April 19, 2024 11:25 pm

ಖಾಸಗಿಯಲ್ಲಿ ಮೀಸಲಾತಿ ಜಾರಿಯಾಗಲಿ

೨೦೦೪ರಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತು ಯುಪಿಎ ಸರ್ಕಾರ ಪ್ರಸ್ತಾಪಿಸಿತು. ಆದರೆ ಆಕಾಶವೇ ಕಳಚಿ ಬಿದ್ದಂತೆ ಖಾಸಗಿ ಕಂಪೆನಿಗಳು ಹುಯಿಲೆಬ್ಬಿಸಿದವು.

ಭಾರತದಲ್ಲಿ ಮೀಸಲಾತಿ ಬ್ರಿಟಿಷ್ ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ಬಂದದ್ದು ೧೯೦೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿ (೧೮೮೧) ಜ್ಯೋತಿಬಾ ಫುಲೆ ಕಡ್ಡಾಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿದ್ದರು. ೧೯೦೨ರಲ್ಲಿ ಶಾಹು ಮಹರಾಜ್ ತಮ್ಮ ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಇದರ ಜತೆಗೆ ಮೈಸೂರು ಅರಸರೂ ಮೀಸಲಾತಿ ಪರವಾಗಿದ್ದರು.

ಈ ಆಧಾರದ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಒತ್ತಾಯ ಮತ್ತು ಆರಂಭವಾಗಿ ಇನ್ನೂ ೧೩೮ ವರ್ಷಗಳಷ್ಟೇ ಆಗಿದೆ. ಅದು ಜಾರಿಯಾಗಿ ೧೧೧ ವರ್ಷಗಳು ಕಳೆದಿವೆ. ಆದರೆ ಭಾರತದ ಚರಿತ್ರೆ ಆರಂಭವಾದ ದಿನದಿಂದ ಇಂದಿನವರೆಗೆ ಅನೈಚ್ಛಿಕವಾಗಿ ಜಾರಿಯಲ್ಲಿರುವ ಮೀಸಲಾತಿಯನ್ನು ಇದುವರೆಗೆ ಯಾರೂ ವಿರೋಧಿಸುವುದಿಲ್ಲ. ವರ್ಣಾಶ್ರಮವನ್ನು ಆಧರಿಸಿ ಶ್ರಮ ವಿಭಜಿಸಿದ ಕಾರಣದಿಂದ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಅಧಿಕಾರ, ಆಸ್ತಿ, ಸಂಪತ್ತಿನ ಒಡೆತನವನ್ನು ಅನುಭವಿಸಿರುವವರು ಇಂದಿಗೂ ಆರಾಮವಾಗಿದ್ದಾರೆ. ಆರಂಭದಿಂದಲೂ ದಮನಿತರಿಗೆ ಅಕ್ಷರ ಜ್ಞಾನವನ್ನೂ ಒಳಗೊಂಡಂತೆ ಯಾವುದರ ಮೇಲೂ ಅಧಿಕಾರವಿರಲಿಲ್ಲ. ಇವರಲ್ಲಿ ಬಹುಪಾಲು ಮಂದಿ ಇನ್ನೂ ಆದಿಮ ಸ್ಥಿತಿಯಲ್ಲೇ ಜೀವಿಸುತ್ತಿದ್ದಾರೆ.

ಕೇವಲ ೧೧೧ ವರ್ಷಗಳ ಮೀಸಲಾತಿ ಜಾರಿಗೆ ಬಂದು ಅದೂ ಕಟ್ಟುನಿಟ್ಟಾಗಿ ಜಾರಿಯಾಗಲೇಬೇಕೆಂದು ನ್ಯಾಯಾಲಯಗಳು ಆಜ್ಞೆ ಹೊರಡಿಸಿದ ನಂತರ ಕೆಲವೇ ದಶಕಗಳಿಂದ ಸರ್ಕಾರದಿಂದ ನಿಗದಿತ ಪ್ರಮಾಣದ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಇದರ ಅರಿವಿಲ್ಲದವರಂತೆ ವರ್ತಿಸುತ್ತಿರುವ ಮೀಸಲಾತಿ ವಿರೋಧಿಗಳು ದೇಶದ ಕರಾಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.   ದುರಂತವೆಂದರೆ ಮೀಸಲಾತಿ ವಿರೋಧಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪಾಲು ಹೆಚ್ಚಿರುವುದು.

