June 10, 2026 5:48 am

ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು

ಬೆಂಗಳೂರು: ದತ್ತಾಂಶವಿಲ್ಲದೆ ಏನನ್ನು ಬೇಕಾದರೂ ಮಾತಾಡುವುದು ಸರಿಯಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕತೆ ಹೇಗಿದೆ ಎಂದು ಗಮನಿಸಬೇಕು. ಆದರೆ, ಕೋವಿಡ್ ಎಲ್ಲದಕ್ಕೂ ಕಾರಣ ಎಂಬ ವಾದವಿದೆ. ಅದು ಸರಿಯಲ್ಲ. ಕೋವಿಡ್ ಪೂರ್ವದಲ್ಲೇ ಆರ್ಥಿಕತೆ ಕುಸಿದು ಜಾರಿ ಕೆಳಗೆ ಬಿದ್ದಿತ್ತು ಎಂದು ಬೆಂಗಳೂರಿನ ಆಹಾರ ಮತ್ತು ಆರ್ಥಿಕ ತಜ್ಞ ಕೆ.ಸಿ.ರಘು ಅಭಿಪ್ರಾಯಪಟ್ಟರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ “ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು” ವಿಚಾರ ಸಂಕಿರಣದಲ್ಲಿ ಮಾತಾಡಿದ ಅವರು, 2020ರಲ್ಲಿ ಜಿಡಿಪಿ ದರ 4ಕ್ಕೆ ಕುಸಿದಿತ್ತು. ಡಬಲ್ ಡಿಜಿಟ್ ಜಿಡಿಪಿ ತರುತ್ತೇವೆ ಎಂದಿದ್ದರು. ಆದರೆ ಆರ್ಥಿಕತೆ ಕುಸಿದು ಬಿದ್ದಿತ್ತು ಎಂದರು.

ಜನರಿಗೆ ಆರ್ಥಿಕ ನೆರವು ನೀಡುವಲ್ಲಿ ದೇಶ ಸೋತಿತು. ಅಮೆರಿಕ ಸಿರಿವಂತ ದೇಶವಾದರು ಖಾತೆಗೆ ಹಣ ಹಾಕಲಾಯಿತು. ದೇಶದಲ್ಲಿ ಜನಧನ್ ಖಾತೆಗಳಿಗೆ ಹಣ ಹಾಕಲಾಗಿದೆ. ಗೋಡೌನ್ ನಲ್ಲಿ ಕೊಳೆಯುತ್ತಿದ್ದ ಧಾನ್ಯಗಳನ್ನು ಕೊಟ್ಟಿದ್ದಾರೆ. ಯಾವ ದೇಶದಲ್ಲಿ ಗೋದಾಮಿನಲ್ಲಿ ಆಹಾರ ಧಾನ್ಯ ತುಂಬಿತುಳುಕುತ್ತಿದೆಯೋ ಆ ದೇಶದಲ್ಲಿ ಬಡವರು ಇರುತ್ತಾರೆ ಎಂಬ ಮಾತಿದೆ. ದೇಶದಲ್ಲಿ 90 ಮಿಲಿಯನ್ ಟನ್ ದಾಸ್ತಾನಿತ್ತು. ಸರ್ಕಾರವೇ 15 ಮಿಲಿಯನ್ ಟನ್ ಅನ್ನು ಹರಾಜು ಹಾಕಿತು. ಆದ್ದರಿಂದ ಆಹಾರ ಧಾನ್ಯಗಳನ್ನು ಕೊಟ್ಟದ್ದನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ. ಇದನ್ನು ಹೊರತುಪಡಿಸಿ ಏನನ್ನೂ ವಿತರಿಸಿಲ್ಲ ಎಂದರು.

