April 19, 2024 10:38 am

ಅರಸು ಯುಗ: ಕರ್ನಾಟಕ ರಾಜಕೀಯ ಕನಸುಗಾರನ ಏಳುಬೀಳಿನ ಕಥನ

ಈ ಕೃತಿಯ ಕಡೆಯ ಅಧ್ಯಾಯ ಉತ್ತರವಾಗಿದೆ. ಅರಸರ ಅನೇಕ ಒಡನಾಡಿಗಳ ಮಾತುಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿರುವುದರಿಂದಾಗಿ ಕೃತಿಗೆ ಅಧಿಕೃತತೆ ಲಭಿಸಿದೆ. 126 ಪುಟಗಳ ಅತಿ ಚಿಕ್ಕ ವಿಸ್ತಾರದಲ್ಲಿ ಅರಸು ಅವರ ಬಾಲ್ಯ, ಹರೆಯ, ರಾಜಕೀಯ ಏಳುಬೀಳುಗಳನ್ನು ಯಾವುದೇ ಭಾವೋದ್ವೇಗವಿಲ್ಲದೆ, ತಣ್ಣನೆಯ ಧ್ವನಿಯಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷತೆ.

ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ.

ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು ಜಾರಿಗೆ ತರುವುದರ ಹಿಂದಿರುವ ಕಷ್ಟಗಳನ್ನು ಎನ್.ಎಸ್.ಶಂಕರ್ ಅವರ ಕೃತಿ ‘ಅರಸು ಯುಗ’ಸೂಕ್ಷ್ಮವಾಗಿ, ಖಚಿತ ದಾಖಲೆಗಳೊಂದಿಗೆ ಮಂಡಿಸುತ್ತದೆ. ದೇವರಾಜ ಅರಸು ಅವರ ದೂರದೃಷ್ಟಿ ಅವರ ಸಮಕಾಲೀನ ಮತ್ತು ಅನುಯಾಯಿಗಳಲ್ಲೇ ಇಲ್ಲದಿರುವುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ಕಾಣಬಹುದು.

ಹಾವನೂರು ವರದಿ, ಕೂಲಿಗಾಗಿ ಕಾಳು ಯೋಜನೆ, ಉಳುವವನೇ ಹೊಲದೊಡೆಯ, ಜೀತಮುಕ್ತಿ, ಮಲಹೊರುವ ಪದ್ಧತಿ ನಿಷೇಧ ಮೊದಲಾದ ಕ್ರಾಂತಿಕಾರಕ ನಿರ್ಧಾರಗಳ ಹಿಂದೆ ಅರಸು ಅವರಿಗಿದ್ದ ರಾಜಕೀಯ ಇಚ್ಛಾಶಕ್ತಿ ಹಾಗೂ ದೂರದೃಷ್ಟಿಯನ್ನೂ ಓದುಗರೆದುರು ತೆರೆದಿಡುತ್ತದೆ. ಉಳುವವನೇ ಹೊಲದೊಡೆಯ ಕಾನೂನಿನ ಮೂಲಕ ಕರ್ನಾಟಕದಲ್ಲಿ ಉಂಟಾದ ಬದಲಾವಣೆಗಳನ್ನು ಎನ್.ಎಸ್.ಶಂಕರ್ ಹೀಗೆ ದಾಖಲಿಸುತ್ತಾರೆ: “4,85,000 ಗೇಣಿದಾರರು ಸುಮಾರು 21 ಲಕ್ಷ ಎಕರೆ ಪಡೆದು ಭೂಮಾಲೀಕರಾದರು, ಅದರಲ್ಲಿ 14,700 ದಲಿತ ಭೂಹೀನರು ಒಂದು ಲಕ್ಷ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಗಳಿಸಿದ್ದು ಕಡಿಮೆ ಸಾಧನೆಯೇನಲ್ಲ. ಇದರ ಜೊತೆಗೆ 3,700 ಕೃಷಿ ಕಾರ್ಮಿಕರು ತಾವು ವಾಸಿಸುತ್ತಿದ್ದ ಮನೆಗಳ ಮಾಲೀಕರೂ ಆದರು.”(ಪು. 92)

ಇನ್ನು ಹೀಗೆ ಭೂಮಿ ಹಂಚಿಕೆ ಮಾಡಿದವರಿಗೆ 20 ಕೋಟಿ 30 ಲಕ್ಷ ರೂಪಾಯಿಗಳನ್ನು ಪರಿಹಾರರೂಪವಾಗಿ ನೀಡಿರುವ ಅರಸರ ನ್ಯಾಯ ದೃಷ್ಟಿಕೋನದೆಡೆಗೆ ಬೆಳಕು ಚೆಲ್ಲಲಾಗಿದೆ.

ಅಧಿಕಾರ ಇರುವುದು ಜನರ ಸೇವೆಗೆ ಎಂಬ ಎಚ್ಚರ ಅರಸರಿಗಿತ್ತು ಎಂಬುದನ್ನೂ, ವೃದ್ಧಾಪ್ಯ ವೇತನ ಸೇವೆಗಳನ್ನು ಅಧಿಕಾರಿಗಳೇ ಜನರ ಬಳಿ ಹೋಗಿ ಒದಿಗಿಸಬೇಕೆಂಬ ಅವರ ನಿಲುವು ಜನರಪರ ಆಡಳಿತದ ಸೂಕ್ಷ್ಮತೆಗಳನ್ನು ವಿವರಿಸುತ್ತದೆ.

ಚೋಮನ ದುಡಿ ಕಾದಂಬರಿ ಕುರಿತು ಕೆಲವು ದಲಿತ ಮತ್ತು ಸಾಮಾಜಿಕ ನ್ಯಾಯದ ಪರ ವಾದಿಸುವವರಿಗೆ ಅನೇಕ ತಕರಾರುಗಳಿವೆ. ಶಿವರಾಮ ಕಾರಂತರು “ಚೋಮನಿಗೆ ಕಾದಂಬರಿಯಲ್ಲಾದರೂ ಭೂಮಿಯನ್ನು ಕೊಡಿಸಲಿಲ್ಲ” ಎಂಬುದು ಅದರಲ್ಲಿ ಪ್ರಮುಖವಾಗಿದೆ. ಆದರೆ ಶಿವರಾಮ ಕಾರಂತರ ಕಾದಂಬರಿಯೇ ತಮ್ಮ ಭೂ ಸುಧಾರಣೆ ಕಾಯ್ದೆಗೆ ಪ್ರೇರಣೆ ಎಂದು ಸ್ವತಃ ದೇವರಾಜ ಅರಸರು ಹೇಳಿಕೊಂಡಿರುವುದನ್ನು ಈ ಕೃತಿಯಲ್ಲಿ ಕಾಣಬಹುದು. ಶಿವರಾಮ ಕಾರಂತರಿಗೂ ಕೇವಲ ಕಾದಂಬರಿಯಲ್ಲಿ ಮಾತ್ರ ದಲಿತರಿಗೆ ಭೂಮಿ ಕೊಡಿಸುವುದರಿಂದ ಲಾಭವಿಲ್ಲವೆಂಬುದು ತಿಳಿದಿತ್ತು. ಆ ಕಾರಣದಿಂದಲೇ ಸ್ಥಾಪಿತ, ಸಾಂಪ್ರಾದಾಯಿಕ ಹಿಡಿತಗಳಿಂದ ದಲಿತರಿಗೆ ಭೂಮಿ ಸಿಗುವುದು ಸರಳವಲ್ಲ ಎಂಬುದನ್ನೇ ಅವರು ‘ಚೋಮನ ದುಡಿ’ಯಲ್ಲಿ ಪ್ರತಿಪಾದಿಸಿದ್ದರು.

