March 25, 2023 5:01 pm

ದೇಶಪ್ರೇಮದ ಮುನ್ನುಡಿಗೆ ತಡಕಾಡಿದಾಗ…  

ದೇಶಪ್ರೇಮದ ಮುನ್ನುಡಿಗೆ ತಡಕಾಡಿದಾಗ…                                        

– ಆರ್.ಜಯಕುಮಾರ್, ಹಿರಿಯ ಪತ್ರಕರ್ತರು

ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124(ಎ)  ಬಗ್ಗೆ ಈಗ ದೇಶದಾದ್ಯಂತ ಪರ ವಿರುದ್ಧ ಮಾತುಗಳು ಗಟ್ಟಿಯಾಗಿಯೇ ಕೇಳಿಬರುತ್ತಿವೆ.  ಇದು ಕೇವಲ ‘ದೇಶಪ್ರೇಮ’ದ ಸುತ್ತಲೇ ಗಿರಕಿ ಹೊಡೆದಿದ್ದರೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಅಂದು ಬ್ರಿಟಿಷರ ವಿರುದ್ಧದ ನಮ್ಮ ಪ್ರತಿರೋಧವು ಅವರಿಗೆ ದೇಶದ್ರೋಹ ಎನಿಸಿದರೆ ನಮಗದು ದೇಶಭಕ್ತಿಯ ಸಂಕೇತವಾಗಿತ್ತು.

ಆದರೆ ಈ ಎಲ್ಲಾ ವಿಚಾರಗಳು ಅಷ್ಟು ಸರಳವಾಗಿ ರೈಲು ಕಂಬಿಯ ಮೇಲೆ ಸಾಗುವ ಸರಕುಗಳಲ್ಲ. ದೇಶದ್ರೋಹ, ದೇಶಪ್ರೇಮಗಳೆಂಬ ಕನ್ನಡಿಯೊಳಗೆ ಇಣುಕಿ  ನೋಡಿದರೆ; ಅದರಲ್ಲಿ ನಮ್ಮದೇ ಪ್ರತಿಬಿಂಬಗಳು ಕಾಣದಿದ್ದರೆ ನಮ್ಮ ಆಂತರ್ಯದ ರೋಗಲಕ್ಷಣ ಖಾತ್ರಿಯಾಗುತ್ತದೆ. ಕೇವಲ ಗಡಿ,  ಪ್ರದೇಶ, ಬಾವುಟದಿಂದಲೇ ದೇಶಪ್ರೇಮ  ಅಳೆಯಲು ಸಾಧ್ಯವೇ? ಅದರೊಳಗಿನ ಜನರ ಬದುಕು, ಬವಣೆಗಳು ಇದರೊಳಗಿಲ್ಲವೇ? ಇದೆ ಎನ್ನುತ್ತದೆ ಇತ್ತೀಚಿನ ಅಸ್ಸಾಂ ಮತ್ತು ಮಿಜೋರಾಂ  ರಾಜ್ಯಗಳ ನಡುವಿನ ಗಡಿ ಸಂಘರ್ಷ. 

ಉಭಯ ರಾಜ್ಯಗಳ ಪೊಲೀಸರೇ ತಮ್ಮ ನಾಡಿನ ಗಡಿ ರಕ್ಷಣೆಗೆ ಬಡಿದಾಡಿ ಜೀವ ತೆತ್ತಿರುವುದು ಪರಿಸ್ಥಿತಿಯ ಜಟಿಲತೆಗೆ ಸಾಕ್ಷಿಯಾಗಿದೆ. ದೇಶವೆನ್ನುವಾಗಲೇ ಸ್ಥಳೀಯ ಅಸ್ಮಿತೆಯನ್ನು ನಗಣ್ಯವೆನ್ನಲಾಗದು.    

