August 17, 2026 12:39 pm

ಕುಲದ ಪ್ರಶ್ನೆ ಮತ್ತು ಕನಕನ‌ ಕಿಂಡಿಯೆಂಬ ಅವೈದಿಕ ರೂಪಕ

ಅರುಣ್ ಜೋಳದಕೂಡ್ಲಿಗಿಯವರು ಕನ್ನಡದ ಯುವ ವಿದ್ವಾಂಸರು. ಜಾನಪದ ಕ್ಷೇತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಇವರು ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಪೂರ್ವ ಒಳನೋಟಗಳನ್ನು ಇವರ ಭಾಷಣಗಳು ಮತ್ತು ಲೇಖನಗಳು ನೀಡುತ್ತವೆ.

ಮುಖ್ಯವಾಗಿ ಕನಕರನ್ನು ದಾಸಸಾಹಿತ್ಯದಿಂದ ಪ್ರತ್ಯೇಕಿಸಲು ಇರುವ ಎರಡು ಪ್ರಧಾನ ಸಂಗತಿಗಳಲ್ಲಿ ಕೆಳಜಾತಿಗೆ ಸೇರಿದವರು ಎನ್ನುವುದು ಒಂದಾದರೆ, ಎರಡನೆಯದು ಕನಕರು ಕೇವಲ ದಾಸರಾಗದೆ, ಕೀರ್ತನಕಾರರಾಗದೆ ಬಹಳ ಮುಖ್ಯವಾಗಿ ಕವಿಯಾಗಿರುವುದು.

ಕನಕ ಕವಿಯಾದ ಕಾರಣ ದಾಸತ್ವವನ್ನೂ, ಕೀರ್ತನಾಕಾರತ್ವವನ್ನೂ ಮೀರಲು ಸಾಧ್ಯವಾಗಿದೆ. ಕವಿಯಾಗಿ ರೂಪುಗೊಂಡ ಕಾರಣವೆ ಅವರಿಗೆ ಸಿಕ್ಕ ಸುತ್ತಣ ಪರಿಸರವನ್ನು ನೋಡಬಹುದಾದ ಸೂಕ್ಷ್ಮತೆಯ ದೃಷ್ಟಿಕೋನ ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿ ರೂಪುಗೊಂಡ ವೈಚಾರಿಕತೆ ಮತ್ಯಾವ ದಾಸರಿಗೂ ಸಿಗಲಿಲ್ಲ.

ಹೀಗೆ ರೂಪುಗೊಂಡ `ಕವಿ’ ದೃಷ್ಟಿಕೋನವೆ ಕೀರ್ತನೆಯಲ್ಲಿ ದಾಟಿತು. ಇದನ್ನು ನೋಡಿದರೆ ಕನಕರ ಕೀರ್ತನೆಗಳನ್ನು ಮಾತ್ರ ಕತ್ತರಿಸಿ ಜಾತಿ ದೃಷ್ಟಿಕೋನವನ್ನು ಪ್ರತ್ಯೇಕವೆಂಬಂತೆ ಚಿಂತಿಸುವುದೇ ಮೂಲತಃ ತೊಡಕಿನದು. 

ಕನಕಕವಿ ತನ್ನ ಕಾಲದ ಜಾತಿ ತಾರತಮ್ಯದಿಂದ ಬೇಸತ್ತು ಅದರ ಟೊಳ್ಳುತನವನ್ನು ಬಯಲು ಮಾಡುತ್ತಲೇ ಜಾತಿಯ ಮೀರುವಿಕೆಯ ಕಡೆ ಚಲಿಸುತ್ತಾರೆ. ಇದನ್ನು ನಾವು ಅರ್ಥಮಾಡಿಕೊಳ್ಳುವ ಕ್ರಮ ಯಾವುದು? ಕನಕನನ್ನು ಕುರುಬ ಸಮುದಾಯಕ್ಕೆ ಕಟ್ಟಿಹಾಕಿ ಎದುರು ವೈದಿಕಶಾಹಿಯನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡುವುದೇ? ಅಥವಾ ಈ ವಿರುದ್ಧ ಸಂಗತಿಗಳನ್ನು ಮೀರಿ ಜಾತಿವಿನಾಶದ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದೇ ಎನ್ನುವ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಇದನ್ನು ಖಚಿತಪಡಿಸಿಕೊಂಡಾಗ ಕನಕರನ್ನು ವರ್ತಮಾನದಲ್ಲಿ ಎದುರುಗೊಳ್ಳಬೇಕಾದ ನೆಲೆಗೆ ಸ್ಪಷ್ಟತೆ ಸಿಗುತ್ತದೆ.

