ಬೆಂಗಳೂರು: ಬಂಧುತ್ವದಿಂದ ಮಾತ್ರ ಇಂಥ ಸಂಕಷ್ಟವನ್ನುಎದುರಿಸಲು ಸಾಧ್ಯ. ಆತ್ವವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಿಸುವ ಮೂಲಕ ರೋಗವನ್ನು ಹೊಡೆದೋಡಿಸಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಹೇಳಿದರು.
ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಆರೋಗ್ಯ ಬಂಧುತ್ವ ವೆಬಿನಾರ್ ಸರಣಿಯ ಮೊದಲ ವಿಚಾರ ಸಂಕಿರಣ ಕೋವಿಡ್ ಎದುರಿಸುವುದು ಹೇಗೆ? ವಿಷಯದ ಅಧ್ಯಕ್ಷತೆ ವಹಿಸಿಕೊಂಡು ಮಾತಾಡಿದ ಅವರು, ಕೊರೋನಾ ಬಗ್ಗೆ ನಮಗಿರುವ ಮೌಢ್ಯಗಳನ್ನು ಇಲ್ಲವಾಗಿಸುವುದೇ ಈ ವೆಬಿನಾರ್ ಮೂಲ ಉದ್ಧೇಶ. ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ತಮಗೆಲ್ಲರಿಗೂ ವೇದಿಕೆಯ ಪರವಾಗಿ, ಸನ್ಮಾನ್ಯ ಸತೀಶ ಜಾರಕಿಹೊಳಿ ಅವರ ಪರವಾಗಿ ಧನ್ಯವಾದಗಳು ಎಂದರು.
ವಿಷಯಮಂಡನೆ ಮಾಡಿದ, ಡಾ. ಗಿರೀಶ್ ಮೂಡ್, ವಿಜ್ಞಾನಿಯಾದ ತಕ್ಷಣ ನಾನು ಪ್ರಕೃತಿಗಿಂತ ದೊಡ್ಡವನಲ್ಲ ಎಂಬುದು ನನ್ನಅಭಿಪ್ರಾಯ. ಭಾರತದಲ್ಲಿ ಮೊಟ್ಟಮೊದಲು ವುಹಾನ’ನಿಂದ ಬಂದ ಕೇರಳದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಯಿತು. 2019ರಲ್ಲಿ ಬಂದಿದ್ದರಿಂದ ಕೊವಿಡ್ 19 ಎಂದು ಹೆಸರಿಸಲಾಯಿತು. ಮುಂಚೆಯಂತೆ ನೆಗಡಿ, ಜ್ವರ ತರುವ ವೈರಸ್ನಂತೆಯೇ ಇದ್ದರೂ ವೇಗವಾಗಿ ಸಮುದಾಯದಲ್ಲಿ ಹರಡುವುದರಿಂದ ಇದನ್ನು ಪ್ಯಾಂಡಮಿಕ್ಎಂದುಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎಲ್ಲಾ ದೇಶಗಳಿಗೆ ಎಚ್ಚರಿಕೆ ವಹಿಸಲು ತಿಳಿಸಿತು. 2003 ರಲ್ಲಿಯೇ ಇದರ ತೊಂದರೆ ಪ್ರಾರಂಭವಾಗಿತ್ತು. ನಂತರದ ದಿನಗಳಲ್ಲಿಇದು ಮೊದಲ ಅಲೆಯಲ್ಲಿ ನೆಗಡಿ, ಜ್ವರದ ಲಕ್ಷಣಗಳೊಂದಿಗೆ ಹರಡುತ್ತಾ ಈಗ ದೇಹದ ಯಾವುದೇ ಭಾಗಕ್ಕೆ ಹಾನಿಮಾಡುವಷ್ಟು ಬೆಳೆದಿದೆ ಎಂದರು.
ಇದನ್ನು ಹರಡುವುದನ್ನು ತಡೆದರೆ ಮಾತ್ರ ಇದರ ನಿಯಂತ್ರಣ ಸಾಧ್ಯ. ಪಾಸಿಟಿವ್, ನೆಗೆಟಿವ್ ಏನೇ ಇರಲಿ ಲಕ್ಷಣಗಳು ಕಂಡುಬಂದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಆರು ಅಡಿ ದೈಹಿಕ ಅಂತರ, ಕೆಲ ಸಣ್ಣಪುಟ್ಟ ಲಕ್ಷಣಗಳಿಗೆ ಪ್ಯಾರಾಸಿಟಮಾಲ್ ಮಾತ್ರೆಗಳ ಮೂಲಕ ನಿಯಂತ್ರಿಸಬಹುದು ಎಂದರು.
