
ಬೆಳಗಾವಿ: ಘಟಪ್ರಭಾದ ಎನ್.ಎಸ್. ಹರ್ಡಿಕರ್ ಸಭಾಭವನದಲ್ಲಿ ಜರುಗಿದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಮಕ್ಕಳಿಗೆ ಹಾಲು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಮಾನವ ಬಂಧುತ್ವ ವೇದಿಕೆಯ ವತಿಯಿಂದ ಅಪೌಷ್ಠಿಕತೆಯಿಂದ ನರಳುತ್ತಿರುವ ನಮ್ಮ ಮಕ್ಕಳಿಗೆ ಹಾಲು ನೀಡುವ ಕಾರ್ಯಕ್ರಮವನ್ನು ನಡೆಸುತ್ತಿರುವುದು ಮಹತ್ವದ ಕೆಲಸ ಎಂದರು.
ರಾಜ್ಯದಲ್ಲಿ ಅಂಗನವಾಡಿಯ ಹಂತದಲ್ಲಿ ಪ್ರತಿ ವರ್ಷ 40,000 ಮಕ್ಕಳು ಅಪೌಷ್ಠಿಕತೆಯಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ ನಾವು ಮಕ್ಕಳಿಗೆ ಹಾಲು ನೀಡುವ ಬದಲಿಗೆ ಅದನ್ನು ಅಭಿಷೇಕ ಮೊದಲಾದ ಕಾರ್ಯಗಳ ಮೂಲಕ ಹಾಳು ಮಾಡುತ್ತಿದ್ದೇವೆ ಎಂದರು.
ಭಾರತೀಯರ ಪರಿಸ್ಥಿತಿ ಹೇಗಿದೆ ಎಂದರೆ, ಹಾಲು, ತುಪ್ಪದಂತಹ ದೇಹಕ್ಕೆ ಅಗತ್ಯ ಪೌಷ್ಠಿಕಾಂಶಗಳನ್ನು ಒದಗಿಸುವ ಪದಾರ್ಥಗಳನ್ನು ಹಾಳುಮಾಡುವುದು ಮತ್ತು ಎಸೆಯಬೇಕಾದ ಗಂಜಳದಂತಹ ಪದಾರ್ಥಗಳನ್ನು ಕುಡಿಯುವ ಅವಿವೇಕದ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಯಮಕನಮರಡಿಯಲ್ಲಿ 4 ಬಾರಿ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪಡೆದ ಯುವತಿ ತನ್ನ ಪುರಸ್ಕಾರದ ಹಣದಿಂದ ತಾಯಿಗೆ ಚಿಕಿತ್ಸೆ ಕೊಡಿಸಿ, ಜೀವ ಉಳಿಸಿಕೊಂಡರು. ಆಗ ತಾಯಿ ಇಷ್ಟು ದಿನ ನಾನು ನಿನ್ನ ತಾಯಿ ಎಂದುಕೊಂಡಿದ್ದೆ. ಆದರೆ ನೀನು ನನ್ನ ತಾಯಿ ಎಂದು ಹೇಳಿದರು. ಸತೀಶ್ ಜಾರಕಿಹೊಳಿಯವರು ಇಂತಹ ಮಹತ್ವದ ಕೆಲಸಗಳನ್ನು ಯಾರಿಗೂ ಹೇಳದೆಯೇ ಮಾಡುತ್ತಿದ್ದಾರೆ ಎಂದರು.
ಸತೀಶ್ ಷುಗರ್ಸ್ ಅವಾರ್ಡ್ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉತ್ತೇಜನ ಕೊಡುವ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ಜನರಿಗೆ ನಾವು ಕೊಟ್ಟಂತೆ ಅನಿಸುವ ಬದಲು, ತಮ್ಮ ಸ್ಪರ್ಧೆ ಮತ್ತು ಸಾಮರ್ಥ್ಯದ ಮೂಲಕವೇ ತಮಗೆ ಸಿಕ್ಕಿದೆ ಎಂಬಂತಹ ಭಾವ ಮೂಡಿಸುತ್ತಾರೆ. ಇದು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಮುಂದುವರಿಕೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತಾಡಿದ ಕಾಂಗ್ರೆಸ್ ಸೇವಾದಳ ಉಪಾಧ್ಯಕ್ಷ ಬಲಾರಮ್ ಸಿಂಗ್ ಬದೌರಿಯಾ, ನಾಗರ ಹಾವಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಕುಡಿಸುವ ಮಹತ್ವದ ಕೆಲಸವನ್ನು ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಬಾಲ ಸೇವಾದಳ ಶಾಖೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ತೆರೆಯಲಾಗುವುದು. ಇಂತಹ ವೈಜ್ಞಾನಿಕ ಕೆಲಸಕ್ಕೆ ಎನ್.ಎಸ್.ಹರ್ಡೀಕರ್ ಅವರ ಕರ್ಮಭೂಮಿಯಲ್ಲಿ ಚಾಲನೆ ನೀಡಲಾಗಿದೆ. ಇದನ್ನು ನಾಡಿನಲ್ಲಿ ಮಾತ್ರವಲ್ಲ, ದೇಶಾದ್ಯಂತ ಬಾಲ ಸೇವಾದಳದ ಮೂಲಕ ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದರು.