ಭಾರತದಂತಹ ದೇಶದಲ್ಲಿ ಪ್ರಜಾತಂತ್ರದ ಆಡಳಿತ ವ್ಯವಸ್ಥೆಗೆ ಸಂವಿಧಾನವೆಂಬ ಲಿಖಿತ ಸೂತ್ರವಿರುವಾಗ ಅದನ್ನು ಕ್ಷಣಕ್ಷಣಕ್ಕೂ ಇಲ್ಲಿನ ಸಮಾಜದ ಚಾಲಕ ಶಕ್ತಿ ಕೇಂದ್ರಗಳು ಅರ್ಥೈಸಿಕೊಳ್ಳಬೇಕು. ಸ್ವತಂತ್ರ ಭಾರತ ತನ್ನ ಬೆಳವಣಿಗೆಯ 75 ವರ್ಷಗಳಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತರಲ್ಲಿ 100 ಜನರನ್ನು ಸಾಕಿ ಸಲುಹಿದೆ ಎಂದು ‘ಹೆಮ್ಮೆ’ ಪಡುವಾಗಲೇ, ಈಗಲೂ ತುತ್ತು ಅನ್ನಕ್ಕಾಗಿ, ಆರೋಗ್ಯ, ಶಿಕ್ಷಣ,  ಉದ್ಯೋಗ, ವಸತಿಗಾಗಿ ಬಹುಪಾಲು ಜನ ಬವಣೆ ಪಡುತ್ತಿರುವುದನ್ನು ಯಾವ ದೇಶಪ್ರೇಮದ ಕನ್ನಡಿಯಲ್ಲಿ ನೋಡಲು ಸಾಧ್ಯ?

ನೆರೆಯ ಇರಾಕಿನಲ್ಲಿ ತೈಲ ಕೊಳ್ಳೆಹೊಡೆಯಲು ಪ್ರವೇಶಿಸಿದ ವಿದೇಶಿ ಸೈನ್ಯಕ್ಕೆ ಯಾವುದೇ ಪ್ರತಿರೋಧ ಎದುರಾಗದಿದ್ದಾಗ ಅಲ್ಲಿನ ಆಡಳಿತ ಪ್ರಭುತ್ವದ ಅಸಾಮರ್ಥ್ಯ ಬಟಾಬಯಲಾಯಿತು. ಇರಾನಿನಲ್ಲಿ ನೇರವಾಗಿ ಇಸ್ಲಾಮಿ ಆಡಳಿತದ ಕ್ರಾಂತಿ ನಡೆದರೂ ಅದು ಬಾಳಲಿಲ್ಲ. ನೆಲ್ಸನ್ ಮಂಡೇಲರಂತಹ ನೆಲಮೂಲದ ನಾಯಕನ ಕನಸಿನಲ್ಲಿ ಅರಳಿದ ಆಫ್ರಿಕಾದಲ್ಲೂ ಸ್ಥಿರತೆ ನೆಲೆಗೊಳ್ಳಲಿಲ್ಲ.  ಸಮತಾವಾದದ ಆಶಯಕ್ಕೆ ಜೀವ ತುಂಬಿದ ಕ್ಯೂಬಾದಲ್ಲಿ ಈಗ ಜನರು ಬೀದಿಗಿಳಿದಿದ್ದಾರೆ. ಎಂದಾಗ ಇದಕ್ಕೆಲ್ಲ ಕಾರಣ ಹುಡುಕಬೇಕಾಗಿದೆ. ಕೇವಲ ಅಧಿಕಾರ ಬದಲಾವಣೆ, ಸ್ವಾತಂತ್ರ್ಯ ಮಾತ್ರದಿಂದಲೇ ಒಂದು ವ್ಯವಸ್ಥೆ, ದೇಶದ ಸಂರಚನೆ ಸ್ಥಿರವಾಗಲು ಸಾಧ್ಯವಿಲ್ಲ. ಜಗಜಟ್ಟಿ ಅಮೆರಿಕದಂತಹ ಪ್ರಭುತ್ವದ ಜಂಘಾಬಲವೇ ಉಡುಗುವ ತೆರದಲ್ಲಿ ಶ್ವೇತ ಭವನದ ಮೇಲೆ ದಾಳಿ ನಡೆಯಿತು.  ಅವರ ವ್ಯಾಪಾರಿ ಗಗನಚುಂಬಿ ಕಟ್ಟಡಗಳೇ ನೆಲಕ್ಕುರುಳಿದವು. ಎಂದಾಗ ಕೇವಲ ಸೇನಾ ಬಲವೇ ಶಕ್ತಿ ಕೇಂದ್ರಗಳಲ್ಲ ಎನ್ನುವುದು ಸಾಬೀತಾಗಿದೆ. ಪರಿಸ್ಥಿತಿ ಹೀಗಿರುವಾಗ ಭಾರತದಂತಹ ದೇಶ ಕೇವಲ ‘ಪ್ರಜಾಪ್ರಭುತ್ವ’ ವೆಂಬ ರಂಗುರಂಗಿನ ಕನ್ನಡಕ ಧರಿಸಿ ಕನಸುಗಳ ಗಾಳಿಪಟ ಹಾರಿಸುವುದರಲ್ಲೇ ಖುಷಿಪಡುವುದು ಕೇವಲ ಭ್ರಮೆಯಾಗುವ ಎಲ್ಲಾ ಅಪಾಯಗಳಿವೆ.                  