ಕಳೆದ ವರ್ಷ 1.63 ಲಕ್ಷ ಕೋಟಿ ಹಣವನ್ನು ಇಂಧನ ತೆರಿಗೆಯಲ್ಲಿ ಜನರಿಂದ ಸಂಗ್ರಹಿಸಲಾಗಿದೆ. ಜಿಡಿಪಿ ದರ 7.3% ಬಿದ್ದಿದೆ. ಇಂಧನದ ಮೇಲಿನ ತೆರಿಗೆ 65% ಏರಿತು. ಇದರಲ್ಲಿ ರಾಜ್ಯಗಳ ಪಾಲನ್ನು ಕೊಡಲಿಲ್ಲ. ಕೇಂದ್ರವೇ ಬಳಸಿಕೊಂಡಿತು. ಕೊರೊನಾ ಸಮಯದಲ್ಲಿ ಸರ್ಕಾರ ಜನರಿಗೆ ಏನಾದರೂ ಮಾಡಿತೆ ಎಂದರೆ ಇಲ್ಲ ಎನ್ನಬೇಕಾಗುತ್ತದೆ ಎಂದರು.

ಮಧ್ಯಮ, ಲಘು ಉದ್ಯಮಗಳಿಗೆ 3 ಲಕ್ಷ ಕೋಟಿಯನ್ನು ಸಣ್ಣ ಉದ್ಯಮಿಗಳಿಗೆ ಕೊಡಬೇಕಿತ್ತು. ಕೊಡಲಿಲ್ಲ. 6.30 ಲಕ್ಷ  ಉದ್ಯಮಗಳ ಪೈಕಿ 2 ಲಕ್ಷ ಉದ್ಯಮಗಳಿಗೆ ಹಣ ಕೊಡಲಾಯಿತು. 500 ಕೋಟಿ ವಹಿವಾಟು ಇರುವ ಉದ್ಯಮಗಳಿಗೆ ನೆರವು ಕೊಡಲಾಯಿತು. 1.5 ಲಕ್ಷ ಕೋಟಿ ಬಿಡುಗಡೆಯಾಗಿದೆ, ಇನ್ನು ಕೆಲವಕ್ಕೆ ಬಿಡುಗಡೆಯಾಗಿಲ್ಲ. ನಿಜಕ್ಕೂ ಜನರಿಗೆ ಅನುಕೂಲವಾಗಿಲ್ಲ ಎಂದರು.

ಕಳೆದ ಬಜೆಟ್ ನಲ್ಲಿ ನೀರು ಸರಬರಾಜನ್ನು ಆರೋಗ್ಯ ಕ್ಷೇತ್ರಕ್ಕೆ ಸೇರಿಸಿ 60,000 ಕೋಟಿ ಎಂದು ಲೆಕ್ಕ ಹಾಕಿದರು. ಇದು ವಾಸ್ತವದಲ್ಲಿ ಆರೋಗ್ಯ ಕ್ಷೇತ್ರವಲ್ಲ. ಜನಸಾಮಾನ್ಯರ ಸ್ಥಿತಿ ಅಧೋಗತಿಯಲ್ಲಿದೆ. ಚಿನ್ನವನ್ನು ಅಡವಿಟ್ಟು ಬದುಕುವವರ ಸಂಖ್ಯೆ 70% ಏರಿಕೆಯಾಗಿದೆ. ಬೃಹತ್ ಪ್ರಮಾಣದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿನ್ನ ಅಡ ಇಡುವ ಪರಿಸ್ಥಿತಿ ಏಕಿದೆ ಎಂದರೆ, ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿದೆ ಎಂದರ್ಥ ಎಂದರು.

