April 19, 2024 8:06 pm

ಆರೋಗ್ಯವನ್ನು ಮೂಲಭೂತಹಕ್ಕನ್ನಾಗಿಸಲು ಒತ್ತಾಯಿಸಬೇಕು: ನ್ಯಾ. ನಾಗಮೋಹನ್ ದಾಸ್

ಬೆಂಗಳೂರು: ಆರೋಗ್ಯವನ್ನು ಮೂಲಭೂತಹಕ್ಕನ್ನಾಗಿಸಿ ಎಂದು ನಾವು ಒತ್ತಾಯಿಸಬೇಕು. ಆಗ ಸರ್ಕಾರಕ್ಕೆ ಕರ್ತವ್ಯ ನಿಗದಿಯಾಗುತ್ತದೆ. ಜನರ ಸಂಕಷ್ಟ ಪರಿಹಾರವಾಗುತ್ತದೆ. ಸಾರ್ವಜನಿಕ ಆಸ್ಪತ್ರೆಗಳನ್ನು ಸಶಕ್ತಗೊಳಿಸಬೇಕು. ಖಾಸಗಿಯವರ ಪ್ರವೇಶಕ್ಕೆ ವಿರೋಧವಲ್ಲ. ಆದರೆ ಅವರನ್ನು ನಿಯಂತ್ರಣದಲ್ಲಿಡಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವ್ಯಾಪಾರವಾಗಬಾರದು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ 20/062021ರಿಂದ ನಡೆದ 10 ದಿನಗಳ ಆರೋಗ್ಯ ಬಂಧುತ್ವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಕೋವಿಡ್ ಎದುರಾಗಿ ಆರೋಗ್ಯ ಬಂಧುತ್ವ ಅಭಿಯಾನದ ಸಮಾರೋಪ ಭಾಷಣವನ್ನು ಮಾಡಿದ ಅವರು, 10 ದಿನಗಳ ಕಾಲ ಚಿಂತಕರು, ವೈದ್ಯರನ್ನು ಕರೆಸಿ ಹಲವು ಆಯಾಮಗಳಲ್ಲಿ ಉಪನ್ಯಾಸಗಳನ್ನು ನೀಡಿ ಜನಸಾಮಾನ್ಯರ ಅರಿವನ್ನು ಹೆಚ್ಚಿಸಿ ನಾಡಿನ ಜನತೆಗೆ ದೊಡ್ಡ ಸಹಾಯ ಮಾಡಿದ್ದಾರೆ. ಆದ್ದರಿಂದ ಮಾನವ ವೇದಿಕೆಯ ಬಳಗದ ಸದಸ್ಯರಿಗೆ ಅಭಿನಂದನೆಗಳು ಎಂದರು.

ನಾನು ಕಾನೂನು ವಿದ್ಯಾರ್ಥಿಯಾಗಿ ಕೋವಿಡ್ ಗೆ ಸಂಬಂಧಿಸಿದ ಕೆಲವು ಕಾನೂನು ವಿಷಯಗಳನ್ನು ನಿಮ್ಮ ಮುಂದಿಡುತ್ತೇನೆ. ಭಾರತ ಸಂವಿಧಾನದಲ್ಲಿ 22 ಭಾಗಗಳಿವೆ. ಸಂವಿಧಾನದಲ್ಲಿ ದೇಶದ ಜನರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಅವರು ಜಾರಿಗೊಳ್ಳಬೇಕಾದ ಹಕ್ಕುಗಳು. ಉದಾ: ವಾಕ್, ಅಭಿವ್ಯಕ್ತಿ, ಆಯುಧರಹಿತ ಸಭೆ, ಸಂಸ್ಥೆಗಳ ರಚನೆ, ಸಂಚಾರ, ವಾಸ, ವೃತ್ತಿ, ಕಸುಬು ನಿರ್ವಹಿಸಲು, ಧಾರ್ಮಿಕ ಹಕ್ಕು. ಇವುಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಆರೋಗ್ಯ ಸಂವಿಧಾನದತ್ತ ಹಕ್ಕಲ್ಲ. ಇದನ್ನು ಭಾಗ 4ರಲ್ಲಿ ಸೇರಿಸಲಾಗಿದೆ. ಇವನ್ನು ರಾಜ್ಯ ನಿರ್ದೇಶಕ ತತ್ವಗಳು ಎನ್ನುತ್ತಾರೆ. ರಾಜ್ಯ ಸರ್ಕಾರ ಈ ಹಕ್ಕುಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಬೇಕು. ಸರ್ಕಾರ ಮಾಡದಿದ್ದರೆ ನ್ಯಾಯಾಲಯಕ್ಕೆ ಹೋಗಿ ಕೇಳುವಂತಿಲ್ಲ ಎಂದರು.