ಪ್ರಜಾಪ್ರಭುತ್ವದಲ್ಲಿ ‘ಬಹುತ್ವ’ ಎನ್ನುವುದು ಕೇವಲ ಅಂಕಿ-ಸಂಖ್ಯೆಗಳ ಆಟವೆನ್ನುವ ತರ್ಕಕ್ಕೆ  ಬಂದು ನಿಂತಿದೆ.  ಈ ಕಾರಣಕ್ಕಾಗಿಯೇ ಕೇವಲ ಶೇಕಡಾ 35 ರಷ್ಟು ಜನಪ್ರಿಯ ಮತಗಳ ಜನಬೆಂಬಲ ಪಡೆದ ಪಕ್ಷವೊಂದು  ಮೂರನೇ ಎರಡರಷ್ಟು ಬಹುಮತವನ್ನು ಸಂಖ್ಯೆಗಳ ಮೂಲಕ ಪಡೆದು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ.  ಶೇಕಡಾ 65ರಷ್ಟು ಜನರ ಬೆಂಬಲ ತನಗೆ ಇಲ್ಲವೆನ್ನುವ ಸರಳ ಸತ್ಯವನ್ನು ಅರಿಯದ ಪ್ರಭುತ್ವ ತನ್ನ ಮೂಗಿನ ನೇರವಾದ ಸಿದ್ಧಾಂತ, ನೀತಿಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸುತ್ತದೆ.  ಇದಕ್ಕೆ ಸಂಸತ್ತು ಮೂಕ ಸಾಕ್ಷಿಯಾಗುತ್ತದೆ. ಇದರಿಂದಾಗಿಯೇ ಸಂಸತ್ತು ಕೇವಲ ಸಾಂಕೇತಿಕ ಪ್ರಾತಿನಿಧಿಕ ವೇದಿಕೆಯಾಗಿ ರೂಪಾಂತರಗೊಳ್ಳಲು ದಾರಿಯಾಗಿದೆ.                    ಅರಬ್  ರಾಷ್ಟ್ರದಲ್ಲಿ ರಾಜಪ್ರಭುತ್ವ,  ಚೀನಾದಲ್ಲಿ ಏಕಪಕ್ಷದ ಸರ್ವಾಧಿಕಾರ ಎಂದೆಲ್ಲಾ ಜಗತ್ತನ್ನು ಜಾಲಾಡುವ ನಾವು ನಮ್ಮ ‘ಪ್ರಜಾಪ್ರಭುತ್ವದ’ ವೈಫಲ್ಯವನ್ನು ಗುರುತಿಸುವಲ್ಲಿ ಜಾಣ ಕುರುಡರಾಗುತ್ತೇವೆ.  ಜನ ಮತದಿಂದ ಪ್ರಾಪ್ತವಾದ ಅಧಿಕಾರವೇ ಸರ್ವಾಧಿಕಾರದ ರೂಪು ಪಡೆದು  ವಿಜೃಂಭಿಸಲಾರಂಭಿಸಲಾರಂಭಿಸಿದೆ. ಜನರಿಂದ… ಜನರಿಗಾಗಿ… ಜನರ ಆಡಳಿತವೆನ್ನುವ ಸರಳ ಪ್ರಜಾಪ್ರಭುತ್ವ ಸೂತ್ರ ಪುನರ್ ವ್ಯಾಖ್ಯಾನಕ್ಕೆ ಒಳಪಡಬೇಕಾಗಿದೆ.  ‘ಕೇವಲ ಉತ್ತಮ ಸಂವಿಧಾನ ಒಂದರಿಂದಲೇ ದೇಶದ ಸರ್ವಜನರ ಅಭ್ಯುದಯ ಸಾಧ್ಯವಿಲ್ಲ. ಅದನ್ನು ಜಾರಿಮಾಡುವ ಸರಕಾರದ ಇಚ್ಛಾಶಕ್ತಿ ಇದ್ದರೆ ಮಾತ್ರ ಸಂವಿಧಾನದ ಆಶಯ ನಿಜ ಅರ್ಥದಲ್ಲಿ ಜಾರಿಯಾಗಲು ಸಾಧ್ಯ’ವೆನ್ನುವ ಅಂಬೇಡ್ಕರ್ ಅವರ ಮಾತು ಸದಾ ಸ್ಮರಣೀಯ.        ‌‌   