ಜೀತ ನಿಷೇಧ, ಮಲಹೊರುವ ಪದ್ಧತಿ ನಿಷೇಧಗಳ ಮುಂದಿನ ಸವಾಲುಗಳನ್ನು ದೇವರಾಜ ಅರಸರು ನಿರ್ವಹಿಸಿದ ಬಗೆ, ಋಣ ಪರಿಹಾರ ಕಾಯ್ದೆ ಜಾರಿಯಲ್ಲಿ ತೋರಿದ ಎಚ್ಚರ ಹಾಗೂ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ಮುಂದಾಗಿ ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿಸಿದಂತಹ ಅನೇಕ ಸಾಧನೆಗಳನ್ನು ಈ ಕೃತಿಯಲ್ಲಿ ಕಾಣಬಹುದು.

ಇದರ ಜೊತೆಗೆ ದೇವರಾಜ ಅರಸು ಅವರ ಅನುಯಾಯಿಗಳು ಹಾಗೂ ಸ್ವಪಕ್ಷೀಯರ ಹುನ್ನಾರಗಳನ್ನೂ ಈ ಕೃತಿ ಬಯಲಿಗೆಳಿದಿದೆ. ಅಧಿಕಾರ ಸಿಕ್ಕ ಎಲ್ಲರೂ ಅರಸು ಅವರಂತೆ ದೀನದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡಿದ್ದರೆ ಕರ್ನಾಟಕದ ಇಂದಿನ ಸ್ಥಿತಿ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ಅರಸು ಯುಗ ಓದುಗರಿಗೆ ಅನಿಸುತ್ತದೆ.

ಇನ್ನು ಆಡಳಿತದಲ್ಲಿ ತಂದ ದಕ್ಷತೆ, ಅಧಿಕಾರಿಗಳ ಮೇಲಿನ ಹಿಡಿತ ಹೇಗಿರಬೇಕೆಂಬ ಮಹತ್ವದ ವಿಚಾರಗಳನ್ನು ಈ ಕೃತಿ ಕರ್ನಾಟಕದ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಸುತ್ತದೆ.

ದೇವರಾಜ ಅರಸರ ಕಾಲದ ಭ್ರಷ್ಟಾಚಾರದ ಆಪಾದನೆಗಳಿಗೆ ಅಂದಿನ ಮಾಧ್ಯಮಗಳು ಹೇಗೆ ಕಾರಣವಾದವು, ಜನಪರ ಆಡಳಿತದ ಅಲೆಯ ಕುರಿತು ಆಡಬೇಕಾದ ಮಾತುಗಳ ಬದಲಿಗೆ, ಭ್ರಷ್ಟಾಚಾರ ಏಕೆ ಸ್ಥಾನ ಪಡೆಯಿತು ಮೊದಲಾದ ವಿಷಯಗಳು ಈ ಕೃತಿಯಿಂದ ಬಹಿರಂಗವಾಗಿವೆ.

ಇನ್ನು ಸ್ವತಃ ದೇವರಾಜ ಅರಸರ ಭ್ರಷ್ಟಾಚಾರದ ಕುರಿತು ಇರುವ ಅನುಮಾನಗಳಿಗೂ ಈ ಕೃತಿಯ ಕಡೆಯ ಅಧ್ಯಾಯ ಉತ್ತರವಾಗಿದೆ. ಅರಸರ ಅನೇಕ ಒಡನಾಡಿಗಳ ಮಾತುಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿರುವುದರಿಂದಾಗಿ ಕೃತಿಗೆ ಅಧಿಕೃತತೆ ಲಭಿಸಿದೆ. 126 ಪುಟಗಳ ಅತಿ ಚಿಕ್ಕ ವಿಸ್ತಾರದಲ್ಲಿ ಅರಸು ಅವರ ಬಾಲ್ಯ, ಹರೆಯ, ರಾಜಕೀಯ ಏಳುಬೀಳುಗಳನ್ನು ಯಾವುದೇ ಭಾವೋದ್ವೇಗವಿಲ್ಲದೆ, ತಣ್ಣನೆಯ ಧ್ವನಿಯಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷತೆ.

  • ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