ನಮ್ಮ ಸಂವಿಧಾನದಲ್ಲಿ ಕೇಂದ್ರ ಸರ್ಕಾರ ಯಾವ ಕಾನೂನು ಮಾಡಬಹುದು, ರಾಜ್ಯ ಸರ್ಕಾರ ಯಾವ ಕಾನೂನು ಮಾಡಬಹುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಯಾವ ಕಾನೂನು ಮಾಡಬಹುದು ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರ ಕೇಂದ್ರ ಪಟ್ಟಿಯ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು  ರಚಿಸುತ್ತದೆ. ರಾಜ್ಯಪಟ್ಟಿಯಲ್ಲಿ ರಾಜ್ಯ ಸರ್ಕಾರಗಳು ಕಾನೂನುಗಳನ್ನು ರಚಿಸುತ್ತವೆ. ಸಮವರ್ತಿ ಪಟ್ಟಿಯಲ್ಲಿ ಎರಡೂ ಸರ್ಕಾರಗಳು ಕಾನೂನು ತರಲು ಅವಕಾಶವಿದೆ. ಆರೋಗ್ಯ ರಾಜ್ಯಪಟ್ಟಿಯಲ್ಲಿದೆ. ಆದ್ದರಿಂದ ಕೇಂದ್ರದ ಪಟ್ಟಿಯಲ್ಲೂ ಇಲ್ಲ, ರಾಜ್ಯಪ್ಟಟಿಯಲ್ಲಿರುವುದು ಕಡ್ಡಾಯವಾಗಿ ಜಾರಿಮಾಡಬೇಕಿಲ್ಲ. ನನ್ನ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೂ ಜಾರಿಗೊಳಿಸಬೇಕಾದದು ಕಡ್ಡಾಯವಾಗಿದೆ ಎಂದರು.

ಭಾರತ ಸಂವಿಧಾನದ ಮೂಲ ಲಕ್ಷಣಗಳನ್ನು ನಿಗದಿಪಡಿಸಿಲ್ಲ. ಆದರೆ ಸುಪ್ರೀಂಕೋರ್ಟ್ ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತ ಸಂವಿಧಾನಕ್ಕೆ ಲಕ್ಷಣಗಳಿವೆ ಎಂದು ಹೇಳಿತು. ಆ ತೀರ್ಪಿನಲ್ಲಿ ಮೂಲಭೂತ ತತ್ವಗಳನ್ನು ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಕಟ್ಟಬೇಕು. ಜನಸಾಮಾನ್ಯರ ಮೂಲಸೌಕರ್ಯಗಳ ಕುರಿತು ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ಆರೋಗ್ಯ, ಬಟ್ಟೆ, ಶಿಕ್ಷಣ, ಸಾರಿಗೆ, ವಸತಿ ಮೂಲಸೌಕರ್ಯಗಳು. ಕಲ್ಯಾಣರಾಜ್ಯದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಒದಗಿಸುವ ಕರ್ತವ್ಯವಿದೆ. ಆದ್ದರಿಂದ ಕೇಂದ್ರ, ರಾಜ್ಯ ಸರ್ಕಾರಗಳು ಕೈತೊಳೆದುಕೊಳ್ಳುವಂತಿಲ್ಲ. ಕಲ್ಯಾಣ ರಾಜ್ಯದ ತತ್ವದಲ್ಲಿ ಜನರ ರಕ್ಷಣೆ, ಆರೋಗ್ಯ ರೂಪಿಸುವ ಬಹುದೊಡ್ಡ ಜವಾಬ್ದಾರಿಯಿಂದ ಸರ್ಕಾರಗಳು ಹಿಂದೆ ಸರಿಯುವಂತಿಲ್ಲ ಎಂದರು.

ವಿಶ್ವ ಸಂಸ್ಥೆ ಘೋಷಿಸಿರುವ ಮಾನವ ಹಕ್ಕುಗಳಲ್ಲಿ ಆರೋಗ್ಯ ಹಕ್ಕು ಕೂಡ ಇದೆ. ಇವುಗಳನ್ನು ಪಾಲಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸಹಿ ಹಾಕಿದೆ. ಮಾನವ ಹಕ್ಕಿನ ಒಪ್ಪಂದಕ್ಕೆ ಸರ್ಕಾರ ಸಹಿಹಾಕಿದೆ. ಆದ್ದರಿಂದ ಆರೋಗ್ಯದ ಹಕ್ಕನ್ನು ಜಾರಿ ಮಾಡುವ ಕರ್ತವ್ಯ ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿದೆ ಎಂದರು.

ಭಾರತೀಯ ಸಂವಿಧಾನದ ಅನುಚ್ಛೇದ 21ಅನ್ನು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್ ಜನರ ಆರೋಗ್ಯವನ್ನು ಸುಧಾರಿಸುವ ಕರ್ತವ್ಯ ಸರ್ಕಾರಗಳ ಮೇಲಿದೆ ಎಂದಿದೆ ಎಂದರು.

ಮನುಷ್ಯರನ್ನು, ಪ್ರಾಣಿಗಳನ್ನು ಅಥವಾ ಸಸ್ಯಗಳನ್ನು ಬಾಧಿಸುವ ಸೋಂಕು, ಕೀಟಗಳನ್ನು ಪ್ರತಿಬಂಧಿಸಲು ಕಾನೂನುಗಳನ್ನು ತರಬಹದು, ಯೋಜನೆಗಳನ್ನು ರೂಪಿಸಬಹುದು ಎಂಬ ಸಂದೇಶವನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಇದು ಕೇಂದ್ರ, ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂದರು.