ಏಕದೇಶ, ಏಕ ಕಾನೂನು ಎಂಬ  ದೇಶಪ್ರೇಮದ ಅಮಲಿನ  ನಡಿಗೆಗೆ ತನ್ನ ಕಾಲಡಿಯ ನೆಲದ ಸಮತಟ್ಟು  ಅರ್ಥವಾಗದಿದ್ದರೆ ಮುಗ್ಗರಿಸುವ ಅಪಾಯ ತಪ್ಪಿಸಲಾಗದು. ಭಾರತವೆಂಬ ಬೃಹತ್  ಒಕ್ಕೂಟ ವ್ಯವಸ್ಥೆ ಬಂಧಿಸಲ್ಪಟ್ಟಿರುವುದು ಪರಸ್ಪರ ಪ್ರಗತಿ,  ಸ್ಥಿರತೆ, ವಿಶ್ವಾಸದ ಮೇಲೆ. ದಿಲ್ಲಿಯ ಕೇಂದ್ರೀಕೃತ ಆಡಳಿತ ಏರಲ್ಪಟ್ಟರೆ ರಾಜ್ಯ ಬೆಸುಗೆ  ಎಂಬ ಗೋಡೆಗಳ  ಇಟ್ಟಿಗೆಗಳು ಉದುರಲಾರಂಭಿಸುತ್ತವೆ. ಈ ಹಿಂದೆ ಗಡಿ, ಭಾಷೆ ತಕರಾರುಗಳಲ್ಲಿ ಇದು ಸಾಬೀತಾಗಿತ್ತು. 

ಈಗ ನೆರೆಯ ಅಸ್ಸಾಂ ಮತ್ತು ಮಿಜೋರಾಂಗಳಲ್ಲಿ ಪರಸ್ಪರ ಭಾರತದ ಪ್ರಜೆಗಳೇ ಬಡಿದಾಡಿ ಗಡಿ ‘ಭದ್ರ’ ಪಡಿಸಿಕೊಳ್ಳುತ್ತಿರುವುದು ಕೇವಲ ಆವೇಶದ ಪ್ರತೀಕವಲ್ಲ.  ಇದು ಒಕ್ಕೂಟದೊಳಗೊಂದು ಸ್ಥಳೀಯತೆಯ ಪ್ರತಿಷ್ಠಾಪನೆಯ ಸಂಘರ್ಷ.  ಇದನ್ನು ‘ಬಹುತ್ವ’ ಭಾರತ ಅರ್ಥೈಸಿಕೊಂಡರೆ ದೇಶದ ಏಕತೆ ಸುಲಲಿತವಾದೀತು.  ಸದೃಢ ಸೋವಿಯತ್ ಒಕ್ಕೂಟ ಇಸ್ಪೀಟ್ ಎಲೆಗಳಂತೆ  ವಿಘಟನೆಗೊಂಡ ಸತ್ಯ ನಮಗೆ ಸದಾ ಎಚ್ಚರಿಸುವ ಗಂಟೆಯಾಗಬೇಕು.   

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