ಬೆಳಗಾವಿ: ಕಳೆದ 30 ವರ್ಷಗಳಲ್ಲಿ ರಾಜರತ್ನ ಅಂಬೇಡ್ಕರ್ ಅವರದು ನನ್ನನ್ನು ಪ್ರಭಾವಿಸಿದ ಭಾಷಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿಯ ಇಂದಿರಾ ನಗರದಲ್ಲಿ ನಡೆದ ಬುದ್ಧನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಅವರು, ಇಷ್ಟು ದಿನಗಳ ಕಾಲ ದೇವರನ್ನು ಹೊರತುಪಡಿಸಿ ಮಾತಾಡುವ ನಮಗೆ ಜೊತೆಗಾರರು ಇರಲಿಲ್ಲವೆನಿಸುತ್ತಿತ್ತು. ನಿಜಗುಣಾನಂದ ಶ್ರೀಗಳು ಮತ್ತು ನಾನು ಈ ಕುರಿತು ಮಾತಾಡುತ್ತಿದ್ದೆವು. ರಾಜರತ್ನ ಅವರ ಮಾತುಗಳನ್ನು ಕೇಳಿದ ನಂತರ ಇದೀಗ ನಮ್ಮ ಸಂಖ್ಯೆ ಹೆಚ್ಚಾಗಿದೆ ಎಂಬ ಭಾವ ಮೂಡಿದೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ದಾರಿಯಲ್ಲಿ ಮಾನವ ಬಂಧುತ್ವ ವೇದಿಕೆಯನ್ನು ಜನರ ಬಳಿ ಕೊಂಡೊಯ್ದಿದ್ದೇವೆ. ಇದರ ಮೂಲಕ ನಾವು ಮೂಢನಂಬಿಕೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಈ ಕೆಲಸಕ್ಕೆ ನೀವೆಲ್ಲರೂ ಕೈಜೋಡಿಸಬೇಕು ಎಂದು ನೆರೆದಿದ್ದ ಸುಮಾರು 2,000 ಜನರಲ್ಲಿ ಅವರು ಮನವಿಮಾಡಿಕೊಂಡರು.

ಸಾಮಾಜಿಕ ಬದಲಾವಣೆ ಆಗುವವರೆಗೆ ಹೋರಾಟವನ್ನು ಮುಂದುವರೆಸುತ್ತೇವೆ. ತಳಸಮುದಾಯದಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಉನ್ನತ ಶಿಕ್ಷಣ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸಿದರೆ ಮಾತ್ರ ಸಮಾನತೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ರೂಪಿಸಿ ಜಾರಿಗೆ ತರಲು ಪ್ರಯತ್ನಿಸುತ್ತೇವೆ ಎಂದರು.
ಜನರು ದುಡಿಮೆಯ ಹಣವನ್ನು ಮೂಢನಂಬಿಕೆಗಳಿಗೆ ಖರ್ಚುಮಾಡದೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕುಟುಂಬದ ಏಳಿಗೆಗೆ ಸದ್ಬಳಕೆ ಮಾಡಿಕೊಳ್ಳಲು ಜಾಗೃತರಾಗುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತಾಡಿದ ಡಾ.ಬಿ.ಆರ್.ಅಂಬೇಡ್ಕರ್ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್, ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ಮಹತ್ವದ ಕಾರಣವಿತ್ತು. ಅವರು ಜೈನ, ಸಿಖ್, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಧರ್ಮಗಳನ್ನು ಬಿಟ್ಟು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಏಕೆಂದರೆ, ಬೌದ್ಧ ಧರ್ಮದಲ್ಲಿ ಜಾತಿ ಇಲ್ಲ. ಇಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣಲಾಗುತ್ತದೆ. ಇಂತಹ ಸಮಾನತೆ ಬೇರೆ ಧರ್ಮಗಳಲ್ಲಿ ಇಲ್ಲ ಎಂದರು.

ನಾವೆಲ್ಲ ಮೂಲತಃ ನಾಗ ಕುಲಕ್ಕೆ ಸೇರಿದವರು. ಒಂದು ಕಾಲಕ್ಕೆ ಈ ದೇಶವನ್ನು ಆಳಿದವರು. ಆದರೆ, ನಾವು ಭಿಕ್ಷುಕರ ರೀತಿ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಮೀಸಲಾತಿ. ಈಗಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲ ಸರ್ಕಾರಿ ಸಂಸ್ಥೆಗಳನ್ನೂ ಖಾಸಗೀಕರಿಸುತ್ತಿದೆ. ಮುಂದೆ ನಿಮಗೆ ಮೀಸಲಾತಿ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು. ಘನತೆಯಿಂದ ಬದುಕಲು ನೀವೆಲ್ಲ ಮತಾಂತರ ಹೊಂದಿ. ಮತಾಂತರ ಹೊಂದಿದರೆ ನಿಮಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಮಾನ್ಯತೆ ನೀಡಿದೆ. ಮತಾಂತರದಿಂದ ನಿಮಗೆ ನಷ್ಟವಾಗುವುದಿಲ್ಲ. ಬದಲಾಗಿ ಜಾಗತಿಕ ಮಟ್ಟಕ್ಕೆ ನಿಮಗೆ ಏರುವ ಅವಕಾಶವಿದೆ. ಏಕೆಂದರೆ, ದಲಿತರ ವಿವಿಧ ಜಾತಿಗಳು ದೇಶದಲ್ಲಿವೆ. ಬೌದ್ಧ ಎಂದು ನೀವು ಧರ್ಮದ ಕಾಲಂನಲ್ಲಿ ನಮೂದಿಸಿದರೆ ಜಾತಿ ನಮೂದಿಸುವುದು ಅಗತ್ಯವಿಲ್ಲ. ದೇಶದಲ್ಲಿ ಧರ್ಮ ಬೌದ್ಧ, ಜಾತಿ ಮಹರ್ ಎಂದು ನಮೂದಿಸಲಾಗುತ್ತದೆ. ಹೊರದೇಶದಲ್ಲಿ ಬೌದ್ಧ ಎಂದು ಮಾತ್ರ ನಮೂದಿಸಲಾಗುತ್ತದೆ ಎಂದರು.
ಜೊತೆಗೆ, ನಾಗಪುರದಲ್ಲಿ 60 ಎಕರೆ ವಿಸ್ತೀರ್ಣದಲ್ಲಿ ಬೌದ್ಧ ವಿಶ್ವವಿದ್ಯಾಲಯ ಕಟ್ಟಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಗಳನ್ನು ತೆರೆಯಲಾಗುವುದು ಎಂದರು.