ಕಲ್ಯಾಣ ರಾಜ್ಯದ, ಮಾನವ ಹಕ್ಕುಗಳ, ಸರ್ವೋಚ್ಛ ನ್ಯಾಯಾಲಯಗಳ ಆದೇಶದ ಹಿತದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ಸರ್ಕಾರಗಳ ಮೇಲಿದೆ. ಈ ಕರ್ತವ್ಯವನ್ನು ಸರ್ಕಾರಗಳು ನಿರ್ವಹಿಸಿವೆಯೇ ಎಂಬ ಪ್ರಶ್ನೆ ಇದೆ ಎಂದರು.

15 ತಿಂಗಳ ಹಿಂದೆ ಯಾವ ತಯಾರಿ ಇಲ್ಲದೆ ಲಾಕ್ ಡೌನ್ ಘೋಷಿಸಿದರು. ಇದರಿಂದ ಕೋಟ್ಯಂತರ ವಲಸೆ ಕಾರ್ಮಿಕರು ಕೆಲಸ, ಕೂಲಿ ಕಳೆದುಕೊಂಡರು. ನೂರಾರು ಕಿ.ಮೀ. ನಡೆದರು. ಅನೇಕರು ಬಲಿಯಾದರು. ಗರ್ಭಿಣಿಯರು ದಾಯಿಯಲ್ಲಿ ಹೆತ್ತರು. ಕೃಷಿ ಬೆಳೆಗಳು ಕೊಳ್ಳುವವರಿಲ್ಲದಂತಾದವು, ಉದ್ಯಮಗಳು ನಿಂತವು. ಎಲ್ಲ ಜನರು ಅನೇಕ ಸಂಷ್ಟಗಳಿಗೆ ಒಳಗಾದರು. ಪ್ಯಾಕೇಜ್ ಗಳಿಂದ ಮೇಲ್ವರ್ಗದವರಿಗೆ ಮಾತ್ರ ಅನುಕೂಲವಾಯಿತು. 2ನೇ ಅಲೆಯ ಕುರಿತು ವಿಜ್ಞಾನಿಗಳು, ವೈದ್ಯರು, ಪರಿಣತರು ಕೊಟ್ಟ ಮುನ್ನೆಚ್ಚರಿಕೆಯನ್ನು ಸರ್ಕಾರ ಕಡೆಗಣಿಸಿತು ಎಂದರು.

ಬೆಡ್ ಇಲ್ಲ, ಆಕ್ಸಿಜನ್, ವೆಂಟಿಲೇಟರ್, ಔಷಧಿ ಇಲ್ಲ. ಹೆಣಗಳನ್ನು ಸಾಗಿಸಲು ಆಂಬುಲೆನ್ಸ್, ಶವಾಗಾರಗಳು ಇಲ್ಲ. ಇಂತಹ ಕಷ್ಟಗಳನ್ನು ಸರ್ಕಾರದ ನೀತಿಗಳಿಂದ ಜನ ಅನುಭವಿಸಿದರು ಎಂದರು.

3.85 ಲಕ್ಷ ಜನ ಬಲಿಯಾಗಿದ್ದಾರೆ. ಆಕ್ಸಿಜನ್, ವೆಂಟಿಲೇಟರ್, ಬೆಡ್, ಔಷಧಿ ಇಲ್ಲದೇ ಜನ ಸತ್ತರು. ಬಲಿಯಾದವರ ಲೆಕ್ಕ ಗ್ರಾಮೀಣ ಪ್ರದೇಶದಲ್ಲಿ ಸಿಕ್ಕಿಲ್ಲ. ಅನೇಕರು ಪೋಷಕರನ್ನು ಕಳೆದುಕೊಂಡರು. ಕೋವಿಡ್ ಪೂರ್ವದಲ್ಲಿ ಆರ್ಥಿಕ ಹಿಂಜರಿತ ಇದೆ ಎಂದು ಹೇಳಿದ್ದೆ. ಇವತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇದರಿಂದ ಯಾವಾಗ ಹೊರಬರುತ್ತೇವೆ ಎಂದು ಗೊತ್ತಿಲ್ಲ. ಸರಿಪಡಿಸಲು ಯೋಜನೆಗಳಿಲ್ಲ. ದೇಶದ ಜನ ಸರ್ಕಾರದ ನೀತಿಗಳ ಪರಿಣಾಮದಿಂದಾಗಿ ಇನ್ನಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದರು.

ಕೋವಿಡ್ ಅವಧಿಯಲ್ಲಿ ಖಾಸಗಿಯವರಿಗಿಂತ ಸರ್ಕಾರಿ ಆಸ್ಪತ್ರೆಗಳೇ ಹೆಚ್ಚು ಸಶಕ್ತವಾಗಿ ಕೆಲಸ ನಿರ್ವಹಿಸಿದವು. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಕೇರ್ ಸೆಂಟರ್ ಮಾಡಲಿಲ್ಲ, ಸರ್ಕಾರದ ಆದೇಶವನ್ನು ಪಾಲಿಸಲಿಲ್ಲ, ಲಕ್ಷಗಟ್ಟಲೇ ಬಿಲ್ ಮಾಡಿದರು. ಜನ ಬಿಲ್ ಕಟ್ಟಲಾಗದೆ ಬಲಿಯಾದ ಉದಾಹರಣೆ ಇದೆ. ಕೆಲವು ಆಸ್ಪತ್ರೆಗಳು ಬಿಲ್ ಕಾರಣಕ್ಕೆ ಹೆಣವನ್ನು ಕೊಡಲಿಲ್ಲ ಎಂದರು.

