ಬೆಂಗಳೂರು: 2019ರಲ್ಲಿ ಕೋವಿಡ್ 19 ತುಂಬಾ ಕೆಟ್ಟ ರೀತಿಯಲ್ಲಿ ಪರಿಚಯವಾಯಿತು. 2020ರಲ್ಲಿ ನಾನು ಜಪಾನ್ ಗೆ ಹೋಗಿದ್ದೆ. ಅಲ್ಲಿಂದ ಬರುವಾಗ ವುಹಾನ್ ನಿಂದ ವೈರಾಣು ಹುಟ್ಟಿ ಹರಡಿದೆ ಎಂದು ಗೊತ್ತಾಗಿತ್ತು. ವಿಮಾನದಲ್ಲಿ ಇದರ ಕುರಿತು ಯಾರೊಬ್ಬರೂ ಚಕಾರವೆತ್ತಲಿಲ್ಲ. ಮಾರ್ಚ್ ಹೊತ್ತಿಗೆ ಗೊತ್ತಾಯಿತು. ಆದರೆ, ರಾಹುಲ್ ಗಾಂಧಿಯವರು ಯಾವ ಮುಂದಾಲೋಚನೆಯಿಂದಲೋ ಫೆಬ್ರವರಿ 2020ರಿಂದಲೇ ಮಾತಾಡಿದ್ದರು. ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿ ಎಂದು ಹೇಳುತ್ತಲೇ ಬಂದರು. ಆದರೆ ಮೋದಿಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಕೆಟ್ಟ ಅನುಭವವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೋವಿಡ್ ಎದುರಿಸುವಲ್ಲಿ ಸರ್ಕಾರಗಳ ವೈಫಲ್ಯಗಳು” ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತಾಡಿದ ಅವರು, ಅಮೆರಿಕ, ಇಂಗ್ಲೆಂಡ್, ಜಪಾನ್ ಮೊದಲಾದ ದೇಶಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಬೃಹತ್ ಪ್ರಮಾಣದ ಹಣ ವ್ಯಯಿಸಿದೆ. ಟ್ರಂಪ್ ರನ್ನು ಬೈದರು ಅವರ ಅವಧಿಯಲ್ಲೇ ಹೂಡಿಕೆ ಮಾಡಲಾಗಿತ್ತು. ವ್ಯಾಕ್ಸಿನ್ ತಯಾರಿಕೆಯಲ್ಲಿ ಭಾರತ ಮೇಲುಗೈ ಸಾಧಿಸಿತು. ಪಂಡಿತ್ ಜವಾಹರ್ ಲಾಲ್ ನೆಹರು ಪತ್ನಿ ಟಿಬಿಯಿಂದ ಬಲಿಯಾಗುತ್ತಾರೆ. ಇಂದಿರಾ ಗಾಂಧಿಯವರಿಗೂ ಟಿಬಿ ಇತ್ತು. ದೇಶದ ಆರೋಗ್ಯದ ಕುರಿತು ಗಂಭೀರವಾಗಿ ಪರಿಗಣಿಸಿದರು. ಇದರಿಂದಾಗಿ ಎಂಎಂಆರ್, ಬಿಸಿಜಿ ಇತ್ಯಾದಿ ಕೊಟ್ಟಿದ್ದಾರೆ. ನಮ್ಮಲ್ಲಿ ಕೊರೊನಾ ಮೊದಲ ಅಲೆಯಲ್ಲಿ ಸಾವು ಕಡಿಮೆಯಾಗಲು ಬಿಸಿಜಿ ಹಾಕಿದ್ದು ಕಾರಣ. ಇದಕ್ಕೆ ನೆಹರು, ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಕುಟುಂಬ ಕಾರಣ ಎಂದರು.
