September 22, 2023 1:17 am

ಎಲ್ಲ ಜಾತಿಗಳು ಸಮಾನವಾಗಬೇಕು ಎಂಬುದು ಸಂವಿಧಾನದ ಆಶಯ: ನ್ಯಾ.ನಾಗಮೋಹನ್ ದಾಸ್

ಚಿತ್ರದುರ್ಗ: ಕಳೆದ ಮೂರು ನಾಲ್ಕು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ನ್ಯಾ.ನಾಗಮೋಹನ್ ದಾಸ್ ಹೇಳಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನಕ್ಕೆ  ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಜ್ಯ ಬಂಧುತ್ವ ಅಧಿವೇಶನವನ್ನು ಬಹಳ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು.

ಈಗಾಗಲೇ ನ್ಯಾಯಾಧೀಶರ ವಿರುದ್ಧ ಶಾಸಕಾಂಗದ ಕೆಲಸವನ್ನು ಮಾಡುತ್ತಿದ್ದೀರಿ ಎಂಬ ಆರೋಪವಿದೆ. ಆದ್ದರಿಂದ ಪ್ರಸ್ತುತ ವಿಷಯಗಳ ಕುರಿತು ಪ್ರಸ್ತಾಪಿಸುತ್ತೇನೆ. ದೇಶ, ರಾಜ್ಯದ ಸನ್ನಿವೇಶದಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.

ರಾಜಕೀಯ ಅಧಿಕಾರ ರಾಜರ ಕೈಯಲ್ಲಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಪ್ರಜೆಗಳಿಗೆ ವರ್ಗಾವಣೆಯಾಯಿತು. ಶಾಸಕಾಂಗ ಕಾನೂನು ಮಾಡುತ್ತದೆ. ಚಿತ್ರದುರ್ಗದಲ್ಲಿ ಪೂರ್ಣಪ್ರಮಾಣದಲ್ಲಿ, ಕೋಲಾರದಲ್ಲಿ ಅಲ್ಪ ಪ್ರಮಾಣದಲ್ಲಿ, ಯಾದಗಿರಿಯಲ್ಲಿ ಜಾರಿ ಮಾಡುವುದೇ ಇಲ್ಲ. ಕಾರ್ಯಾಂಗ ಇವುಗಳನ್ನು ಜಾರಿ ಮಾಡುವುದೆ ಇಲ್ಲ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಕರ್ತವ್ಯಗಳನ್ನು ಸಂವಿಧಾನ ನಿರ್ಧರಿಸಿತು ಎಂದರು.

ಮೌಲ್ಯಗಳನ್ನು ಒಳಗೊಂಡ ಮಹಾನ್ ಗ್ರಂಥವೇ ಸಂವಿಧಾನ. 199 ದೇಶಗಳ ಪೈಕಿ 190 ದೇಶಗಳು ಸ್ವತಂತ್ರ ಸಂವಿಧಾನ ಹೊಂದಿವೆ. ಎಲ್ಲ ದೇಶಗಳ ಜನ ಸಂವಿಧಾನ ಓದಿ, ಅದರಂತೆ ದೇಶವನ್ನು ನಡೆಸಿರಿ ಎಂದು ಒತ್ತಾಯಿಸುತ್ತಿದ್ದಾರೆ. ದುರಾದೃಷ್ಟವಶಾತ್ ಸಂವಿಧಾನ ಜಾರಿಗೆ ಬಂದು 70 ವರ್ಷಗಳಿಂದ ಭಾರತೀಯರು ಸಂವಿಧಾನವನ್ನು ಓದಿಲ್ಲ. ಸಂವಿಧಾನವನ್ನು ನಾಳೆಯಿಂದ ಅಲ್ಲ, ಇಂದಿನಿಂದಲೇ ನೀವೆಲ್ಲ ಓದಿ ಎಂದು ಕರೆ ನೀಡಿದರು.