ವೈರಾಣು ಎಲ್ಲಿಯೂ ಹೋಗುವುದಿಲ್ಲ ವೈರಾಣುವಿನ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ನಾವು ಅದನ್ನು ಎದುರಿಸಬೇಕಾಗುತ್ತದೆ. ವ್ಯಾಕ್ಸಿನ್ ಎಲ್ಲರಿಗೂ ಶೀಘ್ರಗತಿಯಲ್ಲಿ ಲಭ್ಯವಾಗದೇ ಇರುವುದರಿಂದ ನಾವು ಮೊದಲು ಜಾಗೃತರಾಗಬೇಕಿರುವುದು ಅತ್ಯವಶ್ಯ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಶೇಷಾದ್ರಿ ಅವರು ಬಸವಣ್ಣ ಮತ್ತು ಬುದ್ಧನ ಬಗ್ಗೆ ಎರಡು ಹಾಡುಗಳನ್ನು ಹಾಡುವ ಮೂಲಕ ಹೇಳಿದರು. ಘಟಪ್ರಭಾದ ಡಾ. ಎನ್.ಎಸ್.ಹರ್ಡೀಕರ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕಿ ಡಾ.ಲೀಲಾ ಸಂಪಿಗೆ, ‘ಸತೀಶ ಜಾರಕಿಹೊಳಿಯವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ನಾಡಿನಾದ್ಯಂತ ಹಲವಾರು ಘಟಕಗಳ ಮೂಲಕ ಸೇವೆಸಲ್ಲಿಸುತ್ತಿದೆ. ಚಳುವಳಿಯಾಗಿ ರೂಪಿಸಿ ಕೆಲಸಮಾಡುತ್ತಿದೆ. ಕೊರೋನಾ ಜಾಗೃತಿ ಮೂಡಿಸಲು 10 ದಿನಗಳ ವೆಬಿನಾರ್ ನಡೆಸುತ್ತಿದ್ದೇವೆ. ಇದರ ಸದುಪಯೋಗವನ್ನು ನಾಡಿನ ಜನ ಪಡೆಯಲು ಕೋರುತ್ತೇವೆ ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಅನಂತನಾಯ್ಕ, ಕೊರೋನಾ ಇಡೀ ಜಗತ್ತನ್ನು ಬಗ್ಗುಬಡಿಯುತ್ತಿದೆ. ಜನರ ಜೀವನ ತತ್ತರಿಸುತ್ತಿದೆ. ಭಾರತ ಅಭಿವೃದ್ಧಿಯ ಕನಸು ಕಾಣುವ, ವೈಜ್ಞಾನಿಕ ಮನೋಭಾವನೆಯನ್ನು ಒಡಲಲ್ಲಿ ಇಟ್ಟುಕೊಂಡ ದೇಶ. ಆಳುವವರ ನಿರ್ಲಕ್ಷದಿಂದ ಜೀವಹಾನಿ ಆಗಿದೆ. ಇದಕ್ಕೆ ಸರಕಾರದ ಅವೈಜ್ಞಾನಿಕ ಮನೋಭಾವವೇ ಕಾರಣ ಎಂದರು.
ಪ್ರಶ್ನೋತ್ತರ:
- ಯಾವ ಆಧಾರದ ಮೇಲೆ ಮೂರನೇ ಅಲೆ ಬರುತ್ತದೆ?
ಉತ್ತರ: ಈ ವೈರಾಣು ಹೊರ ದೇಶದಿಂದ ಜಗತ್ತಿನೆಲ್ಲೆಡೆ ಹಬ್ಬಿದೆ. ಮಕ್ಕಳು ಹೆಚ್ಚು ಕ್ರಿಯಾಶೀಲಲಿರುವುದರಿಂದ, ರೋಗನಿರೋಧಕ ಶಕ್ತಿ ಉತ್ತಮವಾಗಿರುವುದರಿಂದ ಆತಂಕದ ಅವಶ್ಯಕತೆಯಿಲ್ಲ. ಆದರೂ ವೈರಸ್ ಮತ್ತಷ್ಟು ಗಟ್ಟಿಯಾಗಿ ಬರಬಹುದು ಹಾಗಾಗಿ ಆರೋಗ್ಯದ ಜಾಗೃತಿ ಅತ್ಯವಶ್ಯ.
- ಡಬ್ಲ್ಯೂ.ಎಚ್.ಓ ಕೋವಿಡ್ ಕುರಿತು ಅಧ್ಯಯನ ಮಾಡುತ್ತಿದೆಯೇ?
ಉತ್ತರ: ಖಂಡಿತವಾಗಿ ಮಾಡುತ್ತಿದೆ.
- ಇದು ಅಂತರಾಷ್ಟ್ರೀಯ ಮೋಸವೇ?
ಉತ್ತರ: ಸದ್ಯದ ಮಟ್ಟಿಗೆ ನಮ್ಮ ಆರೋಗ್ಯ ರಕ್ಷಣೆ ಬಹಳ ಮುಖ್ಯ. ಮೋಸವೆಂದು ಹೇಳಲಾಗುವುದಿಲ್ಲ.
- ಲಸಿಕೆ ಹಾಕಿಸಿಕೊಂಡವರಿಗೆ ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆ, ರಕ್ತಹೆಪ್ಪುಗಟ್ಟುವಿಕೆ ಆಗಬಹುದೇ?
ಉತ್ತರ: ವೈರಾಣುಪೀಡಿತ ದೇಹದಲ್ಲಿ ಇಂಥ ಸಮಸ್ಯೆಗಳು ಆಗಬಹುದು. ವ್ಯಾಕ್ಸಿನ್ ತೆಗೆದುಕೊಳ್ಳಿ.
- ಮಾಸ್ಕ್ ಬಳಕೆ ಎಷ್ಟು ಅಗತ್ಯ?
ಉತ್ತರ: ವೈರಾಣು ಹರಡುವಿಕೆ ತಡೆಯಲು ಮಾಸ್ಕ್ ಅತ್ಯಗತ್ಯವಾಗಿದೆ. ವೈರಾಣು ವೇಗವಾಗಿ ಹರಡುವುದನ್ನು ಮಾಸ್ಕ್ ತಪ್ಪಿಸುತ್ತದೆ.