ನಮ್ಮ ಸಂವಿಧಾನವನ್ನು ಹಲವು ಮೂಲತತ್ವಗಳ ಅಡಿಪಾಯದ ಮೇಲೆ ರೂಪಿಸಲಾಗಿದೆ. ಇವುಗಳನ್ನು ಮೂಲತತ್ವ ಎಂಬ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿಲ್ಲವಾದರೂ, ಅಂತರ್ಗತ ಮಾಡಲಾಗಿದೆ.
ಉದಾಹರಣೆಗೆ, ಸಂವಿಧಾನದ 368ನೇ ಅನುಚ್ಛೇದವು ಸಂವಿಧಾನವನ್ನು ತಿದ್ದುಪಡಿ ಮಾಡುವುದಕ್ಕೆ ಸಂಸತ್ತಿಗೆ ಅಧಿಕಾರ ನೀಡುತ್ತದೆ. ಆದರೆ, ಈ ಅಧಿಕಾರದ ಮುಖೇನ ಬೇರೊಂದು ಸಂವಿಧಾನವನ್ನು ರಚಿಸಿ ಈಗಿರುವ ಸಂವಿಧಾನವನ್ನು ಕೊನೆಗೊಳಿಸುವುದಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗಿರುವ ಅಧಿಕಾರ ನಿರುಪಾಧಿಕವೇ ಅಥವಾ ನಿರ್ಬಂಧಗಳಿಗೆ ಒಳಪಟ್ಟಿದೆಯೇ ಎಂಬುದನ್ನು ಸರ್ವೋಚ್ಛ ನ್ಯಾಯಾಲಯವು ಕೇಶವಾನಂದ ಭಾರತಿ ಪ್ರಕರಣದಲ್ಲಿ (1973ರ (4) ಎಸ್ಸಿಸಿ 255) ಪರಾಮರ್ಶಿಸಿದೆ. ಹಾಗೆ ಮಾಡುವಾಗ ಸರ್ವೋಚ್ಛ ನ್ಯಾಯಾಲಯ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಂಡಿದೆ:
1) ಈ ದೇಶದ ಪ್ರಭುತ್ವವನ್ನು ನಾಶಪಡಿಸಿ ಇನ್ನೊಂದು ದೇಶಕ್ಕೆ ಅಧೀನವಾಗಿ ಮಾಡಬಹುದೇ?
2) ಈಗಿನ ಪ್ರಜಾಪ್ರಭುತ್ವ ಸರ್ಕಾರಕ್ಕೆ ಬದಲು ರಾಜಾಡಳಿತ ಪದ್ಧತಿಯನ್ನು ಅಥವಾ ನಿರಂಕುಶ ಪ್ರಭುತ್ವವನ್ನು ಜಾರಿಗೆ ತರಬಹುದೇ?
3) ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬದಲಾಯಿಸಿ, ಹಲವು ಸ್ವತಂತ್ರ ರಾಜ್ಯಗಳನ್ನು ರಚಿಸಬಹುದೇ?
4) ಈ ದೇಶದ ಧರ್ಮನಿರಪೇಕ್ಷ ಸ್ವರೂಪವನ್ನು ಬದಲಿಸಿ ಧರ್ಮಾಧಾರಿತ ಸ್ವರೂಪದ ಸರ್ಕಾರವನ್ನು ಸ್ಥಾಪಿಸಬಹುದೇ?
5) ಪ್ರಜೆಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಹಕ್ಕುಗಳನ್ನು ರದ್ದುಗೊಳಿಸಬಹುದೇ?
6) ಈ ದೇಶವನ್ನು ಒಂದು ಕಲ್ಯಾಣ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬೇಕೆನ್ನುವ ಜನಾದೇಶವನ್ನು ರದ್ದುಗೊಳಿಸಬಹುದೆ?
7) ಸಂಸತ್ತಿನ ಎರಡೂ ಸದನಗಳ ಕಾರ್ಯಾವಧಿಯನ್ನು ಅನಿರ್ದಿಷ್ಟ ಕಾಲದವರೆಗೆ ಮುಂದುವರೆಸಬಹುದೇ?