ಬ್ಲಾಕ್ ನಲ್ಲಿ ಹೆಚ್ಚು ದುಡ್ಡುಕೊಟ್ಟರೆ, ಬೆಡ್, ಔಷಧಿ, ಆಕ್ಸಿಜನ್, ವೆಂಟಿಲೇಟರ್ ಸಿಗುತ್ತೆ. ಆದರೆ ನಿಯಂತ್ರಣ ಮಾಡಲು ಸರ್ಕಾರ ಏನು ಕ್ರಮ ಕೈಗೊಂಡಿದೆ. ಎಷ್ಟು ಜನರನ್ನು ಸೆರೆಮನೆಗೆ ಕಳಿಸಲಾಗಿದೆ ಎಂಬ ಮಾಹಿತಿ ಇಲ್ಲ. ಸಮನ್ವಯದ ಕೊರತೆ ಇದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಒಂದೇ ದಿನ ಬಲಿಯಾದರು. ಆಗ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟರು. ಗೊಂದಲಗಳು ಉಂಟಾದವು. ಅದಕ್ಕೆ ಪರಿಹಾರವನ್ನು, ಸ್ಪಷ್ಟನೆ ನೀಡಲಿಲ್ಲ ಎಂದರು.

ಅನೇಕ ಸುಳ್ಳು ಘೋಷಣೆಗಳನ್ನು ಮಾಡಲಾಯಿತು. ವ್ಯಾಕ್ಸಿನ್ ಗೆ ಕೇಂದ್ರ, ರಾಜ್ಯ, ಖಾಸಗಿ ಆಸ್ಪತ್ರೆಗಳಿಗೆ ಒಂದೊಂದು ದರ ನಿಗದಿಯಾಯಿತು. ಕೋವ್ಯಾಕ್ಸಿನ್ ಲಸಿಕೆ ನೀಡುವುದರಲ್ಲಿ ಶೇ. 4ಕ್ಕಿಂತ ಹೆಚ್ಚಾಗಿಲ್ಲ. ದಿನಕ್ಕೊಂದು ಹೇಳಿಕೆಯನ್ನು ಕಾಣುತ್ತಿದ್ದೇವೆ. 18-44ರ ವಯೋಮಿತಿಯವರು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಶೇ. 20ರಷ್ಟು ಅವಿದ್ಯಾಂವತರು, ಶೇ. 20ರಷ್ಟು ಜನ ಬಡವರಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಪ್ರಶ್ನಿಸಿದರು.

ಅಸಮಾನತೆ ಇದ್ದಾಗ ನ್ಯಾಯಾಂಗ ಸುಮ್ಮನೆ ಕುಳಿತುಕೊಳ್ಳುವುದು ಸಾಧ್ಯವೇ? ಶಾಸಕಾಂಗದ ಮೇಲೆ, ಕಾರ್ಯಾಂಗದ ಮೇಲೆ ನ್ಯಾಯಾಂಗ ಒತ್ತುವರಿ ಮಾಡಬಾರದು. ಆದರೆ, ಅನೇಕ ಕಾರಣಗಳಿಗಾಗಿ ಶಾಸಕಾಂಗ, ಕಾರ್ಯಾಂಗ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಾಗ ನ್ಯಾಯಾಂಗ ಏನು ಮಾಡಬೇಕು? ಇಂತಹ ಸಮದಯಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಿದಾಗ ಕೆಲ ಮಂತ್ರಿಗಳು ಹೇಳಿಕೆ ನೀಡಿ, ನಾವು ನೇಣು ಹಾಕ್ಕೋಬೇಕಾ ಎನ್ನುತ್ತಾರೆ. ನಿಮ್ಮ ವಿಫಲತೆಯಿಂದ ಕೋರ್ಟ್ ಮಧ್ಯಪ್ರವೇಶಿಸಿದೆ. ಇಲ್ಲವಾದಲ್ಲಿ ಸಮಾಜದಲ್ಲಿ ಅರಾಜಕತೆ ಬರುತ್ತೆ. ಪ್ರಜಾಪ್ರಭತ್ವ, ಕಾನೂನು ಕಳೆದುಕೊಳ್ಳುತ್ತೇವೆ. ಇವತ್ತಲ್ಲ ಎಲ್ಲ ಸಂದರ್ಭದಲ್ಲೂ ಇದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಶುರುವಾಗಿದ್ದೇ ಇಂತಹ ಸಂದರ್ಭದಲ್ಲಿ ಎಂದರು.  