ವರ್ತಮಾನದಲ್ಲಿ ಕನಕರ ಗುರುತು ಯಾವ ರೂಪದಲ್ಲಿ ಬಲಗೊಂಡಿದೆ ಎಂದು ನೋಡೋಣ. ಕರ್ನಾಟಕದ ಬಹುಪಾಲು ಹಳ್ಳಿಗಳಲ್ಲಿ ಕನಕದಾಸರ ಹೆಸರಿನ ವೃತ್ತ, ಕಾಲನಿ, ನಗರ, ಸಂಘ ಸಂಸ್ಥೆಗಳಿವೆ. ಕಾರು ಬೈಕು ಮೊದಲಾದ ವಾಹನಗಳ ಮೇಲೆ, ಮನೆ ಅಂಗಡಿ ಮುಂತಾದ ಕಟ್ಟಡಗಳ ಮೇಲೆ ಕನಕದಾಸರ ಹೆಸರು ಅಚ್ಚಾಗಿದೆ. ವರ್ಷಕ್ಕೊಮ್ಮೆ ಕನಕದಾಸರನ್ನು ನೆನಪಿಸಿಕೊಳ್ಳುವ ಜಯಂತಿ ಆಚರಣೆ ನಗರಗಳಲ್ಲಿ ಮತ್ತು ಸಾವಿರಾರು ಹಳ್ಳಿಗಳಲ್ಲಿ ಆಯೋಜನೆಗೊಳ್ಳುತ್ತದೆ. ಇನ್ನು ಕುರುಬ ಸಮುದಾಯದ ಮಠಗಳಲ್ಲಿ ಕನಕನ ಆರಾಧನೆಗಳು ನಡೆಯುತ್ತವೆ. ಇವುಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವೆಲ್ಲವೂ ನಿಸ್ಸಂಶಯವಾಗಿ ಕುರುಬ ಸಮುದಾಯವನ್ನು ಆಧರಿಸಿದ ಅಥವಾ ಒಳಗೊಂಡ ಪ್ರಕ್ರಿಯೆಗಳು. ಇದನ್ನು ಹೊರತುಪಡಿಸಿದರೆ ಬ್ರಾಹ್ಮಣ ಯುವಕರು ಅಥವಾ ದಲಿತ ಮುಸ್ಲಿಂ ಯುವಕರು ಕನಕಸಂಘವನ್ನು ಕಟ್ಟಿಕೊಂಡದ್ದು, ಮೇಲಿನ ಪ್ರಕ್ರಿಯೆಗಳು ಈ ಸಮುದಾಯಗಳಲ್ಲಿ ನಡೆದದ್ದು ಕಾಣುವುದಿಲ್ಲ. ಉದಾಹರಣೆ ಕೊಡಲು ಒಂದೆರಡು ಅಪರೂಪದ ಸಂಗತಿಗಳು ಸಿಗಬಹುದಷ್ಟೆ.

ಈ ಸಂಗತಿಯನ್ನು ವಾಲ್ಮೀಕಿ, ಬಸವಣ್ಣ, ಭಗೀರಥ ಮುಂತಾದ ಜಾತಿಜನ್ಯ ಗುರುತುಗಳ ಅನುಸಂಧಾನದ ಪ್ರಕ್ರಿಯೆಗೂ ಅನ್ವಯವಾಗುತ್ತದೆ. ಕನಕನ ವರ್ತಮಾನ ಹೀಗಿರುವಾಗ, ಸ್ವತಃ ಕನಕರು ಜಾತಿಯ ಬಗ್ಗೆ ತೋರುವ ಯಾವ ಸಂಗತಿಗಳನ್ನು ಮುನ್ನೆಲೆಗೆ ತರಬೇಕು  ಎಂಬುದನ್ನು ಯೋಚಿಸೋಣ.

