March 25, 2023 5:07 pm

ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?: ನ್ಯಾ. ನಾಗಮೋಹನ್ ದಾಸ್

ಬೆಂಗಳೂರು: ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಜಗತ್ತಿನ ಎಲ್ಲೆಡೆ ಎಲ್ಲ ಕಾಲಕ್ಕೂ ಎರಡನೆಯ ದರ್ಜೆಯ ಲಿಂಗ ಎಂದೇ ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆ ಮೂಢನಂಬಿಕೆ, ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಅಸಮಾನತೆಗಳೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ನಾಗಮೋಹನ್ ದಾಸ್ ಹೇಳಿದರು.

11/09/2021ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ವೆಬಿನಾರ್ ಸರಣಿಯಲ್ಲಿ “ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?” ವಿಷಯದ ಕುರಿತು ಮಾತಾಡಿದ ಅವರು,  ಬುದ್ಧ, ಬಸವ ಕಾಲದಿಂದಲೂ ಇದರ ವಿರುದ್ಧ ಬಂಡಾಯವಿದೆ. ಇತಿಹಾಸದುದ್ದಕ್ಕೂ ಲಿಂಗ ಅಸಮಾನತೆಯ ವಿರುದ್ಧ ಧ್ವನಿಯಿದೆ ಎಂದರು.

ಸತಿ ಪದ್ಧತಿ, ವಿಧವೆಯರಿಗೆ ಮರು ಮದುವೆಯ ಅವಕಾಶ, ಅಸ್ಪೃಶ್ಯತೆ ನಿವಾರಣೆ, ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಸ್ವತಂತ್ರಪೂರ್ವದಲ್ಲಿ ಕಾನೂನುಗಳು ಬಂದಿವೆ. ಪುರುಷರಿಗೆ ನೀಡಿದ ಮತದಾನದ ಹಕ್ಕು, ಮೂಲಭೂತ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದ್ದೇವೆ. ಕಾನೂನಿನ ದೃಷ್ಟಿಯಲ್ಲಿ ನೋಡಿಯೇ ಸಮಾನ ಅವಕಾಶ, ಮೀಸಲಾತಿ ನೀಡಲಾಗಿದೆ. ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ನ್ಯಾಯಾಧೀಶರು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರ ಪ್ರವೇಶವಾಗಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾನೂನಿನ ತೊಡಕುಗಳು ಕೂಡ ಕಾರಣ. ತಿದ್ದುಪಡಿಗಳ ಮೂಲಕ ನ್ಯೂನ್ಯತೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ. ಸುಮಾರು 45 ವರ್ಷಗಳಲ್ಲಿ 1200 ಪಟ್ಟು ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಎಲ್ಲವೂ ದಾಖಲಾಗುವುದಿಲ್ಲ. ಕಾನೂನುಗಳನ್ನು ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಜಾತಿ, ವರ್ಗ ಅಸಮಾನತೆಯಿಂದ ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಹೆಚ್ಚಾಗಿ ಬಡ ಮತ್ತು ದಲಿತ ಕುಟುಂಬದವರೇ ಆಗಿರುತ್ತಾರೆ.  ಸ್ವಾತಂತ್ರ್ಯಾನಂತರ ಕೋಮುಗಲಭೆಯಲ್ಲಿ 10 ಲಕ್ಷ ಜನ ಸತ್ತರು. ಮಹಿಳೆಯರು ಹೆಚ್ಚು ಬಲಿಯಾಗುತ್ತರೆಂಬುದು ಗಮನಾರ್ಹ. ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಏರುಪೇರಾಗುತ್ತಿದೆ. ಇದರಿಂದ ಕೂಡ ಅಪಾಯಗಳಿವೆ. ಈ ಅನುಪಾತವನ್ನು ನಾವು ಸರಿಪಡಿಸಿಕೊಳ್ಳಬೇಕಿದೆ ಎಂದರು.