ಕರ್ನಾಟಕದ ಮಂತ್ರಿ ನ್ಯಾಯಮೂರ್ತಿಗಳು ಸರ್ವಜ್ಞರಲ್ಲ ಎಂದರೆ, ಕೇಂದ್ರ ಮಂತ್ರಿ ಅಧಿಕಾರ ನಡೆಸುವುದು ನಮಗೆ ಗೊತ್ತಿದೆ ಎನ್ನುತ್ತಾರೆ. ನ್ಯಾಯಾಂಗ ಮಾಡಿರುವ ತಪ್ಪುಗಳನ್ನು ತಿದ್ದಬೇಕು, ಮೇಲ್ಮಟ್ಟಕ್ಕೆ ನ್ಯಾಯಾಂಗವನ್ನು ಕೊಂಡೊಯ್ಯುವ ಕೆಲಸ ಮಾಡಿ, ಧ್ವಂಸಮಾಡುವ ವಿಮರ್ಶೆ ಮಾಡಬೇಡಿ. ಜನಸಾಮಾನ್ಯರು ಕಾನೂನಿನ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ. ನ್ಯಾಯಾಂಗವನ್ನು ನೀವು ಅವಮಾನ ಮಾಡಿದಿರಿ. ನಿಮ್ಮ ಮುಖವನ್ನು ನೀವೇ ನೋಡಿಕೊಳ್ಳಿ ಎಂದರು.

ನ್ಯಾಯಾಂಗದ ಮಧ್ಯಪ್ರವೇಶದ ನಂತರ ಪ್ರಧಾನಿ ಎಲ್ಲರಿಗೂ ಉಚಿತ, ಕಡ್ಡಾಯವಾಗಿ ಲಸಿಕೆ ಕೊಡುತ್ತೇವೆ ಎಂದರು. ಹೈಕೋರ್ಟ್ ಮಧ್ಯಪ್ರವೇಶದ ನಂತರ ಚಾಮರಾಜನಗರದಲ್ಲಿ ಬಲಿಯಾದವರಿಗೆ 2 ಲಕ್ಷ ಪರಿಹಾರ ನೀಡಲಾಯಿತು. ಕೇಂದ್ರದ ಆಕ್ಸಿಜನ್ ರಾಜ್ಯಕ್ಕೆ ಬಂತು ಎಂದರು.

ನ್ಯಾಯಾಂಗ ಮಧ್ಯಪ್ರವೇಶಿಸದಂತೆ ಕಾರ್ಯಾಂಗ, ಶಾಸಕಾಂಗ ಕೆಲಸ ಮಾಡಬೇಕು. ಚರ್ಚೆ ಇಲ್ಲದೆ ಮಸೂದೆಗಳನ್ನು ಮಂಡಿಸುತ್ತಿದ್ದೀರಿ, ಇಂದು ಲೋಕಸಭೆಯಲ್ಲಿ, ನಾಳೆ ರಾಜ್ಯಸಭೆಯಲ್ಲಿ ಮಂಡಿಸಿ, ನಾಡಿದ್ದು ರಾಷ್ಟ್ರಪತಿಗಳಿಂದ ಅಂಗೀಕಾರವಾಗಿ ಮಸೂದೆಗಳು ಜಾರಿಗೆ ಬರುತ್ತಿವೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ 200 ಬೆಡ್ ಸಾಮರ್ಥ್ಯದ ಕೋವಿಡ್ ಬೆಡ್ ಕೇಂದ್ರವನ್ನಾಗಿಸಿದ್ದರೆ ಪರಿಸ್ಥಿತಿಯನ್ನು ನಿರ್ವಹಿಸಬಹುದಿತ್ತು. ಸರ್ಕಾರ ಕೆಲಸ ಮಾಡಲಿಲ್ಲ. ತಾಲೂಕಿಗೆ ಒಂದರಂತೆ ಎಲ್ಲಸೌಕರ್ಯಗಳಿರುವ ಆಸ್ಪತ್ರೆಯನ್ನು ನಿರ್ಮಿಸಿದ್ದರೆ ಉದ್ಯೋಗವೂ ಸಿಗುತ್ತಿತ್ತು ಎಂದರು. 

ಯಾವುದೇ ಸಂದರ್ಭದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ಮಧ್ಯಪ್ರವೇಶಿಸಬೇಕಾಗುತ್ತದೆ. ಇಂತಹ ವಿಷಯದ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟವಾದ ನಿಯಮಗಳನ್ನು ರೂಪಿಸಬೇಕು ಮತ್ತು ಇದನ್ನು ಎಲ್ಲ ರಾಜ್ಯಗಳಿಗೂ ಅನ್ವಯಿಸಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಮತ್ತು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ, ಕೋವಿಡ್ 1, 2 ಅಲೆಬಂದು ಹೋಗಿದೆ. 3ನೇ ಅಲೆ ಬರಲಿದೆ. ಮೊದಲೆರಡು ಅಲೆಗಳಲ್ಲಿ ಬೇರೆಬೇರೆ ಸಮಸ್ಯೆಗಳು ಇದ್ದವು. ಈಗ ಬೇರೆ ಸಮಸ್ಯೆಗಳು ಎದುರಾಗಬಹುದು. ಸರ್ಕಾರ ಇವುಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದರು.

