April 19, 2024 12:07 pm

ಸತೀಶ್ ಜಾರಕಿಹೊಳಿಯವರ ಗೆಲುವು ರಾಜಕೀಯದ ದಿಕ್ಕನ್ನು ಬದಲಿಸಲಿದೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಂಧುಗಳೇ,
ಒಂದು ಕೆಟ್ಟ ಘಟನೆಯ ಕಾರಣಕ್ಕೆ ಅನಿವಾರ್ಯವಾಗಿ ಮತ್ತೊಂದು ಚುನಾವಣೆಯನ್ನು ಎದುರಿಸುವ ಸ್ಥಿತಿ ಬಂದಿದೆ. ಸನ್ಮಾನ್ಯ ಸತೀಶ ಜಾರಕಿಹೊಳಿಯವರೂ ಕೂಡ ಸ್ಪರ್ಧಿಸಿದ್ದಾರೆ. ನಾಡಿನ ಜನ ಕುತೂಹಲದಿಂದ ಚುನಾವಣೆಯನ್ನು ಗಮನಿಸುತ್ತಿದ್ದಾರೆ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲ, ದೇಶವಿದೇಶಗಳಿಂದಲೂ ಜನ ಸತೀಶ ಜಾರಕಿಹೊಳಿಯವರು ಗೆಲ್ಲಬೇಕೆಂದು ಬಯಸಿ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಕಾರಣವಿಷ್ಟೇ, ಸತೀಶ ಜಾರಕಿಹೊಳಿಯವರ ವ್ಯಕ್ತಿತ್ವ, ನಡೆನುಡಿ, ಜನರ ಬಗೆಗಿನ ಪ್ರಾಮಾಣಿಕ ಕಾಳಜಿ ಮತ್ತು ಅವರ ನಿಲುವುಗಳು. ಜನರ ಬಗೆಗಿನ ಅವರ ಬದ್ಧತೆಯನ್ನು ಎಂಥ ಸಂದರ್ಭ ಕೂಡ ಬದಲಿಸಲಾಗದು. ಜನರಪರ, ಬಡವರಪರ, ದೀನದಲಿತರ ಪರ ಅವರ ಹೋರಾಟ ಇತಿಹಾಸವನ್ನು ಸೃಷ್ಠಿಸುವಂಥದ್ದು. ಬುದ್ಧ, ಬಸವ, ಅಂಬೇಡ್ಕರರ ಚಿಂತನೆಗಳ ಬಗೆಗಿನ ಅವರ ನಿಷ್ಠೆ ಅಚಲವಾದುದು.
ನಾನು ಈ ಕ್ಷೇತ್ರದ ಮತದಾರನಲ್ಲ. ಆದರೆ ನಾನು ಸತೀಶ ಜಾರಕಿಹೊಳಿಯವರ ತಂಡದ ಸದಸ್ಯ. ಅವರನ್ನು ಹತ್ತಿರದಲ್ಲಿದ್ದು ಗಮನಿಸುತ್ತಿದ್ದೇನೆ. ಈ ನಾಡು ಇಂಥ ಅಪರೂಪದ ರಾಜಕಾರಣಿಯನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದೇ ಭಾವಿಸಿಕೊಂಡವನು. ಎಂಥ ಸಂದರ್ಭದಲ್ಲೂ ಅವರು ತಾವೂ ನಂಬಿದ ತತ್ವಗಳಿಂದ ವಿಮುಖರಾಗದೇ ಎದುರಿಸುವುದನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ತಾವು ನಂಬಿರುವ ತತ್ವಗಳಿಂದಲೇ ಸವಾಲುಗಳನ್ನು ಎದುರಿಸುವುದನ್ನು ಕಂಡಿದ್ದೇನೆ. ಏನನ್ನಾದರೂ ಕಳೆದುಕೊಳ್ಳುವುದಕ್ಕೂ ಹೆದರದೇ ಮಾನವೀಯತೆಗೆ ಕಟಿಬದ್ಧರಾಗಿ ನಿಂತದ್ದನ್ನು, ಜನರಿಗಾಗಿ ಅವರು ತೆಗದುಕೊಳ್ಳುವ ರಿಸ್ಕ್ ಗಳನ್ನು ನೋಡಿದ್ದೇನೆ. ಸಂವಿಧಾನದ ಬಗೆಗೆ ಅವರ ನಂಬಿಕೆ ಅಪಾರವಾದುದು.
ಸರಳತೆ, ಸದಾ ಸಾಮಾನ್ಯ ಜನರೊಂದಿಗೆ ಇರುವ ಅವರ ಪರ ನಿಲ್ಲುವ ಜನಪರ ನಾಯಕತ್ವ, ಜನರ ಮೇಲೆ ಇಡುವ ಅವರ ನಂಬಿಕೆ ಇವೆಲ್ಲ ಅವರನ್ನು ವಿಭಿನ್ನ ವ್ಯಕ್ತಿತ್ವದ ರಾಜಕಾರಣಿಯನ್ನಾಗಿಸಿದೆ.