ಕೊರೊನಾ ಓಡಿಸಲು ತಟ್ಟೆ, ಜಾಗಟೆ ಬಾರಿಸಿ ಕೊರೊನಾ ಓಡಿಸಿ ಎಂದು ಕರೆ ನೀಡಲಾಯಿತು. ಆದರೆ ನಶಿಸಿಹೋಗಿದ್ದು ಕೊರೊನಾವಲ್ಲ ಜನರ ಜೀವನ. ಕೊರೊನಾ ವೈರಾಣು ನಮ್ಮ ದೇಶದಲ್ಲಿ ಉದ್ಭವವಾಗಿಲ್ಲ. ಬಹಳ ಜನ ಅಂತಾರಾಷ್ಟ್ರೀಯ ವಿಮಾನ ರದ್ದು ಏಕೆ ಮಾಡಲಿಲ್ಲ? ಕ್ವಾರಂಟೈನ್ ವ್ಯವಸ್ಥೆಯನ್ನು ಮಾಡಲಿಲ್ಲ? ಎಂದರು. ಆದರೆ, ಮೋದಿಯವರು ಉತ್ತರಿಸಲಿಲ್ಲ. ಆಗ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಅಹಮದಾಬಾದ್ ನಲ್ಲಿ ನಡೆಸಿದರು. ಕೊರೊನಾ ಕುರಿತು ಯೋಚನೆ ಮಾಡದೆ ಕಾರ್ಯಕ್ರಮ ಮಾಡಿದರು. ಜೊತೆಗೆ, ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರವನ್ನು ಕೆಡವಬೇಕಿತ್ತು. ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಸೆಳೆದಿದ್ದರು. ಅದನ್ನು ಪೂರೈಸಬೇಕಿತ್ತು. ದೇಶವಿದೇಶಗಳಿಂದ ಬರುವವರ ನಿಯಂತ್ರಣ, ಕ್ವಾರಂಟೈನ್ ಕುರಿತು ವಿಚಾರ ಮಾಡಲಿಲ್ಲ ಎಂದರು.
ದಾವಣಗೆರೆಯಲ್ಲಿ ಆರೋಗ್ಯವಂತ ಮಹಿಳೆ ಮಗುವಿಗೆ ಜನ್ಮನೀಡಿದ ನಂತರ ಹೃದಯಾಘಾತದಿಂದ ಬಲಿಯಾಗಲು ಕಾರಣ ಏನು? ಆಗ ಕೊರೊನಾದಿಂದ ಅಲ್ಲ ಎಂದರು. ಆದರೆ, ಈಗ ಕೊರೊನಾದಿಂದ ಎಂದು ಹೇಳುತ್ತಿದ್ದಾರೆ. ಇಟಲಿ ಮೊದಲಾದ ದೇಶಗಳಲ್ಲಿ ಹೆಚ್ಚು ಜನ ಮತ್ತು ಭಾರತದಲ್ಲಿ ಕಡಿಮೆ ಜನ ತೀರಿಹೋದರು. ಮೋದಿಯವರು ಇದನ್ನೇ ಹೇಳುತ್ತಿದ್ದಾರೆ. ಆದರೆ, 2ನೇ ಅಲೆ ವೇಳೆ, ಮೊದಲನೇ ಅಲೆಗಿಂತ ಪ್ರಕೋಪವನ್ನು ಸೃಷ್ಟಿಸಿತು. 2ನೇ ಅಲೆ ಭೀಕರವಾಗಿರುತ್ತದೆ ಎಂಬುದು ಚಿಕ್ಕ ಮಕ್ಕಳಿಗೂ ಗೊತ್ತು. ಆದರೆ, ಮೋದಿಯವರಿಗೆ, ಕೇಂದ್ರ ಸರ್ಕಾರಕ್ಕೆ ಗೊತ್ತಿರಲಿಲ್ಲ. ಮಹಾಭಾರತದ ಯುದ್ಧವನ್ನು 18 ದಿನಗಳಲ್ಲಿ ಗೆದ್ದಂತೆ ನಾವು ಕೊರೊನಾವನ್ನು ಗೆದ್ದಿದ್ದೇವೆ ಎಂದು ಮೋದಿಯವರು ಪ್ರಚಾರ ಮಾಡಿದರು. ಆದ್ದರಿಂದ ಜನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ ಎಂದರು.
ಮೋದಿಯವರನ್ನು ಇವತ್ತು ಬೀದಿಯಲ್ಲಿ ತೆಗಳುತ್ತಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಿಲ್ಲ ಎಂದು ಎಲ್ಲ ಹೇಳುತ್ತಿದ್ದಾರೆ. ಕುಂಭಮೇಳ ಮಾಡದೆ ಇದ್ದರೆ 6 ಲಕ್ಷ ಹಳ್ಳಿಗಳಲ್ಲಿ ಕೊರೊನಾ ಹರಡುತ್ತಿರಲಿಲ್ಲ. ಇನ್ನು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 17 ಬಾರಿ ಮೋದಿಯವರು ಹೋಗಿ ಜನರನ್ನು ಸೇರಿಸಿದರು. ಇದರಿಂದ ಅಲ್ಲಿ ಕೊರೊನಾ ಹಬ್ಬಿತು. ಈ ಎರಡು ಕಾರಣಗಳಿಂದ ಮೋದಿಯವರು ವಿಫಲರಾದರು ಎಂದರು.
