ಚಿತ್ರದುರ್ಗ: ದೇಶದ ಶೇ. 85 ಭಾಗ ಜನ ಬ್ರಾಹ್ಮಣವಾದದ ವ್ಯವಸ್ಥೆಗೆ ಬಲಿಪಶುವಾದವರು. ಇದಕ್ಕೆ ಒಂದಲ್ಲ ಒಂದು ರೀತಿ ಅಪಮಾನಕ್ಕೆ ಗುರಿಯಾದವರು ಎಂದು ದಲಿತ ಸಂಘರ್ಷ ಸಮಿತಿ ನಾಯಕ ಮಾವಳ್ಳಿ ಶಂಕರ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪರಿಶಿಷ್ಟರು, ಅಲೆಮಾರಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮುದಾಯದ ತಲ್ಲಣಗಳು ವಿಷಯದ ಕುರಿತು ಮಾತಾಡಿದ ಅವರು, ಸ್ವತಂತ್ರ ಭಾರತದಲ್ಲಿ ಅನೇಕ ಪಕ್ಷಗಳು ಅಧಿಕಾರ ನಡೆಸಿವೆ. ಆಗ ಇರುವ ಮತ್ತು ಈಗಿನ ಸಂದರ್ಭಕ್ಕೆ ಬಹುದೊಡ್ಡ ವ್ಯತ್ಯಾಸವಿದೆ ಎಂದರು.
ಸಂವಿಧಾನದ ಪೀಠಿಕೆಯಲ್ಲಿ ಸಾಮಾಜಿಕ ನ್ಯಾಯ ಉಲ್ಲೇಖವಾಗಿದೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಚರ್ಚೆಗೆ ಒಳಪಡಿಸಿದಾಗ ನಮಗೆ ನಮ್ಮ ಪರಿಸ್ಥಿತಿ ಅರಿವಾಗುತ್ತದೆ. ನಾವು ಮಾನವ ಬಂಧುತ್ವ ಎಂಬ ವಿಶಾಲ ಕ್ಯಾನ್ವಾಸ್ ಮೇಲೆ ಹೊರಟಿದ್ದೇವೆ. ನಮ್ಮ ಹಳ್ಳಿಗಳು ಈ ಪರಿಸ್ಥಿತಿಯಲ್ಲಿವೆಯೇ ಎಂದು ನೋಡಿದರೆ ನಿರಾಶೆ ಆವರಿಸುತ್ತದೆ. ಸಮುದಾಯವನ್ನು ಒಡೆದದ್ದು ಬ್ರಾಹ್ಮಣ್ಯ ಎಂದರು.
ಜಗತ್ತನ್ನು ವ್ಯಾಖ್ಯಾನಿಸುವುದಲ್ಲ, ಅದನ್ನು ಬದಲಾಯಿಸಬೇಕು ಎಂದ ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಅಂಬೇಡ್ಕರ್ ಅವರು ಸಂಪತ್ತನ್ನು ಸೃಷ್ಟಿಸಿದವರು ಹಸಿವಿನಿಂದ ನರಳಬಾರದು ಎಂದಿದ್ದಾರೆ. ತಾಜ್ ಮಹಲ್ ಗಳನ್ನು ಕಟ್ಟಿದವರು ಎಲ್ಲಿದ್ದಾರೆ. ಇಂದು ಹಸಿವಿನಿಂದ ಸಾಯುವ ಜನ ಅದೇ ಸ್ಥಿತಿಯಲ್ಲಿದ್ದಾರೆ ಎಂದರು.