ಸರ್ಕಾರ ಸುಮಾರು 48 ಕೋಟಿ ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಫಾರ್ಮಲ್ ಉದ್ಯೋಗಿಗಳು 6 ಕೋಟಿ. ಇವರಿಗೆ ನಿಮ್ಮ ಭವಿಷ್ಯ ನಿಧಿಯಿಂದ ಹಣ ಪಡೆದುಕೊಳ್ಳಿ ಎಂದು ಕೇಂದ್ರ ಅವಕಾಶ ನೀಡಿತು. 1.42 ಲಕ್ಷ ಜನ 1.3 ಲಕ್ಷ ಕೋಟಿ ಹಣವನ್ನು ವಾಪಸ್ ಪಡೆದರು. ಅವರ ಭವಿಷ್ಯದ ಕತೆ ಏನು? ಇದು ಕೇಂದ್ರದ ನೆರವಲ್ಲ. 2020ರಲ್ಲಿ 8 ಕೋಟಿ ಭಾರತೀಯರು ಬಡತನ ರೇಖೆಯಿಂದ, 4 ಕೋಟಿ ಜನ ಮಧ್ಯಮ ವರ್ಗದಿಂದ ಕೆಳ ಮಧ್ಯಮ ವರ್ಗಕ್ಕೆ ಜಾರಿದ್ದಾರೆ ಎಂದರು.

ಜನಸಾಮಾನ್ಯರು, ಮಹಿಳೆಯರು ಅತಿಹೆಚ್ಚು ಸಂಖ್ಯೆಯಲ್ಲಿ ಕಷ್ಟಕ್ಕೆ ಸಿಕ್ಕಿದ್ದಾರೆ. ಮನೆಯಲ್ಲಿ ಕೆಲಸ ಮಾಡುವವರಿಗೆ ಆದಾಯವಿಲ್ಲ. ಇಂತವರ ಆದಾಯ ಭಾರತದಲ್ಲಿ ಮೊದಲೇ ಕಡಿಮೆ ಇತ್ತು. ಕೊರೋನ ನಂತರ ಮಹಿಳೆಯರ ಆರ್ಥಿಕ ಭಾಗವಹಿಸುವಿಕೆ 17%ಕ್ಕೆ ಕುಸಿದಿದೆ. ಕೊರೊನಾ ನಂತರ ಮಹಿಳೆಯರು ಮನೆಯಲ್ಲೇ ಹೆಚ್ಚಾಗಿ ಉಳಿದಿದ್ದಾರೆ ಎಂದರು.

ಸುಸ್ಥಿರವಾಗಿಲ್ಲದ ಲಘು ಉದ್ಯಮ, ತಳ್ಳುಗಾಡಿ, ಸಣ್ಣ ವ್ಯಾಪಾರಿಗಳಿಗೆ ಕೊರೊನಾ ಸಮಯದಲ್ಲಿ ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಇವರ ಆದಾಯ ದೊಡ್ಡವರಿಗೆ ವರ್ಗಾವಣೆಯಾಯಿತು. ಈ-ಕಾಮರ್ಸ್, ರಿಲಯನ್ಸ್, ಡಿಮಾರ್ಟ್ ಗಳಂತವರು ತಮ್ಮ ಬ್ರಾಂಡ್ ಗಳ ಮಾರಾಟವನ್ನು 40% ಹೆಚ್ಚಿಸಿಕೊಂಡರು. ಸಣ್ಣವರ ಸುಸ್ಥಿರತೆಗೆ ಧಕ್ಕೆಯಾಯಿತು ಎಂದರು.

1.3 ಕೋಟಿ ಕಿರಾಣಿ ಅಂಗಡಿಗಳು ದೇಶದಲ್ಲಿವೆ. ಇವು ಕೊರೊನಾ ನಂತರ ಸಂಕಷ್ಟದಲ್ಲಿವೆ. ಅವರಿಗೆ ಸಮಯಕ್ಕೆ ಸರಿಯಾಗಿ ಸಾಲದ ನೆರವು ಸಿಕ್ಕಿದ್ದರೆ ಬದುಕುತ್ತಿದ್ದವು. ಆದರೆ, ಬ್ಯಾಂಕ್ ಗಳು 5 ಲಕ್ಷ ಕೋಟಿ ಹಣವನ್ನು ಆರ್ ಬಿ ಐ ನಲ್ಲಿ ಕಡಿಮೆ ಬಡ್ಡಿಗೆ ಇಟ್ಟಿವೆ. ಇದರಿಂದ ಜನಸಾಮಾನ್ಯರಿಗೆ ಹಣ ಸಿಗಲಿಲ್ಲ ಎಂದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಇದುವರೆಗೆ ಕೊಟ್ಟಿರುವ ಸಹಾಯಧನ 1.5. ಸಾವಿರ ಕೋಟಿ, 500 ಕೋಟಿ ಎಲ್ಲ ಸೇರಿ 2,300 ಕೋಟಿ ಮೀರಲ್ಲ. ಕೇರಳದಲ್ಲಿ 20,000 ಕೋಟಿ ಕೊಡಲಾಗಿದೆ. 2,300 ಕೋಟಿ ಕೊಟ್ಟು ಇಡೀ ದೇಶದಲ್ಲಿ ಪತ್ರಿಕೆಗಳ ಮುಖಪುಟದಲ್ಲಿ ಪ್ರಚಾರ ಮಾಡಲಾಯಿತು ಎಂದರು.