ಪಶ್ಚಿಮ ಬಂಗಾಳ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತಾಡಿದ ಮೋದಿಯವರು ಎಲ್ಲಿ ನೋಡಿದರು ಜನಸಾಗರ ಬಂದಿದೆ. ನನಗೆ ಇದನ್ನು ನೋಡಿ ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದರು. ಟಿವಿಯಲ್ಲಿ ಮಾಸ್ಕ್ ಹಾಕಿ, ಅಂತರ ಕಾಪಾಡಿ ಎನ್ನುತ್ತಿದ್ದರು. ಆದರೆ ಬಂಗಾಳದಲ್ಲಿ ಮೇಲಿನಂತೆ ಹೇಳಿದ್ದಕ್ಕೆ ಅವರ ವಿರುದ್ಧ ಜನ ಮಾತಾಡತ್ತಿದ್ದಾರೆ ಎಂದರು.
ಲಖ್ನೋದ ಸ್ಮಶಾನದಲ್ಲಿ 1 ವಾರ ಅಂತ್ಯ ಸಂಸ್ಕಾರಕ್ಕೆ ಸರದಿ ಇತ್ತು. ಗಂಗಾನದಿ ತುಂಬಾ ಪವಿತ್ರ ನದಿ. ಮೋದಿಯವರು 2014ರ ಲೋಕಸಭೆ ಚುನಾವಣೆಯಲ್ಲಿ ನಾನು ಇಲ್ಲಿಗೆ ಬರಲಿಲ್ಲ. ಗಂಗಾ ಮಾತೆಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದರು. ಇದೀಗ ಗಂಗೆಯಲ್ಲಿ ಶವಗಳು ತೇಲಿದವು. ಶೇಖರ್ ಗುಪ್ತಾ ಕಾಲಂನಲ್ಲಿ ಮಡಿದವರಿಗೆ ಧಾರ್ಮಿಕ ಶ್ರದ್ಧಯಿಂದ ನಡೆಸುತ್ತೇವೆ. ಆದರೆ, ಈಗ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗಂಗೆಯಲ್ಲಿ ಶವಗಳನ್ನು ತೇಳಲಿಬಿಡುತ್ತಿದ್ದಾರೆ ಎಂದಿದ್ದಾರೆ ಎಂದರು.
ಉತ್ತರಪ್ರದೇಶ, ಬಿಹಾರದಲ್ಲಿ ಅತಿಹೆಚ್ಚು ಸಾವುಗಳಾಗಿವೆ. ಜನರ ಸಂಕಷ್ಟ್ಟಗಳಿಂದ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಶವಗಳನ್ನು ನದಿಗೆ ಬಿಡುತ್ತಿದ್ದಾರೆ. ಜಾಗತಿಕ ಮಟ್ಟದ ಎಲ್ಲ ಪತ್ರಿಕೆಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿವೆ. ಲ್ಯಾನ್ಸೆಟ್ ಪತ್ರಿಕೆಯ ವರದಿಯಲ್ಲಿ ಮೋದಿಯವರ ಸಂಪೂರ್ಣ ವೈಫಲ್ಯ ಕಾಣುತ್ತದೆ ಎಂದಿತು. ಮೋದಿಯವರ ವೈಫಲ್ಯತೆ ಎದ್ದುಕಾಣುತ್ತಿದೆ ಎಂದು ಪತ್ರಿಕೆಗಳು ವರದಿ ಮಾಡಿದವು. ಇಷ್ಟೆಲ್ಲ ಕಷ್ಟವಿದ್ದಾಗ ಮೋದಿ ಕಾಣಿಸಿಕೊಳ್ಳುವುದಿಲ್ಲ. ನೋಟು ನಿಷೇಧ ಸಮದಯದಲ್ಲಿ 150 ಜನ ಸತ್ತಾಗ, ಜಿಎಸ್ ಟಿ ಸಮಯದಲ್ಲಿ ಉದ್ಯೋಗ ನಷ್ಟವಾದಾಗ ಕಾಣಿಸಿಕೊಳ್ಳಲಿಲ್ಲ. 2ನೇ ಅಲೆ ತೀವ್ರವಾಗಿ ಜನ ಸಾಯುತ್ತಿದ್ದಾಗ ಬರಲಿಲ್ಲ. ಕಡಿಮೆಯಾದಾಗ ಬಂದರು ಎಂದರು.