140 ಕೋಟಿ ಜನರಲ್ಲಿ ಏಕಕಾಲಕ್ಕೆ ಕೊರೊನಾ ತಗುಲಿದ್ದು ಕೇವಲ 5 ಲಕ್ಷ ಜನಕ್ಕೆ. ಅವರಿಗೆ ಬೆಡ್, ಚಿಕಿತ್ಸೆ ಕೊಡಲು ಸಾಧ್ಯವಾಗಲಿಲ್ಲ. ಮೂಲಭೂತ ಸೌಕರ್ಯವಿದ್ದರೂ 5 ಲಕ್ಷ ಜನರಿಗೆ ಕೇರ್ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಬಹಳಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದರು.

ಕೊರೊನಾ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪಡೆದರೆ 500 ರೂ.ಗೆ ಗುಣವಾಗಿದ್ದಾರೆ. ಒಬ್ಬರು 40 ಲಕ್ಷ ರೂ. ಕರ್ಚು ಮಾಡಿದರೂ ಬದುಕಲಿಲ್ಲ. ಮುಂಜಾಗ್ರತೆ ಕೈಗೊಂಡರೆ ಮನೆಯಲ್ಲೇ ನೀವು ಗುಣವಾಗಬಹುದು. ಕೋವಿಡ್ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ಕಲಿಸಿದೆ. ಲಾಕ್ ಡೌನ್ ಅನ್ನು 8 ಗಂಟೆಗೆ ಘೋಷಣೆ ಮಾಡಿದರು. 12 ಗಂಟೆಯಿಂದ ಜಾರಿಗೊಳಿಸಿದರು. ಮುಂದಿನ ದಿನಗಳಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುವಾಗ ಮುಂದಾಲೋಚನೆ ಮಾಡಬೇಕು. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆರೀತಿ ಆಗಬಾರದು ಎಂದರು.

ಹೊಸದಾಗಿ 50 ತಾಲೂಕುಗಳಲ್ಲಿ 100 ಆಸ್ಪತ್ರೆಗಳನ್ನು ನಿರ್ಮಿಸಿ, ಕೋವಿಡ್ ಇಲಾಖೆಗಳಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ನೇಮಿಸಬೇಕು, ಇಡೀ ರಾಜ್ಯದಲ್ಲಿ ತಕ್ಷಣ ಆರೋಗ್ಯ ಸಿಬ್ಬಂದಿಯನ್ನು ನೇಮಿಸಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಜೊತೆಗೆ, ಪ್ರವಾಸಿಗರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಕೊರೊನಾ 10 ವರ್ಷದವರೆಗೂ ಇರಬಹುದು. ರಾಜ್ಯದಲ್ಲಿ 30,000 ಪರೀಕ್ಷೆಗಳನ್ನು ಪ್ರತಿದಿನ ನಡೆಸಲಾಗುತ್ತಿದೆ. ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಸಿಎಂಗೆ ಪತ್ರವನ್ನೂ ಬರೆದಿದ್ದೇನೆ ಎಂದರು.

ನ್ಯಾಯಾಲಯ ಮಧ್ಯಪ್ರವೇಶದಿಂದಾಗಿ ರಾಜ್ಯಕ್ಕೆ 900 ಟನ್ ಆಕ್ಸಿಜನ್ ಸಿಕ್ಕಿದೆ. ಜಿಂದಾಲ್ ನಲ್ಲಿ ಉತ್ಪಾದನೆಯಾದ ಆಕ್ಸಿಜನ್ ಅನ್ನು ಕೂಡ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಕೋರ್ಟ್ ಮಧ್ಯಪ್ರವೇಶದಿಂದ ಸಿಕ್ಕಿದೆ. ಕೋರ್ಟ್ ಉತ್ತಮ ಕೆಲಸ ಮಾಡಿದೆ. ಮುಂದೆ ಕೂಡ ಇಂತಹ ಸಮಯದಲ್ಲಿ ಮಾಡಲಿದೆ ಎಂದರು.

ತಜ್ಞರು, ವೈದ್ಯರು, ಸ್ವಾಮೀಜಿಗಳು ಆರೋಗ್ಯ ಬಂಧುತ್ವ ವೆಬಿನಾರ್ ನಲ್ಲಿ ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ. ಕಾರ್ಯಕ್ರಮದಲ್ಲಿ ತಿಳಿವಳಿಕೆ ನೀಡಿದ ಎಲ್ಲರಿಗೂ ಧನ್ಯವಾದಗಳು. ಮಾನವ ಬಂಧುತ್ವ ವೇದಿಕೆ ಬಹಳ ಜನಕ್ಕೆ ವಿಶಿಷ್ಟ ಕಾರ್ಯಕ್ರಮ ಎನಿಸಬಹುದು ಎಂದರು.