ಮಹಿಳೆಯ ದುಡಿಮೆಗೆ ನಾವು ಬೆಲೆ ಕಟ್ಟುತ್ತಿಲ್ಲ. ಅವರನ್ನು ನಾವು ಆರ್ಥಿಕವಾಗಿ ಅಸಮಾನವಾಗಿ ಇಟ್ಟಿದ್ದೇವೆ. ಧಾರ್ಮಿಕ ಫರ್ಮಾನುಗಳ ಮೂಲಕ ಮಹಿಳೆಯರನ್ನು ಅವಕಾಶಗಳಿಂದ ದೂರ ಇಡುತ್ತಿದ್ದೇವೆ. ಸಾಮಾಜಿಕ ಅನಿಷ್ಟ ಮೌಲ್ಯಗಳನ್ನು ಬಿತ್ತುವುದರ ಮೂಲಕ ನಾವು ಅವರನ್ನು ಬಲಿಪಶು ಮಾಡುತ್ತಿದ್ದೇವೆ. ಮಹಿಳೆಯರ ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದರು.

ಸಂಪತ್ತಿನ ಸಮಾನ ಹಿಡಿತ, ಸಾಮಾಜಿಕ ಮೌಲ್ಯಗಳ ಮೂಲಕ, ಕಾನೂನಿನ ಮೂಲಕ ಮಹಿಳೆಯರ ಹಿತ ಕಾಪಾಡಿ ರಕ್ಷಣೆ ನೀಡಬೇಕಿರುವುದು ಅತ್ಯವಶ್ಯ. ಅವರಲ್ಲಿಯ ಭೀತಿಯನ್ನು ಹೋಗಲಾಡಿಸಿ ಧೈರ್ಯವನ್ನು ತುಂಬುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ

ಕಾನೂನು ವ್ಯವಸ್ಥೆಯ ಭಾಗವೇ ಆಗಿದೆ. ಮೂಲಭೂತ ಹಕ್ಕುಗಳಲ್ಲಿ ಲಿಂಗ ಸಮಾನತೆಯೂ ಸೇರಿದೆ. ಶತಶತಮಾನಗಳಿಂದ ಮಹಿಳೆ ಸ್ವಾತಂತ್ರ್ಯ, ಸಮಾನತೆಗಾಗಿ ಹೋರಾಡುತ್ತಿದ್ದಾಳೆ. ಎಲ್ಲ ಧರ್ಮ ಶಾಸ್ತ್ರಗಳೂ ಆತ್ಮಕ್ಕೆ ಗಂಡು ಹೆಣ್ಣೆಂಬ ಬೇಧವಿಲ್ಲ ಎಂದು ಹೇಳಿದ್ದಾರೆ. ವಿಶ್ವಸಂಸ್ಥೇ ಮಹಿಳಾ ದಿನಾಚರಣೆ ಘೋಷಿಸಿದ್ದರೂ ಮಹಿಳೆಯರಿಗೆ ಇನ್ನೂ ಗಂಡಿಗೆ ಸಮಾನವಾಗಿ ಬದುಕಲು ಸಾಧ್ಯವಾಗಿಲ್ಲ. ಚರಿತ್ರೆಯುದ್ದಕ್ಕೂ ದ್ರೌಪದಿ, ಸೀತೆ, ಶೂರ್ಪನಖಿ, ಅಹಲ್ಯೆ ಈ ಎಲ್ಲರ ಪಾತ್ರಗಳನ್ನು ಗಮನಿಸಿದಾಗ ಪುರುಷ ಪ್ರಧಾನ ವ್ಯವಸ್ಥೆ ಅವರ ಮೇಲೆ ಮಾಡಿದ ಅನ್ಯಾಯಗಳು ಅರ್ಥವಾಗುತ್ತವೆ.

ತಾಲೀಬಾನಿಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿರುವ ಅಫಘಾನಿನ ಮಹಿಳೆಯರ ಪರಿಸ್ಥಿತಿ ಚಿಂತಾಜನಕ. ಪ್ರತಿವರ್ಷ ಮಹಿಳೆಯರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ. ಎಲ್ಲ ಮುಂದುವರೆದ ರಾಷ್ಟ್ರಗಳಲ್ಲಿಯೂ ಇದು ಹೊರತಾಗಿಲ್ಲ. ಅಮೆರಿಕೆಯಂತಹ ರಾಷ್ಟ್ರಗಳಲ್ಲಿ ಮಹಿಳೆಯರ ವ್ಯಾಪಾರ ತಲೆ ನೋವಾಗಿದೆ. ಎಷ್ಟೇ ಕಾನೂನುಗಳಿದ್ದರೂ ದೌರ್ಜನ್ಯಗಳಿಗೆ ನಿಖರ ಕಾರಣ ಸಿಗುತ್ತಿಲ್ಲ. ಪುರುಷನ ಮೇಲರಿಮೆ, ಅತಿಯಾದ ಭೋಗಿಸುವ ಮನಸ್ಥಿತಿ ಇವೆಲ್ಲವೂ ಕಾರಣಗಳಾಗಿವೆ. ಪ್ರಾರಂಭದಿಂದಲೇ ಗಂಡಿನಲ್ಲಿ ಹೆಣ್ಣಿನ ಬಗ್ಗೆ ಗೌರವ ಭಾವನೆಯನ್ನು ಮೂಡಿಸುವುದು ಅಗತ್ಯ.

