March 25, 2023 4:04 pm

ಹೊತ್ತಿ ಉರಿಯುವ ಸಂಗತಿಗಳ ಕುರಿತು ಚರ್ಚೆಯಾಗಿದೆ: ಎಸ್.ಜಿ.ಸಿದ್ದರಾಮಯ್ಯ

ಚಿತ್ರದುರ್ಗ: ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಚರ್ಚೆಯಾಗಿರುವ ವಿಷಯಗಳು ಹೊತ್ತಿ ಉರಿಯುತ್ತಿರುವಂತವು. ನಮ್ಮ ಭವಿಷ್ಯದ ಜನಾಂಗಕ್ಕಾಗಿ ಅಗತ್ಯವಾದ ಚರ್ಚೆಗಳು ಇಲ್ಲಿ ನಡೆದಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭಧಲ್ಲಿ ಮಾತಾಡಿದ ಅವರು, ಭಾಷೆ ಇವತ್ತು ಪೊಳ್ಳಾಗಿದೆ. ಸುಳ್ಳು ಹೇಳುವ ಭಾಷೆ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭಾಷೆ ಭ್ರಷ್ಟಗೊಂಡಿದೆ. ಇಲ್ಲಿ ಹೊಸ ಚೈತನ್ಯ ಕೊಡಬೇಕು ಎಂದರು.

ಸುಳ್ಳನ್ನು ಸತ್ಯವೆಂದು ಭ್ರಮಿಸಲಾಗುತ್ತಿದೆ. ಚರಿತ್ರೆಯನ್ನು ತಿರುಚಲಾಗುತ್ತಿದೆ. ಇದರಿಂದ ಸುಳ್ಳನ್ನೇ ಸತ್ಯವೆಂದು ಭ್ರಮಿಸಿ ಇಂದು ದೇಶ ದ್ವೇಷವಾಗಿ ಬದಲಾಗುತ್ತಿದೆ. ನಮ್ಮ ಮನಸು ಮಲಿನಗೊಂಡಿದೆ. ನಮ್ಮ ಮಾನಸಿಕ ಕೊಳಚೆ ಬಾಹ್ಯ ಕೊಳಚೆಗಿಂತ ಅಪಾಯಕಾರಿ ಎಂದು ವಿವೇಕಾನಂದರು ಹೇಳುತ್ತಾರೆ. ಹೆಣ್ಣುಮಕ್ಕಳನ್ನು ಹೀನಾಯವಾಗಿ ಕಂಡದ್ದರಿಂದ ಕೇರಳವನ್ನು ಹುಚ್ಚರ ರಾಜ್ಯ ಎಂದು ಅವರು ಕರೆದರು ಎಂದರು.

ಇಂದು ವಾತಾವರಣದಲ್ಲಿ ಮಲಿನತೆ ಇದೆ. ಬಂಧುತ್ವ ನಮ್ಮ ಜನರ ಪ್ರಜ್ಞೆ. ಬಂಧುತ್ವದ ನೆಲೆಯಲ್ಲಿ ನಾವು ಬದುಕಬೇಕು. ಆಚಾರಕ್ಕರಸಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ಎಂಬ ಗೀತೆಯಂತೆ ಬದುಕಬೇಕು. ಇಂದಿನ ರಾಜಕಾರಣಿಗಳು, ಸನ್ಯಾಸಿಗಳು ದ್ವೇಷವನ್ನು ಹರಡುತ್ತಿದ್ದಾರೆ ಎಂದರು.

ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುತ್ತೇವೆ ಎಂದು ಸ್ವಾಮೀಜಿಯೊಬ್ಬ ಮಾತಾಡುತ್ತಾನೆ ಎಂದರೆ ನಾವು ಎಲ್ಲಿದ್ದೇವೆ? ಧರಿಸಿಕೊಂಡ ಕಾವಿಗೆ ಬೆಲೆ ಇಲ್ಲ. ಬಾಯಲ್ಲಿ ಏನು ಬರಬೇಕೋ ಅದರ ಬದಲು ಬೇರೆ ಬರುತ್ತಿದೆ. ಇಂತಹ ರೀತಿಯಲ್ಲಿ ಯುವಕರನ್ನು ಪ್ರಚೋದಿಸಲಾಗುತ್ತಿದೆ. ಸ್ಮಶಾನ ಕುರುಕ್ಷೇತ್ರದಲ್ಲಿ ದೆವ್ವಗಳು ನರ್ತಿಸುತ್ತ ಮಾತಾಡುತ್ತಿರುಂತೆ ತೋರುತ್ತದೆ. ಇವರು ಮನುಷ್ಯರಾ ಎಂದರು.

