ಚಾಮರಾಜನಗರ: ದಿನಾಂಕ 26.02.2022 ಶನಿವಾರದಂದು ವಿದ್ಯುತ್ ಖಾಸಗೀಕರಣದ ವಿರುದ್ಧ ರಾಜ್ಯ ಮಟ್ಟದ ಜನ ಸಮಾವೇಶವನ್ನು ಮಾನವ ಬಂಧುತ್ವ ವೇದಿಕೆ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದೆ.
ಇದೊಂದು ಮಹತ್ವದ ಸಮಾವೇಶವಾಗಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಐತಿಹಾಸಿಕ ದಿನವಾಗಲಿದೆ. ಈ ಸಮಾವೇಶದಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಯ ಎಲ್ಲ ಜನಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಲಿವೆ. ಮಾನವ ಬಂಧುತ್ವ ವೇದಿಕೆಯ ಆಶಯಗಳಂತೆ ಇದು ಸಾಧ್ಯವಾಗಿದೆ.
ಬೃಹತ್ ಮೆರವಣಿಗೆಯಲ್ಲಿ ಮೊದಲಿಗೆ, ದೊಡ್ಡ ರಾಷ್ಟ್ರ ಧ್ವಜ ಹಿಡಿದ ಒಬ್ಬರು, ಸಂವಿಧಾನ ಪೀಠಿಕೆ ಟ್ಟ್ಯಾಬ್ಲೋ, ನಂತರ MBV ಟೀ ಷರ್ಟ್ ಧರಿಸಿದ 100 ಸ್ವಯಂಸೇವಕರು, 200 ಮಹಿಳೆಯರು, ಅಂಬೇಡ್ಕರ್ ಫೋಟೋ ಹಿಡಿದ 100 ಮುಸ್ಲಿಂ ಸ್ವಯಂಸೇವಕರು, ಎತ್ತಿನಗಾಡಿಯಲ್ಲಿ ರೈತರು, ತೆರೆದ ವಾಹನದಲ್ಲಿ ಅತಿಥಿಗಳು, ತಮ್ಮ ವೇಷಭೂಷಣಗಳೊಂದಿಗೆ ತಮ್ಮ ಕಲಾ ಪ್ರದರ್ಶನ ನೀಡುತ್ತಾ ನಡೆಯುವ 100 ಜಾನಪದ ಕಲಾವಿದರು ಹಾಗೂ ಅತಿಥಿಗಳು ಹೆಜ್ಜೆ ಹಾಕಲಿದ್ದಾರೆ. ಇವರು ಮೆರವಣಿಗೆಯ ನಂತರ ಮಧ್ಯಾಹ್ನ ಜಿಲ್ಲಾ MBV ಮತ್ತು ಮಹಿಳಾ ಬಂಧುತ್ವ ಸಮಾವೇಶ ನಡೆಯಲಿವೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರಾದ ಸತೀಶ್ ಜಾರಕಿಹೊಳಿಯವರು ನೆರವೇರಿಸಲಿದ್ದು, ಉರಿಲಿಂಗಪೆದ್ದಿ ಮಠದ ಪೀಠಾಧೀಶರಾದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ಆರ್.ಧ್ರುವ ನಾರಾಯಣ್ ವಹಿಸಲಿದ್ದು, ಹಿರಿಯ ಪತ್ರಕರ್ತ ವೈ.ಗುರುಶಾಂತ್ ವಿಷಯ ಮಂಡಿಸಲಿದ್ದಾರೆ. ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು ವಿದ್ಯುತ್ ಖಾಸಗೀಕರಣ – ರೈತರ ಮರಣ ಶಾಸನ ಕೃತಿಯನ್ನು ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೆಪಿಟಿಸಿಎಲ್ ನೌಕರರ ಸಂಘದ ಮುಖಂಡರಾದ ಡಾ.ಎ.ಆರ್.ಗೋವಿಂದಸ್ವಾಮಿ ಮತ್ತು ಮಾನವ ಬಂಧುತ್ವ ವೇದಿಕೆಯ ಮೈಸೂರು ವಿಭಾಗೀಯ ಸಂಚಾಲಕರಾದ ಡಾ.ಲೀಲಾ ಸಂಪಿಗೆ ಮತ್ತು ಮಾನವ ಬಂಧುತ್ವ ವೇದಿಕೆಯ ಚಾಮರಾಜನಗರ ವಿಭಾಗೀಯ ಸಂಚಾಲಕರಾದ ಸುಭಾಷ್ ಮಾಡ್ರಳ್ಳಿ ಭಾಗವಹಿಸಲಿದ್ದಾರೆ.