ಅವರಿಗೆ ಕಪ್ಪುಹಣ ವಾಪಸ್ ಬಂದದ್ದು, ಜಿ ಎಸ್ ಟಿ ಯಿಂದ ಮುಚ್ಚಿಹೋಗುವ ಕಾರ್ಖಾನೆಗಳೆಷ್ಟು, ಕೊರೊನಾ ಮೊದಲ ಅಲೆಯಲ್ಲಿ ಜನ ಹೇಗೆ ಮನೆ ತಲುಪುತ್ತಾರೆ, 2ನೇ ಅಲೆ ಲಾಕ್ ಡೌನ್ ಯಾವಾಗ ನಿಲ್ಲಿಸಬೇಕು ಗೊತ್ತಿಲ್ಲ. ಆಡಳಿತ ನಡೆಸುವ ವಿಚಾರದಲ್ಲಿ ಎ ಬಿ ಸಿ ಡಿ ಗೊತ್ತಿಲ್ಲದವರು ಅಧಿಕಾರದಲ್ಲಿದ್ದಾರೆ. ಇದಕ್ಕೆಲ್ಲ ಕಾರಣಕರ್ತ ನಾನೇ. ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಲಿಲ್ಲ. ಇಂತ ದುರಂತ ಬೇರೆ ಸರ್ಕಾರಗಳ ಅವಧಿಯಲ್ಲಿ ನಡೆದಿದ್ದರೆ ಸುದ್ದಿ ಸಂಸ್ಥೆಗಳು ಪ್ರಶ್ನಿಸಿಲ್ಲ. ಮೋದಿಯವರು ಇದುವರೆಗೆ ಒಂದೇ ಒಂದು ಸುದ್ದಿ ಗೋಷ್ಠಿಯನ್ನು ನಡೆಸಿಲ್ಲ… ದೇಶದಲ್ಲಿ ಪ್ರಗತಿ ನಿಂತು ಹೋಗಿದೆ. ಶೇ. 10.3ರಷ್ಟು ಇದ್ದ ಜಿಡಿಪಿ ದರ -7ಕ್ಕೆ ಕುಸಿದಿದೆ. ಇದರ ಶ್ರೇಯವನ್ನು ಮೋದಿಯವರಿಗೆ ಕೊಡಬೇಕು ಎಂದರು.
ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ವಿಶ್ರಾಂತ ಕುಲಪತಿ, ರಾಜಕೀಯ ವಿಶ್ಲೇಷಕ ಡಾ. ಮುಜಫರ್ ಅಸಾದಿ, 1947ರಲ್ಲಿ ನಾವು ಹೇಗಿದ್ದೆವು, ಇಂದು ಎಲ್ಲಿಗೆ ಬಂದಿದ್ದೇವೆ ಎಂಬುದರಲ್ಲಿ ನೆಹರು ಅವರ ಮಾಹಾನ್ ಕೊಡುಗೆ ಇದೆ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ನಾವು ಅತ್ಯಂತ ಹಿಂದುಳಿದ, ಶೇ. 90ರಷ್ಟು ಬಡವರಿದ್ದ ಜನ, ತೀವ್ರವಾದ ಘರ್ಷಣೆ ಇದ್ದ ದೇಶವಾಗಿತ್ತು. ಕೋಮುಗಲಭೆ ಇದ್ದ ಸಂದರ್ಭವಾಗಿತ್ತು ಎಂದರು.
1947ರಲ್ಲಿ ನೆಹರು ಅವರು ಯೋಜನೆ ಮಾಡಿ ಯಶಸ್ವಿಗೊಳಿಸಿದರು. ಅಂಬೇಡ್ಕರ್ – ಗಾಂಧಿ ನಡುವೆ ಘರ್ಷಣೆ ನಡೆಯಿತು. ಇಬ್ಬರನ್ನೂ ಒಟ್ಟಿಗೆ ನೆಹರು ಕೊಂಡೊಯ್ಯಬಲ್ಲ ಸಾಮರ್ಥ್ಯವಿದ್ದವರು. ಇಬ್ಬರ ವೈರುಧ್ಯವನ್ನು ಆತ್ಮೀಯ ಶತೃತ್ವ ಎನ್ನುತ್ತಾರೆ. ಅಂಬೇಡ್ಕರ್ ಅವರನ್ನು ಸಚಿವರನ್ನಾಗಿಸುತ್ತಾರೆ. ಡೈರೆಕ್ಟಿವ್ ಪ್ರಿನ್ಸಿಪಲ್ ಅನ್ನು ಜಾರಿಗೆ ತಂದರು. ಜನಸಂಘದ ವ್ಯಕ್ತಿ, ತಮಿಳುನಾಡಿನವರು ಸರ್ಕಾರದಲ್ಲಿ ಅಧಿಕಾರದಲ್ಲಿದ್ದರು. ನೆಹರು ಅವರಿಗೆ ವಿಷನ್ ಇತ್ತು. ಮಾತುಕತೆಯಲ್ಲಿ ಅವರಿಗೆ ನಂಬಿಕೆ ಇತ್ತು. ಹೊಸರಾಷ್ಟ್ರ ಕಟ್ಟುವ ಕ್ರಿಯೆಯಲ್ಲಿ ಇದು ಅಗತ್ಯವಾಗಿತ್ತು. ಇಂದಿನ ಸಂದರ್ಭದಲ್ಲಿ ಕೂಡ ರಾಷ್ಟ್ರೀಯ ಸರ್ಕಾರ ಅವಶ್ಯಕತೆ ಇತ್ತು. ಇಂತಹ ಕುರಿತು ಚರ್ಚೆ ಕೂಡ ನಡೆಯಲಿಲ್ಲ. ನಡೆದಿದ್ದರೆ ವಿಪಕ್ಷಗಳಿಂದ ಸಲಹೆ ಬರುತ್ತಿತ್ತು. ಈಗಾಗಲೇ ವಿಪಕ್ಷಗಳು ಅನೇಕ ಸಂಗತಿ ಹೇಳಿವೆ ಎಂದರು.
