ಘಟಪ್ರಭಾ: ನಮ್ಮ ಯುವಕರು ದೇಶವನ್ನು ರಕ್ಷಣೆ ಮಾಡುವ ಸೇನೆ ಮತ್ತು ಸಮಾಜದಲ್ಲಿ ಜನರನ್ನು ರಕ್ಷಣೆ ಮಾಡುವ ಪೊಲೀಸ್ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರಿಗಳನ್ನು ಹಿಡಿದು ದೇಶ ಮತ್ತು ಸಮಾಜ ಸೇವೆ ಮಾಡುವ ಮುಲಕ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ಕುಟುಂಬಗಳನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡರೆ ಸತೀಶ ಜಾರಕಿಹೊಳಿ ಫೌಂಡೇಶನ್ನ ಮೂಲಕ ಮಾಡುತ್ತಿರುವ ಸಮಾಜ ಕಟ್ಟುವ ಕಾರ್ಯದ ಉದ್ದೇಶ ಈಡೇರುತ್ತದೆ, ಯುವಜನರನ್ನು ಉತ್ತಮ ಮಾರ್ಗದಲ್ಲಿ ಸಾಗುವಂತೆ ಮಾಡುವ ನಮ್ಮ ಕೆಲಸಕ್ಕೆ ಮತ್ತಷ್ಟು ಹುಮ್ಮಸ್ಸು ಬಂದಂತಾಗುತ್ತದೆ ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಹೆಳಿದರು.
ಘಟಪ್ರಭದ ಸೇವಾದಳದಲ್ಲಿ ಆರಂಭವಾದ ಆಸಕ್ತ ಯುವಕರಿಗೆ ಹತ್ತು ದಿನಗಳ ಕಾಲ ನಡೆಯುವ ಎರಡನೇ ಬ್ಯಾಚಿನ ಉಚಿತ ಸೇನಾ ಮತ್ತು ಪೊಲೀಸ್ ಕಾನ್ಟೇಬಲ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೇನೆ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಹಾಗೂ ಪೋಲಿಸ್ ಇಲಾಖೆಗೆ ಸೇರುವುದು ನಮ್ಮ ಯುವಕರಿಗೆ ಹೆಮ್ಮೆಯ ವಿಷಯವಾಗಿದೆ ಅದಕ್ಕಾಗಿ ಅವರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರ ಗುರಿ ಸಾಧನೆಗೆ ಸತಿಶ ಜಾರಕಿಹೊಳಿ ಫೌಂಡೇಶನ್ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಇದರ ಸದುಪಯೋಗವನ್ನು ಎಲ್ಲ ಯುವಕರು ಪಡೆದುಕೊಳ್ಳುವಂತಾಗಬೇಕು, ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಸಿಗುವಂತಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ಕೆ.ಎ.ಎಸ್/ಐ.ಎ.ಎಸ್ ತರಬೇತಿ ನೀಡುವುದಕ್ಕಿಂತ ಸೇನೆ ಮತ್ತು ಪೊಲೀಸ್ ತರಬೇತಿ ನೀಡುವದಕ್ಕೆ ಮಹತ್ವ ನೀಡಿರುವದಕ್ಕೆ ಕಾರಣ ಇದು ಸಾಕಷ್ಟು ಬಡ ಯುವಕರಿಗೆ ಅನುಕೂಲವಾಗುತ್ತದೆ. ಇದು ಸನ್ಮಾನ್ಯ ಸತೀಶ ಜಾರಕಿಹೊಳಿಯವರ ಬಹಳ ದಿನಗಳ ಕನಸಾಗಿತ್ತು. ಈಗ ಅದು ನನಸಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಟಾರ್ಗೆಟ್ ಕೋಚಿಂಗ್ ಸೆಂಟರ್ನ ಪ್ರಕಾಶ ಮೇಟಿ, ದೈಹಿಕ ತರಬೇತುದಾರ ಸುಭಾಸ ನಾಯ್ಕ, ಶಿಕ್ಷಕರಾದ ಸಂತೋಷ ಮೆಳವಂಕಿ, ಹನಮಂತ ನಂದಿ, ಸಮಾಜ ಸೇವಕ ಶಿವು ಪಾಟೀಲ, ಉಷಾ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹತ್ತು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ವಿವಿಧ ಭಾಗಗಳಿಂದ ಬಂದ 70 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