ಕೋವಿಡ್ ಕೇವಲ 15 ದಿನ ಬಂದು ಹೋಗುವ ರೋಗವಲ್ಲ. ಇದು ಬೇರೆ ರೀತಿಯಲ್ಲೂ ಸಮಸ್ಯೆಯಾಗುತ್ತದೆ. ಜನಸಾಮಾನ್ಯರಿಗೆ ಬಂದು ಹೋಗುವುದಿಲ್ಲ. ಇಂತಹ ಸಮಯದಲ್ಲಿ ಜನರಿಗೆ ಮಾಡಿದ್ದೇನು ಎಂದು ಗಮನಿಸಬೇಕು. ಜೊತೆಗೆ, ಆಹಾರ ಬೆಲೆಗಳು ಜಗತ್ತಿನಾದ್ಯಂತ ಏರಿಕೆಯಾಗಿವೆ. 75,000 ಕೋಟಿಯಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. 18 ಮಿಲಿಯನ್ ಟನ್ ಆಮದು ಮಾಡಿಕೊಂಡು ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಅಡುಗೆ ಎಣ್ಣೆ ಬೆಲೆ 200ರ ಗಡಿ ದಾಟಿದೆ. ದೇಶದಲ್ಲಿ 55ರಷ್ಟು ಫ್ಯಾಟ್ ಡಿಫೆಶಿಯೆನ್ಸಿ ಇದೆ ಎಂದರು.

ಎಂಎಸ್.ಪಿ ಘೋಷಣೆ ಪ್ರಮಾಣ 4 %, ಹಣದುಬ್ಬರ 7%ರಷ್ಟಿದೆ. ರೈತರ, ಕೂಲಿ ಕಾರ್ಮಿಕರ ಆದಾಯವನ್ನು ಪರಿಗಣಿಸಬೇಕು. ನರೇಗ ಬೇರೆ ಮಾರ್ಗಗಳಿಲ್ಲದಿದ್ದಾಗ ಬದುಕಲು ಸಹಾಯಕವಾಗಿದೆ. ನರೇಗಕ್ಕೆ ಬೇಡಿಕೆ ಇದ್ದಷ್ಟು ಹಣವನ್ನು ಬಿಡುಗಡೆ ಮಾಡಲಿಲ್ಲ. ನರೇಗಕ್ಕೆ ಬೇಡಿಕೆ ಹೆಚ್ಚಿದೆ. ಹೀಗಾದರೆ ಗ್ರಾಮೀಣ ಪ್ರದೇಶದವರಿಗೆ ಸಮಸ್ಯೆ ಇದೆ ಎಂದರ್ಥ ಎಂದರು.