ಸಂವಿಧಾನವನ್ನು ನಾವೇಕೆ ಓದಬೇಕು ಎಂದು ನೀವೆಲ್ಲ ಎಂದುಕೊಳ್ಳುತ್ತೀರಿ. ಸಂವಿಧಾನವನ್ನು ನಾವು ಕೂಡ ಓದಿಲ್ಲ. ಸಂವಿಧಾನವನ್ನು ಓದದೇ ದೇಶ ಅರ್ಥವಾಗುವುದಿಲ್ಲ. ನಮಗೆ ಇತಿಹಾಸವೆಂದರೆ ಭೌಗೋಳಿಕ ವಿಷಯಗಳನ್ನು ಅಳವಡಿಸಲಾಗಿದೆ. ದೇಶವೆಂದರೆ ಮಣ್ಣಲ್ಲ, ಜನ ಎಂದು ತೆಲುಗು ಕವಿ ಹೇಳುತ್ತಾರೆ. ದೇಶದ ಚರಿತ್ರೆ, ಧರ್ಮ, ಮೌಲ್ಯ, ಆರ್ಥಿಕ ವಿಷಯಗಳನ್ನು ತಿಳಿದುಕೊಳ್ಳಬೇಕು. ಇವುಗಳ ಕುರಿತು ಕನಿಷ್ಠ ತಿಳುವಳಿಕೆ ಬೇಕು ಎಂದರು.

ಭಾರತಕ್ಕೆ ಬಂದವರೆಲ್ಲ ಭಾರತದಲ್ಲಿ ಬೆರೆತುಹೋದರು. ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಸಿಖ್ಖರು ಜೊತೆಯಲ್ಲಿದ್ದಾರೆ. ಭಾರತದಲ್ಲಿ 4360 ಜಾತಿ, ಉಪಜಾತಿಗಳಿವೆ. ಇಲ್ಲಿರುವ ಜನರಲ್ಲಿ ಬೇರೆ ಬೇರೆ ಜನಾಂಗಳಿವೆ. ನಾವು ಆಹಾರ, ಬಣ್ಣ, ಆಲೋಚನೆಯಲ್ಲಿ ಭಿನ್ನರಾಗಿದ್ದೇವೆ. ಇದೇ ಭಾರತದ ಬಹುತ್ವ ಪರಂಪರೆ. ಬಹುತ್ವವನ್ನು ಅರಿಯದೆ ಭಾರತವನ್ನು ಅರಿಯಲಾಗದು. ಮೇಲ್ವರ್ಗ, ಮೇಲ್ಜಾತಿಗಳು ಭಾರತದಲ್ಲಿವೆ. ವರ್ಗ, ಜಾತಿಗಳ ನಡುವೆ ಅಸಮಾನತೆ ಇದೆ. ಎಲ್ಲ ಜಾತಿಗಳು ಸಮಾನವಾಗಬೇಕು ಎಂಬುದು ಸಂವಿಧಾನದ ಆಶಯ ಎಂದರು.

ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ. ಜನಸಾಮಾನ್ಯರ ಕನಿಷ್ಠ ಅಗತ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಶಿಕ್ಷಣ, ಆರೋಗ್ಯ, ನೀರನ್ನು ಖಾಸಗೀಕರಿಸುತ್ತಿದೆ. ಇವುಗಳ ವಿರುದ್ಧ ನಾವು ದನಿ ಎತ್ತಲಿಲ್ಲ. ಇದಕ್ಕಾಗಿ ಸಂವಿಧಾನವನ್ನು ನಾವು ಓದಬೇಕು ಎಂದರು.

1947ಕ್ಕೂ ಮೊದಲು ಭಾರತ ಎಂದೂ ಒಂದು ದೇಶವಾಗಿರಲಿಲ್ಲ. ಸಂವಿಧಾನ ಈ ದೇಶವನ್ನು ಒಂದು ಮಾಡಿತು. ವಿಧಾನಸಭೆ, ಲೋಕಸಭೆ, ಸಾಂವಿಧಾನಿಕ ಸಂಸ್ಥೆಗಳು, ಪಂಚಾಯತಿಗಳನ್ನು ಸಂವಿಧಾನದ ಮೂಲಕ ಸ್ಥಾಪಿಸಲಾಗಿದೆ. ಭಾರತದಲ್ಲಿ ಉತ್ಪಾದನೆ ಸೇರಿದಂತೆ ಇನ್ನಿತರ ಸ್ವಾವಲಂಬನೆಗೆ ಸಂವಿಧಾನವೇ ಕಾರಣ. ದೇಶದಲ್ಲಿ ಎಲ್ಲ ಜಾತಿಯ ಜನರು ಶಾಸಕರು, ಸಂಸದರು, ನ್ಯಾಯಮೂರ್ತಿಗಳು, ಅಧಿಕಾರಿಗಳಾಗಲು ಕಾರಣವಾಗಿದ್ದು ಸಂವಿಧಾನದಿಂದ ಎಂದರು.