ಕೊರೊನಾ ಸಂಕಷ್ಟಗಳ ಕುರಿತು ರಾಹುಲ್ ಗಾಂಧಿ ನಾಸ್ಟ್ರಡಾಮಸ್ ತರ ಭವಿಷ್ಯ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಖಾಸಗಿಯವರ ಪಾಲಾಗಿರುವುದರಿಂದ ಸಂಪೂರ್ಣ ಕುಸಿದಿದೆ. ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಕೊಡುವುದರ ಪಾಲು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ನೆಹರು ಅವರನ್ನು ನೆನಪಿಸಿಕೊಳ್ಳಬೇಕು ಎಂದರು.
ಗಾಂಧಿಯ ಪರಿಕಲ್ಪನೆಯಲ್ಲಿ ಸಾಂಕ್ರಮಿಕ ರೋಗದ ಕುರಿತು ಚಿಂತನೆಗಳಿದ್ದವು. ಮದ್ರಾಸ್ ನಲ್ಲಿ ಸಾಂಕ್ರಮಿಕ ರೋಗ ಬಂದಾಗ ಗಾಂಧಿ ದಲಿತರ ಕೇರಿಗೆ ಹೋದರು. ಸಾಂಕ್ರಮಿಕ ರೋಗಳಿಂದ ವ್ಯಕ್ತಿ ಬಳಲಿದರೆ ಗಾಂಧಿ ವ್ಯಕ್ತಿಯ ಮನೆಗೆ, ಹಳ್ಳಿಗಳಿಗೆ ಹೋಗುತ್ತಿದ್ದರು. ಜನರನ್ನು ಭೇಟಿಯಾಗುತ್ತಿದ್ದರು. ಅದು ಸಾಂತ್ವನದ ರೀತಿ ಇರುತ್ತಿತ್ತು. ಜನರಿಗೆ ಸಾಂತ್ವನವನ್ನು ಹೇಳಬೇಕಿತ್ತು. ಬೇರೆಬೇರೆ ಸಮುದಾಯಗಳನ್ನು ಭೇಟಿಯಾಗಬೇಕಿತ್ತು. ಸರ್ಕಾರ ಬಡವರ, ಕೂಲಿಕಾರರ ಬಳಿ ಹೋಗಬೇಕಿತ್ತು. ಹೋಗಿ ಕೇವಲ ಅಕ್ಕಿ ಕೊಡುವುದಲ್ಲ. ಕೇರಳ ಸರ್ಕಾರ ಕೊಟ್ಟ ರೀತಿಯಲ್ಲಿ ಕಿಟ್ ನಲ್ಲಿ ಎಲ್ಲವನ್ನೂ ಕೊಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ದುರಂತದ ಸಮಯದಲ್ಲಿ ಆರ್ಥಿಕತೆಯನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಮುಖ್ಯ. ನಮ್ಮಂತಹ ಮೇಷ್ಟ್ರುಗಳ, ಮಧ್ಯಮ ವರ್ಗದವರ, ದೊಡ್ಡ ಕೈಗಾರಿಕೋದ್ಯಮಿಗಳ ಆರ್ಥಿಕತೆ ಕುಸಿಯುವುದಿಲ್ಲ. ಈಗ ಇಬ್ಬರು ಮಾತ್ರ ಶ್ರೀಮಂತರಾದರೆ, ಬಡವರು ಇನ್ನಷ್ಟು ಬಡವರಾದರು. ಕೂಲಿ ಸಿಗಲಿಲ್ಲ, ಹಸಿವಿನಿಂದ ಸತ್ತರು, ಕೆಲವರ ಸ್ಥಿತಿ ಹೇಗಿತ್ತೆಂದರೆ ಕಸ, ಎಲೆಯನ್ನು ತಿಂದು ಬದುಕುವ ಭಯಾನಕ ಸ್ಥಿತಿ ಬಂತು. ಆರ್ಥಿಕತೆ ದುರಸ್ತಿಯಾಗುವುದೇ ಇಲ್ಲ ಎಂದಾದರೆ, 5 ಟ್ರಿಲಿಯನ್ ದೇಶವನ್ನಾಗಿಸುವುದು ಕಷ್ಟ ಎಂದರು.