ಭಾರತದಲ್ಲಿ 2 ರೀತಿಯ ಸುಳ್ಳು ಲೆಕ್ಕ ಕೊಡಲಾಗುತ್ತಿದೆ. ಹಣ ಮತ್ತು ಹೆಣದ ಲೆಕ್ಕ ಎರಡೂ ಸುಳ್ಳು. ಕರ್ನಾಟಕದಲ್ಲಿ 1 ಲಕ್ಷವಾದರೆ, ದೇಶದಲ್ಲಿ 40 ಲಕ್ಷ ಆಗುತ್ತದೆ. ದೇಶದಲ್ಲಿ 65 ವರ್ಷ ದಾಟಿದವರ ಸಂಖ್ಯೆಯವರು ಬಲಿಯಾಗಿದ್ದಾರೆ ಎನ್ನಲಾಗುತ್ತದೆ. ಭಾರತದಲ್ಲಿ ಇವರು ಕೇವಲ 7ರಷ್ಟಿದ್ದಾರೆ. ಜಗತ್ತಿನ ಸರಾಸರಿಯಷ್ಟು ಭಾರತೀಯರು ಬದಕುವುದಿಲ್ಲ. ಜಗತ್ತಿನಲ್ಲಿ ಭಾರತದಲ್ಲಿ 40ಕ್ಕೆ ಡಯಾಬಿಟಿಸ್ ಶುರುವಾಗುತ್ತದೆ ಎಂದರು.

ಕರ್ನಾಟಕದಲ್ಲಿ ತಾಯಂದಿರ ಸಾವಿನ ಪ್ರಮಾಣಕ್ಕೂ ಕೇರಳಕ್ಕೂ ವ್ಯತ್ಯಾಸವಿದೆ. ಕೇರಳದಲ್ಲಿ ಪ್ರತಿ ಸಾವಿರ ಮಕ್ಕಳ ಪೈಕಿ 25, ಕೇರಳದಲ್ಲಿ 4 ಇದೆ. ಕಳೆದ 5 ವರ್ಷದಲ್ಲಿ ಅಪೌಷ್ಟಿಕತೆ ಕೆಳಗೆ ಇಳಿಯಲಿಲ್ಲ. ತೂಕ, ವಯಸ್ಸು, ಎತ್ತರದಲ್ಲಿ ಭಾರತ ಅತ್ಯಂತ ಕೆಳಗೆ ಇದ್ದೇವೆ. ವಿಶ್ವಗುರು ಎಂದು ಹೇಳುತ್ತೇವೆ. 8 ಲಕ್ಷ ಮಕ್ಕಳು 1 ವರ್ಷ ದಾಟುವುದರೊಳಗೆ ಮಡಿಯುತ್ತವೆ. ಕಳೆದ 5 ವರ್ಷದಲ್ಲಿ ಅಪೌಷ್ಟಿಕತೆ, ಹಸಿವಿನ ಸೂಚ್ಯಂಕ ಇಳಿದಿಲ್ಲ ಎಂದರು.

ದೇಶದಲ್ಲಿ ಆರೋಗ್ಯಕ್ಕೆ 1.5%, ಶಿಕ್ಷಣಕ್ಕೆ 3% ಹಣ ವಿನಿಯೋಗ ದಾಟಲಿಲ್ಲ. ಕರ್ನಾಟಕದಲ್ಲಿ 55%ರಷ್ಟು ಮಕ್ಕಳು ಖಾಸಗಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳನ್ನು ಸರಿಯಾಗಿ ನಿರ್ವಹಿಸಿದರೆ ಅನುಕೂಲವಾಗುತ್ತದೆ. ದೇಶದಲ್ಲಿ ಪ್ರತಿ ತಿಂಗಳು ಕೆಲವರು ಮಾಸಿಕ 1600, ಬಡವರು 900 ರೂ. ಖರ್ಚು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ದೇಶದಲ್ಲಿ ಶೇ. 85ರಷ್ಟು ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಬಣ್ಣಬಣ್ಣದ ಮಾತುಗಳನ್ನು ಇಂದು ಆಡಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದಾಗ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದರು.