ಕನಕನ್ನು ಆಧರಿಸಿದ ಸಾರ್ವಜನಿಕ ಸಂಸ್ಥೆಗಳೂ ಇವೆ. ಅವು ಮಂಗಳೂರು ವಿವಿಯ ಕನಕ ಅಧ್ಯಯನ ಪೀಠ, ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠ, ಸಂತಕವಿ ಕನಕ ರಾಷ್ಟ್ರೀಯ ಸಂಶೋಧನ ಸಂಸ್ಥೆ ಬೆಂಗಳೂರು, ಕಾಗಿನೆಲೆಯ ಕನಕ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿ. ಇವುಗಳು ಕನಕನನ್ನು ಜಾತಿಜನ್ಯವಾಗಿ ಕಟ್ಟದೆ ಜಾತಿ ಮೀರಿದ ನೆಲೆಯಲ್ಲಿ ಕನಕನನ್ನು ಜನಮಾನಸದಲ್ಲಿ ನೆಲೆಗೊಳಿಸಲಿಕ್ಕೆ ಪೂರಕವಾದ ಕೆಲಸಗಳನ್ನು ಮಾಡಬೇಕಿದೆ. ಈ ಸಂದರ್ಭದಲ್ಲಿ ಕನಕನ ಜಾತಿ ಮೀರುವ ಚರ್ಚೆಗಳನ್ನು ಮುನ್ನೆಲೆಗೆ ತರಬೇಕಿದೆ. ಇದು ಈಗ ಬಹಳ ಮುಖ್ಯವಾಗಿ ಆಗಬೇಕಾದ ಕೆಲಸವಾಗಿದೆ.

ದಾಸಸಾಹಿತ್ಯದ ಒಟ್ಟು ಚಿಂತನೆ ಕನಕದಾಸರನ್ನು ಮತ್ತು ಅವರ `ಜಾತಿ’ ಪ್ರಶ್ನೆಯನ್ನು ಹೇಗೆ ನಿಭಾಯಿಸಿದೆ ಎಂದು ನೋಡಬೇಕಾಗಿದೆ. ಅಂದರೆ ಕನಕರ ಮೂಲಕ ಇಡೀ ದಾಸಸಾಹಿತ್ಯವನ್ನು ನೋಡಿದರೆ ಅದು ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ. ದಾಸಸಾಹಿತ್ಯದ ಚಿಂತನೆಗಳನ್ನು ಪ್ರಧಾನವಾಗಿ ಗಮನಿಸಿದರೆ ಕನಕದಾಸರು ಯಾವ ಯಾವ ಸಂಗತಿಗಳಿಗೆ, ಕಾರಣಗಳಿಗೆ, ಸಮರ್ಥನೆಗಳಿಗೆ ಉಲ್ಲೇಖವಾಗುತ್ತಾರೆ ಎಂದು ಪಟ್ಟಿಮಾಡಿದರೆ ಕುತೂಹಲಕಾರಿ ಸಂಗತಿಗಳು ಬಯಲಾಗುತ್ತವೆ. ಆಗ ಮೇಲುಜಾತಿಯ ಮಠೀಯ ವಿದ್ವತ್ ಲೋಕ ಕನಕನನ್ನು ವಿಶ್ಲೇಷಿಸುವ ಕ್ರಮ ಅರಿವಾಗುತ್ತದೆ. ಮುಖ್ಯವಾಗಿ ದಾಸಸಾಹಿತ್ಯಕ್ಕೆ ಎದುರುಗೊಳ್ಳಬಹುದಾದ ಸಾಮಾಜಿಕ ನ್ಯಾಯದ ಪ್ರಶ್ನೆ, ಪುರೋಹಿತಶಾಹಿ ಪ್ರಶ್ನೆ, ಹರಿಸರ್ವೋತ್ತಮದ ಪ್ರಶ್ನೆ ಮತ್ತು ಬ್ರಾಹ್ಮಣ ಪಾರಮ್ಯದ ಕಟುವಾದ ಪ್ರಶ್ನೆಗಳು ಎದುರಾದಗಲೆಲ್ಲಾ ಈ ಪ್ರಶ್ನೆಗಳಿಂದ ಪಾರಾಗಲು `ಕನಕ’ ಒಂದು ಅಸ್ತ್ರದಂತೆ ಬಳಕೆಯಾಗುವುದನ್ನು ಗಮನಿಸಬಹುದು. ಇಲ್ಲೆಲ್ಲಾ ಕನಕರು ದಾಸಸಾಹಿತ್ಯಕ್ಕೆ ಅಂಟಬಹುದಾದ ಶಾಶ್ವತ ಊನತೆಯನ್ನು ಕೊಂಚ ಕಡಿಮೆ ಮಾಡುತ್ತಾರೆಂದು ಅನ್ನಿಸುತ್ತದೆ. 