  • ಡಾ. ತಮಿಳ್ ಸೆಲ್ವಿ, ಕನ್ನಡ ವಿಭಾಗದ ಮುಖ್ಯಸ್ಥರು, ಮದ್ರಾಸ್ ವಿಶ್ವವಿದ್ಯಾಲಯ

ನಾವೇ ಆಯ್ಕೆ ಮಾಡಿದ ಪ್ರತಿನಿಧಿಗಳು ತಮಗೆ ಬೇಕಾದಂತವರನ್ನು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಾರೆ. ಹೀಗಾದಾಗ ಅಪರಾಧಿಗಳ ಪರ ಬಲಾಢ್ಯರು ನಿಂತುಕೊಳ್ಳುತ್ತಾರೆ. ಇದರಿಂದ ಸಂತ್ರಸ್ಥೆಗೆ ಹೇಗೆ ನ್ಯಾಯ ಸಿಗುತ್ತೆ? ಅತ್ಯಾಚಾರದ ಹಲವು ಪ್ರಕರಣಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಸಂತ್ರಸ್ಥೆಯನ್ನೇ ಅಪರಾಧಿಯಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ. ನೈತಿಕ ಮೌಲ್ಯಗಳನ್ನು ನಾವು ತರಬೇಕು. ಕೋರ್ಟಿನ ವಿಳಂಬ ನೀತಿಯಿಂದ ನ್ಯಾಯ ಪ್ರಕ್ರಿಯೆ ವಿಳಂಬವಾದಷ್ಟೂ ಸಾಕ್ಷ್ಯ ನಾಶಕ್ಕೆ ದಾರಿಯಾಗುತ್ತದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ವ್ಯವಸ್ಥೆಯ ಅಗತ್ಯತೆ ನಮಗಿದೆ.

  • ಕೆ. ಷರೀಫಾ, ಕವಯಿತ್ರಿ

ದೆಹಲಿಯ ಡಿಸಿಡಿ ನೌಕರಸ್ಥೆಯೋರ್ವಳ ಮೃತ ದೇಹ ಹರ್ಯಾಣಾದಲ್ಲಿ ಸಿಗುತ್ತದೆ. ಆಕೆಯ ಇಡೀ ಬದುಕನ್ನು ಕಟ್ಟಿಕೊಟ್ಟ ಅವಳ ತಂದೆ ತಾಯಿಗೆ ಹೇಗಾಗಬೇಡ? ಸಾಮೂಹಿಕ ಅತ್ಯಾಚಾರವಾಗಿರುತ್ತದೆ.  ಇಡೀ ದೇಹವನ್ನು ವಿಕೃತಗೊಳಿಸಿರುತ್ತಾರೆ. ಮೈಸೂರಿನಲ್ಲಿ, ಘಟಪ್ರಭಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಕೂಡ ಹೀಗೆಯೇ. ರಾಷ್ಟ್ರೀಯ ಮಹಿಳಾ ಆಯೋಗ ಕೊಟ್ಟಿರುವ ವರದಿಯ ಪ್ರಕಾರ ಶೇ. 46ರಷ್ಟು ದೌರ್ಜನ್ಯ ಈ ಎಂಟು ತಿಂಗಳಲ್ಲಿ ಏರಿಕೆಯಾಗಿದೆ. ಸುಮಾರು 19,950 ಪ್ರಕರಣಗಳು ವರದಿಯಾಗಿವೆ. 10,084 ಪ್ರಕರಣಗಳು ಯುಪಿಯಲ್ಲಿ ವರದಿಯಾಗಿವೆ. ಸಾಮೂಹಿಕ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇವೆಲ್ಲವನ್ನೂ ಹೇಗೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ನಾವು ಚರ್ಚಿಸಬೇಕು.

  • ಡಾ. ಲೀಲಾ ಸಂಪಿಗೆ, ಸಾಮಾಜಿಕ ಹೋರಾಟಗಾರರು

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