ಮಾನವೀಯತೆಗೆ ಜೀವ ಕೊಡಿ ಎಂದು ನಾವು ಹೇಳುತ್ತಿದ್ದೇವೆ. ಅಸಮಾನತೆಗೆ ಕಾರಣರಾದವರು ಇದರ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ನಾವೇ ಅದನ್ನು ಹೇಳಬೇಕಿದೆ. ದೇಶದ ಅಸ್ಪೃಶ್ಯತೆ ಕೊಳೆತು ನಾರುತ್ತಿರುವ ಶವ ಎಂದು ಅಂಬೇಡ್ಕರ್ ಹೇಳುತ್ತಾರೆ. ಇಂದು ಇಂತಹ ಪರಿಸ್ಥಿತಿಯನ್ನು ನಾವೆಲ್ಲ ಅರಿತು ಮೇಲೆತ್ತಬೇಕು. ನಮ್ಮ ಸಮುದಾಯದ ಕಾರ್ಯಕರ್ತರಿಗೆ ಸ್ಪಷ್ಟ ಮಾಸರ್ಗಸೂಚಿ, ಗುರಿ ಇರಬೇಕು. ಇಲ್ಲವಾದರೆ ಯಾವುದೇ ರಾಜಕೀಯ ಪಕ್ಷಗಳಿರಲಿ ನಾವು ವೈದಿಕಶಾಹಿಗಳಿಗೆ ಬಲಿಯಾಗುತ್ತೇವೆ. ಹುಟ್ಟು, ಸಾವನ್ನು ನಿರ್ಧರಿಸುವುವುದೇ ಬ್ರಾಹ್ಮಣತ್ವ. ಆ ಹಿನ್ನೆಲೆಯಲ್ಲಿ ಇಂದು ಪರಿಶಿಷ್ಟ, ಹಿಂದುಳಿದ, ಆದಿವಾಸಿಗಳು, ಕೊರಚ, ಕೊರಮ, ವಡ್ಡರ ಜಾತಿಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಸಂವಿಧಾನದಿಂದಾಗಿ ಅಲ್ಲಲ್ಲಿ ಒಂದಿಷ್ಟು ಶಿಕ್ಷಣ, ಉದ್ಯೋಗ ಸಿಕ್ಕಿರುವುದನ್ನು ಹೊರತುಪಡಿಸಿದರೆ ಪರಿಸ್ಥಿತಿ ಅಲ್ಲೇ ಇದೆ ಎಂದರು.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಅನೇಕ ಜಾತಿಗಳಿವೆ. ಅಲ್ಲಿ ಸಮಾನತೆಯ ಅಂಶಗಳಿಲ್ಲ. ನಮ್ಮನಮ್ಮಲ್ಲೆ ತಾಯಿ ಗುಣವನ್ನು ಇರಿಸಿಕೊಂಡು, ಹಂಚಿಕೊಳ್ಳುವ ತತ್ವವನ್ನು ಅನುಸರಿಸಬೇಕು. ನಾವು ಬೀದಿಗಳಲ್ಲಿ ನಿಂತು ಹೊಡೆದಾಡುವ ಪರಿಸ್ಥಿತಿ ಬೇಕಿಲ್ಲ. ನಾವು ಒಡೆದಷ್ಟು ಪುರೋಹಿತಶಾಹಿಗಳು ತಮ್ಮ ಹಿಡಿತವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂದು ನಾವು ಅರಿಯಬೇಕು ಎಂದರು.
ಅಸ್ಪೃಶ್ಯರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅವಮಾನಗಳನ್ನು ಹೊದ್ದುಕೊಂಡಿರುತ್ತಾರೆ. ಇದಕ್ಕೆ ರಾಜಕೀಯ ಕಾರಣವಿರುತ್ತದೆ. ಅಂಬೇಡ್ಕರ್ ಅವರು ಪೂನಾ ಪ್ಯಾಕ್ಟ್ ಗೆ ಸಹಿ ಹಾಕಿದ ಸಂದರ್ಭದಲ್ಲಿ, ನಾನು ಕಷ್ಟಪಟ್ಟು ಒಪ್ಪಂದ ತಂದಿದ್ದೆ. ಭವಿಷ್ಯದಲ್ಲಿ ಈ ಸಮುದಾಯ ಆಳುವ ಪಕ್ಷಗಳ ಗುಲಾಮರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇಂದು ಬಹುತೇಕ ನಾಯಕರು ಇಂತಹದ್ದೇ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಕೇಂದ್ರ ಸಚಿವ ನಾರಾಯಣ ಸ್ವಾಮಿಯವರು ತಳಸಮುದಾಯದ ಊರಿಗೆ ಹೋದರು. ಅಲ್ಲಿ ಅವರಿಗೆ ಅವಮಾನವಾಯಿತು. ಆ ಪ್ರಸಂಗ ಆಳುವ ಪಕ್ಷದವರಿಗೆ ತಪ್ಪು ಎನಿಸಲಿಲ್ಲ. ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ. ಇವರು ಒಂದು ಎನಿಸಲಿಲ್ಲವೇ? ಜಾತಿಯಿಂದ ದೇಶದಲ್ಲಿ ಬಹುಸಂಖ್ಯಾತರು ನೊಂದವವರು. ಇಂದು ಬಹುತೇಕ ಬ್ರಾಹ್ಮಣ್ಯ ಏನು ಮಾಡುತ್ತಿದೆ ಎಂದು ಅರಿಯಬೇಕು ಎಂದರು.