ವೆಬಿನಾರ್ ನ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ರಾಜ್ಯಸಭೆ ಸದಸ್ಯ ಡಾ ಸೈಯದ್ ನಾಸೀರ್ ಹುಸೇನ್, ಕೋವಿಡ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಹಿನ್ನಡೆಯಿತು. 5 ಟ್ರಿಲಿಯನ್ ಎಕಾನಮಿ ಗುರಿ ಹಿನ್ನಡೆಯಾಯಿತು.  ಹಣ ಹರಿವು ನಿಂತಾಗ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಅಗತ್ಯವಿರುವ ಜನರಿಗೆ ಹಣವನ್ನು ಕೊಡಬೇಕಿತ್ತು. ಬಹಳ ದೇಶಗಳಲ್ಲಿ ಇದನ್ನು ಸಾಧ್ಯವಾಗಿಸಲಾಯಿತು ಎಂದರು.

ದೇಶದಲ್ಲಿ 20 ಲಕ್ಷ ಕೋಟಿ ಘೋಷಣೆಯಾಯಿತು. ಇದರಿಂದ ಬಡವರಿಗೆ, ಆರ್ಥಿಕತೆಗೆ ಏನಾದರೂ ನೆರವಾಯಿತೇ ಗೊತ್ತಿಲ್ಲ. ಸೆಂಟ್ರಲ್ ವಿಸ್ತಾದಲ್ಲಿ ಹೊಸ ಸಂಸತ್ತು, ಪ್ರಧಾನಿಗೆ ಹೊಸ ಮನೆ ಕಟ್ಟಲಗುತ್ತಿದೆ. ನಮಗೆ ವ್ಯಾಕ್ಸಿನ್, ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಇಂತಹ ಸಮಯದಲ್ಲಿ ನಮ್ಮ ಆದ್ಯತೆಗಳೇನು ಎಂಬುದನ್ನು ನೋಡಬೇಕು ಎಂದರು.

ಮೊದಲನೇ ಅಲೆ ಬಂತು, ಎರಡನೇ ಅಲೆ ನಡೆಯುತ್ತಿದೆ. ದೇಶದ ಆಡಳಿತ ಸನ್ನದ್ಧವಾಗಿತ್ತೇ? ದೇಶದಲ್ಲಿ ಆರಂಭದಲ್ಲಿ ಸಾವಿನ ಸಂಖ್ಯೆ ಕಡಿಮೆ ಇತ್ತು. ನಮ್ಮಲ್ಲಿ ಬೆಡ್, ಆಕ್ಸಿಜನ್, ರೆಮ್ಡಿಸಿವಿರ್ ಇಂಜೆಕ್ಷನ್ ಇರಲಿಲ್ಲ. ಈಗ ಬ್ಲಾಕ್ ಫಂಗಸ್ ಸಮಯದಲ್ಲಿ ಕೂಡ ಇಂತಹ ಪರಿಸ್ಥಿತಿ ಇದೆ. ಹೆಲ್ತ್ ವರ್ಕರ್ಸ್, ವೈದ್ಯರು ಇರಲಿಲ್ಲ. ಇವುಗಳನ್ನು ನಾವು  ಸನ್ನದ್ಧಗೊಳಿಸಲಿಲ್ಲ. 3ನೇ ಅಲೆ ಬರುವ ಸಮಯದಲ್ಲಿ ನಾವು ದೇಶ, ರಾಜ್ಯ ಸನ್ನದ್ಧವಾಗುತ್ತ ಇದ್ದೇವಾ? ಮಕ್ಕಳ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದೇವಾ? ಎಂಬ ಪ್ರಶ್ನೆಗಳಿವೆ ಎಂದರು.

ಆನ್ ಲೈನ್ ಕ್ಲಾಸ್ ನಡೆಯುತ್ತಿರುವ ಸಮಯದಲ್ಲಿ ದೊಡ್ಡ ಸಮೂಹಕ್ಕೆ ತಂತ್ರಜ್ಞಾನದ ಕೊರತೆ ಇದೆ. ದೇಶದ ಜಿಡಿಪಿ ದರ ಬಾಂಗ್ಲಾ ನಮಗಿಂತ ಮುಂದಿದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬಿಪಿಎಲ್, ವಲಸೆ ಕಾರ್ಮಿಕರು, ದಿನಗೂಲಿಗಳು ಸಂಕಷ್ಟದಲ್ಲಿದ್ದಾರೆ ಎಂದರು.