ಕನಕರು ತನ್ನ ಕೀರ್ತನೆಗಳಲ್ಲಿ ತನ್ನ ಜಾತಿಯನ್ನು ಸ್ವಾಭಿಮಾನದ ಸಂಕೇತವಾಗಿಯೂ ಯಾವುದೇ ಕೀಳಿರಿಮೆ ಇಲ್ಲದೆ `ನಾವು ಕುರುಬರು ನಮ್ಮ ದೇವರು ಬೀರಯ್ಯ, ಕಾವೆ ನಮ್ಮಜ್ಜ ನರಕುರಿಯ ಹಿಂಡುಗಳ’ ಎಂದಿದ್ದಾರೆ. ಇದು ವೈದಿಕರು ಗೋವು ಮತ್ತು ಗೋಪಾಲಕನ ಮೂಲಕ ಭಕ್ತ ಮತ್ತು ಭಗವಂತನ ರೂಪಕ ಕಟ್ಟಿಕೊಳ್ಳುವುದಕ್ಕೆ ಪರ್ಯಾಯವಾಗಿ ಕನಕರು `ಕುರಿ’ ಮತ್ತು `ಕುರುಬ’ನ ಮೂಲಕ ಭಕ್ತ ಭಗವಂತನನ್ನು ರೂಪಕವಾಗಿ ಕಟ್ಟುವ ಕ್ರಮ ಇಡೀ ದಾಸಪರಂಪರೆಯಲ್ಲಿಯೇ ವಿಶಿಷ್ಟವಾದುದು. ಆದರೆ ಈ ಕೀರ್ತನೆ ಉಂಟುಮಾಡಿದ ಪರಿಣಾಮ ಮಾತ್ರ ಜಾತಿ ನೆಲೆಯಲ್ಲಿ ಎನ್ನುವುದನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಜನಪದ ಹಾಡುಪರಂಪರೆಯಲ್ಲಿ ದೊಡ್ಡಮಟ್ಟದ ರಚನೆಗಳಾಗಿವೆ. ಇದನ್ನು ಡೊಳ್ಳಿನ ಹಾಡುಗಳಲ್ಲಿ ಕಾಣಬಹುದು.

ನಿಂಗಣ್ಣ ಸಣ್ಣಕ್ಕಿ ಅವರು ಸಂಪಾದಿಸಿದ ಡೊಳ್ಳಿನ ಪದಗಳು ಕೃತಿಯ ಒಂದು ಡೊಳ್ಳಿನ ಹಾಡಿನ ಪೂರ್ಣ ಪಾಠವೊಂದು ಹೀಗಿದೆ:

ವಚನ :

ನಮ್ಮ ಕೈಗಳು ಕಾಮಧೇನು! ಗೈಮೆ ಕಲ್ಪವೃಕ್ಷ! ಮಂಗಳ ಗ್ರಹ ಮುಳುಗುವವರೆಗೆ ನಾವು ಕುರಿ ಮೇಯಿಸುವುದರಿಂದ ಅದಕ್ಕೆ ಕುರುಬರ ಚಿಕ್ಕೆ ಎಂದು ಹೆಸರು ಬಂದಿರುವದು. ಕಾರಣ ನಮ್ಮ ಚರಿತ್ರೆ ಹಾಗೆ ಮಹತ್ವದ್ದಾಗಿರುವದು.