ಜನಸಂಖ್ಯೆ ಆಧಾರದಲ್ಲಿ ರಾಜಕೀಯ ಪ್ರಾತಿನಿಧ್ಯ ಬೇಕು ಎಂದು ಕಾನ್ಶೀರಾಮ್ ಹೇಳಿದರು. ಆದರೆ ಇಂದು ಆಗುತ್ತಿರುವುದು ಏನು? ಬಹುತೇಕ ಹಿಂದುಳಿದ ವರ್ಗಗಳು ರಾಜಕೀಯವಾಗಿ ಮೂಲೆಗುಂಪಾಗಿವೆ. ದೊಡ್ಡ ಬಂಡವಾಳಶಾಹಿಗಳು, ಜಮೀನ್ದಾರರು ಇದ್ದಾರೆ. ಆರ್ಥೀಕ ಸಂಪನ್ಮೂಲಗಳು ನಮ್ಮ ಕೈಯಲ್ಲಿಲ್ಲ. ಆರ್ಥಿಕ ಸಂಪನ್ಮೂಲಗಳನ್ನು ಕಸಿದುಕೊಂಡು, ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದರು.
ಜಾತ್ ಪಾತ್ ತೋಡಕ್ ಮಂಡಲ್ ನವರು ಅಂಬೇಡ್ಕರ್ ಅವರನ್ನು ಕರೆದರು. ಅಂಬೇಡ್ಕರ್ ಅವರ ಒಂದು ಕೃತಿಯನ್ನು ಕಳಿಸುತ್ತಾರೆ. ಇದನ್ನು ಓದುತ್ತೇನೆ ಎಂದರು. ಆಗ ಅಂಬೇಡ್ಕರ್ ತಿರಸ್ಕರಿಸುತ್ತಾರೆ. ನಾನು ಅದರಲ್ಲಿ ಒಂದು ಫುಲ್ ಸ್ಟಾಪ್ ಅನ್ನು ಕೂಡ ತೆಗೆಯುವುದಿಲ್ಲ ಎಂದು ಅವರು ಹೇಳುತ್ತಾರೆ ಎಂದರು.
ಅಂಬೇಡ್ಕರ್ ಅವರು ಕ್ರಾಂತಿ ಮತ್ತು ಪ್ರತಿಕ್ರಾಂತಿಯಲ್ಲಿ ಹೇಳಿರುವಂತೆ ಇಂದು ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಬೌದ್ಧ ಧರ್ಮದ ಮೇಲೆ ಕೂಡ ಇಂತಹದ್ದೇ ದಾಳಿಯನ್ನು ನಡೆಸಿತ್ತು. ಇದನ್ನು ವಿದ್ಯಾವಂತ ಸಮುದಾಯ ಅರಿಯಬೇಕು. ಅಂಬೇಡ್ಕರ್ ಅವರು ನನಗೆ ದೇಶವಿಲ್ಲ ಎನ್ನುತ್ತಾರೆ. ಅವರಿಗೆ ಈ ದೇಶ ತಮ್ಮದು ಎನಿಸದಂತಹ ಪರಿಸ್ಥಿತಿ ಇತ್ತು ಎಂದರು.
ಬಜೆಟ್ ಮಂಡನೆ ಜಾತಿವಾರು ಪ್ರಾತಿನಿಧ್ಯ ಆದರಿಸಿ ನಡೆಯುತ್ತಿದೆಯೇ? ಎಸ್.ಇ.ಪಿ. ಮತ್ತು ಎಸ್.ಟಿ.ಪಿ ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮಂಡಿಸಿದ ಮತ್ತು ಈಗ ಮಂಡನೆಯಾಗುತ್ತಿರುವ ಬಜೆಟ್ ಅನ್ನು ನೋಡಿದರೆ ತಾರತಮ್ಯ ಗೊತ್ತಾಗುತ್ತದೆ ಎಂದರು.
ಬ್ರಾಹ್ಮಣವಾದ ಮತ್ತು ಬಂಡವಾಳವಾದಗಳೆರಡನ್ನೂ ವಿರೋಧಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಈಗಿರುವ ಸರ್ಕಾರ ಕಾರ್ಮಿಕರು, ಶೋಷಿತರು, ದಲಿತರು, ದಮನಿತರ ವಿರುದ್ಧ ಜಾರಿಗೆ ತಂದಿರುವ ಕಾನೂನುಗಳನ್ನು ಕುರಿತು ನಾವುನೀವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಸಮಾವೇಶವನ್ನು ಆಯೋಜಿಸುವ ಮೂಲಕ ಮಹತ್ವದ ಕೆಲಸವನ್ನು ಮಾಡುತ್ತಿರುವ ಮಾನವ ಬಂಧುತ್ವ ವೇದಿಕೆಗೆ ಅಭಿನಂದನೆಗಳು ಎಂದರು.