ಮಾನವ ಬಂಧುತ್ವ ವೇದಿಕೆಯೆಂದರೆ ಮೂಢನಂಬಿಕೆ ವಿರೋಧಿ, ಧರ್ಮ ವಿರೋಧಿ ಎಂಬ ತಪ್ಪು ತಿಳಿವಳಿಕೆ ಇದೆ. ಮೂಢನಂಬಿಕೆ ವಿರುದ್ಧ ಹೋರಾಡುವುದು ನಮ್ಮ ಕಾರ್ಯಕ್ರಮದ ಒಂದು ಭಾಗ. ನಾವು ಕೆ.ಎ.ಎಸ್., ತರಬೇತಿ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ, ಉದ್ಯಮಗಳ ಸ್ಥಾಪನೆಗೆ ಅಗತ್ಯ ತರಬೇತಿಯಂತಹ ಕೆಲಸಗಳನ್ನು ಕೂಡ ಮಾಡುತ್ತಿದ್ದೇವೆ ಎಂದರು.

ಮಾನವ ಬಂಧುತ್ವ ವೇದಿಕೆ ಮುಂದಿನ ದಿನಗಳಲ್ಲಿ ಕೃಷಿ ಮೊದಲಾದ ಇನ್ನಿತರ ವಿಷಯದ ಕುರಿತು ಕೆಲಸ ಮಾಡಲಿ. ಪ್ರವಾಹ, ಕೋವಿಡ್ ಮೊದಲಾದ ವಿಷಯಗಳಲ್ಲಿ ಕೂಡ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತಿದೆ ಎಂದರು.

ಬೇರೆ ರಾಜ್ಯದ ವಲಸಿಗರನ್ನು 14 ದಿನ ವಸತಿ ಉಳಿಸಿದ್ದೇವೆ. ತರಕಾರಿಗಳನ್ನು ಕೊಂಡು ಜನರಿಗೆ ವಿತರಿಸಿದ್ದೇವೆ, ಆಕ್ಸಿಜನ್ ಸರಬರಾಜು ಕೆಲಸವನ್ನು ಕೂಡ ಮಾಡಿದ್ದೇವೆ ಎಂದರು.

ಜನ ಜಾಗೃತಿಯಿಂದ, ಜವಾಬ್ದಾರಿಯಿಂದ ಇರಬೇಕು. ಸರ್ಕಾರ ಕೂಡ ಕೆಲಸ ಮಾಡಬೇಕು. ಮಾನವ ಬಂಧುತ್ವ ವೇದಿಕೆ ಇಂತಹ ಒಳ್ಳೆಯ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಅಗತ್ಯವಾದ ಕೆಲಸಗಳನ್ನು ಮುಂದುವರೆಸೋಣ. ಜನರಿಗೆ ಅನುಕೂಲವಾಗುವಂತೆ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮುಂದೆ ಕೂಡ ಜನಪರ ಕೆಲಸ ಮುಂದುವರೆಸುತ್ತೇನೆ ಎಂದರು.

10 ದಿನಗಳ ವೆಬಿನಾರ್ ವರದಿಯನ್ನು ಮಂಡಿಸಿ ಮಾತಾಡಿದ ಅಮೆರಿಕದ ಹೃದ್ರೋಗ ತಜ್ಞ ಡಾ. ಗಿರೀಶ್ ಮೂಡ್, 10 ದಿನಗಳ ವೆಬಿನಾರ್ ನಲ್ಲಿ 1. ಕೋವಿಡ್ ಎದುರಿಸುವುದು ಹೇಗೆ ? 2. ಕೋವಿಡ್ ಎದುರಿಸಿದವರ ಅನುಭವ ಹಂಚಿಕೆ 3. ಕೋವಿಡ್ ಮತ್ತು ಪಂಗಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯುವುದು ಹೇಗೆ? 4.  ಮಕ್ಕಳು ಮತ್ತು ಗರ್ಭಿಣಿಯರನ್ನು  ಕೋವಿಡ್ ಮೂರನೇ ಅಲೆಯಿಂದ ಕಾಪಾಡುವುದು ಹೇಗೆ ? 5.ಕೊರೊನಾ: ಜನರಲ್ಲಿನ ಭಯ ಮತ್ತು ಆತಂಕ 6. ಕೋವಿಡ್ ಎದುರಿಸುವಲ್ಲಿ ಸರ್ಕಾರಗಳ ವೈಫಲ್ಯಗಳು 7. ಕೊರೊನಾ ನೆಗೆಟಿವ್ ಆದನಂತರದ ಆರೋಗ್ಯ ಸಂಬಂಧಿಸಿದ ಸವಾಲುಗಳು 8.ಕೋವಿಡ್ ಸಂದರ್ಭದ ಬಿಕ್ಕಟ್ಟಿನಲ್ಲಿ ಜನಜೀವನ ಮತ್ತು ಸವಾಲುಗಳು 9. ಕೋವಿಡ್ ಮತ್ತು ಮೂಢನಂಬಿಕೆಗಳು 10. ಕೋವಿಡ್ ಮತ್ತು ಶೈಕ್ಷಣಿಕ ಸವಾಲುಗಳು ವಿಷಯದ ಕುರಿತು ವಿಷಯ ತಜ್ಞರು, ವೈದ್ಯರು ವಿಷಯ ಮಂಡಿಸಿದರು ಎಂದರು.