ಪದ :

ಗೋಕುಲದೊಳಗಾಕಳ ಮೇಯಿಸಿದಾ

ಶ್ರೀಕೃಷ್ಣನು ಕುರುಬನು ಕೇಳು

ಶ್ರೀಕೃಷ್ಣನು ಕುರುಬರು ಕೇಳು

ಸುಳ್ಳಾದರೆ ಪಂಡಿತರನು ಕೇಳು     || 28 ||

ಸಂಸ್ಕೃತ ಸಾಹಿತ್ಯದಾಕಾಶ ದಿನ ಮಣಿ

ಕಾಲಿದಾಸ ಕುರುಬನು ಕೇಳು

ಕಾಲಿದಾಸ ಕುರುಬನು ಕೇಳು

ನೀನೊಪ್ಪದಿದ್ದರೀಗಲೆ ಹೇಳು        || 29 ||

ಕನ್ನಡ ನಾಡಿನ ಚನ್ನಿಗ ಕವಿವರ

ಕನಕದಾಸ ಕುರುಬನು ಕೇಳು

ಕನಕದಾಸ ಕುರುಬನು ಕೇಳು

ಕೇಳಿದಕಾಗಿ ನಮ್ಮೀ ಕುಲ ಮೇಲು   || 30 ||

ವಿಜಯನಗರ ಸಾಮ್ರಾಜ್ಯದ ಕಟ್ಟಿದ

ಹಕ್ಕಬುಕ್ಕರು ಕುರುಬರು ಕೇಳು

ಹಕ್ಕಬುಕ್ಕರು ಕುರುಬರು ಕೇಳು

ಸಂಗೊಳ್ಳಿರಾಯಣ್ಣನು ಕಟ್ಟಾಳು     || 31 ||

ಮರಾಠಾ ಸಾಮ್ರಾಜ್ಯ ಕಟ್ಟಿದ ಶಿವಾಜಿ

ಮಹಾರಾಜ ಕುರುಬನು ಕೇಳು

ಮಹಾರಾಜ ಕುರುಬನು ಕೇಳು

ಸುಳ್ಳಾದರೆ ತಿಳಿ ಇತಿಹಾಸದೊಳು  || 32 ||

ಅಲ್ಪ ವೆಚ್ಚದಲಿ ರೈತಗೆ ಗೊಬ್ಬರ

ಕೊಡುವವರೇ ಕುರುಬರು ಕೇಳು

ಕೊಡುವವರೇ ಕುರುಬರು ಕೇಳು

ಹೀಗೀ ರೈತ ಕುರುಬರೊಳ್ಳೇ ಮೇಳು    || 33 ||

ಬಹಳ ಹೇಳಲಾರೆ ಮೈಲಾರ ಲಿಂಗನು

ಕುರುಬರ ಮನೆ ಕಾಯುವ ಆಳು

ಕುರುಬರ ಮನೆ ಕಾಯುವ ಆಳು

ಈ ಜಗದಿ ಭಕ್ತಿ ಗಾವುದ ಮೇಲು     || 34 ||

ಹೀಗೆ ಕನಕರನ್ನು ಕುರುಬ ಸಮುದಾಯಕ್ಕೆ ಸೀಮಿತಗೊಳಿಸುವ ಮೌಖಿಕ ರಚನೆಗಳು ಯಥೇಚ್ಚವಾಗಿ ರಚನೆಯಾಗಿವೆ. ಈ ಹಿನ್ನೆಲೆಯಲ್ಲಿ ಕನಕರ ಜಾತಿ ಪ್ರಶ್ನೆಯು ಮೌಖಿಕ ಪರಂಪರೆಯಲ್ಲಿ ಹೇಗೆ ರೂಪಾಂತರಗೊಂಡಿದೆ ಎನ್ನುವ ಚರ್ಚೆ ಮಾಡಲು ಸಾಧ್ಯವಿದೆ.

