ಅಂತಃಸತ್ವ ಮತ್ತು ಅಂತಃಕರಣದ ರಾಜಕಾರಣಿ, ರೈತನಾಯಕ ಶ್ರೀ ಬಾಬಾಗೌಡ ಪಾಟೀಲರ ಅಕಾಲಿಕ ನಿಧನ ನೋವನ್ನುಂಟು ಮಾಡಿದೆ.
ಮಾನವ ಬಂದುತ್ವ ವೇದಿಕೆಯ ಜೈಕುಮಾರ್ ಮತ್ತು ಅನಂತನಾಯ್ಕ್ ಅವರೊಂದಿಗೆ, ಬಾಬಗೌಡಪಾಟೀಲರನ್ನು ಅವರ ಚಿಕ್ಕಬಾಗೇವಾಡಿಯ ಅವರ ಜಮೀನಿನಲ್ಲೇ ಮೊದಲು ಭೇಟಿಯಾದೆ. ನಂತರ ನಾಲ್ಕಾರು ದಿನಗಳ ಒಡನಾಟ ಆತ್ಮೀಯತೆಯಾಗಿ ಸ್ಮರಣೀಯವಾಗಿದೆ.
ರಾಜ್ಯದ ಮಾನವತಾವಾದಿಗಳ ಸಾಕ್ಷಿಪ್ರಜ್ಞೆಯಂತಿರುವ ಶ್ರೀಯುತ ಸತೀಶಜಾರಕಿಹೊಳಿಯವರ ಉಪಚುನಾವಣೆಯ ಸ್ಪರ್ಧೆಯನ್ನು ಬಾಬಾಗೌಡಪಾಟೀಲರು ಮತ್ತು ಹಿರಿಯ ಮಾರ್ಕ್ಸ್ವಾದಿ ನಾಯಕ ವಿ.ಪಿ.ಕುಲಕರ್ಣಿಯವರು ಒಂದು ಜನಪರ ಹೋರಾಟದ ಮೌಲ್ಯವೆಂದೇ ಪರಿಗಣಿಸಿದ್ದರು.
ಎಪ್ಪತ್ತೈದರ ವಯೋಮಾನದ ಬಾಬಾಗೌಡ ಪಾಟೀಲ ಅವರ ಕ್ರಿಯಾಶೀಲ ವ್ಯಕ್ತಿತ್ವ, ಚುರುಕುತನ ಅವರ ವಯಸ್ಸನ್ನು ಒಂದು ದಶಕಕ್ಕೆ ಇಳಿಸಿದಂತೆ ಭಾಸವಾಗುತ್ತಿತ್ತು. ವಚನ ಚಳುವಳಿ ಮತ್ತು ವಿಜ್ಞಾನದ ಬಗ್ಗೆ ಅವರಿಗೆ ಇದ್ದ ಆಳವಾದ ಜ್ಞಾನ ಬೆರಗು ಹುಟ್ಟಿಸುವಂತಹದ್ದು. ಅವರ ಸರಳತೆ, ಸಜ್ಜನಿಕೆ ಅವರ ವ್ಯಕ್ತಿತ್ವದ ಭಾಗವಾಗಿತ್ತು.
ಹಲವಾರು ಪಕ್ಷಗಳಿಗೆ ಹೋಗಿ ಬಂದಿದ್ದ ಅವರನ್ನು ರಾಜಕೀಯ ವಲಯ ಹೇಗೆ ಗುರುತಿಸುತ್ತಿತ್ತು ಎಂಬುದು ಮುಖ್ಯವಲ್ಲ. ಆದರೆ ಗ್ರಾಮ ಭಾರತದ ಬಗ್ಗೆ ಇದ್ದ ಚಡಪಡಿಕೆಯೇ, ಪ್ರಯೋಗಗಳೇ ಅವರಿಗೆ ಹಲವಾರು ಪಕ್ಷಗಳ ಕದ ತಟ್ಟುವಂತೆ ಮಾಡಿತೇನೋ ಎನ್ನಿಸುತ್ತದೆ.
ಎಪ್ಪತ್ತರ ದಶಕದಲ್ಲಿ ಐಎಎಸ್ ಪಾಸು ಮಾಡಿದ್ದರೂ ಅವರು ಅಧಿಕಾರಶಾಹಿಯ ವ್ಯಾಮೋಹಕ್ಕೆ ಒಳಗಾಗಲಿಲ್ಲ. ಶಿವಮೊಗ್ಗೆಯ ಹಿರಿಯಗಾಂಧಿವಾದಿಗಳಾಗಿದ್ದ ಹೆಚ್.ಎಸ್.ರುದ್ರಪ್ಪ, ಎನ್.ಡಿ.ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಪ್ರೊಫೆಸರ್ ನಂಜುಂಡ ಸ್ವಾಮಿಯವರ ಒಡನಾಟದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಕಟ್ಟುತ್ತಲೇ ಅದರ ಬೆನ್ನೆಲುಬು ಆಗಿದ್ದರು. ನಂಜುಂಡಸ್ವಾಮಿಯವರು ವಿಧಾನಸಭೆ ಪ್ರವೇಶಕ್ಕೆ ಪ್ರತ್ಯಕ್ಷ ಕಾರಣರಾಗಿದ್ದರು.
ಹಿಂದುತ್ವದ ಆಳ ಸುಳಿಯ ಅರಿಯದೇ ಬಿಜೆಪಿ ಸೇರ್ಪಡೆಯಾಗಿದ್ದ ಇವರನ್ನು ಬಿಜೆಪಿಯು ಬಳಸಿಕೊಂಡಿತ್ತು. ಗ್ರಾಮೀಣ ಅಭಿವೃದ್ಧಿಯ ಪರ ಅಪಾರ ಕಾಳಜಿ ಇದ್ದ ಬಾಬಾಗೌಡಪಾಟೀಲರು ಸಹಜವಾಗೇ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂದಿನ ಪ್ರಧಾನಿ ವಾಜಪೇಯಿ ಅವರ ಆತ್ಮೀಯ ವಲಯದಲ್ಲಿದ್ದರು. ದಶಕಗಳ ನಂತರ ಆ ಪಕ್ಷ ಜನವಿರೋಧಿ, ಜನತಂತ್ರ ವಿರೋಧಿಯಾಗಿ ಇಬ್ಬರು ವ್ಯಕ್ತಿಗಳ ಮಾಫಿಯಾ ಆಗಿದ್ದರ ಬಗ್ಗೆಯೂ ಸಹಜ ಆಕ್ರೋಶ ಅವರಲ್ಲಿತ್ತು.
ಅವರ ಜೀವನ ಗಾಥೆ ಕೃತಿಯಾಗಿ ಹೊರಬಂದಿದ್ದರೆ ರೈತಚಳವಳಿಯ ಹೆಜ್ಜೆಗುರುತುಗಳ ಮತ್ತೊಂದು ಆಯಾಮವೂ ದಾಖಲಾಗುತ್ತಿತ್ತು. ಶ್ರೀ ಬಾಬಾಗೌಡಪಾಟೀಲರ ಅಕಾಲಿಕ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಬಂದುಗಳಿಗೆ ಕುಟುಂಬ ವರ್ಗದವರಿಗೆ ಬರಲಿ ಅಂತಿಮ ನಮನಗಳು.
- ಕೆ.ಎಸ್.ಸತೀಶ್ ಕುಮಾರ್, ಮಾನವಬಂಧುತ್ವ ವೇದಿಕೆ