತಿಲ್ಲ. ಹುಟ್ಟುವ ಮಕ್ಕಳು ಬಾಲ್ಯದಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವುದರಿಂದ ನಮ್ಮ ಭಾಷೆ ಸಾಯುತ್ತಿದೆ. ನುಡಿ ಮರಣದಿಂದ ನಾವು ಉತ್ತರದವರ ಗುಲಾಮರಾಗುತ್ತೇವೆ.
- ಪ್ರಕಾಶ ಹೆಬ್ಬಳ್ಳಿ, ಸಾಮಾಜಿಕ ಕಾರ್ಯಕರ್ತರು
ಕನ್ನಡದ ನಾಡು ನುಡಿ ಅಸ್ಮಿತೆಯ ವಿಷಯ ಬಂದಾಗ ನಮ್ಮ ವಿಚಾರಗಳಿಗೆ ಪೂರಕವಾಗಿ ಮಾನವ ಬಂಧುತ್ವ ವೇದಿಕೆಯು ಕಾರ್ಯಕ್ರಮವನ್ನು ರೂಪಿಸಿದೆ. ಭಾರತ ಒಕ್ಕೂಟ ದೇಶ. ಭಾಷಾವಾರು ರಾಜ್ಯಗಳ ವಿಂಗಡಣೆ ಆಗಿದೆ. ಆಲೂರು ವೆಂಕಟರಾಯರು, ಡೆ. ಚನ್ನಬಸಪ್ಪ, ಸಿದ್ಧಪ್ಪ ಕಂಬಳಿಯಾದಿಯಾಗಿ ಅನೇಕರು ಹೋರಾಡಿದ್ದಾರೆ. ವೈವಿಧ್ಯತೆಯಲ್ಲಿ ಏಕತೆಯಿಂದ ನಾವು ಬದುಕಿದ್ದೇವೆ. ಆದರೆ ಹಿಂದಿ ಹೇರಿಕೆಯನ್ನು ನಾವು ಏಕೆ ವಿರೋಧಿಸುತ್ತಿದ್ದೇವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.
ಇಡೀ ಭಾರತ ಒಂದು ಎಂದು ಬದುಕುತ್ತಿರುವ ನಮ್ಮ ಮೇಲೆ ಹಿಂದಿ ಹೇರಿಕೆಯ ಮೇಲೆ ಬೇರೆ ಭಾಷೆಗಳನ್ನು, ಭಾಷಿಕರನ್ನು ನರಳಿಸುತ್ತಿದ್ದಾರೆ. ನಮ್ಮ ಭಾಷೆ, ಸೊಗಡು ಹಾಳಾಗುತ್ತಿದೆ. ನಾಗರಿಕ ಸೇವೆ ಪರೀಕ್ಷೆಯಲ್ಲಿ ಪ್ರಿಲಿಮ್ಸ್ ಅಲ್ಲಿ ಕನ್ನಡ ಕೊಡದೇ ಮೇನ್ಸ್ ಅಲ್ಲಿ ಮಾತ್ರ ಕೊಡುತ್ತಾರೆ. ಇದರಿಂದ ನಮ್ಮವರಿಗೆ ತುಂಬಾ ಅನ್ಯಾಯವಾಗುತ್ತದೆ. ಹೀಗಾಗಿಯೇ ಹಿಂದಿ ಭಾಷಿಕರೇ ಹೆಚ್ಚು ಅಧಿಕಾರಿಗಳಾಗುತ್ತಿರುವುದು. ಬೇರೆ ಪರೀಕ್ಷೆಗಳಲ್ಲಿಯೂ ಹೀಗೆಯೇ ಇದೆ. ಶಿಕ್ಷಣದಲ್ಲಿ ಮೂರು ಭಾಷೆ ಕಲಿಸಿದವರು ಉದ್ಯೋಗದಲ್ಲಿ ಹಿಂದಿ, ಇಂಗ್ಲೀಷಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.
ಹೊಸ ಶಿಕ್ಷಣ ನೀತಿಯಿಂದ ಮತ್ತಷ್ಟು ಹಿಂದಿ ಹೇರಿಕೆ ಆಗಲಿದೆ. ಇಲ್ಲಿಯ ಯಾವ ವಿಷಯಗಳು ಅದರಲ್ಲಿ ಇರುವುದಿಲ್ಲ. ಹಾಗಾಗಿ ನಾವು ಪ್ರಶ್ನಿಸುವುದನ್ನು ನಾವು ಕಲಿಯಬೇಕು. ಬ್ಯಾಂಕ್, ಪೋಸ್ಟ್ ಆಫೀಸ್, ರೈಲ್ವೆಗಳಲ್ಲಿ ಹಿಂದಿ ಭಾಷಿಕರು ಕೆಲಸ ಮಾಡುತ್ತಿದ್ದರೆ ಅವರು ಕನ್ನಡ ಕಲಿಯಲೇಬೇಕು. ಇಂಥದ್ದನ್ನು ನಾವು ಪ್ರಶ್ನಿಸಬೇಕಿದೆ. ಉತ್ತರದವರು ನಮ್ಮ ಮೇಲೆ ಹೇರುತ್ತಿರುವ ಹಿಂದಿ ಹುನ್ನಾರದ ವಿರುದ್ಧ ಎಲ್ಲ ಭಾಷೆಗಳವರು ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ.
- ಶಿವಾನಂದ ಗುಂಡನ್ನವರ, ಮುಖಂಡರು, ಕರ್ನಾಟಕ ರಕ್ಷಣಾ ವೇದಿಕೆ
ಪ್ರಶ್ನೆಗಳು:
1. ದಾಭಾಗಳಲ್ಲಿ ಕನ್ನಡ ಬಳಸದೇ ಅಲ್ಲಿಯ ಉತ್ತರದವರು ಹಿಂದಿ ಮಾತನಾಡುವಂತೆ ಹೇಳುತ್ತಾರೆ, ಇದಕ್ಕೆ ಏನು ಮಾಡಬಹುದು?
ಉತ್ತರ: ಇಲ್ಲಿಯ ಸೌಲಭ್ಯ ಪಡೆದು, ಇಲ್ಲಿಯೇ ವ್ಯವಹಾರ ಮಾಡುವ ಅವರು ಕನ್ನಡ ಕಲಿಯಬೇಕು. ನಾವು ಅವರೊಡನೆ ಕನ್ನಡದಲ್ಲೇ ವ್ಯವಹರಿಸುವುದರಿಂದ ಅವರಿಗೆ ಕನ್ನಡ ಅನಿವಾರ್ಯವಾಗಬೇಕು.