ಉಳಿದ ದೇಶಗಳಿಗೆ ಹೋಲಿಸಿದರೆ ಆರ್ಥಿಕವಾಗಿ ಸೂಪರ್ ಪವರ್ ಆಗುವ ಅವಕಾಶ ಭಾರತಕ್ಕೆ ಇತ್ತು. ಆದರೆ, ಶೇ. 20ರಷ್ಟು ಜನ 1 ಡಾಲರ್ ಬಳಸಿ ಬದುಕುತ್ತಿದ್ದಾರೆ ಎಂಬ ವರದಿ ಇದೆ. ಇದನ್ನು ಎರಡು ರೀತಿಯಲ್ಲಿ ಅಡ್ರೆಸ್ ಮಾಡಬೇಕಿತ್ತು. ಜನರ ಕೈಯಲ್ಲಿ ಹಣ ಇರಬೇಕೇ ಬೇಡವೇ? ಜನರ ಕೈಯಲ್ಲಿ ಹಣವಿದ್ದರೆ ಎಷ್ಟು ಎಂಬುದು ಮುಖ್ಯ. ಯಡಿಯೂರಪ್ಪ ಹಣ ಘೋಷಿಸಿದ್ದಾರೆ. ಆದರೆ ಅದು ತಲುಪುತ್ತದೆಯೇ? ಎಂದರು.
ಜನರ ಕೈಯಲ್ಲಿ ಹಣ ಇರಬೇಕು. ಜರ್ಮನಿಯಲ್ಲಿ ಆರ್ಥಿಕತೆ ಕುಸಿದಿಲ್ಲ. ಅದರ ಮಾದರಿಯನ್ನು ಅಳವಡಿಸಬೇಕಿತ್ತು. ಕಿಟ್ ಅನ್ನು ಕೇರಳ ಮಾದರಿಯಲ್ಲಿ ಕೊಡಬೇಕಿತ್ತು. ಮಧ್ಯಪ್ರಾಚ್ಯ ದೇಶಗಳ ಆರ್ಥಿಕತೆ ಕುಸಿದಿಲ್ಲ. ಜರ್ಮನಿಯಲ್ಲಿ ಕಾಯಕಲ್ಪ ಕೊಡಲಾಗಿದೆ. ಮನೆಯಲ್ಲಿದ್ದವರೆಲ್ಲರಿಗೂ ಬಾಡಿಗೆ ಕೊಡುವಂತಿಲ್ಲ. ಕೊಡುವುದಾದರೆ 2 ವರ್ಷದ ನಂತರ, ಕೊರೊನಾ ಇಳಿದ ನಂತರ ಎಂದು ನಿಯಮ ಮಾಡಿತು. ಜೊತೆಗೆ, ಜನರಿಗೆ ಕಡಿಮೆ ಬಡ್ಡಿದರ, ಶೂನ್ಯ ಬಡ್ಡಿಯಲ್ಲಿ ಸಾಲ ನೀಡಿತು ಎಂದರು.
ಮಧ್ಯಮ ಕೈಗಾರಿಕೆಗಳಿಗೆ ಸಾಲ ಕೊಟ್ಟರೆ ಜನ ನಿರುದ್ಯೋಗಿಗಳಾಗುವುದಿಲ್ಲ. ಕೊರೊನಾ ಸಮಯದಲ್ಲಿ ನಿರುದ್ಯೋಗ ಹೆಚ್ಚಿತು. ಸಂಬಳ ಕಡಿತವಾಯಿತು. ಆರ್ಥಿಕ ಪರಿಸ್ಥಿತಿ ಸಂಕಷ್ಟಕರವಾಯಿತು. ದೈನಂದಿನ ಕರ್ಚಿಗಾಗಿ ಹಣ ಇಲ್ಲವಾಯಿತು. ಕೆಳಸ್ತರದ ಸಮುದಾಯಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ ಹಣ ಕೊಡಬೇಕಿತ್ತು. ತಿಂಗಳಿಗೆ ಬರುತ್ತಿದ್ದ ಹಣವನ್ನು ಕೊಡಬೇಕಿತ್ತು. ಆಗ ಆರ್ಥಿಕತೆ ಉಳಿಯುತ್ತಿತ್ತು. ನಮ್ಮ ಜಿಡಿಪಿ ಬಹಳ ಹಿಂದಕ್ಕೆ ಹೋಗಿದೆ. ಅದನ್ನು ಸಹಜ ಸ್ಥಿತಿಗೆ ತರುವುದು ಬಹಳ ಕಷ್ಟ ಎಂದರು.
