ಚಿತ್ರದುರ್ಗ: ನಮ್ಮ ನಮ್ಮ ಮನೆಗಳನ್ನು ಕಟ್ಟುವುದು ಮಾನವ ಬಂಧುತ್ವದ ಮೊದಲ ಆದ್ಯತೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಬಂಧುತ್ವ ಸಂಘಟನೆ ವಿಷಯದ ಕುರಿತು ಮಾತನಾಡಿದ ಅವರು, ಮಾನವ ಬಂಧುತ್ವ ವೇದಿಕೆಯನ್ನು ಸಂಘಟಿಸುವ ಆರಂಭ ಕಾಲದಲ್ಲಿ ಒಂದು ಊರಿನಿಂದ ಸಮಾಜದ ಪರವಾಗಿ ಕೆಲಸ ಮಾಡುವ ಒಬ್ಬ ಹುಡುಗನನ್ನು ಕೊಡಿ. ಅವರ ಮಾತನ್ನು 10 ಜನ ಕೇಳುವಂತಿರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು ಎಂದರು.
ಮಾನವ ಬಂಧುತ್ವ ವೇದಿಕೆ ಮೂಢನಂಬಿಕೆ ವಿರುದ್ಧ ಹೋರಾಡುತ್ತದೆ. ಆದರೆ ಅದಷ್ಟೇ ನಮ್ಮ ಆದ್ಯತೆಯಲ್ಲ. ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾ ಫುಲೆಯಂತವರ ಜನ್ಮದಿನಾಚರಣೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದರು. ಮಾನವ ಬಂಧುತ್ವ ವೇದಿಕೆಯ ಸುಮಾರು 400 ಜನ ಉದ್ಯಮಿಗಳಾಗಿದ್ದಾರೆ. ಇವರಿಗೆ ತರಬೇತಿಯನ್ನು ಮಾನವ ಬಂಧುತ್ವ ವೇದಿಕೆಯಿಂದ ನೀಡಲಾಗಿತ್ತು. ಇದರ ಜೊತೆಗೆ ಸೈನಿಕ, ಪೊಲೀಸ್ ಆಕಾಂಕ್ಷಿಗಳಿಗೆ , ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.