ಸಮಾರೋಪ ಸಮಾರಂಭವನ್ನು ನಿರ್ವಹಿಸಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಆರ್ ಜಯಕುಮಾರ್ ಮಾತನಾಡಿ, 10 ದಿನಗಳ ಕಾಲ ನಿರಂತರವಾಗಿ ಆರೋಗ್ಯ ಬಂಧುತ್ವ ಕುರಿತು ವೆಬಿನಾರ್ ಅನ್ನು ಸರ್ಕಾರ ಕೂಡ ಆಯೋಜಿಸಿಲ್ಲ. ಇದಕ್ಕೆ ಕಾರಣರಾದವರು ಮಾನವ ಬಂಧತ್ವ ವೇದಿಕೆಯ ಸಂಸ್ಥಾಪಕರಾದ ಸತೀಶ್ ಜಾರಕಿಹೊಳಿಯವರ ಎಂದರು.

ಡಿಸೆಂಬರ್ 6ರಂದು ನಡೆಸುವ ಪರಿವರ್ತನಾ ಕಾರ್ಯಕ್ರಮ ಮೂಢನಂಬಿಕೆಯ ವಿರುದ್ಧ ನಡೆಸುವ ಕಾರ್ಯಕ್ರಮ ಪ್ರಪಂಚದಲ್ಲೇ ದೊಡ್ಡದು. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಅನುಕೂಲ ಮಾಡುವ ಆರೋಗ್ಯ ಬಂಧುತ್ವ ವೆಬಿನಾರ್ ನಡೆಸಲಾಯಿತು. ವೆಬಿನಾರ್ ನಲ್ಲಿ ಡಾ. ಗಿರೀಶ್ ಮೂಡ್, ಡಾ. ಮೋಹನ್, ಡಾ.ಹರೀಶ್, ಡಾ.ಸೌಮ್ಯ, ಡಾ. ಸಂದೀಪ್, ಡಾ.ಸಿ.ಆರ್.ಚಂದ್ರಶೇಖರ್, ಡಾ.ಎಂ.ಎಸ್.ಆಶಾದೇವಿ, ಡಾ.ಅಪ್ಪಗೆರೆ ಸೋಮಶೇಖರ್, ಡಾ. ಪುರುಷೋತ್ತಮ ಬಿಳಿಮಲೆ, ಡಾ.ಪಿ.ವಿ.ನಿರಂಜನಾರಾಧ್ಯ, ಡಾ.ಎಚ್.ಎಸ್.ನಿರಂಜನಾರಾಧ್ಯ, ಸಯ್ಯದ್ ನಾಸಿರ್ ಹುಸೇನ್, ಸಾಣೇಹಳ್ಳಿ ಶಿವಾಚಾರ್ಯರು, ಭಾಗವಹಿಸಿದರು ಎಂದರು.

ಇತ್ತೀಚೆಗೆ ಸಾಂಕ್ರಮಿಕ ರೋಗಗಳ ಕಡೆಗೆ ಒತ್ತು ನೀಡುವ ಬದಲು
ಲೇಖಕ ಹನುಮಂತ ಹಾಲಗೇರಿ ಜಿ.ಎಸ್.ಶಿವರುದ್ರಪ್ಪ ಅವರ ಎಲ್ಲೋ ಹುಡುಕಿದೆ ಇಲ್ಲದ ದೇವರ ಗೀತೆಯನ್ನು, ಮಾನವ ಬಂಧುತ್ವ ವೇದಿಕೆಯ ಬೀದರ್ ಜಿಲ್ಲಾ ಸಂಚಾಲಕ ಸುನಿಲ್ ಕಡ್ಡೆ ಸಿದ್ದಲಿಂಗಯ್ಯನವರ ಹಸಿವಿನಿಂದ ಸತ್ತೋರು ಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ನನಗೆ ಒಂದು ರೀತಿಯಲ್ಲಿ ಗಾಡ್ ಫಾದರ್ ಆದ ನ್ಯಾ. ನಾಗಮೋಹನ್ ದಾಸ್ ಅವರು ಸೆಮಿನಾರ್ ನಲ್ಲಿ ಇರುವುದು ಸಂತಸದ ವಿಷಯ. ನಾಡಿನ ಬದ್ಧತೆಗೆ ಸಾಕ್ಷಿಯಾಗಿರುವ, ರಾಜ್ಯದಲ್ಲಿ ಮೌಢ್ಯವಿರೋಧಿ ಆಂದೋಲನವನ್ನು ಬಿತ್ತಿ ಹೆಮ್ಮರವಾಗಿಸುತ್ತಿರುವ ಸತೀಶ್ ಜಾರಕಿಹೊಳಿಯವರು ಇರುವುದು ಹೆಮ್ಮೆಯ ವಿಚಾರ ಎಂದರು. ಜೊತೆಗೆ, ದಲಿತ ಚಳವಳಿಗೆ ನ್ಯಾಷನಲ್ ಆಂಥೆಮ್ ಇರುವಂತಿರುವ ಎಂದು ದೇವನೂರ ಮಹಾದೇವ ಹೇಳಿದ ಗುರುವೇ ನಿನ್ನಾಟ ಬಲ್ಲವರ್ಯಾರೋ ಹಾಡನ್ನು ಹಾಡುತ್ತೇನೆ ಎಂದು ಗೀತೆಯನ್ನು ಪ್ರಸ್ತುತ ಪಡಿಸಿದರು.

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