ಎಲ್ಲರಿಗೂ ಸಂಜೆಯ ಶುಭನಮಸ್ಕಾರಗಳು. ಈಗಾಗಲೇ ಬೆಳಿಗ್ಗೆಯಿಂದಲು ಸಾಕಷ್ಟು ಜನ ಸ್ವಾಮೀಜಿಗಳು ತುಂಬಾ ವಿಚಾರವಾದ ಮಾತುಗಳನ್ನಾಡಿದ್ದಾರೆ. ಆದ್ದರಿಂದ ಸ್ವಲ್ಪದರಲ್ಲೆ ನನ್ನ ಮಾತುಗಳನ್ನು ಮುಗಿಸುವೆ. ಏಕೆಂದರೆ ಬಹಳಷ್ಟು ಜನ ಬಹಳ ದೂರದಿಂದ ಬೇರೆಬೇರೆ ಊರಿನಿಂದ ಬಂದವರಿದ್ದೀರಿ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣದ ದಿವಸ ಪರಿವರ್ತನೆ ದಿನಾಚರಣೆಯನ್ನು ಮೂಢನಂಬಿಕೆಗಳ ಕಾರ್ಯಕ್ರಮದ ದಿನ ಆಗಮಿಸಿರುವಂತಹ ವೇದಿಕೆ ಮೇಲಿರುವಂತಹ ಎಲ್ಲಾ ಸ್ವಾಮೀಜಿಗಳಿಗು ಹಾಗು ಎಲ್ಲಾ ಮಾನ್ಯರಿಗೂ ನನ್ನ ಅನಂತ ಅನಂತ ಧನ್ಯವಾದಗಳು. ಹಾಗು ವಿಷೇಶವಾಗಿ ರಾಜ್ಯದ ಮೂಲೆಮೂಲೆಯಿಂದ ಆಗಮಿಸಿರುವ ನನ್ನೆಲ್ಲಾ ಆತ್ಮೀಯ ಬಾಂಧವರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ಕಳೆದ ಎರಡು ವರ್ಷದಿಂದ ಬೆಳಗಾವಿಯ ಸದಾಶಿವನಗರದ ರುದ್ರಭೂಮಿಯಲ್ಲಿ ಮೂರನೇ ವರ್ಷದ ಕಾರ್ಯಕ್ರಮ. ಈ ಕಾರ್ಯಕ್ರಮದ ಉದ್ದೇಶ ತಮಗೆಲ್ಲ ಗೊತ್ತಿರುವಂತಹ ವಿಚಾರ. ಮೂಢನಂಬಿಕೆ ವಿರೋಧಿ ಕಾರ್ಯಕ್ರಮ ಮಾಡಬೇಕು, ಜನರನ್ನ ಮೌಢ್ಯಮುಕ್ತ ಸಮಾಜವನ್ನು ಕಟ್ಟಬೇಕು ಎಂದು ನನ್ನ ಹಳೆಯ ಕನಸು. ಅದು ವಿಶೇಷವಾಗಿ ಸ್ಮಶಾನದಲ್ಲಿ ಮಾಡುವುದರಿಂದ ಅದಕ್ಕೆ ಬಹಳ ಚಿಂತನೆಗಳ ಅವಕಾಶವಾಗುತ್ತದೆ. ಬಹುಶಃ ಇದೇ ಕಾರ್ಯಕ್ರಮವನ್ನು ಬೇರೆ ಕಡೆಗೆ ಮಾಡಿದ್ದಿದ್ದರೆ ಇಷ್ಟೊಂದು ಅದ್ಭುತವಾಗಿ ನಡೆಯುತ್ತಿರಲಿಲ್ಲವೇನೋ. ಈ ಕಾರ್ಯಕ್ರಮ ಈ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶವೇ ನೋಡುವಂತಹ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಮೊದಲನೇ ವರ್ಷ ಈ ಕಾರ್ಯಕ್ರಮ ಮಾಡಿದಾಗ ಬಹಳಷ್ಟು ಜನರಲ್ಲಿ ಭಯವಿತ್ತು. ಸ್ಮಶಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ, ಕಾರ್ಯಕ್ರಮ ಯಶಸ್ವಿಯಾಗುವುದೋ ಅಥವಾ ಏನಾಗುವುದೋ ಎಂದು. ಅಡಿಗೆ ಮಾಡಿದ್ದರೂ ಬಹಳಷ್ಟು ಜನ ಊಟ ಮಾಡಿರಲಿಲ್ಲ. ನಂತರದ ವರ್ಷ ಸರಿಹೋಯಿತು. ಈಗಂತೂ ಸಂಪೂರ್ಣವಾಗಿ ಬದಲಾವಣೆಯಾಗಿದೆ.