ಸತೀಶ ಜಾರಕಿಹೊಳಿಯವರ ಜನಪರ ಕೆಲಸಗಳನ್ನು ಪಟ್ಟಿ ಮಾಡುವುದು ಕಷ್ಟ. ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಸ್ಮಶಾನದಲ್ಲಿ ನಡೆಸುವ ಮೌಢ್ಯ ವಿರೋಧಿ ಕಾರ್ಯಕ್ರಮವಂತೂ ದೇಶದ ಗಮನ ಸೆಳೆಯುವಂಥದ್ದು. ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಬದುಕಿನ ಬಗ್ಗೆ ಇವರಿಗಿರುವ ಕಾಳಜಿಪೂರಿತ ದೃಷ್ಟಿಕೋನ ಈಗಿನ ರಾಜಕಾರಣಿಗಳಲ್ಲಿ ವಿರಳ.
ಚುನಾವಣೆಗಳಲ್ಲೂ ಜನರನ್ನು ಭ್ರಷ್ಟಗೊಳಿಸಬಾರದೆಂಬ ಅವರ ಕಾಳಜಿ ಪ್ರಜಾತಂತ್ರದ ಮೇಲಿನ ಅವರ ನಂಬಿಕೆಗೆ ಸಾಕ್ಷಿ.
ಈ ಚುನಾವಣೆಯಲ್ಲೂ ಆ ವಿಚಾರದಿಂದ ಕದಲುವ ಮಾತಿಲ್ಲ.
ತಮ್ಮ ನಡಿಗೆಯ ಮೇಲಿನ ನಂಬಿಕೆ, ಜನರ ಮೇಲಿನ ವಿಶ್ವಾಸ, ಸಂವಿಧಾನದ ಮೇಲಿನ ಬದ್ಧತೆ, ಬದಲಾವಣೆಯ ಆಶಯಗಳೊಂದಿಗೆ ಮತ್ತೆ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ.
ಬೆಳಗಾವಿ ಲೋಕಸಭಾ ಉಪಚನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹಣ, ಹೆಂಡ, ಆಸೆ, ಆಮಿಶಗಳಿಂದ ಈ ಚುನಾವಣೆಯನ್ನು ಎದುರಿಸುವುದಿಲ್ಲ. ಸಂವಿಧಾನದ ತತ್ವಗಳು, ಜನರ ವಿಶ್ವಾಸವೇ ಮುಖ್ಯ ಎಂದು ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಅಬ್ಬರವಿಲ್ಲ, ಆಡಂಬರವಿಲ್ಲ.
ಇದರ ಗೆಲುವು ಅಥವಾ ಸೋಲು ಅವರ ನಿಲುವಿನಲ್ಲಾಗಲಿ, ಅವರ ಬದುಕಿನಲ್ಲಾಗಲಿ, ರಾಜಕೀಯದಲ್ಲಾಗಲಿ ಯಾವುದೇ ಬದಲಾವಣೆ ತರಲಾರದು. ಆದರೆ ಅವರ ಗೆಲುವು ಈ ನಾಡಿನ ಜನಪರ ದನಿಗಳ ಗೆಲುವಾಗಲಿದೆ. ಜನವಿರೋಧಿ, ಕ್ರೂರ, ಹಿಂಸಾತ್ಮಕ ರಾಜಕಾರಣದ ವಿರುದ್ಧ ಮಾನವೀಯ, ಜನಪರ ರಾಜಕಾರಣದ ಗೆಲುವಾಗಲಿದೆ. ಇದು ಜನರ ಗೆಲುವು. ಅದನ್ನು ಸಾಧಿಸಿ ತೋರಿಸಿ ತಾವು ಗೆಲ್ಲುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರ ಕೈಯಲ್ಲಿದೆ.
ಪ್ರಜಾ ಪ್ರಭುತ್ವದಲ್ಲಿ ಜನರೇ ಗೆಲ್ಲಬೇಕು. ಅದಕ್ಕಾಗಿ ಸತೀಶ ಜಾರಕಿಹೊಳಿಯವರು ಗೆಲ್ಲಬೇಕು.
ಮುಂದಿನ ರಾಜಕೀಯದ ದಿಕ್ಕನ್ನು ಬದಲಿಸೋಣ. ಅದರ ಜವಾಬ್ದಾರಿ ನಮ್ಮದು.

                    - ಮಹಾಲಿಂಗಪ್ಪ ಆಲಬಾಳ, ಸಾಮಾಜಿಕ ಹೋರಾಟಗಾರರು

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