ವೈಯಕ್ತಿಕ ಉದಾಹರಣೆಯನ್ನು ನೀಡಿದ ಅವರು, ಬಳ್ಳಾರಿಯಲ್ಲಿ ತರಕಾರಿ ವಿತರಣೆ ಗೆ ನಾವು ಪ್ರಯತ್ನ ಮಾಡಿದೆವು. 70,000 ಜನರಿಗೆ ತಲುಪಿಸಿದೆವು. ತರಕಾರಿ ವಿತರಿಸುವ ಸಮಯದಲ್ಲಿ ಅಸಹನೆಯ ಪ್ರಮಾಣ ದೊಡ್ಡದಿರುವುದನ್ನು ಕಂಡಿದ್ದೇನೆ. ತರಕಾರಿಗಾಗಿ ಗಂಟೆಗಳ ಕಾಲ ಮಹಿಳೆಯರು, ಗರ್ಭಿಣಿಯರು ಸರದಿಯಲ್ಲಿ ನಿಂತಿದ್ದರು ಎಂದರು.

ಅಲೆಗಳು ಬರುತ್ತಲೇ ಇರುತ್ತವೆ. ನಾವು ಭಾಷಣ ಕೇಳಬೇಕು. ತೆರಿಗೆ ಹಾಕಿಯೇ ಹಾಕುತ್ತೇವೆ ಎಂಬ ಆರೋಗ್ಯಂಟ್ ಸರ್ಕಾರ ಇದೆ. ಸರ್ಕಾರ ಜನರನ್ನು ಸಾಂಕ್ರಮಿಕ ಸಮಯದಲ್ಲಿ ರಕ್ಷಿಸಬೇಕು. ಆದರೆ ಜನರಿಗೆ ಹೆಚ್ಚಿನ ಹೊರೆಯನ್ನು ಹೊರಿಸಲಾಗುತ್ತಿದೆ. 25 ಲಕ್ಷ ಕೋಟಿಯನ್ನು ಕಳೆದ ವರ್ಷದಲ್ಲಿ ತೈಲದ ಮೇಲೆ ಸಂಗ್ರಹಿಸಲಾಗಿದೆ. ಯುಪಿಎ 1, 2 ಸಮಯದಲ್ಲಿ ಪ್ರತಿ ಬ್ಯಾರಲ್ ಕಚ್ಚಾತೈಲ ಬೆಲೆ 140 ಡಾಲರ್ ಇದ್ದಾಗ 65 ರೂ.ಗೆ ಪೆಟ್ರೋಲ್, 55 ರೂ.ಗೆ ಡೀಸೆಲ್ ಮಾರಿದ್ದೆವು. ಈಗ 70 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 100 ರೂ. ಆಗಿದೆ ಎಂದರು.

ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರಲಿ. ಅವರಿಗೆ ದೇಶದ ಜನರ ಮೇಲೆ ಕಾಳಜಿ ಇರಬೇಕು. ನೆರೆಹೊರೆಯವರೊಂದಿಗೆ ಜಗಳ ಆಡುವುದು ಮುಖ್ಯವಲ್ಲ. ಜನರನ್ನು ಇಂತಹ ಪರಿಸ್ಥಿತಿಯಲ್ಲಿ ರಕ್ಷಿಸಬೇಕು. ಉತ್ತಮ ಜೀವನ ಮಟ್ಟವನ್ನು ಸುಧಾರಿಸಬೇಕು. ಇಂತಹ ಸಮಯದಲ್ಲಿ ಕೂಡ ಸರ್ಕಾರ 3ನೇ ಅಲೆಯನ್ನು ನಿರ್ವಹಿಸಲು ಸಜ್ಜಾಗಿಲ್ಲ ಎಂದರು.