ನಾವು ಶಿಕ್ಷಣ ವ್ಯವಸ್ಥೆಯ ಕುರಿತು ಮಾತೇ ಆಡಲಿಲ್ಲ. ಪಾಠ ಕೇಳದೆ, ಪರೀಕ್ಷೆ ಬರೆಯದೆ ಪಾಸ್ ಮಾಡಲಾಯಿತು. ಇದು ದುರಂತ. ಸಾರ್ವಜನಿಕ ಆರೋಗ್ಯದ ಸ್ಥಳದಲ್ಲಿ ಖಾಸಗಿಯವರಿಗೆ ಅವಕಾಶ ಕೊಡಲಾಯಿತು. ಈ ಸಮಯದಲ್ಲಿ ಕೆಲವು ಮಾಧ್ಯಮಗಳು ಡೊಗ್ಗಿ ಸಲಾಂ ಹೊಡೆಯುವ ಕೆಲಸ ಮಾಡದೆ ಎಚ್ಚರಿಸುವ ಕೆಲಸವನ್ನು ಮಾಡಿದವು. ವಾಸ್ತವ ಸಂಗತಿಯನ್ನು ಜನರೆದುರು ಇಡಲಾಯಿತು ಎಂದರು.
ಮಾಧ್ಯಮಗಳು ರಾಷ್ಟ್ರೀಯ ಸರ್ಕಾರದ ಕುರಿತು ಮಾತಾಡಲಿಲ್ಲ. ಇದು ಮಾಧ್ಯಮದ ದುರಂತ. ಜನರ ಕೈಯಲ್ಲಿ ಹಣ ಇರಬೇಕು ಎಂದು ಮಾಧ್ಯಮಗಳು ಹೇಳಲಿಲ್ಲ. ಕೋವಿಡ್ ಸಮಯದಲ್ಲಿ ಸಮುದಾಯಗಳು ಭಾಗಿಯಾಗಬೇಕು. ನಾಗರಿಕ ಸಮಾಜ ಜನರೊಂದಿಗೆ ನೇರವಾಗಿ ಸಂಪರ್ಕದಲ್ಲಿರುತ್ತದೆ. ಆದರೆ, ನಾಗರಿಕ ಸಮಾಜವನ್ನು ಹೊರಗಿಡಲಾಯಿತು. ಕೊರೊನಾ ಹಳ್ಳಿಗಳಿಗೆ ಹೋಗಬಾರದು ಎಂದು ಹೇಳಲಾಯಿತು. ಆದರೆ ಮಾಧ್ಯಮಗಳು ಮೊದಲ ಅಲೆಯಲ್ಲಿ ಒಬ್ಬ ಅಪ್ಪನನ್ನು ಹುಟ್ಟಿಸಿದವು. ಒಂದು ಜಾತಿ, ಧರ್ಮವನ್ನು ನೀಡಿ ತಬ್ಲೀಘಿ ಎನ್ನಲಾಯಿತು. ಇದರಿಂದ ಕಮ್ಯೂನಲೈಸ್ ಆಯಿತು. ಸರ್ಕಾರವನ್ನು ಪರಿಣಾಮಕಾರಿಗೊಳಿಸಬೇಕಿತ್ತು. ವಿತರಣೆ ದುರಂತವನ್ನು ವಿವರಿಸಬೇಕಿತ್ತು. ಆದರೆ ಅದನ್ನೆಲ್ಲ ಬಿಟ್ಟು ಜಾತಿ, ಧರ್ಮವನ್ನು ಕೊರೊನಾಗೆ ಇಡೀ ಗುಂಪು ಕೊಟ್ಟಿತು ಎಂದರು.
ಸಾವಿರಾರು ಜನ ನಡೆದುಹೋಗಬೇಕಾದರೆ ಸುಪ್ರೀಂ ಕೋರ್ಟ್ ಗೆ ಒಬ್ಬರೂ ನಡೆದು ಹೋಗುತ್ತಿಲ್ಲ ಎಂದು ಹೇಳಲಾಯಿತು. ಇಂತಹ ಸಮಯದಲ್ಲಿ ಆರ್ಥಿಕ ವಿಷಯವನ್ನು ಬಿಟ್ಟು ಬೇರೆ ವಿಷಯಗಳಿಗೆ ಹೋಗಬಾರದಿತ್ತು. ಇದರಿಂದಾಗಿ 2ನೇ ಅಲೆಯಲ್ಲಿ ಯಾವ ಶತೃಗಳು ಸಿಗಲಿಲ್ಲ. ಚೀನಾ ಬಯೋ ವಾರ್ ನಡೆಸುತ್ತಿದೆ ಎಂದು ಹೇಳಲಾಯಿತು. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. 2ನೇ ಅಲೆ ತೀವ್ರ ಸಾವಿನ ಅಲೆಯಾಗಿತ್ತು. ಆಗ ಚೀನಾ ವಿರೋಧ ನರೇಟಿವ್ ಅನ್ನು ನಂಬಿಸಲು ಆಗಲಿಲ್ಲ ಎಂದರು.