ಕನಕರ ಜಾತಿ ತರತಮದ ಬಗ್ಗೆ ಎತ್ತುವ ಪ್ರಶ್ನೆಗಳನ್ನು ಒಟ್ಟಾರೆ ಕೆಳಜಾತಿ ದಾಸರ ನೆಲೆಯಲ್ಲಿಯೂ ಇನ್ನಷ್ಟು ಭಿನ್ನವಾಗಿ ವಿಶ್ಲೇಷಣೆ ಮಾಡಲು ಅವಕಾಶವಿದೆ. ಒರಿಸ್ಸಾದ ಚೈತನ್ಯ ಪಂಥದ ಪ್ರಭಾವದಲ್ಲಿ ಏಕವ್ಯಕ್ತಿ ಮಾದರಿಯ ದ್ವೈತಭಾಗವತ ಭಕ್ತಿಯನ್ನು ಕೆಳಜಾತಿಗಳ ಜನರಲ್ಲಿ ಸಾರಬೇಕೆನ್ನುವ ಹಿನ್ನೆಲೆಯಲ್ಲಿ ಕೆಳಜಾತಿಗಳನ್ನು `ದಾಸಯ್ಯ’ `ದಾಸಪ್ಪ’ಗಳಾಗಿ ದೀಕ್ಷೆ ನೀಡುವುದು ನಡೆಯಿತು. ಇಂಥದ್ದೊಂದು ದಾಸಪರಂಪರೆ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ದಾಸಪ್ಪ ಜೋಗಪ್ಪ ಪರಂಪರೆಯಾಗಿ ಮುಂದುವರಿದಿದೆ. ಇಂತವರ ರಚನೆಯ ಕೀರ್ತನೆಗಳ ಬಗ್ಗೆ ಇನ್ನಷ್ಟು ಸೂಕ್ಷ್ಮವಾದ ಅಧ್ಯಯನಗಳು ನಡೆಯಬೇಕಾಗಿದೆ.