ನಾವಂದುಕೊಂಡಂತೆ ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಬರುವಂತವರ ಸಂಖ್ಯೆ ಹೆಚ್ಚಾಗುತ್ತಲಿದೆ. ಮುಂದಿನ ವರ್ಷವೂ ಕೂಡ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ನಮ್ಮ ನಿಮ್ಮೆಲ್ಲರ ಕಡೆಯಿಂದಲೂ ಆಗಬೇಕಿದೆ. ನಾವು ಹೇಳುವಂತಹ ವಿಚಾರಗಳನ್ನು ನೀವು ಅಳವಡಿಸಿಕೊಳ್ಳಬೇಕು. ಕೇವಲ ಕೇಳಿಸಿಕೊಂಡು ಹೋಗುವುದಲ್ಲ. ಅದನ್ನು ಅಳವಡಿಸಿಕೊಂಡು, ನಿಮ್ಮ ಜೀವನದಲ್ಲಿ ಜಾರಿಗೆ ತರಬೇಕು. ಅಲ್ಲದೆ ಮುಂದಿನ ಸಲ ಕಾರ್ಯಕ್ರಮಕ್ಕೆ ಬೇರೆಯವರನ್ನೂ ಕರೆತರಬೇಕು. ಹಾಗಾದಾಗ ಮಾತ್ರ ಈ ಸಂಘಟನೆಯ ಆಶಯಗಳು ಮತ್ತು ಬುದ್ದ, ಬಸವ, ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಮೂಲಕ ಹೊಸ ಸಮಾಜವನ್ನು ಕಟ್ಟಲು ಸಾಧ್ಯ. ಅಷ್ಟೇ ಅಲ್ಲದೆ ಆಗಲೇ ಸ್ವಾಮೀಜಿಗಳು ಹೇಳುತ್ತಿದ್ದರು. ಇದಿಷ್ಟೇ ಅಲ್ಲ ಬೇರೆಬೇರೆ ಶಿಬಿರಗಳನ್ನು ಮಾಡುವುದರ ಮೂಲಕ ತರಬೇತಿಗಳನ್ನು ಕೊಡಬೇಕೆಂದು ಹೇಳುತ್ತಿದ್ದರು. ನಮ್ಮ ಶಾಖೆಗಳು ಈಗಾಗಲೇ 175 ತಾಲ್ಲುಕುಗಳಲ್ಲಿ ಇವೆ. ಅವು ತರಬೇತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಲಿವೆ. ಅಷ್ಟೇ ಅಲ್ಲದೆ ಹಲವಾರು ವಿಚಾರವಾದಿಗಳ ವಿಚಾರಗಳನ್ನು ಮನೆಮನೆಗೆ ಬಂದು ಮನಗಳಿಗೆ ಮುಟ್ಟಿಸುವಂತಹ ಕೆಲಸ ನಮ್ಮ ಮಾನವ ಬಂಧುತ್ವ ವೇದಿಕೆಯ ಕಡೆಯಿಂದ ನಿರಂತರವಾಗಿ ನಡೆಯುತ್ತಲಿದೆ. ನಮ್ಮ ಉದ್ದೇಶವಿಷ್ಟೆ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು, ಅಂಥವರನ್ನು ಈ ಸಮಾಜಕ್ಕೆ ಪರಿಚಯಿಸುವುದು. ಮೂಢನಂಬಿಕೆಯನ್ನು ಹೊಡೆದೋಡಿಸಲು ನಮ್ಮ ರಾಜ್ಯದಲ್ಲಿ ಖಂಡಿತವಾಗಿಯೂ ಬದಲಾವಣೆ ಆಗುತ್ತದೆ ಎಂದು ನೀವೆಲ್ಲ ಸಂಕಲ್ಪ ಮಾಡಬೇಕು. ಆಗ ಮಾತ್ರ ನಾವೆಲ್ಲ ಒಂದು ಉತ್ತಮವಾದ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.
ವಿಶೇಷವಾಗಿ ಜಾತಿವ್ಯವಸ್ಥೆ, ಧರ್ಮದ ವ್ಯವಸ್ಥೆ ಮತ್ತು ಮೂಢನಂಬಿಕೆಯ ವ್ಯವಸ್ಥೆಯಿಂದ ಹೊರಬರುವುದಕ್ಕೆ ಸಾಧ್ಯವಾಗುತ್ತದೆ. ಈ ಮೂಢನಂಬಿಕೆ ಕೆಳವರ್ಗದ ಜನರಲ್ಲಿ ಒಂದು ಕ್ಯಾನ್ಸರ್ ರೋಗದಂತೆ ನಾವೆಷ್ಟೇ ಆರ್ಥಿಕವಾಗಿ ಸಬಲರಿದ್ದರೂ ಕೂಡ ನಮ್ಮನ್ನು ಈ ಯಾವುದೋ ಒಂದು ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ದೆವ್ವದ ಹೆಸರಿನಲ್ಲಿ ಕಟ್ಟಿಹಾಕಿಕೊಳ್ಳುತ್ತೇವೆ.