ಶಂಬೂಕ, ಏಕಲವ್ಯರ ಪಾಂಡಿತ್ಯವನ್ನು ನಿರುಪಯುಕ್ತಗೊಳಿಸಲು ನಡೆಸಿರುವ ಹುನ್ನಾರವನ್ನು ಈ ಶೂದ್ರ ಸಮುದಾಯದವರು ಮರೆತಿದ್ದಾರೆ. ವಿದ್ಯಾಭ್ಯಾಸದಲ್ಲಿ ಎಲ್ಲರಿಗೂ ಅವಕಾಶ ಮುಕ್ತವಾಗಿದೆಯಾದರೂ ಉದ್ಯೋಗದಲ್ಲಿ ಈ ಅವಕಾಶ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗುವುದು ಸಾಧ್ಯವಿಲ್ಲ. ಇದುವರೆಗೆ ಶಿಕ್ಷಣ, ಅಧಿಕಾರ, ಅಂತಸ್ತು ಹಾಗೂ ಆಸ್ತಿ ಸಂಪಾದಿಸಿರುವವರಿಗೆ ತಂತಾನೇ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿದ್ದರೆ, ಈ ಯಾವುದೂ ಇಲ್ಲದವರು ಮತ್ತೆ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಶಂಬೂಕನ ತಲೆ ಕತ್ತರಿಸಿ ಅವನ ಜ್ಞಾನ ಅವನ ಸಮುದಾಯಕ್ಕೆ ಸಿಗದಂತೆ, ಏಕಲವ್ಯನ ಬೆರಳು ಕತ್ತರಿಸುವ ಮೂಲಕ ಅವನ ಜ್ಞಾನವನ್ನೇ ಇಲ್ಲವಾಗಿಸಿದ್ದಕ್ಕಿಂತ ಭೀಕರ ಸನ್ನಿವೇಶಗಳನ್ನು ಆಧುನಿಕ ಸಂದರ್ಭದಲ್ಲಿ ಸೃಜಿಸಲಾಗಿದೆ. ಹೇಗೆಂದರೆ ವಿದ್ಯಭ್ಯಾಸ ಪಡೆದ ತಳಸಮುದಾಯದ ಪ್ರತಿಭಾವಂತರಿಗೆ ತಮ್ಮ ಪರವಾಗಿ ಕರ್ತವ್ಯ ನಿರ್ವಹಿಸುವವರ ಬೆಂಬಲವಿಲ್ಲದೆ ಅವರ ವಿದ್ಯೆ ಅನುಪಯುಕ್ತವಾಗುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಭವಿಷ್ಯದಲ್ಲಿ ಅವರು ಓದಿದ್ದೇ ವ್ಯರ್ಥ ಎಂಬ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಲಾಗುತ್ತಿದೆ. ಇದರ ಮುಂದುವರೆದ ರೂಪವನ್ನೇ ಈಗಲೂ ಹೊಸರೂಪದಲ್ಲಿ ಅಸ್ತಿತ್ವದಲ್ಲಿಡಲು ಈ ಮೇಲ್ವರ್ಗ ಹಗಲಿರುಳೂ ಕಾರ್ಯನಿರತವಾಗಿರುವಂತಿದೆ. ಮೀಸಲಾತಿ ವಿರೋಧಕ್ಕೆ ಪೂರಕ ಜನಾಭಿಪ್ರಾಯ ರೂಪಿಸುವಲ್ಲಿ ಕೂಡ ಯಶಸ್ವಿಯಾಗಿರುವುದು ಇದಕ್ಕೆ ನಿದರ್ಶನ.

ಇನ್ನು ಗ್ಯಾಟ್, ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದ, ಬಂಡವಾಳ ಹಿಂತೆಗೆತ ಮೊದಲಾದವುಗಳಿಂದ ದೇಶದಲ್ಲಿ ಸರ್ಕಾರಿ ಉದ್ಯೋಗಗಳ ಲಭ್ಯತೆ ಕನಿಷ್ಠಮಟ್ಟಕ್ಕೆ ಕುಸಿಯಲಿದೆ. ಮೀಸಲಾತಿ ವಿರೋಧಿಗಳು ಇದನ್ನು ಯಶಸ್ವಿಯಾಗಿ ಆಗುಮಾಡುತ್ತಿದ್ದಾರೆ. ರೋಗಗ್ರಸ್ಥತೆಯ ಹೆಸರಿನಲ್ಲಿ ಹಂತಹಂತವಾಗಿ ಸರ್ಕಾರಿ ಕೈಗಾರಿಕೆ, ಉದ್ಯಿಮೆಗಳನ್ನು ಮುಚ್ಚುತ್ತಿರುವ ಹೊತ್ತಿನಲ್ಲಿ ಖಾಸಗಿ ಕೈಗಾರಿಕೆಗಳು ಹಾಗೂ ಉದ್ಯಿಮೆಗಳು ಸಾವಿರಾರು ಕೋಟಿ ರೂ.ಗಳ ಲಾಭ ಗಳಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಖಾಸಗಿ ಉದಿಮೆಗಳನ್ನುಳಿದು ಸರ್ಕಾರದ ಯಾವುದೇ ಕೈಗಾರಿಕೆಗಳೂ ಅಸ್ತಿತ್ವದಲ್ಲಿರುವುದು ಸಾಧ್ಯವಿಲ್ಲ.ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಬೇಕಿದೆ. ಭಾರತದಲ್ಲಿ ದಕ್ಷ ಕೆಲಸಗಾರರಿಗೆ ಕೊರತೆ ಇಲ್ಲ. ಆದರೆ ಸ್ವಜಾತಿಯ ಕಾರಣದಿಂದ ದಕ್ಷತೆ ಮತ್ತು ಅದಕ್ಷತೆಯನ್ನು ಅಳೆಯುವ ಕೆಲಸ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿಗೆ ಬಂದಲ್ಲಿ ಈಗ ವಿದ್ಯಾಭ್ಯಾಸದಲ್ಲಿ ಇರುವ ಸ್ಪರ್ಧೆ ಉದ್ಯೋಗ ಕ್ಷೇತ್ರದಲ್ಲೂ ಏರ್ಪಟ್ಟು ಎಲ್ಲರಿಗೂ ಉದ್ಯೋಗದ ಅವಕಾಶ ನಿರ್ಮಾಣವಾಗಬಹುದು.

ಡಾ. ಪ್ರದೀಪ್ ಮಾಲ್ಗುಡಿ, ಪತ್ರಕರ್ತ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