ಮುಖ್ಯವಾಗಿ ಪಿಂಜಾರ ಬಡೇಸಾಬರು (ರಾಮದಾಸರು). ಗಾಣಿಗ ಸಮುದಾಯದ ಮಳಿಗೆ ರಂಗಸ್ವಾಮಿದಾಸರು. ರಾಯಚೂರು ಪ್ರಾಂತ್ಯದ ಚಂದನಕೆರೆ ದೊರೆಗಳು ಬೇಡರಾಗಿದ್ದರೂ ಭಾಗವತರಾದರು, ಗೋಪಾಲದಾಸರು ಪ್ರಭಾವ ಬೀರಿದರು. ಕೋಸಗಿಯ ಜಗನ್ನಾಥದಾಸರು ಹಲವಾರು ನೇಕಾರರಿಗೆ ದೀಕ್ಷೆ ನೀಡಿದರು. ಅಸ್ಥಿಹಾಳ ಗೋವಿಂದ ದಾಸರು ನಾಯಿಂದ ಸಮುದಾಯದವರಿಗೆ ದೀಕ್ಷೆ ನೀಡಿದರು. ಮಾನವಿಯ ಶಾಮಸುಂದರ ವಿಠಲದಾಸರು ಹರಿಜನ ಮೂರ್ತೆಪ್ಪನನ್ನು ತಮ್ಮ ಆಪ್ತ ವರ್ಗದಲ್ಲಿರಿಸಿಕೊಂಡು ಹರಿದಾಸನನ್ನಾಗಿ ಮಾಡಿದರು. ಚಂಡರಕಿ ರಾಘವೇಂದ್ರದಾಸರು ಹೂಗಾರ (ಜೀರರು) ಸಮುದಾಯದವರನ್ನು ದಾಸಕೂಟದಲ್ಲಿ ಸೇರಿಸಿದರು. ಜೀರರ ಭೀಮದಾಸ ಕೆಲವು ಕೀರ್ತನೆಗಳನ್ನೂ ಬರೆದಿದ್ದಾನೆ. ಬೆಂಗಳೂರಿನ ದಾಸ ಲಕ್ಷ್ಮಿನಾರಾಯಣರಾಯರು ನಡೆಸುತ್ತಿದ್ದ ಭಜನಾ ಗೋಷ್ಠಿಯಲ್ಲಿ ಎಲ್ಲಾ ಜಾತಿಯವರಿಗೆ ಪ್ರವೇಶವಿತ್ತು. ಇಂತಹ ಕೆಳಜಾತಿಗಳ ಪ್ರವೇಶಕ್ಕೆ ಕನಕದಾಸರ ಪ್ರಭಾವವನ್ನು ವಿಶ್ಲೇಷಣೆಗೆ ಒಳಪಡಿಸಬೇಕಾಗಿದೆ. ಅಂತೆಯೇ ಕೆಲವು ಕೆಳಜಾತಿಯ ದಾಸರ ಕೀರ್ತನೆಗಳಲ್ಲಿ ಬರುವ ಜಾತಿ ಪ್ರಶ್ನೆಯನ್ನು ಗುರುತಿಸುತ್ತಾ ಕನಕದಾಸರ ಎತ್ತುವ ಜಾತಿ ಪ್ರಶ್ನೆಯ ಜತೆಗಿಟ್ಟು ಚರ್ಚಿಸಲು ಅವಕಾಶವಿದೆ. ಕನ್ನಡ ಮತ್ತು ಕರ್ನಾಟಕದ ಸಂದರ್ಭದಲ್ಲಿ ಜಾತಿ ಚರ್ಚೆ ಬಂದಾಗ `ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎನ್ನುವ ಪ್ರಶ್ನೆಯೊಂದು ಮತ್ತೆ ಮತ್ತೆ ಎದುರಾಗುತ್ತದೆ. ಅಷ್ಟರಮಟ್ಟಿಗೆ ಮನುಕುಲ ಉತ್ತರಿಸಲಾಗದ ಜಟಿಲ ಪ್ರಶ್ನೆಯೊಂದನ್ನು ಕನಕರು ಕೇಳಿದ್ದಾರೆ. ಈ ಪ್ರಶ್ನೆಗೆ ಈತನಕವೂ ಉತ್ತರ ಸಿಕ್ಕಿಲ್ಲ. ಅಥವಾ ಉತ್ತರ ಸಿಗದಷ್ಟು ಖಚಿತವಲ್ಲದ ಮೂಲವಿಲ್ಲದ ಜಾತಿಯೊಂದು ಹೇಗೆ ತನ್ನ ಪ್ರಾಬಲ್ಯವನ್ನು ಚಾಚಿದೆ ಎನ್ನುವ ನೆಲೆಯಲ್ಲಿ ಮರು ಚಿಂತನೆ ಮಾಡುವ ಅಗತ್ಯವಿದೆ. ಅಂತೆಯೇ ಉಡುಪಿಯ ಕೃಷ್ಣಮಠದ ಕನಕನ ಕಿಂಡಿಯೊಂದು ಜಾತಿಶ್ರೇಣೀಕರಣವನ್ನು ಡಾಳಾಗಿ ಬಿಂಬಿಸುವ ಮೂರ್ತರೂಪ. ಬ್ರಾಹ್ಮಣರೇ ಕೆಳಜಾತಿಗಳನ್ನು ಒಳಗೊಳ್ಳಲು ಮಾಡಿದ ತಂತ್ರವೆಂಬ ಚರ್ಚೆಯೂ ಇದೆ, ಹೀಗಿದ್ದಾಗಲೂ ಇದು ಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡು ದರ್ಶನ ಕೊಡುವಂತೆ ಮಾಡಿದ ಕನಕನ ಬಂಡಾಯದ ರೂಪಕವೆಂಬಂತೆ ಗುರುತಿಸಿಕೊಳ್ಳಬೇಕಿದೆ. ವೈದಿಕತೆಯ ಗರ್ವಭಂಗ ಮಾಡಿದ ಈ ಕಥೆ ಮತ್ತು ಭೌತಿಕ ಕಿಂಡಿ ಜಾತಿ ನೆಲೆಯ ವೈಚಾರಿಕತೆಯನ್ನು ರೂಪಿಸಲು ಇರುವ ಶಕ್ತ ರೂಪಕದಂತೆ ಕಾಣುತ್ತದೆ. ಇದು ನುಂಗಲಾರದ ತುತ್ತಾಗಿ ಉಡುಪಿಯ ಕೃಷ್ಣಮಠಕ್ಕೆ ಅಂಟಿಕೊಂಡಂತೆ ಬ್ರಾಹ್ಮಣ್ಯಕ್ಕೆ ದುಸ್ವಪ್ನವಾಗಿದೆ. ಕುಲದ ಪ್ರಶ್ನೆ ಮತ್ತು ಕನಕನ ಕಿಂಡಿಯ ಶಕ್ತರೂಪಕಗಳನ್ನು ವಿಸ್ತರಿಸುವ ಕ್ರಿಯಾಶೀಲ ಕೆಲಸವೂ ಆಗಬೇಕಿದೆ.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]