ಬೆಂಗಳೂರು: ಅಫಘಾನಿಸ್ತಾನದ ಸಮಸ್ಯೆ ಕೇವಲ ಆ ದೇಶದ್ದಲ್ಲ; ಇದು ಇಡೀ ಮಾನವ ಕುಲದ ಸಮಸ್ಯೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ್ ಅಭಿಪ್ರಾಯಪಟ್ಟರು.
ಆಗಸ್ಟ್ 28, 2021ರಂದು ಮಾನವ ಬಂಧುತ್ವ ವೇದಿಕೆ ವತಿಯಿಂದ ಆಜೋಜಿಸಲಾಗಿದ್ದ ಬಂಧುತ್ವ ಬೆಳಕು ವೆಬಿನಾರ್ ಸರಣಿಯಲ್ಲಿ “ಆಫ್ಘಾನಿಸ್ತಾನದ ತಾಲಿಬಾನ್ ಬೆಳವಣಿಗೆಗಳ ಸುತ್ತಮುತ್ತ” ವಿಷಯ ಕುರಿತು ಮಾತಾಡಿದ ಅವರು, ವಿಶ್ವಸಂಸ್ಥೆ ಸೇರಿ ಹಲವಾರು ಸಂಸ್ಥೆಗಳಿವೆ. ಆದರೆ ಇಷ್ಟೆಲ್ಲ ಇದ್ದೂ ತಾಲಿಬಾನಿಗಳು ಅಫಘಾನಿಸ್ತಾನದಲ್ಲಿ ಸರಕಾರ ರಚಿಸಿದ್ದಾರೆ. ಈ ಮುಂಚೆಯೂ ಅವರು ಸರಕಾರ ಮಾಡಿ ಷರೀಯತ್ ಕಾನೂನಿನ ಮೂಲಕ ಜನರ ಮೇಲೆ ದಬ್ಬಾಳಿಕೆ ಮಾಡಿದ್ದರು ಎಂದರು.
20 ವರ್ಷಗಳ ನಂತರ ಮತ್ತೆ ಅವರು ಈಗ ಸರಕಾರ ಮಾಡಿದ್ದಾರೆ. ಭಯದಿಂದ ಜನ ದೇಶ ತೊರೆಯುತ್ತಿದ್ದಾರೆ. ಹಲವಾರು ದೇಶಗಳು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ಕೊಟ್ಟಿದ್ದಾರೆ. ಅಪಘಾನಿಸ್ತಾನ್ ರಾಜಕೀಯವಾಗಿ ಸ್ಟ್ರಾಟೆಜಿಕ್ ಪಾಯಿಂಟ್ ನಲ್ಲಿದೆ. ಅಪಾರ ಖನಿಜ ಸಂಪತ್ತಿನ, ಅಫೀಮು ಬೆಳೆಯುವ ನಾಡಿದು. ಹೀಗಾಗಿ ಇದರ ಮೇಲೆ ಸಾಕಷ್ಟು ಆಕ್ರಮಣಗಳಾಗಿವೆ ಎಂದರು.
18ನೇ ಶತಮಾನದಲ್ಲಿ ಅಹ್ಮದಷಾ ದುರಾಣಿ ಎಂಬ ಅರಸ ಇವತ್ತಿನ ಅಪಘಾನಿಸ್ತಾನದ ರೂಪ ನೀಡಿದವ. 19ನೇ ಶತಮಾನಕ್ಕೆ ಅಲ್ಲಿ ಬ್ರಿಟಿಷರ ಪ್ರವೇಶ ಆಗುತ್ತೆ. ಅಲ್ಲಿ ಕೂಡ ಬ್ರಿಟಿಷರ ವಿರುದ್ಧ ಯುದ್ಧಗಳಾಗಿವೆ. ನ್ಯಾಟೋ ಕೂಟ ಸಮಾಜವಾದಿ ದೇಶಗಳಿಗೆ ಪರ್ಯಾಯವಾಗಿ ಬಂಡವಾಳಶಾಹಿ ದೇಶಗಳು ಸ್ಥಾಪಿಸಿದ್ದು. 2ನೇ ಜಾಗತಿಕ ಮಹಾಯುದ್ದದ ನಂತರ ಸಾಕಷ್ಟು ದೇಶಗಳು ಸ್ವತಂತ್ರವಾಗುತ್ತವೆ. ಹೀಗೆ ಸ್ವತಂತ್ರಕ್ಕಾಗಿ ಹೋರಾಡುವ ದೇಶಗಳನ್ನು ಸದೆಬಡೆಯುವುದೇ ಈ ನ್ಯಾಟೋ ಕೂಟದ ಉದ್ದೇಶ. ಅಮೆರಿಕಾ ಸೇರಿದಂತೆ ಹಲವು ನ್ಯಾಟೋ ಪಡೆಗಳಿವೆ ಎಂದರು.