ಪಂಪ ಮನುಷ್ಯ ಜಾತಿಯೆಲ್ಲ ಒಂದೇ ಎಂದ. ಬಸವಣ್ಣ ದಯೆಯಿಲ್ಲದ ಧರ್ಮಯಾವುದಯ್ಯಾ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದ. ದಯೆಯಿಲ್ಲದ ಧರ್ಮ ಚಾತುರ್ವರ್ಣ ಧರ್ಮ. ಅಸ್ಪೃಶ್ಯತೆ, ಮೇಲು ಕೀಳು ಸೃಷ್ಟಿಸಿದ್ದು ಈ ಧರ್ಮ. ಉತ್ತಮಕುಲದಲ್ಲಿ ಹುಟ್ಟಿದೆನೆಂಬ ಕಷ್ಟದ ಹೊರೆಯ ಹೊರಿಸಿದರಯ್ಯ, ಸಂಗಕ್ಕೆ ಹುಟ್ಟಿದ ಶಿಶು ನಾನು ಎಂದು ಬಸವಣ್ಣ ತಾನು ಎರಡನೇ ಬಾರಿ ಹುಟ್ಟಿದ್ದನ್ನು ಹೇಳುತ್ತಾರೆ. ನೀಚಾತಿನೀಚರು ಎಂದ ಜಾತಿಯ ಮಗ ಎಂದವನು ಬಸವಣ್ಣ. ಮೇಲ್ಜಾತಿಗಳಲ್ಲಿ ಬಸವಪ್ರಜ್ಞೆ ಮೂಡಬೇಕು ಎಂದರು.

ಶ್ರಮ ಮೂಲಕ ತಂದೆ ತಾಯಿಗಳು ತಮ್ಮ ಮಕ್ಕಳು ಅವರ ದಾಳಗಳಾಗದಂತೆ ನೋಡಿಕೊಳ್ಳಬೇಕು. ಮಾನವೀಯತೆ, ಬಂಧುತ್ವದ ಶಿಕ್ಷಣ ಕೊಡಿಸಿ. ದೇಶ ಮಾನವೀಯತೆ, ಬಹುತ್ವವನ್ನು ಸಂರಕ್ಷಿಸಬೇಕಿದೆ. ಇದಕ್ಕೆ ಕುವೆಂಪು ಅವರು ಮನುಜಪಥ ವಿಶ್ವಪಥದ ನಡೆ ಕೊಟ್ಟಿದ್ದಾರೆ. ಅವರು ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದಾರೆ ಎಂದರು.

ಬಹುತ್ವದ ಅಸ್ಮಿತೆ ಭಾರತ ಅಸ್ತಿತ್ವ. ಇದಕ್ಕೆ ಬೆಂಕಿ ಇಡುವ ಕೆಲಸವನ್ನು ಮಾಡಲಾಗುತ್ತಿದೆ. ಇಂದು ದೇಶದಲ್ಲಿ ದ್ವೇಷವನ್ನು ಬೆಳೆಸಲಾಗುತ್ತಿದೆ. ಶಿಕ್ಷಣದಿಂದ ಜನರನ್ನು ದೂರಮಾಡಲಾಗುತ್ತಿದೆ. ಕೊರೊನಾ ಅವಧಿಯಲ್ಲಿ ಬಡವರ, ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾದರು ಎಂದರು.

ಶಿಕ್ಷಣದಿಂದ ವಂಚಿತವಾದ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ತಪ್ಪಿಸಲು ಎರಡೂ ಗುಂಪುಗಳ ಮೂಲಭೂತವಾದಿಗಳು, ಕರ್ಮಠ ಮನಸುಗಳು  ಪ್ರಯತ್ನಿಸುತ್ತಿವೆ. ಬಂಧುತ್ವ ವೇದಿಕೆ ಮನುಷ್ಯತ್ವದ ಬದುಕಿಗಾಗಿ ಹಾರೈಸುತ್ತಿದೆ. ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟ ಎಂದರು. ಇದೇ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ಅಜ್ಞಾನ, ಆವೇಶದಿಂದ ಹೊರಬಂದು ಮನುಷ್ಯರಾಗಬೇಕು. ಇಲ್ಲಿ ನೀವು ಕೇಳಿದ ವಿಷಯಗಳನ್ನು ಸಾವಿರ ಮಕ್ಕಳಿಗೆ ತಿಳಿಸಿ ಎಂದು ಅವರು ಕರೆನೀಡಿದರು.

ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ನಮ್ಮ ದೇಶದ ಸಂವಿಧಾನದಲ್ಲಿದೆ. ಯಾರು ನಾಯಕರಾಗಬಯಸುವಿರಿ ಅಂಬೇಡ್ಕರ್ ಅವರ ಕೃತಿಗಳನ್ನು ಓದಿ. ಜಬರ್ ದಸ್ತ್ ಆಗಿ ಕೇಳಬೇಕಾದ ಪ್ರಶ್ನೆಗಳನ್ನು ಸರಿಯಾದ ಮಾದರಿಯಲ್ಲಿ ಕೇಳಬೇಕು. ನಾವು ಮಾತಾಡಬೇಕಾದಾಗ ಮೌನವಾಗಿ, ಮೌನವಾಗಿರುವಾಗ ಮಾತಾಡುತ್ತೇವೆ. ಯಾವಾಗ ಏನು ಮಾಡಬೇಕು ಎಂದು ಅರಿಯಬೇಕು ಎಂದರು.

ಸಂಘಟನೆ ಯಾವಾಗಲೂ ನಡೆಯುವ ಚಟುವಟಿಕೆ. ಒದೆರೆಡು ದಿನಗಳದ್ದಲ್ಲ; ವರ್ಷಗಳ ಕಾಲ ಇದು ಬೆಳೆಯುತ್ತದೆ. ಕೆಲವು ಉದ್ದೇಶಗಳಿಂದ ಕೆಲವರು ಸಂಘಟನೆಗೆ ಬರುತ್ತಾರೆ. ಸಂಘಟನೆ, ಚಳುವಳಿಯಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಬೇಕು. ಯಂಗ್ ಬ್ಲಡ್ ಸಮಯದಲ್ಲಿ ಸಮಾಜದ ಕುರಿತು ಚಿಂತಿಸಬೇಕು. 25 ವರ್ಷದವರಲ್ಲಿ ಯಾರನ್ನು ಮದುವೆಯಾಗಬೇಕು ಮತ್ತು ಸಮಾಜವನ್ನು ಏನಾದರೂ ಮಾಡಿ ಬದಲಾವವಣೆ ಮಾಡಬೇಕು ಎಂದು ಆಲೋಚನೆ ಇರುತ್ತದೆ. ಯುವಕರಾಗಿದ್ದಾಗ ತೆಗೆದುಕೊಂಡಿರುವ ನಿರ್ಧಾರವನ್ನು ನಡುವಯಸ್ಸಿನಲ್ಲಿ ನಾನು ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು ಎಂದು ಆಲೋಚಿಸುತ್ತಾರೆ. ಕಾರ್ಯಕರ್ತರು, ನಾಯಕರು ಶಿಸ್ತು ಪಾಲಿಸಬೇಕು. ಅಧಿಕಾರ ಇದ್ದಾಗ ಮಾತ್ರ ವಿಜೃಂಭಿಸುವವರು ನಾಯಕರಲ್ಲ. ಅಧಿಕಾರವಿಲ್ಲದಿದ್ದರೂ ಜನರ ಜೊತೆಗೆ ಇರಬೇಕು ಎಂದರು.

ಇಂದು ಸಂಘಟನೆ ತುಂಬಾ ಕಷ್ಟ. ಹತ್ತಿಪ್ಪತ್ತು ಜನರನ್ನು ಸೇರಿಸುವುದು ಕಷ್ಟ. ಒಡೆಯುವ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಬಂಧುತ್ವವನ್ನು ಕಟ್ಟೋಣ. ನಾವು ಮುಂದಿನ ದಿನಗಳಲ್ಲಿ ಸುಂದರವಾದ ದಿನಗಳನ್ನು ಕಾಣಲು ಸಾಧ್ಯ ಎಂದರು.

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