ವಿಮರ್ಶಾತ್ಮಕ ಮಾಧ್ಯಮಗಳಿವೆ. ಅವು ತೀಕ್ಷ್ಣವಾಗಿ ಹೇಳಿದವು. ಇದರಿಂದ ಕೆಲ ಸುಧಾರಣೆಗಳು ಕಂಡುಬಂದವು. ಕೋರ್ಟ್ ಕುರಿತು ಅತ್ಯಂತ ಗೌರವ ಬಂದಿದೆ. ಸರ್ಕಾರದ ವಿಮರ್ಶಕ, ಟೀಕಾಕಾರ, ಕಾನೂನು ಸಲಹೆ ಮಾತ್ರವಲ್ಲ, ನಿರ್ದೇಶನಗಳನ್ನು ಕೋರ್ಟ್ ಗಳು ನೀಡಿದವು. ಉದಾಹರಣೆಗೆ ಲಸಿಕೆ. ಈ ಬಿಕ್ಕಟ್ಟಿನ ನಿರ್ವಹಣೆಗೆ ಕಾಯಕಲ್ಪ ಸಿಕ್ಕಿತು. ವಿಪಕ್ಷಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ಸೋತವು. ದೇಶ ದುಃಸ್ಥಿತಿಗೆ ಹೋಗುವಾಗ ಅದನ್ನು ತಡೆಯಬೇಕಿತ್ತು ಎಂದರು.
ನೆಹರು ರಾಷ್ಟ್ರ ಕಲ್ಪನೆಯ ರಾಷ್ಟ್ರ 2000ನೇ ಇಸವಿಯವರೆಗೆ ಮುಂದುವರೆದಿತ್ತು, ಅವರ ಕಲ್ಪನೆಯ ಸಮಯದಲ್ಲಿ ರಾಷ್ಟ್ರೀಯ ಸರ್ಕಾರವಿತ್ತು. ನೆಹರು ಸರ್ಕಾರದಲ್ಲಿ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಚರ್ಚೆಯಲ್ಲಿ ಅತ್ಯಂತ ಪ್ರಬುದ್ಧ ವ್ಯಕ್ತಿಗಳಿದ್ದರು. ಈಗ ಕೂಡ ಅಂತಹ ಪ್ರಬುದ್ಧರು ಇರಬೇಕಿತ್ತು. ಅದೇ ರೀತಿಯಲ್ಲಿ ವಿಪಕ್ಷಗಳೂ ಕೆಲಸ ಮಾಡಬೇಕಿತ್ತು. ನಮ್ಮ ಇತಿಹಾಸ ಬಡತನ, ಕೋಮುವಾದದಿಂದ ಶುರುವಾಗುತ್ತದೆ. ನಾವು ಅದನ್ನು ಮರುಕಳಿಸಲು ಅವಕಾಶಕೊಡಬಾರದು. ನೆಹರು ಕಲ್ಪನೆಯ ರಾಷ್ಟ್ರವನ್ನು ನಾನು ಕೈಬಿಡಬಾರದು ಎಂದರು.
ವೆಬಿನಾರ್ ನ ನಿರ್ವಹಣೆಯನ್ನು ನಮ್ಮ ಧ್ವನಿ ತಂಡದ ಪುನೀತ್ ರುದ್ರು ನೆರವೇರಿಸಿದರು. ಪ್ರಶ್ನೋತ್ತರಗಳಲ್ಲಿ ಡಾ. ಗಿರೀಶ್ ಮೂಡ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಕಟ್ಟೀಮನಿಯವರು ಬಸವಣ್ಣ ರಚಿಸಿರುವ ಕಲ್ಲ ನಾಗರ ಕಂಡರೆ ವಚನ ಮತ್ತು ನೀ ಹೋದ ಮರುದಿನ ಮೊದಲಂಗ ನಮ್ಮ ಬದುಕು ಆಗೇದೋ ಬಾಬಾ ಸಾಹೇಬ ಗೀತೆಯನ್ನು ಹಾಡಿದರು.