ಚಿತ್ರದುರ್ಗ: ಪ್ರಸ್ತುತ ಸನ್ನಿವೇಶಗಳಲ್ಲಿ ರಾಜ್ಯ, ದೇಶ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಚಿಂತನೆ ಮಾಡುವವರು ಮಾನವ ಬಂಧುತ್ವ ವೇದಿಕೆಯವರು ಎಂದು ಶಾಸಕ ರಘುಮೂರ್ತಿ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭಧಲ್ಲಿ ಮಾತಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ಆಧರಿಸಿ ಸ್ಥಾಪನೆಯಾಗಿರುವ ಈ ವೇದಿಕೆ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ದೇಶಕ್ಕೆ ವ್ಯಾಪಿಸಲಿ ಎಂದರು.
ಸತೀಶ್ ಜಾರಕಿಹೊಳಿಯವರು ಸರಳ ವ್ಯಕ್ತಿ. ಅವರು ಜನರಿಗೆ ಒಳಿತು ಮಾಡಲು ಈ ವೇದಿಕೆಯನ್ನು ರೂಪಿಸಿದ್ದಾರೆ. ಇಲ್ಲಿ ಕೇಳಿದ ವಿಷಯಗಳನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಅನಂತ್ ನಾಯಕ್, ರಾಜ್ಯ ಬಂಧುತ್ವ ಅಧಿವೇಶನವನ್ನು ಹರಿಹರದಲ್ಲಿ ಮಾಡಬೇಕಿತ್ತು. ಆದರೆ ಸ್ವಾಮೀಜಿಯವರು ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿರುವ ಸಮಯದಲ್ಲಿ ಅಲ್ಲಿ ಕಾರ್ಯಕ್ರಮ ಮಾಡುವುದು ಬೇಡ ಎಂದು ಚಿತ್ರದುರ್ಗ ಸ್ಥಳ ಬದಲಾಯಿಸಿದೆವು. ಇಲ್ಲಿ ಆಂಜನಪ್ಪ, ರಘುಮೂರ್ತಿ ಮೊದಲಾದ ಸ್ನೇಹಿತರು ಸೇರಿದಂತೆ ಎಲ್ಲರೂ ನೆರವಾಗಿದ್ದಾರೆ. ಅವರಿಗೆಲ್ಲ ಧನ್ಯವಾದಗಳು ಎಂದರು.
ಜನರನ್ನು ಮೂಢನಂಬಿಕೆಯಿಂದ ಹೊರತರಲು, ವೈಚಾರಿಕತೆಯನ್ನು ಮೂಡಿಸಲು, ಮಾನವೀಯತೆಯನ್ನು ಬೆಳೆಸಲು ಮಾನವ ಬಂಧುತ್ವ ವೇದಿಕೆಯನ್ನು ಕಟ್ಟಲಾಗಿದೆ. 30 ಜಿಲ್ಲೆಗಳಿಗೆ ವೇದಿಕೆ ವಿಸ್ತೀರ್ಣವಾಗಿದೆ. ಸ್ಮಶಾನದಲ್ಲಿ ಕಾಲ ಕಳೆಯುವ ಕೆಲಸ, ಸಾವಿತ್ರಿ ಬಾ ಫುಲೆ, ಕುವೆಂಪು, ಬಸವಣ್ಣನ ವಿಚಾರಗಳನ್ನು ಹರಡಲಾಗುತ್ತಿದೆ ಎಂದರು.
ರಾಜಕಾರಣ ನಮ್ಮ ಬದುಕನ್ನು ನಿಯಂತ್ರಿಸುತ್ತಿದ್ದರೆ, ನಾವು ರಾಜಕಾರಣವನ್ನು ನಿಯಂತ್ರಿಸಬೇಕು. ರಾಜಕೀಯವೆಂದರೆ ಪಕ್ಷ, ಝಂಡಾ ಮಾತ್ರವಲ್ಲ. ಜನ ಪರವಾದ ಆಲೋಚನೆ ಮುಖ್ಯ ಎಂದರು.