ಜನರಲ್ಲಿರುವ ಮೂಢ ನಂಬಿಕೆಯನ್ನು ಪ್ರಶ್ನಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ನಮ್ಮನ್ನು ದೇವರು, ಧರ್ಮದ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಇದರ ನಡುವೆ ಕೂಡ ಬಸವ ಪಂಚಮಿಯನ್ನು ರಾಜ್ಯದ 500ಕ್ಕೂ ಹೆಚ್ಚು ಕಡೆ ನಡೆಸಲಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತಾಡಿದ ಡಾ.ಪ್ರದೀಪ್ ಮಾಲ್ಗುಡಿ, 12ನೇ ಶತಮಾನದ ಬಸವಣ್ಣನ ನೇತೃತ್ವದ ವಚನ ಚಳವಳಿಯ ನಂತರ ಮೂಢನಂಬಿಕೆ ವಿರುದ್ಧ ದೊಡ್ಡಮಟ್ಟದಲ್ಲಿ ಕೆಲಸವನ್ನು ನಡೆಸುತ್ತಿರುವುದು ಸತೀಶ್ ಜಾರಕಿಹೊಳಿಯವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಎಂದರು.
ದೇಶದಲ್ಲಿ 30 ಕೋಟಿ ಜನರಿಗೆ 2 ಹೊತ್ತಿನ ಊಟ ಸಿಗದಂತಹ, ಅಪೌಷ್ಠಿಕತೆಯಿಂದ 11 ವರ್ಷದ ಒಳಗಿನ ಮಕ್ಕಳು ಸಾವಿಗೀಡಾಗುವ ಪರಿಸ್ಥಿತಿ ಇದೆ. ಆದರೆ, ನಾವು ದೇವರು, ಧರ್ಮದ ಹೆಸರಿನಲ್ಲಿ ಹಾಲು, ತುಪ್ಪದಂತಹ ಪದಾರ್ಥಗಳನ್ನು ವ್ಯರ್ಥವಾಗಿಸುತ್ತಿದ್ದೇವೆ ಎಂದರು.
ಜನರಲ್ಲಿರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆ ಕೆಲಸ ನಡೆಸುತ್ತಿರುವುದು ಶ್ಲಾಘನಾರ್ಹ. ಇಂತಹ ಕೆಲಸ ನಡೆಸುತ್ತಿರುವ ಸತೀಶ್ ಜಾರಕಿಹೊಳಿಯವರ ಮತ್ತು ಮಾನವ ಬಂಧುತ್ವ ವೇದಿಕೆಯ ಕೆಲಸ ಶ್ಲಾಘನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಶಿಕ್ಷಕಿ ಶಾಂತಾ ತಳವಾರ, ನಾನು ಈ ಕಾರ್ಯಕ್ರಮಕ್ಕೆ ಬರದೇ ಇದ್ದರೆ ದೊಡ್ಡ ನಷ್ಟವಾಗುತ್ತಿತ್ತು. ನಿನ್ನೆ ನಾನು ಕೂಡ ಹಾಲನ್ನು ಅಭಿಷೇಕದ ಹೆಸರಿನಲ್ಲಿ ವ್ಯರ್ಥಮಾಡಿದೆ. ಇಂತಹ ಕಾರ್ಯಕ್ರಮದಲ್ಲಿ ಮೊದಲೇ ಭಾಗವಹಿಸಿದ್ದರೆ ಮಕ್ಕಳಿಗೆ ಹಾಲು ಕೊಡುವ ಸಂಪ್ರದಾಯ ಬೆಳೆಸುತ್ತಿದ್ದೆ ಎಂದರು.
ಅಲ್ಲದೆ, ಶಾಲೆಯಲ್ಲಿ ಮಕ್ಕಳಿಗೆ ಅಪೌಷ್ಠಿಕತೆಯ ಸಮಸ್ಯೆ ಇರುವುದು ಗೊತ್ತಿದೆ. ಆದರೆ, ಅವರ ಸಮಸ್ಯೆ ಪರಿಹರಿಸುವ ಬದಲು ನಾವು ವ್ಯರ್ಥಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳ ಪೋಷಕರು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅಪೌಷ್ಠಿಕತೆಯಂತಹ ಸಮಸ್ಯೆಯನ್ನು ಪರಿಹರಿಸಬಹುದು ಎಂದರು.
ವಿದ್ಯಾರ್ಥಿ ಬಂಧುತ್ವ ವೇದಿಕೆಯ ಭರಮಣ್ಣ ತೋಳಿ, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಮಹಾಲಿಂಗಪ್ಪ ಅಲಬಾಳ, ಕಲ್ಪನಾ ಜೋಶಿ, ಸನಾ ನದಾಫ್, ಸೇವಾದಳದ ಉಷಾ ನಾಯಕ್, ಬಾಲಕೃಷ್ಣ ನಾಯಕ್, ಚಂದ್ರಕಾಂತ ಗವಾನಿ, ಪ್ರಕಾಶ ಬೊಮ್ಮನ್ನವರ ಹಾಜರಿದ್ದರು. ಅಧ್ಯಾಪಕ ಸುರೇಶ ಶಿಕಾರಿಪುರ ಅವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.