ಬಿ.ಜೆ.ಪಿ.ಯ ಕರ್ನಾಟಕ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರು ಬೆಳಗಾವಿಯ ಉಪ ಚುನಾವಣೆ ಪ್ರಚಾರದಲ್ಲಿ ‘ಸತೀಶ್ ಜಾರಕಿಹೊಳಿಯವರು ಭಾರತೀಯ ಸಂಸ್ಕೃತಿಯನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಚುನಾವಣಾ ಸಮಯದಲ್ಲಿ ಟೀಕೆ, ವಿರೋಧಗಳೆಲ್ಲ ಸಹಜ. ಆದರೆ ಅರುಣ್ ಸಿಂಗ್ ಅವರು ಈ ಮಟ್ಟದ ಹತಾಶೆಯ ಹೇಳಿಕೆ ನೀಡಿದ್ದು, ಅವರ ಅಸಹಾಯಕತೆಯನ್ನು ತೋರಿಸುತ್ತದೆ.
ವಾಸ್ತವದಲ್ಲಿ ಅರುಣ ಸಿಂಗ್ ಅವರಿಗೆ ನಮ್ಮ ಚಟುವಟಿಕೆಗಳ ಹಾಗೂ ಕರ್ನಾಟಕದ ಇತಿಹಾಸದ ಅರಿವು ಇದ್ದಂತಿಲ್ಲ. ಬಸವಣ್ಣನವರ ಲಿಂಗಾಯತ ತತ್ವದ ತಿಳುವಳಿಕೆ ಕೂಡ ಇದ್ದಂತಿಲ್ಲ. ಸರ್ವ ಜನರ ಹಿತಕ್ಕಾಗಿ ಲಿಂಗಾಯತ ತತ್ವ ಚಿಂತನೆಗಳನ್ನು ಬಿತ್ತಿದ ಬಸವಣ್ಣ ನಮ್ಮ ನಾಡಿನ ಸಕಲ ಜನರ ಸದಾಕಾಲದ ಆದರ್ಶ.
ನಮ್ಮ ಪ್ರತಿ ಕಾರ್ಯಕ್ರಮಗಳಲ್ಲೂ ಈ ತತ್ವಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ವೇದಿಕೆಗಳನ್ನು ಗಮನಿಸಿದ್ದವರಿಗೆ ವೇದಿಕೆಯ ಮೇಲಿದ್ದ ವ್ಯಕ್ತಿಗಳು ಯಾರು, ಅವರು ಮಾತನಾಡಿದ ವಿಷಯಗಳೇನು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅವರು ಮಾತನಾಡಿದ್ದೆಲ್ಲವೂ ಬಸವಣ್ಣನವರ ಲಿಂಗಾಯತ ತತ್ವಗಳ ಆದರ್ಶದ ಕುರಿತು. ವೇದಿಕೆಯಲ್ಲಿ ಹೆಚ್ಚು ಕಾಣಿಸಿಕೊಂಡದ್ದು ಕೂಡ ಲಿಂಗಾಯತ ಮಠಾಧೀಶರು ಮತ್ತು ಚಿಂತಕರು.
ಬಸವ ಮಾರ್ಗದಲ್ಲಿ ಸಾಗುವುದು ಹೇಗೆ ಭಾರತೀಯ ಸಂಸ್ಕೃತಿಯ ವಿರೋಧವಾಗುತ್ತದೆ ಎಂದು ಸಂಸ್ಕೃತಿಯನ್ನು ಗುತ್ತಿಗೆ ಪಡೆದಂತೆ ಭ್ರಮೆಯಲ್ಲಿರುವ ಅರುಣ್ ಸಿಂಗ್ ಅವರೇ ಹೇಳಬೇಕು. ಲಿಂಗಾಯತ ತತ್ವಗಳ ಕುರಿತು ಮಾತನಾಡುವುದು ನಿಮ್ಮ ಸಂಸ್ಕೃತಿಗೆ ವಿರೋಧ ಎಂದಾದರೇ ನಿಮ್ಮದು ಯಾವ ಸಂಸ್ಕೃತಿ? ಕರ್ನಾಟಕ ನೆಲದ ವಿಶ್ವ ಮಾನ್ಯ ಚಿಂತನೆಗಳಾದ ಬಸವಣ್ಣನ ವಿಚಾರಗಳೇ ನಮಗೆ ಮಾರ್ಗದರ್ಶಿ. ನಮ್ಮದು ಅಚಲ ಬಸವ ಮಾರ್ಗ.
ಕರ್ನಾಟಕ ನೆಲದಲ್ಲಿ ನಿಂತು ಮಾತನಾಡುವ ಮುನ್ನ ಹನ್ನೆರಡನೇ ಶತಮಾನದಲ್ಲಿ ಈ ನಾಡಿನಲ್ಲಿ ಮೂಡಿಬಂದ ವಚನ ಚಳುವಳಿಯ ಬಗ್ಗೆ ತಿಳಿದುಕೊಂಡು, ನೀವು ಯಾರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಅರಿತು ಮಾತನಾಡುವುದು ಒಳ್ಳೆಯದು. ಅರುಣ್ ಸಿಂಗ್ ಅವರು ಭಾರತೀಯ ಸಂಸ್ಕೃತಿ ಎಂದರೆ ನಾಗಪುರದ ತಮ್ಮ ಕೇಂದ್ರ ಕಛೇರಿಯಿಂದ ನಿರ್ದೇಶಿತ ಸಂಸ್ಕೃತಿ ಮಾತ್ರ ಎಂದು ಭ್ರಮಿಸಿದಂತಿದೆ.
- ಮಹಾಲಿಂಗಪ್ಪ ಆಲಬಾಳ