ಡಾ ಬಿ ಆರ್ ಅಂಬೇಡ್ಕರ್ ಅವರು ರಾಷ್ಟ್ರೀಯತೆ ಮತ್ತು ರಾಷ್ಟ್ರದ ಸಮಗ್ರತೆಯ ವಿಷಯದಲ್ಲಿ ಅತ್ಯಂತ ಸ್ಪಷ್ಟವಾದ ನಿಲುವುಗಳನ್ನು ಹೊಂದಿದ್ದರು.
ಅವರ ಪ್ರಕಾರ, ಒಟ್ಟಾಗಿ ಬದುಕಬೇಕು ಎಂಬ ರಾಜಕೀಯ ಬಯಕೆ ಇದ್ದಾಗ ಮಾತ್ರವೇ, ನಮ್ಮೊಳಗೆ ಒಂದು ರಾಷ್ಟ್ರೀಯತೆಯ ಭಾವನೆಯು ಹುಟ್ಟಿಕೊಳ್ಳುತ್ತದೆ. ಇಲ್ಲಿ ಹಲವು ಬಗೆಯ ಐಕ್ಯತೆಯ ಭಾವನೆಯ ಅಗತ್ಯವಿದ್ದರೂ ಕೂಡಾ ರಾಜಕೀಯವಾದ ಬಯಕೆ ಅಥವಾ ರಾಜಕೀಯ ಐಕ್ಯತಾ ಪ್ರಜ್ಞೆಯು ರಾಷ್ಟ್ರೀಯತೆಗೆ ಬೇಕಾಗುವ ಅತ್ಯಗತ್ಯವಾದ ಅಂಶವಾಗಿರುತ್ತದೆ.
ಎರಡು ವಿಭಿನ್ನವಾದ ರಾಷ್ಟ್ರೀಯತೆಗಳು ಒಟ್ಟಾಗಿ ಬದುಕಬೇಕೆಂದರೆ ರಾಜಕೀಯ ಅಧಿಕಾರವನ್ನು ಸಮಾನವಾಗಿ ಹಂಚಿಕೊಳ್ಳುವ ವ್ಯವಸ್ಥೆ ಇರಬೇಕು. ಇಲ್ಲವೇ ಅವರೆಡೂ ರಾಷ್ಟ್ರೀಯತೆಗಳು ಬೇರ್ಪಟ್ಟು ಎರಡು ಭಿನ್ನವಾದ ರಾಷ್ಟ್ರಪ್ರಭುತ್ವವನ್ನು ರಚಿಸಿಕೊಳ್ಳಬೇಕು. ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರೀಯತೆಗೆ ಇನ್ನೊಂದು ರಾಷ್ಟ್ರೀಯತೆಯು ಅಧೀನವಾಗಿ ಬದುಕಲು ಸಾಧ್ಯವೇ ಇಲ್ಲ ಎಂಬುದು ಬಾಬಾ ಸಾಹೇಬರ ಸ್ಪಷ್ಟ ಅಭಿಪ್ರಾಯವಾಗಿದ್ದು, ಈ ಕಾರಣಕ್ಕಾಗಿ ಅವರು ದೇಶ ವಿಭಜನೆ ಕಲ್ಪನೆಯು ಅನಿವಾರ್ಯ ಎಂದು ನಂಬಿದ್ದರು.
ಇದೇ ಮಾತಿಗೆ ಪೂರಕವಾಗಿ ಹಿಂದೂ ರಾಷ್ಟ್ರವು ಜಾರಿಗೆ ಬಂದರೆ ಪ್ರಜಾತಂತ್ರವು ನಾಶಗೊಳ್ಳುತ್ತದೆ ಎಂದು ಪ್ರತಿಪಾದಿಸಿದ್ದ ಬಾಬಾ ಸಾಹೇಬರು ಮುಸ್ಲಿಂ ಅಥವಾ ಯಾವುದೇ ಧರ್ಮದ ಮೂಲಭೂತವಾದಿಗಳು ತಮಗೆ ಬೇಕಾದಾಗ ಮಾತ್ರವೇ ಪ್ರಜಾಪ್ರಭುತ್ವವನ್ನು ಬಳಸಿಕೊಳ್ಳುವ ಅವಕಾಶವಾದಿ ನಡೆಯನ್ನೂ ಕೂಡಾ ಸ್ಪಷ್ಟವಾಗಿ ಖಂಡಿಸಿದ್ದರು.
ಕೊನೆಯಲ್ಲಿ, ರಾಷ್ಟ್ರೀಯತೆಗಳ ಸ್ವ-ನಿರ್ಣಯಾಧಿಕಾರವು ಯಾವಾಗಲೂ ಒಂದೇ ರೀತಿಯಲ್ಲಿ ಚಲಾವಣೆ ಆಗಬೇಕಿಲ್ಲವೆಂಬ ಎಚ್ಚರಿಕೆಯನ್ನು ನೀಡುತ್ತಾರೆ. ಬಾಬಾ ಸಾಹೇಬರ ಈ ಆಲೋಚನೆಗಳೇ ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳಿಂದ ಕೂಡಿದ ಗಣರಾಜ್ಯದ ರಚನೆಗೆ ಕಾರಣವಾಯಿತು ಎನಿಸುತ್ತದೆ.