1919ರಲ್ಲಿ ಅಫಘಾನಿಸ್ಥಾನ ಸ್ವತಂತ್ರಗೊಂಡ ನಂತರ ಇಲ್ಲಿ 1978ರಲ್ಲಿ ಒಂದು ಏಪ್ರಿಲ್ ಕ್ರಾಂತಿಯಾಗುತ್ತದೆ. ಅಮೇರಿಕಾ, ಪಾಕಿಸ್ತಾನ, ಇರಾನ್ ಸೇರಿ ಮುಜಾಹಿದ್ ಗಳೆಂಬ ಗುಂಪು ಕಟ್ಟುತ್ತಾರೆ. ಅಫಘಾನಿಸ್ತಾನವನ್ನು ನಿರ್ನಾಮ ಮಾಡಲೆಂದೇ ಅಮೇರಿಕಾ ಇಂಥ ಕೆಲಸಕ್ಕೆ ಕೈ ಹಾಕುತ್ತದೆ. ಡಾ. ನಜೀಬುಲ್ಲಾ ಅಧ್ಯಕ್ಷರಾಗುತ್ತಾರೆ. ಆದರೆ 1992ರಲ್ಲಿ ಮುಜಾಹೀದ್ ಗಳು ಅಧಿಕಾರ ಸ್ಥಾಪಿಸುತ್ತಾರೆ. ನಜೀಬುಲ್ಲಾ ಅವರ ಅಧಿಕಾರ ಪತನಗೊಳಿಸಿ ಗಲ್ಲಿಗೇರಿಸುತ್ತಾರೆ. ಮುಜಾಹೀದ್ ಗಳ ವಿರುದ್ಧ ತಾಲಿಬಾನಿಗಳು ಹೋರಾಡಿ ಅಧಿಕಾರ ಪಡೆಯುತ್ತಾರೆ. ಅಮೇರಿಕಾ ಪ್ರಾರಂಭದಿಂದಲೂ ನಿಯಂತ್ರಣ ಸಾಧಿಸಲು ಮಾತ್ರ ಪ್ರಯತ್ನಿಸುತ್ತದೆ ಎಂದರು.
2001ರಲ್ಲಿ ಅಲಖೈದಾ ಅಮೇರಿಕಾದ ಟವರ್ ಗಳ ಮೇಲೆ ದಾಳಿ ಮಾಡಿದ ಮೇಲೆ ಅಮೇರಿಕಾ ಅಫಘಾನಿಸ್ತಾನಕ್ಕೆ ಬರುತ್ತದೆ. 2021ರವರೆಗೆ 20 ವರ್ಷಗಳ ಕಾಲ ಸೇನೆ ಅಲ್ಲಿಯೇ ಇರುತ್ತದೆ. ಪ್ರಜಾಸತ್ತಾತ್ಮಕ ಸರಕಾರದ ನಿರೀಕ್ಷೆಯಲ್ಲಿದ್ದ, ಉದ್ಯೋಗಸ್ಥರಾಗಿದ್ದ ಅಲ್ಲಿಯ ಜನ ಇವತ್ತು ಆತಂಕಗೊಂಡಿದ್ದಾರೆ. ತಾಲಿಬಾನಿಗಳು ಧರ್ಮಾಧಾರಿತವಾಗಿ ಆಡಳಿತ ರಚಿಸುತ್ತಿದ್ದಾರೆ. ಆ ಮೂಲಕ ಸ್ತ್ರೀ ಸಮಾನತೆ ಹರಣ ಮಾಡಿ, ಮತೀಯ ಸರಕಾರ ಮಾಡುತ್ತಿದ್ದಾರೆ. ಪ್ರಭುತ್ವ ಧರ್ಮದ ನಿಯಂತ್ರಣಕ್ಕೆ ಬರಬಾರದು. ಧರ್ಮದ ಹೆಸರಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಳಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ವೆಬಿನಾರ್ ನಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ
ಇವತ್ತಿನ ಅಫಘಾನಿಸ್ತಾನ ಪರಿಸ್ಥಿತಿಗೆ ಅಮೇರಿಕದ ಸಮ್ರಾಜ್ಯವಾದವೇ ಕಾರಣ. ಇದಕ್ಕೆ ವಿರುದ್ಧವಾದವರೆಲ್ಲ ಪ್ರಾಣವನ್ನೇ ನೀಡಿದ್ದಾರೆ. ಯಾಕೆ ನಜೀಮುಲ್ಲಾರ ಹತ್ಯೆ ಆಯಿತು ಎಂದರೆ ಅಲ್ಲಿಯ ಜಮೀನ್ದಾರಿ ವ್ಯವಸ್ಥೆಯನ್ನು ನಿರ್ಬಂಧಿಸಿ ಅವರು ರೂಪಿಸಿದ ಸುಧಾರಣಾ ಕ್ರಮಗಳೇ ಕಾರಣ. ಹಾಗಾಗಿ ನಜೀಬುಲ್ಲಾ ಸರಕಾರ ಸ್ಥಿರವಾಗಿ ಉಳಿಯಲಿಲ್ಲ. ಧರ್ಮದ ಆಧಾರದಲ್ಲಿ ಪ್ರಭುತ್ವದ ಕನಸಿರುವ ತಾಲಿಬಾನಿಗಳಷ್ಟೇ ಅಲ್ಲ ಆ ರೀತಿಯ ವಿಚಾರಧಾರೆಯುಳ್ಳ ಎಲ್ಲರೂ ಅಪಾಯಕಾರಿಯೇ. ನಮ್ಮ ದೇಶದಲ್ಲಿಯೂ ಕೊರೋನಾ ಸಂದರ್ಭದಲ್ಲಿ ತಬ್ಲೀಘಿಗಳ ನೆಪದಲ್ಲಿ ದ್ವೇಷ ಬಿತ್ತುವ ಕೆಲಸವಾಗಿದೆ. ತಾಲಿಬಾನಿಗಳು ಅಫಘಾನಿಸ್ತಾನಕ್ಕೆ ಬಂದ ಮೇಲೆ ಸ್ತ್ರೀ ವಿರೋಧಿ ನಿಲುವುಗಳನ್ನೇ ವ್ಯಕ್ತಪಡಿಸಿದ್ದಾರೆ. ಅವರು ಖಂಡಿತವಾಗಿಯೂ ಬದಲಾಗಿಲ್ಲ. ಸಹಬಾಳ್ವೆ, ಸಾಮರಸ್ಯಪರ ಶಕ್ತಿಗಳನ್ನು ಮಾತ್ರ ನಾವು ಬಲ ಪಡಿಸಬೇಕು.
- ಸನತ್ ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತ
ಅಫಘಾನಿಸ್ತಾನದ ಇವತ್ತಿನ ಪರಿಸ್ಥಿತಿ ಮಾನವ ಹಕ್ಕುಗಳ ಬಗ್ಗೆ ಕಳವಳ ಮೂಡಿಸಿದೆ. ಆ ದೇಶದ ಇತಿಹಾಸ ನೋಡಿದಾಗ ಅದು ನಿರಂತರ ಹೋರಾಟದ ಮೂಲಕ ಸ್ವತಂತ್ರಗೊಂಡ ದೇಶ. 20ನೇ ಶತಮಾನದ ಆರಂಭದಿಂದಲೂ ಅಫಘಾನಿಸ್ತಾನದ ಅಸಹಾಯಕತೆಯನ್ನು ದುರುಪಯೋಗ ಪಡೆದುಕೊಂಡ ದೇಶಗಳೇ ಹೆಚ್ಚಿವೆ. ತಾಲಿಬಾನಿಗಳು ಅಮೇರಿಕಾದ ಅಕ್ರಮ ಕೂಸು. ಸಾಮ್ರಾಜ್ಯವಾದಿ ದೇಶಗಳು ನಿಯಂತ್ರಣ ಸಾಧಿಸುವುದಕ್ಕೆ ಇಂಥ ಪರೋಕ್ಷ ಮಾರ್ಗಗಳನ್ನು ಅನುಸರಿಸುತ್ತಾ ಬಂದಿವೆ. ಆದರೆ ಇದೆಲ್ಲದರಿಂದ ತೊಂದರೆ ಅನುಭವಿಸಿದವರು ಅಫಘಾನರು. ಅಫಘಾನಿಸ್ತಾನದ ಸಮಸ್ಯೆ ಇಡೀ ಜಗತ್ತಿನ ಸಮಸ್ಯೆ ಆಗಿದೆ. ಅಲ್ಲಿಯ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ. ಜಗತ್ತು ಅವರ ಪರವಾಗಿ ನಿಲ್ಲದ್ದಕ್ಕೆ ನಾಚಿಕೆಯಾಗಬೇಕು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಮೇರಿಕಾ ಈ ತಾಲಿಬಾನಿಗಳ ಉದಯಕ್ಕೆ, ಅವರ ಕೈಗೆ ಬಂದೂಕು ನೀಡಲು ಕೈ ಜೋಡಿಸಿದೆ. ಮಹಿಳೆಯರು ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಅಲ್ಲಿಯ ಜಮೀನ್ದಾರಿ ಪಾಳೆಗಾರರೇ ತಾಲಿಬಾನಿಗಳೊಡನೆ ಕೈಜೋಡಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅಲ್ಲಿಯ ಸಂವಿಧಾನ ಮಾರ್ಪಾಡಾಗುತ್ತಲೇ ಹೊರಟಿದೆ. ಮಹಿಳೆ ಕೆಲಸದ ಸ್ಥಳಕ್ಕೆ ಹೋಗುವಾಗ ಒಬ್ಬ ಸಂಬಂಧಿಕ ಪುರುಷನನ್ನು ಜೊತೆಗೆ ಕತರೆದುಕೊಂಡು ಹೊಗಲೇಬೇಕು ಎಂಬ ಕಾನೂನಿಗೂ ಇಲ್ಲಿಯ ಸಂಜೆಯಾದರೆ ಹೆಣ್ಣುಮಕ್ಕಳು ಹೊರಗೆ ಹೋಗಬಾರದು ಎಂಬ ಮಾತುಗಳಿಗೂ ಏನಾದರೂ ವ್ಯತ್ಯಾಸ ಇದೆಯೇ?
- ಬಾನು ಮುಷ್ತಾಕ್, ಹಿರಿಯ ಸಾಹಿತಿ
ಅಫಘಾನಿಸ್ತಾನವನ್ನು ಕೊಳ್ಳೆ ಹೊಡೆಯುವ ಹಿನ್ನೆಲೆಯಲ್ಲಿ ಸಾಮ್ರಾಜ್ಯಶಾಹಿ ದೇಶಗಳು ಪ್ರಯತ್ನಿಸಿದರೆ, ಧರ್ಮದ ಹಿನ್ನೆಲೆಯಲ್ಲಿ ತಾಲಿಬಾನಿಗಳು ಆಕ್ರಮಣ ಮಾಡುತ್ತಿದ್ದಾರೆ. ಅಮೇರಿಕ ಅಲ್ಲಿಂದ ಹೊರ ಹೋಗಿರುವುದರ ಹಿಂದೆ ಬೇರೆಯದ್ದೇ ಸ್ಟ್ರಾಟೆಜಿಗಳಿವೆ. ಧರ್ಮವನ್ನು ಬಳಸಿಕೊಂಡು ಮತೀಯತೆಯ ಮೂಲಕ ಅಲ್ಲಿಯ ಇವತ್ತಿನ ಪರಿಸ್ಥಿತಿಗಳಿವೆ. ಧರ್ಮವನ್ನು ಅಪವ್ಯಾಖ್ಯಾನಿಸಿ ಅಲ್ಲಿ ಅದು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಪ್ರಜಾಸತ್ತಾತ್ಮಕ ರಾಜಕೀಯ ಶಕ್ತಿಗಳು ಚಿಂತನೆ ನಡೆಸಿ ಕಾರ್ಯ ಯೋಜನೆಯ ರೂಪಿಸುವ ಅಗತ್ಯವಿದೆ.
- ಪೀರ್ ಭಾಷಾ, ಸಾಮಾಜಿಕ ಹೋರಾಟಗಾರ