ವ್ಯಾಕ್ಸಿನೇಷನ್ ಮಾತ್ರ ಕೊರೊನಾ ನಿಯಂತ್ರಣಕ್ಕೆ ಸಾಧನ. ಬೆಡ್, ವೆಂಟಿಲೇಟರ್ ಕೊಡಬೇಕು. ಆದರೆ, ಅದರ ಜೊತೆಗೆ, ವ್ಯಾಕ್ಸಿನೇಷನ್ ಕೊಡಬೇಕು. ಕಾಲರಾ, ಮಲೇರಿಯಾ, ಸಿಡುಬು, ದಡಾರ, ಪೋಲಿಯೋ ರೋಗಗಳನ್ನು ಸಾರ್ವತ್ರಿಕವಾಗಿ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡಿದ್ದರಿಂದ ನಿಯಂತ್ರಣವಾಗಿದೆ. ಇದಕ್ಕೆ ಎಲ್ಲ ಸರ್ಕಾರಗಳು ಕಾರಣವಾಗಿವೆ ಎಂದರು.

ಕೇಂದ್ರ ಡಿಸೆಂಬರ್ ಹೊತ್ತಿಗೆ ವ್ಯಾಕ್ಸಿನೇಷನ್ ಕೊಡುತ್ತೇವೆ ಎಂದು ಹೇಳುತ್ತದೆ. ಆದರೆ, ಅಷ್ಟರೊಳಗೆ ವ್ಯಾಕ್ಸಿನೇಷನ್ ಉತ್ಪಾದನೆಯೇ ಸಾಧ್ಯವಿಲ್ಲ. ಆತ್ಮನಿರ್ಭರ ಆಗಲೇಬೇಕು. ಆದರೆ, ನಮ್ಮ ದೇಶ ಉದಾರವಾದಿ ಆರ್ಥಿಕತೆಯೆಡೆಗೆ ನಡೆದಿದೆ. ಭಾರತೀಯ ವ್ಯಾಕ್ಸಿನ್ ಜೊತೆ, ವಿದೇಶದ ವ್ಯಾಕ್ಸಿನ್ ಗೆ ಅವಕಾಶ ಕೊಡಬೇಕಿದೆ. ಆಗ ಶೀಘ್ರವಾಗಿ ಎಲ್ಲರಿಗೂ ವ್ಯಾಕ್ಸಿನ್ ಕೊಡಲು ಸಾಧ್ಯವಾಗುತ್ತದೆ ಎಂದರು.  

ಚಲ್ತಾ ಹೈ ಟೈಪ್ ಸರ್ಕಾರ ನಡೆಯುತ್ತಿದೆ. ದೇಶದಲ್ಲಿ 3ನೇ ಅಲೆ ಬರಬಾರದು. ಒಂದುವೇಳೆ ಬಂದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಎಷ್ಟು ಜನ ಬಲಿಯಾಗುತ್ತಾರೋ ಗೊತ್ತಿಲ್ಲ ಎಂದರು.

ವೆಬಿನಾರ್ ನ ನಿರ್ವಹಣೆಯನ್ನು ಮಾನವ ಬಂಧುತ್ವ ವೇದಿಕೆಯ ಬಳ್ಳಾರಿ ಜಿಲ್ಲಾ ಸಂಚಾಲಕ ಇರ್ಫಾನ್ ಮುದಗಲ್ ನೆರವೇರಿಸಿದರು. ಪ್ರಶ್ನೋತ್ತರಗಳಲ್ಲಿ ಡಾ. ಗಿರೀಶ್ ಮೂಡ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಮತ್ತು ಕೈವಲ್ಯ ಬಸವಣ್ಣನ ನುಡಿದರೆ ಮುತ್ತಿನ ಹಾರದಂತಿರಬೇಕು, ವಿಷಯವೆಂಬ ಹಸುರನ್ನ  ವಚನಗಳನ್ನು ಹಾಡಿದರು.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]