8) ಸಂವಿಧಾನವನ್ನು ಕಾನೂನು ರೀತ್ಯಾ ಅಥವಾ ಇತರ ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡದಂತೆ ಸಂವಿಧಾನವನ್ನು ನಿರ್ಬಂಧಿಸಬಹುದೇ?
ಅನುಚ್ಛೇದ 368ರಲ್ಲಿ ನೀಡಿರುವ ಅಧಿಕಾರವು ಈ ಮೇಲಿನ ಯಾವುದೇ ರೀತಿಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡುವುದಿಲ್ಲ. ಸಂವಿಧಾನ ಕರ್ತೃಗಳು ಅಳವಡಿಸಿರುವ ಕೆಲವೊಂದು ಗುಣಲಕ್ಷಣಗಳನ್ನು ಮುಂದೆಂದೂ ತಿದ್ದುಪಡಿ ಮೂಲಕ ಬದಲಾಯಿಸಬಾರದು ಅಥವಾ ತೆಗೆದುಹಾಕಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಛ ನ್ಯಾಯಾಲಯವು ಅಂತಗರ್ತವಾಗಿದ್ದ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿಮಾಡಿ ಪ್ರಸ್ತುತಪಡಿಸಿದೆ. ‘ಈ ಮೂಲ ತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲೂ ಆಗದು’ ಎಂದೂ ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಮತ್ತು ಆನಂತರದ ಅನೇಕ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪುಗಳಲ್ಲಿ ಈ ಮುಂದಿನ ತತ್ವಗಳನ್ನು ಸಂವಿಧಾನದ ಮೂಲ ತತ್ವಗಳೆಂದು ಸ್ಪಷ್ಟಪಡಿಸಲಾಗಿದೆ.
1. ಸಂವಿಧಾನದ ಪರಮಾಧಿಕಾರ
2. ಭಾರತದ ಸಾರ್ವಭೌಮತ್ವ
3. ಸಂಸದೀಯ ಪ್ರಜಾಪ್ರಭುತ್ವ
4. ಕಲ್ಯಾಣ ರಾಷ್ಟ್ರದ ಪರಿಕಲ್ಪನೆ
5. ಧರ್ಮ ನಿರಪೇಕ್ಷತೆ ಮತ್ತು ಜಾತ್ಯತೀತತೆ
6. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರ ಪ್ರತ್ಯೇಕೀಕರಣ
7 . ಒಕ್ಕೂಟದ ಸ್ವರೂಪ
8. ದೇಶದ ಐಕ್ಯತೆ ಮತ್ತು ಸಮಗ್ರತೆ
9. ನ್ಯಾಯಿಕ ಪುನರವಲೋಕನ (ಜುಡಿಷಿಯಲ್ ರಿವ್ಯು)
10. ವೈಯಕ್ತಿಕ ಘನತೆ ಮತ್ತು ಸ್ವಾತಂತ್ರ್ಯ
11. ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುವುದು
12. ಸಾಮಾಜಿಕ ನ್ಯಾಯ
13. ಸ್ವಾಭಾವಿಕ ನ್ಯಾಯ
14. ಮೂಲಭೂತ ಹಕ್ಕುಗಳು ಭಾರತ ಸಂವಿಧಾನದ ಮೊದಲ ಪ್ರತಿಯಲ್ಲಿ 80,000 ಶಬ್ದಗಳಿದ್ದವು. 104 ತಿದ್ದುಪಡಿಗಳ ನಂತರ ಸಂವಿಧಾನದಲ್ಲಿ 25 ಅಧ್ಯಾಯಗಳು, 12 ಅನುಸೂಚಿಗಳು ಇವೆ. ಸಂವಿಧಾನ ಬರೆಯಲು ತಗುಲಿದ ಒಟ್ಟು ಸಮಯ 2 ವರ್ಷ, 11 ತಿಂಗಳು, 17 ದಿನಗಳು. ಮೊದಲ ಕರಡು ಪ್ರತಿಯನ್ನು ದೇಶದ ಜನರ ಮುಂದೆ ಮಂಡಿಸಿ ಸಲಹೆ ಸೂಚನೆಗಳನ್ನು ಕೋರಿದಾಗ 7000ಕ್ಕೂ ಹೆಚ್ಚು ಸಲಹೆಗಳು ಬಂದಿದ್ದವು.