ಭಾರತದಲ್ಲಿ ದಲಿತರನ್ನು ಚಾತುರ್ವರ್ಣ ವ್ಯವಸ್ಥೆಯಿಂದ ಹೊರಗಿಡಲಾಗಿತ್ತು. ಇಂದು ರಾಷ್ಟ್ರಪತಿ ದಲಿತ, ಪ್ರಧಾನಿ ಒಬಿಸಿ, ನಾನು ರೈತನ ಮಗನಾಗಿ ಜನಿಸಿ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದೆ. ಇದಕ್ಕೆ ಅವಕಾಶ ಕೊಟ್ಟದ್ದು ಸಂವಿಧಾನ. ಭಾರತ ಇಂದು ಅನೇಕ ವಿಷಯಗಳಲ್ಲಿ ಟಾಪ್ ಒನ್ ಆಗಿದ್ದರೆ ಅದಕ್ಕೆ ಕಾರಣ ಸಂವಿಧಾನ. ಭಾರತೀಯರಿಗೆ ಧರ್ಮಗ್ರಂಥವೆಂದರೆ ಸಂವಿಧಾನ. ನಾವೆಲ್ಲ ಮನಸು ಮಾಡಿದರೆ ನಮ್ಮ ಮುಂದಿರುವ ಜಾತಿ, ಅಸಮಾನತೆ ಮೊದಲಾದ ಸಮಸ್ಯೆಗಳ ವಿರುದ್ಧ ಹೋರಾಡಿ ಗೆಲ್ಲುವ ಸಾಧ್ಯತೆ ಇದೆ. ಇದಕ್ಕೆ ಸಂವಿಧಾನದ ಮೂಲಕ ಅವಕಾಶವಿದೆ ಎಂಬ ಧೃಡವಿಶ್ವಾಸವಿದೆ ಎಂದರು.

ಈಗ ಕೆಲವರು ನಾವು ಬಂದಿರುವುದೇ ಸಂವಿಧಾನ ಬದಲಿಸಲಿಕ್ಕೆ ಎನ್ನುತ್ತಾರೆ. ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಗೌರವಿಸುತ್ತಾರೆ. ಆದರೆ ಅದನ್ನು ಪಾಲಿಸುವುದಿಲ್ಲ. ನಮಗೆ ಸಂವಿಧಾನ, ಅಂಬೇಡ್ಕರ್ ಅವರ ಅಮಲು ಬೇಡ. ಅರಿವು ಬೇಕು. ಸಂವಿಧಾನ ಬೇಡ ಎನ್ನುವವರಿಗೆ ಹೊಸ ಸಂವಿಧಾನ ಕೊಡಿ, ಸಾರ್ವಜನಿಕವಾಗಿ ಚರ್ಚೆಯಾಗಲಿ, ಅನಂತರ ನೋಡೋಣ ಎನ್ನಬೇಕು ಎಂದರು.

ಯಾವ ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲವೋ ಅಲ್ಲಿ ಸಂವಿಧಾನವಿಲ್ಲ ಎಂದು ಭಾವಿಸಬೇಕು. ಸಂವಿಧಾನವಿಲ್ಲವಾದರೆ ಅರಾಜಕತೆ ನಿರ್ಮಾಣವಾಗುತ್ತದೆ. ಸಂವಿಧಾನದ ವಿರುದ್ಧ ಯಾರು ಮಾತಾಡಿದರೂ ಅದನ್ನು ಖಂಡಿಸೋಣ ಎಂದು ಅವರು ಕರೆ ನೀಡಿದರು.

ಮಾನವ ಬಂಧುತ್ವ ವೇದಿಕೆ ತರಬೇತಿ ನೀಡುತ್ತಿರುವುದರ ಜೊತೆಗೆ, ತಾಲೂಕು ಮಟ್ಟದವರೆಗೆ ತಲುಪಿದ್ದೀರಿ. ಸಂಘಟನೆಯ ಮೂಲಕ ಸಂವಿಧಾನ ರಕ್ಷಿಸುವ ಕೆಲಸವನ್ನು ಮಾಡುತ್ತಿರುವುದರಿಂದ ಸಂಘಟನೆಯನ್ನು ಅಭಿನಂದಿಸುತ್ತೇನೆ ಎಂದರು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು